ಮೋದಿ, ಅಮಿತ್ ಶಾ ಸಮ್ಮುಖದಲ್ಲಿ ಎಸ್ ಎಂ ಕೃಷ್ಣ 'ಪಾಂಚಜನ್ಯ'?
Recommended Video
ಕರ್ನಾಟಕದ ಹೈಪ್ರೊಫೈಲ್ ರಾಜಕಾರಣಿ ಎಸ್ ಎಂ ಕೃಷ್ಣ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದಾಗ ಮಾಡಿದ ಸದ್ದು, ಆನಂತರದ ದಿನಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಪ್ರಬುದ್ದ ಮತ್ತು ಉತ್ತಮ ವರ್ಚಸ್ಸಿನ ಮುಖಂಡರೊಬ್ಬರನ್ನು ಬಿಜೆಪಿ ಮೂಲೆಗುಂಪು ಮಾಡುತ್ತಿದೆ, ಕಾಂಗ್ರೆಸ್ಸಿನಲ್ಲೇ ಇವರು ಮುಂದುವರಿದಿದ್ದರೆ ಚೆನ್ನಾಗಿ ನೋಡಿಕೊಳ್ಳಲಾಗುತ್ತಿತ್ತು ಎಂದು ಕಾಂಗ್ರೆಸ್ಸಿನವರು ವ್ಯಂಗ್ಯವಾಡಿದ್ದುಂಟು.
ಮಂಡ್ಯದಲ್ಲಿ ಪಾಂಚಜನ್ಯ ಊದಲಿರುವ ಎಸ್ಸೆಂ ಕೃಷ್ಣ
ನವೆಂಬರ್ ಎರಡರಂದು ಆರಂಭವಾದ ಬಿಜೆಪಿಯ ಪರಿವರ್ತನಾ ರ್ಯಾಲಿಯಲ್ಲಿ ಎಲ್ಲೂ ಭಾಗವಹಿಸದೇ ಇದ್ದ ಎಸ್ ಎಂ ಕೃಷ್ಣ, ಮಂಡ್ಯ ಜಿಲ್ಲೆಯಲ್ಲಿ ನಡೆದ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ, ಸಕ್ರಿಯ ರಾಜಕಾರಣದಲ್ಲಿ ಮತ್ತೆ ತೊಡಗಿಸಿಕೊಳ್ಳುತ್ತಿದ್ದೇನೆಂದು ಎಂದು ಸಾರುವಂತಿತ್ತು.
ಮೇ ತಿಂಗಳಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡುತ್ತೇನೆ, ಕೃಷ್ಣ
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಲವು ಬಾರಿ ರಾಜ್ಯಕ್ಕೆ ಭೇಟಿ ನೀಡಿದರೂ, ಒಂದೆರಡು ಬಾರಿ ಮಾತ್ರ ಅವರನ್ನು ಭೇಟಿ ಮಾಡಿದ್ದ ಕೃಷ್ಣ, ಪ್ರಮುಖವಾಗಿ ಜೆಡಿಎಸ್ ಪ್ರಾಭಲ್ಯವಿರುವ ಭಾಗದಲ್ಲಿ ಮತ್ತೆ 'ಪಾಂಚಜನ್ಯ' ಮೊಳಗಿಸುವ ಜವಾಬ್ದಾರಿಯನ್ನು ಬಿಜೆಪಿ ವರಿಷ್ಠರು ಕೃಷ್ಣಗೆ ನೀಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಪರಿವರ್ತನಾ ರ್ಯಾಲಿಯ ಕೊನೆಯ ಸಮಾವೇಶ ( ಜ 25) ಮೈಸೂರಿನಲ್ಲಿ ನಡೆಯಲಿದೆ, ಇದಾದ ನಂತರ ಫೆಬ್ರವರಿ ನಾಲ್ಕರಂದು ಬೆಂಗಳೂರಿನಲ್ಲೂ ಸಮಾವೇಶ ನಡೆಯಲಿದೆ. ಬೆಂಗಳೂರಿನ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಭಾಗವಹಿಸಲಿದ್ದಾರೆ. ಮೋದಿ ಮತ್ತು ಅಮಿತ್ ಶಾ ಸಮ್ಮುಖದಲ್ಲಿ ಎಸ್ ಎಂ ಕೃಷ್ಣಗೆ ಮಹತ್ವದ ಜವಾಬ್ದಾರಿ ನೀಡುವ ಸಾಧ್ಯತೆ ದಟ್ಟವಾಗಿದೆ ಎನ್ನುವ ಮಾಹಿತಿಯಿದೆ.
ಹಿರಿಯ ಮುತ್ಸದ್ದಿ ಎಸ್ಸೆಂ ಕೃಷ್ಣ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ
ಎಸ್ ಎಂ ಕೃಷ್ಣ ಅವರಿಗಿರುವ ವರ್ಚಸ್ಸನ್ನು ಬಳಸಿಕೊಂಡು ಮುಂಬರುವ ಚುನಾವಣಾ ಪ್ರಚಾರದ ವೇಳೆ ಅವರಿಗೆ ಸೂಕ್ತವಾದ ಜವಾಬ್ದಾರಿಯನ್ನು ನೀಡಿ, ಕರ್ನಾಟಕ ರಾಜಕಾರಣದಲ್ಲಿ ಮತ್ತೆ ಅವರನ್ನು ಸಕ್ರಿಯರನ್ನಾಗಿ ಮಾಡುವ ಉದ್ದೇಶವನ್ನು ಬಿಜೆಪಿ ವರಿಷ್ಠರು ಹೊಂದಿದ್ದಾರೆ ಎನ್ನಲಾಗುತ್ತಿದೆ. ಮುಂದೆ ಓದಿ..
ಮಂಡ್ಯ, ಬೆಂಗಳೂರು ಗ್ರಾಮಾಂತರ, ರಾಮನಗರ, ಹಾಸನ, ಮೈಸೂರು
ಬಿಜೆಪಿಗೆ ಅಷ್ಟೊಂದು ನೆಲೆಯಿಲ್ಲದ ಮಂಡ್ಯ, ಬೆಂಗಳೂರು ಗ್ರಾಮಾಂತರ, ರಾಮನಗರ, ಹಾಸನ ಮತ್ತು ಮೈಸೂರಿನ ಕೆಲವು ತಾಲೂಕುಗಳಲ್ಲಿ, ಜೊತೆಗೆ, ಬೆಂಗಳೂರು ನಗರದಲ್ಲೂ ಎಸ್ ಎಂ ಕೃಷ್ಣ ಅವರನ್ನು ಹೆಚ್ಚುಹೆಚ್ಚು ಪ್ರಚಾರಕ್ಕೆ ಬಳಸಿಕೊಳ್ಳುವ ನಿರ್ಧಾರಕ್ಕೆ ಬಿಜೆಪಿ ಬರುವ ಸಾಧ್ಯತೆಯಿದೆ.
ಎಸ್ ಎಂ ಕೃಷ್ಣ ಅವರ ಪುತ್ರಿ ಶಾಂಭವಿ ಸ್ಪರ್ಧಿಸುವ ಸಾಧ್ಯತೆ
ಬೆಂಗಳೂರು ನಗರ ವ್ಯಾಪ್ತಿಯ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಕೊನೇ ಕ್ಷಣದಲ್ಲಿ ಎಸ್ ಎಂ ಕೃಷ್ಣ ಅವರ ಪುತ್ರಿ ಶಾಂಭವಿ ಸ್ಪರ್ಧಿಸಬಹುದು ಎನ್ನಲಾಗುತ್ತಿದೆ (ಕೃಷ್ಣ ಇದನ್ನು ಅಲ್ಲಗಳೆದಿದ್ದಾರೆ). ಸದ್ಯ, ಆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕಾಂಗ್ರೆಸ್ಸಿನ ಮುನಿರತ್ನಂ, ಮತ್ತೆ ಅಲ್ಲಿಂದಲೇ ಕಣಕ್ಕಿಳಿಯಲಿದ್ದಾರೆ. ಹಾಗಾಗಿ, ಎಸ್ ಎಂ ಕೃಷ್ಣ ಅವರನ್ನು ಬೆಂಗಳೂರಿನಲ್ಲೂ ಪ್ರಚಾರಕ್ಕೆ ಬಳಸುವ ಕಾರಣದ ಹಿಂದೆ ಈ ರಾಜಕೀಯ ಲೆಕ್ಕಾಚಾರವಿದೆ ಎನ್ನುವ ಮಾಹಿತಿಯಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ಕಿಡಿಕಾರಿದ ಕೃಷ್ಣ
ಇಂದಿನ ಮುಖ್ಯಮಂತ್ರಿಗಳು ಆಡಳಿತ ನಡೆಸುತ್ತಿರುವುದನ್ನು ರಾಜ್ಯದ ಜನತೆ ನೋಡಿದ್ದಾರೆ. ಎಲ್ಲಿದೆ ಆಡಳಿತ? ಆಡಳಿತ ಎಂದು ಹುಡುಕಬೇಕಿದೆ. ಸರ್ಕಾರದ ಅಭಿವೃದ್ಧಿ ಬಗ್ಗೆ ಇನ್ನು ಮೂರು ತಿಂಗಳಲ್ಲಿ ಜನರೇ ನಿರ್ಣಯ ಕೊಡಲಿದ್ದಾರೆಂದು ಕೃಷ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ, ಚಾಮುಂಡೇಶ್ವರಿ ಅಥವಾ ಹೆಬ್ಬಾಳದಲ್ಲಿ ಸ್ಪರ್ಧಿಸಬಹುದು ಎನ್ನುವ ಮಾತಿದೆ. ಈ ಕ್ಷೇತ್ರಗಳಲ್ಲೂ ಕೃಷ್ಣ ಅವರನ್ನು ಪ್ರಚಾರಕ್ಕೆ ಬಿಜೆಪಿ ಬಳಸಿಕೊಳ್ಳಬಹುದು.
ಮಂಡ್ಯ ಜಿಲ್ಲೆಯಲ್ಲಿ ದೊಡ್ಡ ಮನ್ವಂತರ ನಡೆಯಲಿದೆ
ಬಿಜೆಪಿಯ ಪರಿವರ್ತನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಎಸ್ ಎಂ ಕೃಷ್ಣ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ದೊಡ್ಡ ಮನ್ವಂತರ ನಡೆಯಲಿದೆ. ಜಿಲ್ಲೆಯಲ್ಲಿ ಪ್ರಬಲವಾಗಿ ಬಿಜೆಪಿ ಪಕ್ಷ ಕಟ್ಟುತ್ತೇವೆ. ಊಹಾಪೋಹ ಹರಡುವವರಿಗೆ ಒಳ್ಳೆಯ ಬುದ್ಧಿ ಕೊಡಲಿ. ಸತ್ಯಾ ಸತ್ಯತೆ ನೋಡಲಿ ಎಂದು ಕೃಷ್ಣ ಹೇಳಿರುವುದು, ಜಿಲ್ಲೆಯ ರಾಜಕಾರಣದಲ್ಲಿ ಮತ್ತೆ ಕೃಷ್ಣ ಸಕ್ರಿಯವಾಗಲಿದ್ದಾರೆಂದು ಕಾರ್ಯಕರ್ತರು ಅರ್ಥೈಸಿಕೊಂಡಿದ್ದಾರೆ.
ಕಾಂಗ್ರೆಸ್ ವಿರುದ್ದ ತೊಡೆತಟ್ಟುವ ಎಲ್ಲಾ ಮುನ್ಸೂಚನೆ ನೀಡಿದ ಕೃಷ್ಣ
ಕಾಂಗ್ರೆಸ್ ಪಕ್ಷದಲ್ಲಿ ಯಾರು ಬೇಕಾದರೂ ಅಧ್ಯಕ್ಷರಾಗಬಹುದು ಅಂತಹ ಪರಿಸ್ಥಿತಿ ಅಲ್ಲಿದೆ. "ನಾನು ವಂಶ ಪಾರಂಪರ್ಯ ರಾಜಕೀಯಕ್ಕೆ ವಿರೋಧಿ. ನಾನು ಕಾಂಗ್ರೆಸ್ ಬಿಡಲು ಅದೂ ಒಂದು ಮೂಲಭೂತ ಕಾರಣ. "ನರೇಂದ್ರ ಮೋದಿ ಅವರು ನಿಷ್ಕಂಳಕ ಆಡಳಿತ ನಡೆಸುತ್ತಿದ್ದಾರೆ. ಆ ಆಡಳಿತದ ಪ್ರತಿಬಿಂಬವನ್ನು ಮುಂದಿನ ಬಿಜೆಪಿ ಸರ್ಕಾರದಲ್ಲಿ ನೋಡಲು ಸನ್ನದ್ಧರಾಗಿದ್ದೇವೆ ಎಂದು ಎಸ್ ಎಂ ಕೃಷ್ಣ ಹೇಳುವ ಮೂಲಕ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ದ ತೊಡೆತಟ್ಟುವ ಎಲ್ಲಾ ಮುನ್ಸೂಚನೆಯನ್ನು ನೀಡಿದ್ದಾರೆ.