ಕೆಪಿಜೆಪಿ ಪಕ್ಷ ಶಾಸಕ ಶಂಕರ್ ಯೂ-ಟರ್ನ್, ಕಾಂಗ್ರೆಸ್ಗೆ ಕೊಡ್ತಾರಂತೆ ಬೆಂಬಲ
ಬೆಂಗಳೂರು, ಮೇ 16: ಕರ್ನಾಟಕ ಚುನಾವಣಾ ಫಲಿತಾಂಶದಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದೆ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತಿದ್ದಂತೆ ಪಕ್ಷೇತರ ಶಾಸಕರಿಗೆ ಭಾರಿ ಬೇಡಿಕೆ ಬಂದಿದೆ. ಅದರಂತೆ ಅವರೂ ಕೂಡ ತಮ್ಮ ಸುಸಮಯದ ಲಾಭ ಪಡೆದುಕೊಳ್ಳುತ್ತಿದ್ದಂತಿದೆ.
ಇಂದು ಬೆಳಿಗ್ಗೆ ತಾನೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಮನೆಯಲ್ಲಿ ಕಾಣಿಸಿಕೊಂಡು ಬಿಜೆಪಿ ಪರ ಎಂದು ತೋರಿಸಿಕೊಂಡಿದ್ದ ಕೆಪಿಜೆಪಿ (ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ) ಪಕ್ಷದಿಂದ ಆಯ್ಕೆಯಾಗಿದ್ದ ಆರ್.ಶಂಕರ್ ಅವರು ಇಂದು ಸಂಜೆ ವೇಳೆಗೆ ಕಾಂಗ್ರೆಸ್ಗೆ ಬೆಂಬಲ ನೀಡುತ್ತೇನೆ ಎಂದಿದ್ದಾರೆ.
ಬಿಜೆಪಿಗೆ ಬೆಂಬಲ ನೀಡಿದ ಪಕ್ಷೇತರ ಶಾಸಕ ಆರ್ ಶಂಕರ್
ಕೆಪಿಜೆಪಿ ಪಕ್ಷದ ಆರ್.ಶಂಕರ್ ಅವರು ರಾಣೆಬೆನ್ನೂರು ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಇವರು ಬಿಜೆಪಿಯ ಈಶ್ವರಪ್ಪ ಅವರ ದೂರದ ಸಂಬಂಧಿ ಎಂದೂ ಹೇಳಲಾಗಿದೆ.
ನಿನ್ನೆ ಫಲಿತಾಂಶ ಬಂದಾಗ ಇದೇ ಆರ್.ಶಂಕರ್ ಅವರು ಕಾಂಗ್ರೆಸ್ಗೆ ಬೆಂಬಲ ನೀಡುತ್ತೇನೆ ಎಂದಿದ್ದರು ಆದರೆ ಇಂದು ಬೆಳಿಗ್ಗೆ ಈಶ್ವರಪ್ಪ ಅವರ ಮಗನ ಪ್ರಯತ್ನದಿಂದಾಗಿ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಬಿಜೆಪಿಗೆ ಬೆಂಬಲ ಘೋಷಿಸಿದ್ದರು ಆದರೆ ಈಗ ಮತ್ತೆ ಕಾಂಗ್ರೆಸ್ ಕಡೆ ವಾಲಿದ್ದಾರೆ.
ಬಿಜೆಪಿಯು ಈಗಾಗಲೇ ಕೆಲವು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ತನ್ನತ್ತ ಸೆಳೆಯಲು ಸಂಪರ್ಕ ಮಾಡಿದೆ ಎನ್ನಲಾಗಿದೆ. 'ಕುದುರೆ ವ್ಯಾಪಾರ'ದ ಭಯದಿಂದಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವು ತಮ್ಮ ಶಾಸಕರನ್ನು ರೆಸಾರ್ಟ್ಗೆ ಕರೆದುಕೊಂಡು ಹೋಗಲು ತೀರ್ಮಾನಿಸಿವೆ.