ಜನಾರ್ದನ ರೆಡ್ಡಿ ಜತೆ ಸೇರಿ ಬಿಜೆಪಿ ಹೆಣೆದಿರುವ ತ್ರಿಶೂಲ ವ್ಯೂಹ ಏನದು?
Recommended Video
ಬೆಂಗಳೂರು, ಫೆಬ್ರವರಿ 22: ರೆಡ್ಡಿ ಸಮುದಾಯದ ಮುನ್ನೂರಕ್ಕೂ ಹೆಚ್ಚು ಮಂದಿ ಒಳಗೊಂಡಿದ್ದ ಸಭೆಯೊಂದು ರಹಸ್ಯವಾಗಿ ಗುರುವಾರ ಬೆಳಗ್ಗೆ ಬೆಂಗಳೂರು ಹೊರವಲಯದಲ್ಲಿ ನಡೆದಿದೆ. ಕರ್ನಾಟಕ ವಿಧಾನಸಭೆ ಕಣ್ಣೆದುರು ಇಟ್ಟುಕೊಂಡು ಈ ರೀತಿಯ ಸಭೆ ನಡೆಯುವುದರಲ್ಲಿ ಅದೆಂಥ ಅಚ್ಚರಿ ಎಂದೆನಿಸಬಹುದು.
ಆದರೆ, ಈ ಸಭೆ ಸ್ವಲ್ಪ ಭಿನ್ನ. ಗಣಿ ಧಣಿ- ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದ ಗಾಲಿ ಜನಾರ್ದನ ರೆಡ್ಡಿ ಈ ಸಭೆಯನ್ನು ಕರೆದು, ಸ್ವತಃ ಅಧ್ಯಕ್ಷತೆ ಸಹ ವಹಿಸಿದ್ದರು. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಅನ್ನು ಮಣಿಸುವುದು ಹೇಗೆ ಎಂದು ಬಲೆ ಹೆಣೆಯುವುದೇ ಸಭೆಯ ಉದ್ದೇಶವಾಗಿತ್ತು ಎಂದು ಮೂಲಗಳು ತಿಳಿಸಿವೆ.
ತೆರೆಮರೆಯ ಚಾಣಾಕ್ಷನಿಗೆ ಸಿಕ್ತು ಹೊಸ ನೆಲೆ
ಬಾಹುಬಲಿ ತೆಲುಗು ಸಿನಿಮಾದಲ್ಲಿ ತ್ರಿಶೂಲ ವ್ಯೂಹ ಪ್ರಯೋಗಿಸಿದಂತೆ ಕಾಂಗ್ರೆಸ್ ವಿರುದ್ಧವೂ ಅಂಥದ್ದೊಂದು ತಂತ್ರಗಾರಿಕೆಗೆ ಬಿಜೆಪಿ ಮುಂದಾಗಿದೆ. ಒಂದು ಕಡೆಯಿಂದ ಕೇಂದ್ರ ನಾಯಕರ ಸಾರಥ್ಯದಲ್ಲಿ ಯಡಿಯೂರಪ್ಪ ಮತ್ತು ಇತರರು, ಮತ್ತೊಂದು ಕಡೆಯಿಂದ ರೆಡ್ಡಿ ಗುಂಪು ಕಾಂಗ್ರೆಸ್ ನ ಮೇಲೆ ಮುಗಿಬೀಳಲು ರಣತಂತ್ರ ಸಿದ್ಧವಾಗಿದೆ.
ಕಾಂಗ್ರೆಸ್ ನ ಸಿದ್ದರಾಮಯ್ಯ, ರಾಮಲಿಂಗಾ ರೆಡ್ಡಿ ಸೇರಿದಂತೆ ಕೆಲ ನಾಯಕರನ್ನು ಸೋಲಿಸಲು ಬಿಜೆಪಿಯ ಕೇಂದ್ರ ನಾಯಕರೇ ನೆರವು ಕೇಳಿರುವುದಾಗಿ ಜನಾರ್ದನ ರೆಡ್ಡಿ ಹೇಳಿಕೊಂಡಿದ್ದಾರೆ. ಒಂದು ವೇಳೆ ರೆಡ್ಡಿ ಹೇಳಿಕೊಂಡಿರುವ ಮಾತೇ ನಿಜವಾದರೆ ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇದು ಅತಿ ದೊಡ್ಡ ಬೆಳವಣಿಗೆ.
ಬಿಜೆಪಿಯ ಎ ಪ್ಲಾನ್, ಬಿ ಪ್ಲಾನ್ ಕುರಿತು ಇಂಟರೆಸ್ಟಿಂಗ್ ಚರ್ಚೆ
ಈ ಹಿಂದೆ ಅಂದರೆ 2008ರಲ್ಲಿ ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ರೆಡ್ಡಿ ಸಹೋದರರು ಮಹತ್ಚದ ಪಾತ್ರ ವಹಿಸಿದ್ದರು. ಆ ನಂತರ ಗಣಿ ಹಗರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾದ ಜನಾರ್ದನ ರೆಡ್ಡಿ ನಾಲ್ಕು ವರ್ಷಗಳ ಕಾಲ ವಿವಿಧ ಜೈಲುಗಳಲ್ಲಿ ಇರಬೇಕಾಯಿತು.
ಅಂತರ ಕಾಯ್ದುಕೊಂಡ ಬಿಜೆಪಿ
ಆದರೆ, ಜೈಲಿನಿಂದ ಜನಾರ್ದನ ರೆಡ್ಡಿ ಬಿಡುಗಡೆ ಆದ ನಂತರ ಅವರೇನೋ ತಾನಿನ್ನೂ ಬಿಜೆಪಿಯಲ್ಲೇ ಇದ್ದೇನೆ ಎಂದರು. ಆದರೆ ಕಮಲ ಪಕ್ಷವು ಅವರಿಂದ ಒಂದು ಅಂತರ ಕಾಯ್ದುಕೊಂಡಿತು. ಆದರೆ ಜನಾರ್ದನ ರೆಡ್ಡಿ ಅವರ ಆತ್ಮೀಯ ಶ್ರೀರಾಮುಲು ಬಿಜೆಪಿಯ ಸಂಸದ ಹಾಗೂ ವಾಲ್ಮೀಕಿ ಜನಾಂಗದ ಪ್ರಬಲ ನಾಯಕ.
ರೆಡ್ಡಿ ಮಗಳ ಮದುವೆಯಲ್ಲಿ ಬಿಜೆಪಿ ನಾಯಕರು
ಜನಾರ್ದನ ರೆಡ್ಡಿ ತಮ್ಮ ಮಗಳ ಮದುವೆಯನ್ನು ಅದ್ಧೂರಿಯಾಗಿ ಬೆಂಗಳೂರಿನ ಅರಮನೆಯಲ್ಲಿ ಮಾಡಿದಾಗ ಬಿಜೆಪಿಯ ಪ್ರಮುಖ ನಾಯಕರು ಆ ಮದುವೆಯಲ್ಲಿ ಪಾಲ್ಗೊಂಡಿದ್ದರು. ಅಂಥ ಅದ್ಧೂರಿ ಮದುವೆಗೆ ಆದಾಯ ಮೂಲದ ವಿಚಾರವಾಗಿ ಜನಾರ್ದನ ರೆಡ್ಡಿ ಅವರಿಗೆ ಕೂಡ ಆದಾಯ ತೆರಿಗೆ ಇಲಾಖೆಯಿಂದ ಹೆಚ್ಚಿನ ಪ್ರಶ್ನೆಗಳು ಎದುರಾಗಲಿಲ್ಲ.
ಮುಖ್ಯ ವೇದಿಕೆಯಲ್ಲಿ ಕಾಣಿಸಿಕೊಳ್ಳಲ್ಲ
ಇದೀಗ ಮೂಲಗಳು ತಿಳಿಸುವಂತೆ, ಜನಾರ್ದನ ರೆಡ್ಡಿ ಚಿತ್ರದುರ್ಗದ ಬಳಿ ನೆಲೆಯಾಗಿ ಸುತ್ತಮುತ್ತಲ ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಕೆಲಸ ಮಾಡಲಿದ್ದಾರೆ. ಆದರೆ ಮುಂಚಿನಂತೆ ಮುಖ್ಯ ವೇದಿಕೆಗಳಲ್ಲಿ ಕಾಣಿಸಿಕೊಳ್ಳದೆ ಹಿಂದೆ ನಿಂತು ಕೆಲಸ ಮಾಡಲಿದ್ದಾರೆ. ಯಡಿಯೂರಪ್ಪ ಅವರು ಕೂಡ ಹಳೆ ಕಹಿಯೆಲ್ಲ ಮರೆತಂತಿದೆ.
ಜನಾರ್ದನ ರೆಡ್ಡಿ ಸಹಾಯ ಮಾಡ್ತಿದ್ದಾರೆ
ಇನ್ನು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾಧ್ಯಮವೊಂದರ ಜತೆ ಮಾತನಾಡಿ, ರಾಜ್ಯದಲ್ಲಿ ಇನ್ನೂರಾ ಇಪ್ಪತ್ನಾಲ್ಕು ಸ್ಥಾನಗಳಿವೆ. ಪ್ರತಿ ಸ್ಥಾನವೂ ಮುಖ್ಯ. ಕೆಲವು ಕಡೆ ಜನಾರ್ದನ ರೆಡ್ಡಿ ಸಹಾಯ ಮಾಡುತ್ತಿದ್ದಾರೆ. ಇದರಲ್ಲಿ ಏನೂ ತಪ್ಪಿಲ್ಲ ಎಂದು ಉತ್ತರ ನೀಡಿದ್ದಾರೆ.
ಬಿಜೆಪಿ ಹಾಗೂ ರೆಡ್ಡಿಗೆ ಈ ಚುನಾವಣೆ ಮುಖ್ಯ
ಬಿಜೆಪಿಗೆ ಹಾಗೂ ಜನಾರ್ದನ ರೆಡ್ಡಿಗೆ ಕರ್ನಾಟಕ ವಿಧಾನಸಭೆ ಚುನಾವಣೆ ಬಹಳ ಮುಖ್ಯ. ಅದರಲ್ಲೂ ರೆಡ್ಡಿಗೆ ಆಪ್ತರಾದ ಇಬ್ಬರನ್ನು ಬಳ್ಳಾರಿ ಪಾಳೇಪಟ್ಟಿನಲ್ಲಿ ಕಾಂಗ್ರೆಸ್ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಇಂಥ ಸನ್ನಿವೇಶದಲ್ಲಿ ಕದನ ಕುತೂಹಲದ ಘಟ್ಟ ಮುಟ್ಟಿದೆ. ಬಿಜೆಪಿಗೆ ರೆಡ್ಡಿ ಹಾಗೂ ರೆಡ್ಡಿಗೆ ಬಿಜೆಪಿ ಹೇಗೆ ಸಹಾಯ ಆಗಬಹುದು ಎಂಬುದನ್ನು ಕಾದು ನೋಡಬೇಕಿದೆ.