ಕರ್ನಾಟಕದ ಗೆಲುವು ಅಸಾಮಾನ್ಯ: ನರೇಂದ್ರ ಮೋದಿ
ಕರ್ನಾಟಕದಲ್ಲಿನ ಬಿಜೆಪಿ ಗೆಲುವು ಅಸಾಮಾನ್ಯ ಗೆಲುವು, ಸುಳ್ಳು ಹರಡಿಸುವ ಒಡೆದು ಆಳುವ ಆಲೋಚನೆಗಳ ಪಕ್ಷಕ್ಕೆ ಅಲ್ಲಿನ ಜನರು ಸರಿಯಾಗಿ ಬುದ್ದಿ ಕಲಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಬಗ್ಗೆ ಅಲ್ಲಿ ಕಾಂಗ್ರೆಸ್ ಪಕ್ಷವು ಸುಳ್ಳುಗಳನ್ನು ಹರಡಿಸಿತ್ತು, ಬಿಜೆಪಿ ಉತ್ತರ ಭಾರತದ ಪಕ್ಷ, ಹಿಂದಿ ಭಾಷಿಕರ ಪಕ್ಷ ಎಂದೆಲ್ಲಾ ಹೇಳಲಾಗಿತ್ತು, ಅದು ರಾಜಕೀಯಕ್ಕಾಗಿ ದೇಶವನ್ನು ಇಬ್ಬಾಗ ಮಾಡಲೂ ಹಿಂದೆ ಸರಿದಿರಲಿಲ್ಲ ಆದರೆ ಕರ್ನಾಟಕದ ಜನ ಅದಕ್ಕೆ ಸರಿಯಾದ ಬುದ್ದಿ ಕಲಿಸಿದ್ದಾರೆ ಎಂದರು.
ಗೋವಾ,ಮಣಿಪುರದಲ್ಲಿ ಹೆಣೆದ ತಂತ್ರ ಕರ್ನಾಟಕ ಬಿಜೆಪಿಗೆ ಮುಳುವಾಯ್ತೇ?
ಕರ್ನಾಟಕದ ಚುನಾವಣೆ ನನ್ನ ಮನಸ್ಸಿನ ಮೇಲೆ ಬಹಳ ಪರಿಣಾಮ ಬೀರಿದೆ ಎಂದ ಮೋದಿ, ಅಲ್ಲಿನ ಜನ ಅತಿಯಾದ ಬಿಸಿಲಿನ ಝಳದ ನಡುವೆಯೂ ನಮಗಾಗಿ ಬಂದರು, ನನ್ನ ಹಾಗೂ ಅವರ ನಡುವೆ ಭಾಷೆ ತೊಡಕಾಗಲೇ ಇಲ್ಲ, ನೀವು ನಿಮ್ಮ ಭಾಷೆಯಲ್ಲಿ ಮಾತನಾಡಿ ನಾವು ಕೇಳುತ್ತೇವೆ ಎಂದರು ಆ ರೀತಿಯ ಉತ್ಸಾಹ ನಾನೆಲ್ಲೂ ನೋಡಿರಲಿಲ್ಲ ಎಂದರು ಮೋದಿ.
ಅಮಿತ್ ಶಾ ರನ್ನು ಹೊಗಳಿದ ಮೋದಿ
ಬಿಜೆಪಿ ಕಾರ್ಯಕರ್ತರನ್ನು ನೆನೆದ ಮೋದಿ, ಬಿಜೆಪಿ ಗೆಲುವಿಗಾಗಿ ಹಗಲು ರಾತ್ರಿ ಶ್ರಮಿಸಿದ ಬಿಜೆಪಿ ಕಾರ್ಯಕರ್ತರಿಗೆ ನನ್ನ ಸಾವಿರ ಸಾವಿರ ವಂದನೆಗಳು ಎಂದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಕೂಡಾ ಮೋದಿ ಅವರು ಹಾಡಿ ಹೊಗಳಿದರು.
ಮನಸ್ಸಿಗೆ ಬೇಸರ ಮೂಡಿಸಿದೆ
ಇದೇ ಸಂದರ್ಭದಲ್ಲಿ ವಾರಣಾಸಿಯಲ್ಲಿ ಇಂದು ನಿರ್ಮಾಣ ಹಂತದಲ್ಲಿರುವ ಸೇತುವೆ ಕುಸಿದು ಸಾವಿಗಾಡಾದ ಜನರನ್ನು ನೆನೆದ ಮೋದಿ ಅವರು, ನನ್ನ ಲೋಕಸಭಾ ಕ್ಷೇತ್ರದಲ್ಲಿ ಇಂತಹದ್ದೊಂದು ಘಟನೆ ನಡೆದಿರುವುದು ಮನಸ್ಸಿಗೆ ಅತ್ಯಂತ ಬೇಸರ ಉಂಟುಮಾಡಿದೆ ಎಂದರು.
ಕರ್ನಾಟಕ ಚುನಾವಣಾ ಫಲಿತಾಂಶ 2018: ಬಿಜೆಪಿ ಗೆದ್ದವರ ಪಟ್ಟಿ
ಇಂತಹಾ ಜಂಗಲ್ ರಾಜ್ಯ ನಡೆಯಬಾರದು
ಪಶ್ಚಿಮ ಬಂಗಾಳದಲ್ಲಿ ನಿನ್ನೆ ಪಂಚಾಯಿತಿ ಚುನಾವಣೆ ವೇಳೆ ನಡೆದ ಹಿಂಸಾಚಾರವನ್ನು ತೀವ್ರವಾದ ಶಬ್ದಗಳಲ್ಲಿ ಖಂಡಿಸಿದ ಮೋದಿ ಅವರು, ಅದು ಪ್ರಜಾಪ್ರಭುತ್ವದ ಕಗ್ಗೊಲೆ, ಅಲ್ಲಿ ಆಡಳಿತ ಪಕ್ಷದ ಕಾರ್ಯಕರ್ತರು ಹೊರತುಪಡಿಸಿ ಇನ್ನೆಲ್ಲಾ ಪಕ್ಷದ ಕಾರ್ಯಕರ್ತರು ಹಿಂಸೆ ಅನುಭವಿಸಿದ್ದಾರೆ ಎಂದು ಹೇಳಿದರು.
ನಕಲಿ ಗುರುತಿನ ಚೀಟಿ ಮಾಡಲಾಗಿತ್ತು
ಪಶ್ಚಿಮ ಬಂಗಾಳ ರಾಜ್ಯದಲ್ಲಿ ನೇರವಾಗಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡಲು ಪ್ರಯತ್ನಿಸಿದರೆ ಕರ್ನಾಟಕದ ಚುನಾವಣೆ ಸಮಯದಲ್ಲಿ ಬೇರೊಂದು ರೀತಿಯಲ್ಲಿ ಪ್ರಜಾಪ್ರಭುತ್ವದ ಕೊಲೆ ನಡೆಸುವ ಪ್ರಯತ್ನ ಮಾಡಲಾಯಿತು. ನಕಲಿ ಗುರುತಿನ ಚೀಟಿ ಮಾಡಿ ಚುನಾವಣೆ ಗೆಲ್ಲುವ ಪ್ರಯತ್ನ ಮಾಡಲಾಯಿತು ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕದ ಅಭಿವೃದ್ಧಿಗೆ ಸದಾ ಬದ್ಧ
ಬಿಜೆಪಿಗೆ ಹೆಚ್ಚಿನ ಗೆಲುವು ದೊರಕಿಸಿಕೊಟ್ಟ ಕರ್ನಾಟಕದ ಜನತೆಗೆ ಮತ್ತೆ ಮತ್ತೆ ಧನ್ಯವಾದ ಅರ್ಪಿಸಿದ ಮೋದಿ ಅವರು, ಕರ್ನಾಟಕದ ಅಭಿವೃದ್ಧಿಗೆ ಕೇಂದ್ರ ಸದಾ ಟೊಂಕಕಟ್ಟಿ ನಿಂತಿದೆ, ಅಲ್ಲಿನ ಜನರ ಪರವಾಗಿ ನಾವಿದ್ದೇವೆ ಎಂದು ಹೇಳಿದರು.