ಈತ ಶಾಸಕರಾದರೆ ಗುಂಡು, ತುಂಡು, ಬಟ್ಟೆ ಹೀಗೆ ಏನೆಲ್ಲ ಕೊಡ್ತಾರಂತೆ!
ಚಿಂತಾಮಣಿ (ಚಿಕ್ಕಬಳ್ಳಾಪುರ ಜಿಲ್ಲೆ), ಏಪ್ರಿಲ್ 6 : ರಾಜಕಾರಣ ಎಂಬುದು ಚದುರಂಗದಾಟ. ಇಲ್ಲಿ ಸೋಲು ಗೆಲುವಿಗಿಂತ ಬದಲಾವಣೆ ಬಯಸುವವರೇ ಹೆಚ್ಚು. ನಮ್ಮ ಜನನಾಯಕರು ಕಲರ್ ಫುಲ್ ಆಸೆಗಳಿಂದಲೇ ಜನರ ಗಮನ ಸೆಳೆಯುತ್ತಾರೆ. ಅಷ್ಟೇ ಅಲ್ಲ, ಪುಟಗಟ್ಟಲೆ ಭರವಸೆಗಳನ್ನು ನೀಡಿದ ಬಳಿಕ ಲೆಕ್ಕಾಚಾರ ಶುರುವಿಟ್ಟು, ಮತದಾರರನ್ನೇ ಮರೆಯುತ್ತಾರೆ. ಅಂತಹವರ ನಡುವೆ ಇಲ್ಲೊಬ್ಬ ವಿಶೇಷ ವ್ಯಕ್ತಿ ಜನನಾಯಕ ಆಗಬಯಸುತ್ತಿದ್ದಾರೆ.
ನಿಮ್ಮ ಸಾಲ ಮನ್ನಾ ಮಾಡುತ್ತೇವೆ, ಕೆಲಸ ಕೊಡಿಸುತ್ತೇವೆ, ರಸ್ತೆ ರಿಪೇರಿ ಮಾಡುತ್ತೇವೆ ಹೀಗೆ ಹತ್ತು ಹಲವು ಭರವಸೆಗಳನ್ನು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಉಲ್ಲೇಖಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಅಭ್ಯರ್ಥಿ ನಾನು ಗೆದ್ದರೆ 18 ವರ್ಷ ಮೇಲ್ಪಟ್ಟವರಿಗೆ ವಾರಕ್ಕೊಮ್ಮೆ ಮದ್ಯ ಫ್ರೀ ಎಂದು ಘೋಷಣೆ ಮಾಡಿದ್ದಾರೆ.
ಅಷ್ಟೇ ಅಲ್ಲ, ಮಹಿಳೆಯರಿಗೆ ಧನಿಯಾ ಪುಡಿ, ಖಾರದ ಪುಡಿ ಹಾಗೂ ಉಪ್ಪಿನಕಾಯಿ ಫ್ರಿ, ದಿನಕ್ಕೆ 3 ಬಾರಿ ಊಟ - 2 ಕಾಫಿ ಫ್ರೀ. ಅಷ್ಟೇ ಅಲ್ಲದೇ ವಾರಕ್ಕೆ 2 ಬಾರಿ ಮಟನ್ ಹಾಗೂ 300 ಗ್ರಾಂ ಚಿಕನ್ ಫ್ರೀ ಎಂಬ ವೆರೈಟಿ - ವೆರೈಟಿ ಭರವಸೆಗಳನ್ನು ನೀಡಿದ್ದಾರೆ. ಹೀಗೆ ಭರವಸೆ ನೀಡಿರುವವರು ಚಿಂತಾಮಣಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬಯಸಿರುವ ಸುರೇಶ್ ವೈಎನ್.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಇವರ ಭರವಸೆಗಳ ಪಟ್ಟಿ ಇನ್ನೂ ಉದ್ದ ಇದೆ. ಇವರನ್ನು ಗೆಲ್ಲಿಸಿದರೆ ನಿಮಗೆ ಮೇಲಿನ ಕೊಡುಗೆಗಳು ಮಾತ್ರವಲ್ಲ. ಉಚಿತ ಸಾರಿಗೆ, ವೈದ್ಯಕೀಯ, ಶಾಲಾ ಶುಲ್ಕ ಎಲ್ಲವೂ ಪುಕ್ಕಟೆ ಅಂತೆ. ಇದರೊಟ್ಟಿಗೆ ನಿಮಗೆ ಮೊಬೈಲ್ ಕರೆ ಹಾಗೂ ಇಂಟರ್ ನೆಟ್ ಡೇಟಾ ಕೂಡ ಉಚಿತ. ಇದರ ಮಧ್ಯೆ ಮದುವೆಗೆ ಮಾಂಗಲ್ಯ ಹಾಗೂ ಬಟ್ಟೆ ಉಚಿತ ಎಂಬ ಉದ್ದ ಪಟ್ಟಿಯ ಪ್ರಣಾಳಿಕೆಯನ್ನೇ ಜನರ ಮುಂದಿಟ್ಟಿದ್ದಾರೆ.
ಮತದಾರರು ಸೋಂಬೇರಿ ಆಗಲ್ಲವೆ?
ಈ ಎಲ್ಲಾ ಸೌಲಭ್ಯಗಳನ್ನು ನೀಡಿದರೆ ನೀವು ಮತದಾರರನ್ನು ಸೋಂಬೇರಿಗಳಾಗಿ ಮಾಡಿದಂತೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರೇ, ಅಭ್ಯರ್ಥಿ ಸುರೇಶ್, ಖಂಡಿತಾ ಇಲ್ಲ. ಇದು ಕೆಲಸ ಮಾಡುವ ಮಂದಿಗೆ ಮಾತ್ರ. ವೃದ್ಧರಿಗೆ ಬೇರೇ ರೀತಿಯಾದ ಕೆಲಸವನ್ನು ನೀಡುತ್ತೇವೆ. ವಿದ್ಯಾರ್ಥಿಗಳು ವಿದ್ಯಾವಂತರಾಗಬೇಕು ಎಂದರು.
ಸೌಲಭ್ಯ ಪಡೆಯಲು ಉದ್ಯೋಗದಲ್ಲಿ ಇರಲೇಬೇಕು
ಇನ್ನು ಈ ಕುರಿತಾಗಿ ಖುದ್ದು ಒನ್ಇಂಡಿಯಾ ಕನ್ನಡ ಸುರೇಶ್ ರನ್ನು ಸಂಪರ್ಕಿಸಿದಾಗ, ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇವೆಲ್ಲವನ್ನೂ ಉಚಿತವಾಗಿ ನೀಡಿದರೆ ಭ್ರಷ್ಟಾಚಾರವನ್ನು ಹೊಡೆದೋಡಿಸಬಹುದು. ಆದರೆ ಇವೆಲ್ಲವನ್ನೂ ಪಡೆದುಕೊಳ್ಳಲು ನೀವು ಯಾವುದಾದರೊಂದು ಕೆಲಸದಲ್ಲಿ ಉದ್ಯೋಗಿಗಳಾಗಿ ಇರಲೇಬೇಕು. ದುಡಿದು ಹಣ ಮಾಡಿ, ಈ ಸೌಲಭ್ಯವನ್ನು ಪಡೆದುಕೊಳ್ಳಿ ಎಂದರು.
ವಾರಕ್ಕೊಮ್ಮೆ ಲಿಮಿಟ್ ನಲ್ಲಿ ಮದ್ಯ ವಿತರಣೆ
ಇನ್ನೂ ಮುಂದುವರಿದು ನೀವು ಯುವಕರನ್ನು ಮದ್ಯ ನೀಡಿ ಕುಡುಕರನ್ನಾಗಿ ಮಾಡುತ್ತಿದ್ದೀರಾ ಎಂದರೆ, ನಾನೇನೂ ಪ್ರತಿ ದಿನ ಮದ್ಯ ಕೊಡುವುದಿಲ್ಲ. ಎಲ್ಲಾ ಮದ್ಯದಂಗಡಿಯನ್ನು ಬ್ಯಾನ್ ಮಾಡುತ್ತೇನೆ. ಅದನ್ನು ನಾವೇ ತೆಗೆದುಕೊಂಡು ಉಚಿತವಾಗಿ ವಾರಕ್ಕೊಮ್ಮೆ ಕೊಡುತ್ತೇವೆ. ಇಷ್ಟ ಇರುವವರು ಕುಡಿಯಬಹುದು, ಇಲ್ಲದವರು ಇಲ್ಲ. ನಾವು ಮದ್ಯ ಕೊಡುವುದು ಕೇವಲ ಲಿಮಿಟ್ ಆಗಿ ಮಾತ್ರ ಎನ್ನುತ್ತಾರೆ.
ಸುರೇಶ್ ಪ್ರಣಾಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಇಂತಹ ಅಫರ್ ಮೇಲಿನ ಅಫರ್ ಗಳ ಕೊಟ್ಟಿರುವ ವೈ.ಎನ್.ಸುರೇಶ್ ಪ್ರಣಾಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ. ಇಂತಹ ಪ್ರಚಾರದ ಆಮಿಷಗಳು ಚುನಾವಣೆ ವೇಳೆ ಸಾಮಾನ್ಯ. ಆಮಿಷಗಳಿಗೆ ಬಗ್ಗದೆ ಸಮಾಜಮುಖಿ ಜನನಾಯಕನನ್ನು ಆಯ್ಕೆ ಮಾಡಬೇಕೆಂಬ ಸಾಮಾನ್ಯ ಜ್ಞಾನವನ್ನು ನಮ್ಮ ಮತದಾರಪ್ರಭು ಬೆಳೆಸಿಕೊಂಡರೆ ಒಳಿತು.