ಮಂಗಳೂರು ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ಜೆ.ಅರ್. ಲೋಬೋ ಸಂದರ್ಶನ
Recommended Video
ಮಂಗಳೂರು, ಮೇ 08: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಕಣ ರಂಗೇರಿ ಹಲವು ದಿನಗಳು ಕಳೆದಿವೆ. ಚುನಾವಣೆ ದಿನ ಹತ್ತಿರವಾಗುತ್ತಿದ್ದಂತೆ ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಬಿರುಸುಗೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಕುತೂಹಲ ಕೆರಳಿಸಿರುವ ಕ್ಷೇತ್ರ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ. 2008 ರಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ ಬಳಿಕ ಮಂಗಳೂರು ಕ್ಷೇತ್ರ ಮಂಗಳೂರು ನಗರ ದಕ್ಷಿಣ ಕ್ಷೇತ್ರವಾಗಿ ಬದಲಾಯಿತು. 1957 ರಿಂದ 1972 ರ ವರೆಗೆ ಈ ಕ್ಷೇತ್ರ ವನ್ನು ಮಂಗಳೂರು -1 ಎಂದು ಗುರುತಿಸಲಾಗುತ್ತಿತ್ತು.
ಕ್ಷೇತ್ರ ಪರಿಚಯ: ಮಂಗಳೂರು ನಗರ ದಕ್ಷಿಣ ಮತ್ತೆ ಬಿಜೆಪಿ ತೆಕ್ಕೆಗೆ?
ಬಿಜೆಪಿಯ ಎನ್. ಯೋಗೀಶ್ ಭಟ್ ಸತತ 4 ಬಾರಿ ಗೆದ್ದು ಈ ಕ್ಷೇತ್ರದಲ್ಲಿ ದಾಖಲೆ ನಿರ್ಮಿಸಿದ್ದರು. ಈ ನಡುವೆ ಕಳೆದ ಬಾರಿ 2013 ರಲ್ಲಿ ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜೆ.ಆರ್. ಲೊಬೋ 12,275 ಮತಗಳ ಅಂತರದಿಂದ ಬಿಜೆಪಿಯ ಯೋಗೀಶ್ ಭಟ್ ಅವರನ್ನು ಪರಾಭವ ಗೊಳಿಸಿದ್ದರು.
2013ರಲ್ಲಿ ಅಚ್ಚರಿಯ ಟಿಕೆಟ್ ಪಡೆದಿದ್ದ ಲೋಬೋ
2013 ರ ಚುನಾವಣೆಗೆ ಕೇವಲ 4 ತಿಂಗಳು ಇರುವಾಗ ಕಾಂಗ್ರೆಸ್ ಸೇರಿದ್ದ ಮಾಜಿ ಕೆಎಎಸ್ ಅಧಿಕಾರಿ ಜೆ.ಆರ್. ಲೋಬೋ ಅವರಿಗೆ ಕ್ಷೇತ್ರದಿಂದ ಸ್ಪರ್ಧೀಸಲು ಕಾಂಗ್ರೆಸ್ ಟಿಕೆಟ್ ನೀಡಿ ಎಲ್ಲರನ್ನೂ ಚಕಿತಗೊಳಿಸಿತ್ತು. ಪಕ್ಷದ ಈ ನಿರ್ಧಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಕ್ಷೇತ್ರದಿಂದ ಸ್ಪರ್ಧಿಸಲು ಐವನ್ ಡಿಸೋಜಾ ಪ್ರಬಲ ಆಕಾಂಕ್ಷಿಯಾಗಿದ್ದರೂ ಟಿಕೆಟ್ ಕೊನೆಯ ಕ್ಷಣದಲ್ಲಿ ಲೋಬೋ ಪಾಲಾಗಿತ್ತು.
ಈ ಬಾರಿ ಮತ್ತೆ ಇಲ್ಲಿ ಜೆ.ಆರ್.ಲೋಬೋ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ಇದೇ ಕ್ಷೇತ್ರದಲ್ಲಿ ಬಿಜೆಪಿ ಯುವ ಮುಖಂಡ ವೇದವ್ಯಾಸ್ ಕಾಮತ್ ಅವರನ್ನು ಕಣಕ್ಕಿಳಿಸಿದೆ. ಈ ಹಿನ್ನೆಲ್ಲೆಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರವನ್ನು ಮರಳಿ ಪಡೆಯುವ ದೃಷ್ಟಿಯಿಂದ ಬಿಜೆಪಿ ಭಾರೀ ಕಾರ್ಯತಂತ್ರ ರೂಪಿಸಿದೆ. ಭರ್ಜರಿ ಪ್ರಚಾರ ನಡೆಸುತ್ತಿದೆ.
ಈ ನಡುವೆ ಲೋಬೋ ಕೂಡ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ 'ಓನ್ಇಂಡಿಯಾ ಕನ್ನಡ' ತಂಡಕ್ಕೆ ಮಾತಿಗೆ ಸಿಕ್ಕಿದಾಗ ಕೇಳಿದ ಪ್ರಶ್ನೆಗಳಿಗೆ ಲೋಬೋ ಅವರು ನೀಡಿದ ಉತ್ತರ ಇಲ್ಲಿದೆ.
ಪ್ರ : ಎರಡನೇ ಬಾರಿಗೆ ಚುನಾವಣೆ ಸ್ಪರ್ದಿಸುತ್ತಿದ್ದೀರಿ . ಈ ಬಾರಿ ಜನರು ನಿಮ್ಮನ್ನು ಗೆಲ್ಲಿಸುತ್ತಾರೆ ಅನ್ನುವ ವಿಶ್ವಾಸವಿದೆಯೇ?
ಲೋಬೋ: ಕಳೆದ ಬಾರಿ ನಾನು ಶಾಸಕನಾಗಿ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಜನರು ನೋಡಿದ್ದಾರೆ. ಮೆಚ್ಚಿಕೊಂಡಿದ್ದಾರೆ ಕೂಡ. ಕ್ಷೇತ್ರದ ಜನರಿಗೆ ಒಳ್ಳೆಯ ಆಡಳಿತ , ಕಾನೂನು ಸುವ್ಯವಸ್ಥೆ, ಶಾಂತಿಯುತ ಬದುಕು ನೀಡುವುದೇ ನನ್ನ ಚಿಂತನೆ. ಮಂಗಳೂರನ್ನು ಒಂದು ಬ್ರಾಂಡ್ ಮಾಡಬೇಕು. ಈ ನಿಟ್ಟಿನಲ್ಲಿ ಮೂಲಭೂತ ಸೌಕರ್ಯ, ಅದಕ್ಕೆ ಪೂರಕವಾದ ಯೋಜನೆಗಳನ್ನು ಮತ್ತಷ್ಟು ತರಬೇಕು ಎಂಬುವ ಯೋಜನೆ ಇದೆ. ಇದನ್ನು ಕ್ಷೇತ್ರದ ಜನರಿಗೆ ಮನವರಿಕೆ ಮಾಡಿಸಿದ್ದೇನೆ . ಈ ಹಿನ್ನೆಲೆಯಲ್ಲಿ ಜನರು ಈಬಾರಿಯೂ ನನ್ನನ್ನು ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸವಿದೆ.
ಕಾಂಗ್ರೆಸ್ ನ ಘಟಾನುಘಟಿ ನಾಯಕರು ಈಗಾಗಲೇ ಕ್ಷೇತ್ರಕ್ಕೆ ಬಂದು ತಮ್ಮ ಪರ ಪ್ರಚಾರ ನಡೆಸಿದ್ದಾರೆ. ಇದು ಚುನಾವಣೆಯಲ್ಲಿ ಮತಗಳಾಗಿ ಪರಿವರ್ತನೆ ಆಗಲಿವೆಯೇ?
ಲೋಬೋ: ಖಂಡಿತವಾಗಿ ಮತಗಳಾಗಿ ಪರಿವರ್ತನೆ ಆಗಲಿವೆ. ಕ್ಷೇತ್ರದ ಜನರು ಮೋದಲು ನೋಡುವುದು ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳನ್ನು. ಅವರಲ್ಲಿ ತಮ್ಮ ಆಶೋತ್ತರಗಳನ್ನು ಪೂರೈಸುವ ಅಭ್ಯರ್ಥಿಯನ್ನು ಗುರುತಿಸಿರುತ್ತಾರೆ. ಅಭಿವೃದ್ಧಿ ಕಾಮಗಾರಿಗಳನ್ನು ಕಂಡ ಜನರಿಗೆ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ನಾಯಕರು ಬಂದು ಅದಕ್ಕೆ ಪೂರಕವಾಗಿ ಪ್ರಚಾರ ನಡೆಸಿದರೆ ಜನರ ವಿಶ್ವಾಸ ಮತ್ತಷ್ಟು ಹೆಚ್ಚಾಗುತ್ತದೆ. ಇದು ಖಂಡಿತವಾಗಿಯೂ ಮತಗಳಾಗಿ ಪರಿವರ್ತನೆ ಅಗಲಿವೆ.
ಕ್ಷೇತ್ರದ ಬಗ್ಗೆ ನಿಮ್ಮ ಪ್ರಣಾಳಿಕೆಯಲ್ಲಿ ಯಾವ ಎರಡು ವಿಚಾರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದಿರಿ?
ಲೋಬೋ:ಕ್ಷೇತ್ರದ ಅಭಿವೃದ್ಧಿ ಪೂರಕವಾಗುವ ಮತ್ತಷ್ಟು ಯೋಜನೆಗಳನ್ನು ತರಬೇಕು ಮತ್ತು ಆ ಮೂಲಕ ಉದ್ಯೋಗ ಸೃಷ್ಠಿಯಾಗಬೇಕು. ಕ್ಷೇತ್ರದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗಬೇಕು. ಈ ವಿಚಾರಕ್ಕೆ ಹೆಚ್ಚು ಒತ್ತು ನೀಡಿದ್ದೇನೆ. ಅದು ನನ್ನ ಕನಸು ಕೂಡ.
ಕುಡ್ಸೆಂಪ್ ಯೋಜನೆಯಲ್ಲಿ ನೀವು ಅವ್ಯವಹಾರ ನಡೆಸಿದ್ದೀರಿ ಹಾಗು ಆಶ್ರಯ ಯೋಜನೆಯ ಕುರಿತು ನೀವು ಬಡವರಿಗೆ ಸುಳ್ಳು ಹೇಳಿದ್ದೀರಿ ಎನ್ನುವ ಮಾತು ಕೇಳಿ ಬಂದಿವೆಯಲ್ಲ?
ಲೋಬೋ:ಈ ಆರೋಪಗಳಲ್ಲಿ ಹುರುಳಿಲ್ಲ . ಬಿಜೆಪಿಯ ಮುಖಂಡರು ಸೇರಿದಂತೆ ಇನ್ನಿತರರು ನನ್ನ ವಿರುದ್ಧ ಅವ್ಯವಹಾರದ ಅರೋಪ ಮಾಡಿದ್ದಾರೆ. ಅವೆಲ್ಲ ಬಿಜೆಪಿಯವರ ಸುಳ್ಳಿನ ಕಂತೆ . ಅವರಲ್ಲಿ ಯಾವುದೇ ದಾಖಲೆಗಳಿಲ್ಲದೇ ಅರೋಪ ಮಾಡುತ್ತಿದ್ದಾರೆ. ನನ್ನ ವಿರುದ್ದ ಸುಳ್ಳು ಆರೋಪ ಮಾಡಿದವರ ವಿರುದ್ದ ಈಗಾಗಲೇ ಪ್ರಕರಣ ದಾಖಲಿಸಿದ್ದೇನೆ. ಸುಳ್ಳು ವರದಿ ಪ್ರಸಾರ ಮಾಡಿದ್ದ ಸುದ್ದಿವಾಹಿನಿಗಳ ಮೇಲೂ ಪ್ರಕರಣ ದಾಖಲಿಸಿದ್ದೇನೆ. ಚುನಾವಣೆ ಸಂದರ್ಭದಲ್ಲಿ ಈ ಕೆಟ್ಟ ರಾಜಕೀಯ ಮಾಡುತ್ತಿದ್ದಾರೆ. ಇದು ಅವರಿಗೆ ತಿರುಗು ಬಾಣವಾಗಲಿದೆ.