ಉತ್ತರ ಕರ್ನಾಟಕದಲ್ಲಿ ಹೊಸ ಪಕ್ಷದ ಪುಳಕ : ಬಿಜೆಪಿ, ಕಾಂಗ್ರೆಸ್ಸಿಗೆ ನಡುಕ?
ಮಹಾದಾಯಿ ನದಿನೀರು ಹಂಚಿಕೆ ವಿವಾದವನ್ನು ಬಗೆಹರಿಸಲು ರಾಜಕೀಯ ಪಕ್ಷಗಳ ಇಚ್ಚಾಶಕ್ತಿಯ ಕೊರತೆಯ ನಡುವೆ, ಕಳಸಾ-ಬಂಡೂರಿ ಹೋರಾಟಗಾರರು ಮಕರ ಸಂಕ್ರಮಣದ ದಿನ (ಜ 15) ಹೊಸ ಪಕ್ಷವನ್ನು ಹುಟ್ಟುಹಾಕಿದ್ದಾರೆ.
ಈಗ ತಾನೇ ಉದಯಗೊಂಡಿರುವ 'ಜನ ಸಾಮಾನ್ಯರ ಪಕ್ಷ'ದ ಅಧ್ಯಕ್ಷ ಡಾ ಅಯ್ಯಪ್ಪ ರಾಮಣ್ಣ ದೊರೆ, ಉತ್ತರ ಕರ್ನಾಟಕದ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಜೊತೆಗೆ, ಪಕ್ಷ ಸ್ಥಾಪನೆಗೊಂಡ ತಮ್ಮ ಚೊಚ್ಚಲ ಭಾಷಣದಲ್ಲೇ ಬಿಜೆಪಿ, ಪ್ರಧಾನಿ ಮೋದಿ, RSS, ರಾಜ್ಯ ಸರಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ರಾಜಕೀಯದಲ್ಲಿ ಸಂಕ್ರಮಣ, ಜನ ಸಾಮಾನ್ಯರ ಪಕ್ಷ ಉದಯ
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮೇಲೆ ದಶಕಗಳಿಂದ ನಂಬಿಕೆಯಿಟ್ಟುಕೊಂಡು, ಸಹನೆಯ ಕಟ್ಟೆ ಒಡೆಯದಂತೆ ಹೋರಾಟ ಮಾಡಿಕೊಂಡು ಬಂದಿರುವ ಆ ಭಾಗದ ರೈತರು ಹೊಸ ಪಕ್ಷವನ್ನೇ ಹುಟ್ಟು ಹಾಕಿದ್ದಾರೆಂದರೆ, ಅವರೆಷ್ಟು ಎರಡು ರಾಷ್ಟ್ರೀಯ ಪಕ್ಷಗಳ ಮೇಲೆ ಭ್ರಮನಿರಸನಾಗಿರಬೇಕು ಎನ್ನುವುದಕ್ಕೆ ಇದೊಂದು ಉದಾಹರಣೆ.
ಬೆಳಗಾವಿ, ಹುಬ್ಬಳ್ಳಿ ಧಾರವಾಡ, ಹಾವೇರಿ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳಿಗೆ ಜೀವನದಿಯಾಗಿರುವ ಮಹಾದಾಯಿ ನದಿನೀರು ಹಂಚಿಕೆ ವಿವಾದ ಇದುವರೆಗೂ ಬಗೆಹರಿಯದೇ ಇರಲು, ಏನು ಬಿಜೆಪಿಯನ್ನು ಈಗ ದೂಷಿಸಲಾಗುತ್ತಿದೆಯೋ, ಅದರ ಅಷ್ಟೇ ಪಾಲು ಕಾಂಗ್ರೆಸ್ಸಿನದ್ದೂ ಇದೆ ಎನ್ನುವುದು ವಾಸ್ತವತೆ. (ಇದು ಹೋರಾಟಗಾರರಿಗೆ ಗೊತ್ತಿಲ್ಲದ ವಿಚಾರವೇನೂ ಅಲ್ಲ)
ವ್ಯಕ್ತಿ ಚಿತ್ರ: ಜನ ಸಾಮಾನ್ಯ ಪಕ್ಷದ ಅಧ್ಯಕ್ಷ ಡಾ. ಅಯ್ಯಪ್ಪ
ಪಕ್ಷದ ಅಧ್ಯಕ್ಷ ಡಾ. ಅಯ್ಯಪ್ಪ ಮಾತನಾಡುತ್ತಾ, ರಾಜ್ಯ ಮತ್ತು ಕೇಂದ್ರ ಸರಕಾರ, ಪ್ರಧಾನಿ ಮೋದಿ, RSS ವಿರುದ್ದ ವಾಕ್ ಪ್ರಹಾರ ನಡೆಸಿರುವುದರಿಂದ, ಹೊಸ ಪಕ್ಷ ಸ್ಥಾಪನೆಯಿಂದ ಬಿಜೆಪಿ ಮತ್ತು ಕಾಂಗ್ರೆಸ್ ವೋಟ್ ಬ್ಯಾಂಕಿಗೆ ಹೊಡೆತ ಬೀಳುವ ಸಾಧ್ಯತೆಯಿದೆಯಾ ಎನ್ನುವ ರಾಜಕೀಯ ಲೆಕ್ಕಾಚಾರ ಆರಂಭವಾಗಿದೆ.. ಬಿಜೆಪಿ ಮತ್ತು ಕಾಂಗ್ರೆಸ್, ಹೊಸ ಪಕ್ಷವನ್ನು ಕಡೆಗಣಿಸುವಂತಿಲ್ಲ...
ಕೂಡಲಸಂಗಮದಲ್ಲಿ ಹೊಸ ಪಕ್ಷ ಆರಂಭ
ಜನ ಸಾಮಾನ್ಯರ ಪಕ್ಷದ ಅಧ್ಯಕ್ಷ ಡಾ ಅಯ್ಯಪ್ಪ, ಕೂಡಲಸಂಗಮದಲ್ಲಿ ಹೊಸ ಪಕ್ಷವನ್ನು ಉದ್ದೇಶಿಸಿ ಮಾತನಾಡುತ್ತಾ, RSS ನಿರುದ್ಯೋಗಿಗಳ ಸಂಘ. ಪ್ರಧಾನಿ ಮೋದಿ ನಿರುದ್ಯೋಗಿಗಳ ಸಂಘದ ಸದಸ್ಯ. ಯಾವ ರೀತಿ ಭಾಷಣ ಮಾಡಬೇಕು ಎನ್ನುವುದಷ್ಟೇ ಅವರ ಚಿಂತೆ, ಭಾಷಣ ಮಾಡಿ ಜನರ ದಿಕ್ಕು ತಪ್ಪಿಸುತ್ತಾರೆ. ಬರೀ ಯುದ್ಧದ ಬಗ್ಗೆ ಮಾತನಾಡುತ್ತಾರೆ. ಐದು ಬಣ್ಣಗಳ ಬಟ್ಟೆ ಧರಿಸುವ ಮೋದಿಯವರಿಗೆ, ಶರ್ಟ್ ಮೇಲಿರುವ ವ್ಯಾಮೋಹ, ರೈತರ ಮೇಲಿಲ್ಲ ಎಂದು ಅಯ್ಯಪ್ಪ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ, ರಾಜ್ಯ ಸರಕಾರದ ಮೇಲೂ ವಾಕ್ ಪ್ರಹಾರ ನಡೆಸಿದ್ದಾರೆ.
ಯಡಿಯೂರಪ್ಪ ಸಿಹಿಸುದ್ದಿ ನೀಡುತ್ತೇನೆಂದು ಮಾತಿಗೆ ತಪ್ಪಿದ್ದು
ಯಡಿಯೂರಪ್ಪ ಸಿಹಿಸುದ್ದಿ ನೀಡುತ್ತೇನೆಂದು ಮಾತಿಗೆ ತಪ್ಪಿದ್ದು, ಗೋವಾ ಸಿಎಂ ಉಲ್ಟಾ ಹೊಡೆದದ್ದು ಬಿಜೆಪಿಗೆ ಇಲ್ಲಿ ಅನಾನುಕೂಲ ಪರಿಸ್ಥಿತಿ ನಿರ್ಮಾಣವಾಗಿರುವುದು ಒಪ್ಪಿಕೊಳ್ಳುವ ವಿಚಾರವಾದರೂ, ಈ ಹಿಂದೆ ಗೋವಾ ಚುನಾವಣೆಯ ವೇಳೆ, ಸೋನಿಯಾ ಕರ್ನಾಟಕಕ್ಕೆ ಒಂದು ತೊಟ್ಟು ನೀರು ಬಿಡುವುದಿಲ್ಲ ಎಂದಿರುವ ವಿಚಾರ, ಡಾ. ಅಯ್ಯಪ್ಪ ಅವರಿಗೆ ತಿಳಿಯದೇ ಇರುವ ವಿಚಾರವೇನೂ ಅಲ್ಲ. ಜೊತೆಗೆ, ಹೊಸ ಪಕ್ಷ ಸ್ಥಾಪನೆಯ ವೇಳೆ, RSS ಅನ್ನು ಯಾಕೆ ಅಯ್ಯಪ್ಪ ಎಳೆದು ತಂದರು ಎನ್ನುವುದೇ ಇಲ್ಲಿ ಪ್ರಶ್ನೆ.
ಹೊಸ ಪಕ್ಷ ಹೊಸ ಆಶಾಕಿರಣವಾಗಲಿ
ದಶಕಗಳಿಂದ ನೀರಿಗಾಗಿ ನಿಯತ್ತಿನ ಹೋರಾಟ ನಡೆಸುತ್ತಿರುವ ಆ ಭಾಗದ ಜನರಿಗಾಗಿ ಹೊಸ ಪಕ್ಷ ಹೊಸ ಆಶಾಕಿರಣವಾಗಲಿ ಎಂದು ಆಶಿಸುತ್ತಾ, ಐದು ಜಿಲ್ಲೆಯ 42 ಅಸೆಂಬ್ಲಿ ಕ್ಷೇತ್ರಗಳಲ್ಲಿ ಜನ ಸಾಮಾನ್ಯರ ಪಕ್ಷ ನಿರ್ಣಾಯಕ ಪಾತ್ರವಹಿಸುವ ಎಲ್ಲಾ ಸಾಧ್ಯತೆಗಳಿವೆ. ಮೇಲ್ನೋಟಕ್ಕೆ ಮತ್ತು ಪಕ್ಷದ ಅಧ್ಯಕ್ಷರ ಚೊಚ್ಚಲ ಭಾಷಣವನ್ನು ಅವಲೋಕಿಸುವುದಾದರೆ, ಬಿಜೆಪಿ ಮತ್ತು ಕಾಂಗ್ರೆಸ್ಸಿನ ವೋಟ್ ಬ್ಯಾಂಕ್ ಹೊಸ ಪಕ್ಷ ಅಲ್ಲಾಡಿಸುವ ಸಾಧ್ಯತೆಯಿಲ್ಲದಿಲ್ಲ.
20 ಕೋಟಿ ಖರ್ಚು ಮಾಡಲು ಸಿದ್ಧರಿದ್ದೇವೆ
ಜನಸಾಮಾನ್ಯರ ಪಕ್ಷದಿಂದ 20 ಕೋಟಿ ಖರ್ಚು ಮಾಡಲು ಸಿದ್ಧರಿದ್ದೇವೆ. ಶ್ರಮದಾನದ ಮೂಲಕ ಕೆಲಸ ಮಾಡುತ್ತೇವೆ. ಕಳಸಾ-ಬಂಡೂರಿ ನಾಲಾ ಕಾಮಗಾರಿಗೆ ಅನುಮತಿ ಕೊಡಿ. ಒಂದು ತಿಂಗಳಲ್ಲಿ ಕಾಮಗಾರಿ ಮಾಡಿ ಮುಗಿಸುತ್ತೇವೆ ಎಂದು ಅಯ್ಯಪ್ಪ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಸವಾಲು ಹಾಕಿರುವುದರಿಂದ, ಎರಡೂ ಪಕ್ಷಗಳು ಮುಂಬರುವ ಚುನಾವಣೆಯಲ್ಲಿ ಹೊಸ ತಂತ್ರಗಾರಿಕೆಯ ಮೊರೆ ಹೋಗಬೇಕಾಗಬಹುದು.
ಹೊಸ ಪಕ್ಷದ ಉದಯದಿಂದ ಬಿಜೆಪಿಗೆ ನಷ್ಟ
ಲಿಂಗಾಯತ ಪತ್ರ್ಯೇಕ ಧರ್ಮ ಜೊತೆಗೆ ಹೊಸ ಪಕ್ಷದ ಉದಯದಿಂದ, ಇದರ ಪ್ರಭಾವ ಚುನಾವಣೆಯ ಹೊತ್ತಿನಲ್ಲಿ ಯಾವ ಹಂತಕ್ಕೆ ಬಂದು ನಿಲ್ಲುತ್ತದೆ ಎಂದು ಕಾದುನೋಡಬೇಕಿದೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ, ಐದು ಜಿಲ್ಲೆಗಳ ಒಟ್ಟು 42 ಕ್ಷೇತ್ರಗಳಲ್ಲಿ, ಬಿಜೆಪಿ -15, ಕಾಂಗ್ರೆಸ್ - 24, ಜೆಡಿಎಸ್ ಮತ್ತು ಇತರರು 3ಸ್ಥಾನದಲ್ಲಿ ಗೆದ್ದಿದ್ದರು. ಕಳೆದ ಬಾರಿ ಬಿಎಸ್ವೈ, ಕೆಜೆಪಿ ಪಕ್ಷವನ್ನು ಕಟ್ಟಿ ಬಿಜೆಪಿಗೆ ಹಿನ್ನಡೆ ತಂದೊಡ್ಡಿದ್ದರು, ಈ ಬಾರಿ ಜನ ಸಾಮಾನ್ಯರ ಪಕ್ಷದಿಂದ ಬಿಜೆಪಿಗೆ ನಷ್ಟವಾಗಲಿದೆಯಾ ಅಥವಾ ಕಾಂಗ್ರೆಸ್ಸಿಗೋ?..ಕಾದು ನೋಡಬೇಕಿದೆ.