ಗೋವಾ,ಮಣಿಪುರದಲ್ಲಿ ತಾನೇ ಹೆಣೆದ ತಂತ್ರ ಕರ್ನಾಟಕ ಬಿಜೆಪಿಗೆ ಮುಳುವಾಯ್ತೇ?
ಬಹುನಿರೀಕ್ಷಿತ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದೆ. ನಿರೀಕ್ಷೆಯಂತೇ ರಾಜ್ಯದಲ್ಲಿ ಅತಂತ್ರ ವಿಧಾನಸಭೆ! ಆದರೆ ಅತೀ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಬಹುದು ಎಂಬ ನಿರೀಕ್ಷೆ ಮಾತ್ರ ಸುಳ್ಳಾಗಿದ್ದು, ಬಿಜೆಪಿಯೇ ಅತೀ ದೊಡ್ಡ ಪಕ್ಷವಾಗಿದೆ. ಕಾಂಗ್ರೆಸ್ 78, ಬಿಜೆಪಿ 104, ಜೆಡಿಎಸ್ 38 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇದೀಗ ದಾಳ ಎಂದಿನಂತೆ ಜೆಡಿಎಸ್ ಅಂಗಳದಲ್ಲಿದೆ. ಸದ್ಯಕ್ಕೆ ದೇವೇಗೌಡರು ಆಡಿದ್ದೇ ಆಟ!
LIVE: ಕರ್ನಾಟಕ ಚುನಾವಣೆ 2018, ಮತಎಣಿಕೆ ಅಪ್ಡೇಟ್ಸ್
ಮಧ್ಯಾಹ್ನದವರೆಗೂ ಬಿಜೆಪಿಯೇ ಸರ್ಕಾರ ರಚಿಸುತ್ತದೆ, ಬಹುಮತ ಪಡೆಯುತ್ತದೆ ಎಂದುಕೊಂಡಿದ್ದರೆ ಸಂಜೆಯ ಹೊತ್ತಿಗೆ ಚಿತ್ರಣವೇ ಬದಲಾಗಿದೆ. ಅತೀ ದೊಡ್ಡ ಪಕ್ಷವಾಗಿದ್ದ ಬಿಜೆಪಿ ಸರ್ಕಾರ ರಚಿಸಲು ಹರಸಾಹಸ ಪಡುತ್ತಿದ್ದರೆ, ಇತ್ತ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರ ರಚಿಸಲು ಮುಂದಾಗಿವೆ.
ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ
ಈ ಬೆಳವಣಿಗೆಯಿಂದ ಗೋವಾ ಮತ್ತು ಮಣಿಪುರದಲ್ಲಿಬಿಜೆಪಿ ಮಾಡಿದ ತಂತ್ರವೇ ಬಿಜೆಪಿಗೆ ತಿರುಗುಬಾಣವಾದಂತಾಗಿದೆ.
ಗೋವಾದಲ್ಲಿ ಗೆದ್ದಿದ್ದು ಕಾಂಗ್ರೆಸ್, ಸರ್ಕಾರ ರಚಿಸಿದ್ದು ಬಿಜೆಪಿ!
ಕಳೆದ ವರ್ಷ ಮಾರ್ಚ್ ನಲ್ಲಿ ಗೋವಾದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮಾಡಿದ ತಂತ್ರವೂ ಇದೇ. 40 ಕ್ಷೇತ್ರಗಳ ವಿಧಾನಸಭೆಯಲ್ಲಿ ಬಿಜೆಪಿ ಗೆದ್ದಿದ್ದು ಕೇವಲ 13 ಸ್ಥಾನಗಳನ್ನು ಮಾತ್ರ. ಕಾಂಗ್ರೆಸ್ 17 ಸ್ಥಾನ ಗೆದ್ದು ಅತೀ ದೊಡ್ಡ ಪಕ್ಷವಾಗಿತ್ತಾದರೂ, ಇತರೆ ಪಕ್ಷಗಳೊಂದಿಗೆ ಸೇರಿ ಬಿಜೆಪಿಯೇ ಸರ್ಕಾರ ರಚಿಸಿತ್ತು. ಈ ಕುರಿತು ಕಾಂಗ್ರೆಸ್ ಸಾಕಷ್ಟು ವಿರೋಧ ವ್ಯಕ್ತಪಡಿಸಿತ್ತಾದರೂ ಬಿಜೆಪಿ ಬಹುಮತ ಸಾಬೀತುಪಡಿಸಿದ್ದರಿಂದ ಅದಕ್ಕೆ ಸರ್ಕಾರ ರಚಿಸಲು ಅವಕಾಶ ಮಾಡಿಕೊಡಲಾಗಿತ್ತು.
ಮಣಿಪುರದಲ್ಲೂ ಬಿಜೆಪಿ ಮಾಡಿದ್ದು ಅದನ್ನೇ!
ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಮಾರ್ಚ್ ನಲ್ಲಿ ನಡೆದ ಚುನಾವಣೆಯಲ್ಲಿ 60 ವಿಧಾನಸಭಾ ಕ್ಷೇತ್ರಗಳಲ್ಲಿ 28 ಸ್ಥಾನವನ್ನು ಕಾಂಗ್ರೆಸ್ ಗೆದ್ದಿತ್ತು. ಕಾಂಗ್ರೆಸ್ಸಿಗೆ ಅಗತ್ಯವಿದ್ದಿದ್ದು ಕೇವಲ 03 ಸ್ಥಾನ ಮಾತ್ರ. ಇಲ್ಲಿ 21 ಸ್ಥಾನ ಗೆದ್ದಿದ್ದ ಬಿಜೆಪಿ ಇಲ್ಲಿನ ಇತರ ಪಕ್ಷಗಳೊಂದಿಗೆ ಸೇರಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸಿತ್ತು.
ಬಿಬಿಎಂಪಿ ಚುನಾವಣೆಯಲ್ಲೂ ಆಗಿದ್ದು ಹೀಗೇ
ಹಾಗೆ ಹೇಳುವುದಕ್ಕೆ ಹೋದರೆ ಅತೀ ದೊಡ್ಡ ಪಕ್ಷಕ್ಕೆ ಅಧಿಕಾರ ಸಿಗಂದಂತೆ ಮಾಡಿ, ಉಳಿದ ಪಕ್ಷಗಳೆಲ್ಲ ಸೇರಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಗೆ ಮೊದಲು ಮುನ್ನುಡಿ ಬರಿದಿದ್ದು ಜೆಡಿಎಸ್ ಮತತು ಕಾಂಗ್ರೆಸ್ಸೇ! 2015ರ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ 100, ಕಾಂಗ್ರೆಸ್ 76, ಜೆಡಿಎಸ್ 14 ಸ್ಥಾನಗಳಲ್ಲಿ ಜಯಗಳಿಸಿತ್ತು. 8 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಜೆಡಿಎಸ್ ಬೆಂಬಲ ಪಡೆದ ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಜಿ ಪದ್ಮಾವತಿ ಮೇಯರ್ ಆಗಿದ್ದರು!
ಬಿಜೆಪಿಯತ್ತ ತಿರುಗುಬಾಣ
ಇತ್ತೀಚೆಗೆ ಗೋವಾ, ಮಣಿಪುರದಲ್ಲಿ ಇದೇ ತಂತ್ರ ಉಪಯೋಗಿಸಿ ಸರ್ಕಾರ ರಚಿಸಿದ್ದ ಬಿಜೆಪಿಯ ತಂತ್ರವೇ ಕರ್ನಾಟಕದಲ್ಲಿ ಬಿಜೆಪಿಗೆ ಮುಳುವಾಗುತ್ತದೆಯೇ? 78 ಸ್ಥಾನ ಗೆದ್ದ ಕಾಂಗ್ರೆಸ್ ಮತ್ತು 38 ಸ್ಥಾನ ಗೆದ್ದ ಜೆಡಿಎಸ್ ಸೇರಿ ಅತೀ ದೊಡ್ಡ ಪಕ್ಷವನ್ನು ಹಿಂದಿಕ್ಕಿ ಸರ್ಕಾರ ರಚಿಸಬಹುದು. ಆ ಎಲ್ಲಾ ಸಾಧ್ಯತೆಗಳೂ ಇವೆ. ಈಗಾಗಳೇ ರಾಜ್ಯಪಾಲರನ್ನು ಭೇಟಿಯಾಗಿರುವ ಕಾಂಗ್ರೆಸ್-ಜೆಡಿಎಸ್ ನಾಯಕರ ಸರ್ಕಾರ ರಚನೆಯ ಮನವಿ ನೀಡಿದ್ದಾರೆ. ಬಿಜೆಪಿ ಒಂದು ವಾರದ ಕಾಲಾವಕಾಶ ಕೋರಿದೆ. ರಾಜ್ಯಪಾಲರು ಯಾವ ನಿರ್ಧಾರ ತಾಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.