ದಕ್ಷಿಣ ಕರ್ನಾಟಕದಲ್ಲಿ ಮೋಡಿ ಮಾಡಿದ ಬಿಜೆಪಿ
ಬೆಂಗಳೂರು, ಮೇ 16: ಕರಾವಳಿ ಮತ್ತು ಮುಂಬೈ ಕರ್ನಾಟಕ ಭಾಗಗಳಲ್ಲಿನ ಭರ್ಜರಿ ಯಶಸ್ಸು, ಬಿಜೆಪಿಗೆ ಬಹುದೊಡ್ಡ ಶಕ್ತಿ ನೀಡಿದೆ. ಹಳೆ ಮೈಸೂರು ಪ್ರದೇಶದಲ್ಲಿ ಹಿಡಿತ ಬಲಪಡಿಸಿಕೊಂಡಿರುವುದು ಜೆಡಿಎಸ್ನ ರಾಜಕೀಯ ಬಲವನ್ನು ವೃದ್ಧಿಸಿದೆ.
2013ರಲ್ಲಿ ದಕ್ಷಿಣ ಕರ್ನಾಟಕ ಭಾಗ್ಯದಲ್ಲಿ 'ಶೂನ್ಯ' ಸಾಧನೆ ಮಾಡಿದ್ದ ಬಿಜೆಪಿ ಮೈಸೂರು ಜಿಲ್ಲೆಯಲ್ಲಿ ತಳವೂರಿದೆ. ಹಾಸನ ಜಿಲ್ಲೆಯಲ್ಲಿಯೂ ಮಾರ್ಗ ಕಂಡುಕೊಂಡಿದೆ. ಹಾಸನ ವಿಧಾನಸಭೆ ಕ್ಷೇತ್ರದಲ್ಲಿನ ಗೆಲುವು ಮತ್ತು ತುಮಕೂರು ಜಿಲ್ಲೆಯಲ್ಲಿ ನಾಲ್ಕು ಸೀಟುಗಳನ್ನು ಗೆದ್ದಿರುವುದು ಗಮನಾರ್ಹ ಸಾಧನೆ.
ಕರಾವಳಿ, ಮುಂಬೈ ಕರ್ನಾಟಕದಲ್ಲಿ ಕೇಸರಿ ಕಲರವ!
ದಕ್ಷಿಣ ಕರ್ನಾಟಕದಲ್ಲಿ ಕಾಂಗ್ರೆಸ್ ತೀವ್ರ ಹೊಡೆತ ಅನುಭವಿಸಿದೆ. ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆಘಾತಕಾರಿ ಸೋಲು ಅನುಭವಿಸಿರುವುದು ಮಾತ್ರವಲ್ಲ, ಮೈಸೂರು ಭಾಗದಲ್ಲಿ ಅವರ ಶಕ್ತಿ ಕ್ಷೀಣಿಸಿದೆ. ಇದರಿಂದ ಒಕ್ಕಲಿಗ ಪ್ರಾಬಲ್ಯದ ಭಾಗಗಳಲ್ಲಿ ಜೆಡಿಎಸ್ ತನ್ನ ಬಲಾಬಲವನ್ನು ಹೆಚ್ಚಿಸಿಕೊಂಡಿದೆ. ಇಂತಹ 38 ಸೀಟುಗಳಲ್ಲಿ 31ರಲ್ಲಿ ಜೆಡಿಎಸ್ ಗೆಲುವು ಕಂಡಿದೆ.
ಡಿಕೆ ಶಿವಕುಮಾರ್ಗೆ ಶಾಸಕರ ಕಾಯುವ ಹೊಣೆ
ಮೂರು ತಿಂಗಳ ಹಿಂದಷ್ಟೇ ಕಾಂಗ್ರೆಸ್ ಸೇರಿದ್ದ ನಾಗಮಂಗಲದ ಎನ್. ಚೆಲುವರಾಯಸ್ವಾಮಿ, ಮಾಗಡಿಯ ಎಚ್.ಸಿ. ಬಾಲಕೃಷ್ಣ ಮತ್ತು ಶ್ರೀರಂಗಪಟ್ಟಣ ಕ್ಷೇತ್ರದ ರಮೇಶ್ ಬಂಡಿಸಿದ್ದೇಗೌಡ ಸೋಲು ಅನುಭವಿಸಿದ್ದಾರೆ. ಕಾಂಗ್ರೆಸ್ಗೆ ಹೆಚ್ಚು ನಿರಾಳತೆ ನೀಡಿರುವ ಜಿಲ್ಲೆಗಳೆಂದರೆ ಚಿಕ್ಕಬಳ್ಳಾಪುರ ಮತ್ತು ಕೋಲಾರ.
ಆಘಾತ ಎದುರಿಸಿದ ಸಿದ್ದರಾಮಯ್ಯ
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮತ್ತು ಜಿ.ಟಿ. ದೇವೇಗೌಡ ಅವರ ನಡುವೆ ಸಮೀಪದ ಹಣಾಹಣಿ ನಡೆಯುವ ನಿರೀಕ್ಷೆಯಿತ್ತು. ಆದರೆ, ಅದನ್ನು ಹುಸಿಯಾಗಿಸಿ ಜಿ.ಟಿ. ದೇವೇಗೌಡ ಅವರು ಭಾರಿ ಅಂತರದಿಂದ ಗೆದ್ದು ಬೀಗಿದರು. ವರುಣಾ ಕ್ಷೇತ್ರದಲ್ಲಿ ತಮ್ಮ ಮಗ ಯತೀಂದ್ರ ಗೆಲುವು ಸಾಧಿಸಿರುವುದೊಂದೇ ಸಿದ್ದರಾಮಯ್ಯ ಅವರಿಗೆ ತುಸು ಸಮಾಧಾನ ನೀಡಿರುವ ವಿಚಾರ.
ಮುಳುವಾದ ಲಿಂಗಾಯತ ಹೋರಾಟ
ಲಿಂಗಾಯತರಿಗೆ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡುವ ನಿರ್ಧಾರ ಕಾಂಗ್ರೆಸ್ಗೆ ಮುಂಬೈ ಕರ್ನಾಟಕ ಭಾಗದಲ್ಲಿ ಮುಳುವಾಗಿದೆ. ಅಲ್ಲದೆ ಮಹದಾಯಿ ನೀರು ವಿವಾದದ ವಿಚಾರದಲ್ಲಿಯೂ ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ಗೆ ಸಾಧ್ಯವಾಗಿಲ್ಲ. ಈ ಭಾಗದಲ್ಲಿ ಕಾಂಗ್ರೆಸ್ ತನ್ನ 14 ಸೀಟುಗಳನ್ನು ಕಳೆದುಕೊಂಡಿದ್ದರೆ, 13 ಸೀಟುಗಳನ್ನು ಮಾತ್ರ ಹೊಂದಿದ್ದ ಬಿಜೆಪಿ, ತನ್ನ ಬಲವನ್ನು 30ಕ್ಕೆ ಏರಿಸಿಕೊಂಡಿದೆ.
ಈ ಭಾಗದ ಪ್ರತಿನಿಧಿಗಳಾಗಿದ್ದ ಕಾಂಗ್ರೆಸ್ ಸರ್ಕಾರದ ನಾಲ್ವರು ಸಚಿವರು ಮತ್ತು ವಿಧಾನಸಭೆ ಸ್ಪೀಕರ್ ಕೂಡ ಮುಖಭಂಗ ಅನುಭವಿಸಿದ್ದಾರೆ.
ಎಂಬಿ ಪಾಟೀಲ್ಗೆ ಸುಲಭ ಗೆಲುವು
ಪಂಚಾಯತ್ ರಾಜ್ ಸಚಿವರಾಗಿದ್ದ ಎಚ್.ಕೆ. ಪಾಟೀಲ್ 2 ಸಾವಿರಕ್ಕೂ ಕಡಿಮೆ ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವಾಗಿ ನಡೆದ ಹೋರಾಟದ ಮುಂಚೂಣಿಯಲ್ಲಿದ್ದ ಸಚಿವ ಎಂ.ಬಿ. ಪಾಟೀಲ್, ವೀರಶೈವ ಸಮುದಾಯದ ನಕಾರಾತ್ಮಕ ಪ್ರಚಾರದ ನಡುವೆಯೂ ಸುಲಭವಾಗಿ ಜಯಗಳಿಸಿದ್ದಾರೆ.
ಬೆಳಗಾವಿ ದಕ್ಷಿಣ ಭಾಗದ ಖಾನಾಪುರ ಮತ್ತು ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಹಿಡಿತದಲ್ಲಿದ್ದ ಕ್ಷೇತ್ರ ಕಾಂಗ್ರೆಸ್ ಮತ್ತು ಬಿಜೆಪಿ ಪಾಲಾಗಿವೆ.
ನಟ ಉಪೇಂದ್ರ ಅವರು ಕೆಲಕಾಲ ಗುರುತಿಸಿಕೊಂಡಿದ್ದ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ) ಅಭ್ಯರ್ಥಿ ಕಾಂಗ್ರೆಸ್ನರಾದ ಸ್ಪೀಕರ್ ಕೋಳಿವಾಡ ಅವರನ್ನು ಸೋಲಿಸುವ ಮೂಲಕ ಗಮನ ಸೆಳೆದಿದ್ದಾರೆ.
ಹಿಂದುತ್ವ ಮತ್ತು ಹತ್ಯೆ
ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ನಿರೀಕ್ಷೆಗೂ ಮೀರಿ ಬಿಜೆಪಿ ಸಾಧನೆ ಮಾಡಿದೆ. ಬಹುತೇಕ ಕ್ಲೀನ್ ಸ್ವೀಪ್ ಸಾಧಿಸುವ ಮಟ್ಟಿಗೆ ಬಿಜೆಪಿ ಇಲ್ಲಿ ಪ್ರಭಾವ ಬೀರಿದೆ.
ಈ ಭಾಗಗಳಲ್ಲಿ ಹಿಂದುತ್ವ ಮತ್ತು ಸಂಘ ಪರಿವಾರಗಳೊಂದಿಗೆ ಗುರುತಿಸಿಕೊಂಡಿದ್ದ 24 ಮಂದಿಯ ಹತ್ಯೆ ಪ್ರಕರಣಗಳ ಆಧಾರದಲ್ಲಿ ಇಲ್ಲಿ ಪ್ರಚಾರ ಜೋರಾಗಿ ನಡೆದಿತ್ತು.
ಇಲ್ಲಿ ಶೇ 50ಕ್ಕೂ ಹೆಚ್ಚಿನ ಮತಗಳಿಕೆಯೊಂದಿಗೆ 33 ಸೀಟುಗಳಲ್ಲಿ 28 ಸೀಟುಗಳನ್ನು ಬಿಜೆಪಿ ತನ್ನ ಖಾತೆಗೆ ಹಾಕಿಕೊಂಡಿದೆ. 2013ರಲ್ಲಿ ಈ ಭಾಗದಲ್ಲಿ ಕೇವಲ ಎಂಟು ಸ್ಥಾನ ಬಿಜೆಪಿಗೆ ಸಿಕ್ಕಿತ್ತು. ಆಗ ಕೆಜೆಪಿಯ ಪ್ರಭಾವಳಿ ಇಲ್ಲಿ ಕೆಲಸ ಮಾಡಿದ್ದು, ಬಿಜೆಪಿಗೆ ಪೆಟ್ಟು ನೀಡಿತ್ತು.
ಈ ಚುನಾವಣೆಯಲ್ಲಿ ಕಾಂಗ್ರೆಸ್ನ ಸ್ಥಾನ ಇಲ್ಲಿ 18 ಸೀಟುಗಳನ್ನು ಹೊಂದಿತ್ತು. ಅದೀಗ 5ಕ್ಕೆ ಕುಸಿದಿದೆ. ಜೆಡಿಎಸ್ನದ್ದು ಶೂನ್ಯ ಸಾಧನೆ.
ಸೋಲಿಗೆ 'ಮೀನು' ಕಾರಣವೇ?
ಕಾರ್ಯಕರ್ತರ ಹತ್ಯೆಗಳಿಗೆ ಈ ಗೆಲುವುಗಳನ್ನು ಅರ್ಪಿಸುತ್ತಿರುವುದಾಗಿ ಸ್ಥಳೀಯ ಬಿಜೆಪಿ ಘಟಕ ಹೇಳಿಕೊಂಡಿದೆ. ಬೆಳ್ತಂಗಡಿಯಲ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ವಸಂತ ಬಂಗೇರ ಅವರ ಸೋಲಿಗೆ ಸಿದ್ದರಾಮಯ್ಯ ಅವರು ಮೀನು ತಿಂದು ಧರ್ಮಸ್ಥಳ ದೇವಸ್ಥಾನಕ್ಕೆ ಭೇಟಿ ನೀಡಿರುವುದೇ ಕಾರಣ ಎಂದು ಬಿಜೆಪಿಗರು ಪ್ರತಿಪಾದಿಸಿದ್ದಾರೆ.
2013ರ ಚುನಾವಣಾ ಫಲಿತಾಂಶ ಹಲವೆಡೆ ಈಗ ಉಲ್ಟಾ ಆಗಿದೆ. ಉಡುಪಿ ಮತ್ತು ಕೊಡಗುಗಳಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ. ಶಿವಮೊಗ್ಗದಲ್ಲಿ ಏಳು ಸೀಟುಗಳ ಪೈಕಿ ಆರು ಬಿಜೆಪಿಗೆ ಒಲಿದಿದೆ.
ಹೈಕದಲ್ಲಿ ಕಾಂಗ್ರೆಸ್ ಭದ್ರ
ಹೈದರಾಬಾದ್ ಕರ್ನಾಟಕದಲ್ಲಿ ಬಿಜೆಪಿ ಗೆಲುವು ಕಂಡಿದ್ದರೂ, ಕಾಂಗ್ರೆಸ್ ತನ್ನ ಭದ್ರ ನೆಲೆಯನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಎರಡು ಕ್ಷೇತ್ರಗಳಲ್ಲಿ ಸೋಲು ಕಂಡಿರುವ ಕಾಂಗ್ರೆಸ್ 21ರಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ ತನ್ನ ಶಕ್ತಿಯನ್ನು ಐದರಿಂದ 15ಕ್ಕೆ ಮೂರು ಪಟ್ಟು ಹೆಚ್ಚಿಸಿಕೊಂಡಿದೆ.
ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಭಾವವಿರುವ ಕಲಬುರಗಿಯಲ್ಲಿ ಪಕ್ಷ ಐದರಲ್ಲಿ ಗೆದ್ದು ಎರಡರಲ್ಲಿ ಸೋಲು ಅನುಭವಿಸಿದೆ. ಇನ್ನೊಂದೆಡೆ ಕಳೆದು ಚುನಾವಣೆಯಲ್ಲಿ ಕೇವಲ ಒಂದು ಸ್ಥಾನ ಹೊಂದಿದ್ದ ಬಿಜೆಪಿ ತನ್ನ ಬಲವನ್ನು ನಾಲ್ಕಕ್ಕೆ ವೃದ್ಧಿಸಿಕೊಂಡಿದೆ.
ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿಕೊಂಡಿದ್ದ ಆರು ಬಾರಿಯ ಶಾಸಕ ಮಾಲಿಕಯ್ಯ ಗುತ್ತೇದಾರ್, ಬಿಜೆಪಿ ತೊರೆದು ಕಾಂಗ್ರೆಸ್ ಸೇರಿಕೊಂಡಿದ್ದ ಎಂ.ವೈ. ಪಾಟೀಲ್ ವಿರುದ್ಧ ಅಫ್ಜಲ್ಪುರದಲ್ಲಿ ಖರ್ಗೆ ಅವರ ಪ್ರಭಾವಳಿಯ ನಡುವೆ ಗೆಲುವು ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ.