ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಬಿ ನಿವೃತ್ತಿಯಿಂದ ಸಿದ್ದು ಬಾದಾಮಿ ಚಲೋವರೆಗೆ ದಿನದ 5 ಬೆಳವಣಿಗೆ

|
Google Oneindia Kannada News

ಯಾವ ಪರೀಕ್ಷೆಗೂ ಕಡಿಮೆ ಇಲ್ಲದಂತೆ ಈ ಬಾರಿಯ ವಿಧಾನಸಭೆ ಚುನಾವಣೆ ಭಾರೀ ಗಾಂಭೀರ್ಯವನ್ನು ತಂದಿದೆ. ಒಂದು ಕಡೆ ಬ್ಯಾನರ್, ಬಂಟಿಂಗ್ ಗಳ ಅಬ್ಬರ ಇಲ್ಲ ಅಂದುಕೊಂಡರೆ, ಇನ್ನೊಂದು ಕಡೆ ಟಿವಿ, ಫೇಸ್ ಬುಕ್, ಟ್ವಿಟ್ಟರ್ ಹಾಗೂ ವಿಡಿಯೋಗಳ ಸಮರ ಎಲ್ಲೆಲ್ಲೂ ಕಾಣುತ್ತಿದೆ. ಆ ಬೈದಾಟ, ಆರೋಪ, ಸವಾಲುಗಳು ಅಕಟಕಟ...

ಅಂದ ಹಾಗೆ, ಏಪ್ರಿಲ್ ಇಪ್ಪತ್ನಾಲ್ಕನೇ ತಾರೀಕು ಅಂದರೆ ಮಂಗಳವಾರ ಕರ್ನಾಟಕದಲ್ಲಿ ಹೈ ವೊಲ್ಟೇಜ್ ದಿನವಾಗಿತ್ತು. ಏಕೆಂದರೆ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವುದಕ್ಕೆ ಕೊನೆ ದಿನವಾಗಿತ್ತು. ಇಡೀ ದಿನ ನಡೆದ ಹಲವು ಪ್ರಮುಖ 5 ಬೆಳವಣಿಗೆಗಳನ್ನು ದಾಖಲಿಸುವ ಪ್ರಯತ್ನವಿದು.

ಚುನಾವಣೆಗೆ ನಾಮಪತ್ರ ಸಲ್ಲಿಸದವರೆಷ್ಟು ಇಲ್ಲಿದೆ ಪೂರ್ಣ ವಿವರಚುನಾವಣೆಗೆ ನಾಮಪತ್ರ ಸಲ್ಲಿಸದವರೆಷ್ಟು ಇಲ್ಲಿದೆ ಪೂರ್ಣ ವಿವರ

ಇದರಲ್ಲಿ ಸಿದ್ದರಾಮಯ್ಯ, ರಾಜಕೀಯದಲ್ಲೂ ರೆಬೆಲ್ ಸ್ಟಾರ್ ಆದ ಅಂಬರೀಶ್ ಒಳಗೊಂಡಂತೆ ಹಲವು ಪಾತ್ರಧಾರಿಗಳಿದ್ದಾರೆ. ಅವರು ನಿರ್ವಹಿಸಿದ ಪಾತ್ರ ಎಂಥದ್ದೇ ಇರಬಹುದು. ಇಂದಿನ ರಾಜಕೀಯದ ತೆರೆಯ ಮೇಲಿನ ಆಟದಲ್ಲಿ ಮಿಂಚಿದವರು ಇವರೇ ಎಂಬುದರಲ್ಲಿ ಎರಡು ಮಾತಿಲ್ಲ. ಅಂತೂ ದಿನದ ಮಟ್ಟಿಗೆ ಮಂಗಳವಾರ ಆದ ಪ್ರಮುಖ ಬೆಳವಣಿಗಳು, ನಿಮ್ಮ ಗಮನಕ್ಕಾಗಿ ಇಲ್ಲಿವೆ.

ಸಂಖ್ಯೆ 1 ಚುನಾವಣೆ ರಾಜಕಾರಣದಿಂದ ಅಂಬರೀಶ್ ನಿವೃತ್ತಿ

ಸಂಖ್ಯೆ 1 ಚುನಾವಣೆ ರಾಜಕಾರಣದಿಂದ ಅಂಬರೀಶ್ ನಿವೃತ್ತಿ

ಅರವತ್ತೈದು ವರ್ಷದ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಹಾಗೂ ಚಿತ್ರ ನಟ ಅಂಬರೀಶ್ ಚುನಾವಣೆ ರಾಜಕಾರಣದಿಂದ ನಿವೃತ್ತರಾಗಿದ್ದಾರೆ. ಈ ಬೆಳವಣಿಗೆ ಖಂಡಿತಾ ಅನಿರೀಕ್ಷಿತ. ಕನಿಷ್ಠ ಪಕ್ಷ ಅಂಬಿ ಅಭಿಮಾನಿಗಳಿಗಂತೂ ಈ ನಿರ್ಧಾರ ಜೀರ್ಣಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಕಾಂಗ್ರೆಸ್ ಪಕ್ಷ ಬಿಡಬಹುದು, ಬೇರೆ ಪಕ್ಷದಿಂದ ಸ್ಪರ್ಧೆ ಮಾಡಬಹುದು. ಪಕ್ಷೇತರರಾಗಿಯಾದರೂ ಅಂಬರೀಶ್ ರಣಾಂಗಣದಲ್ಲಿ ಇರುತ್ತಾರೆ ಎಂಬುದೊಂದು ನಿರೀಕ್ಷೆ ಇತ್ತು. ಆದರೆ ಚುನಾವಣೆ ರಾಜಕೀಯದಿಂದಲೇ ನಿವೃತ್ತಿ ಆಗಿಬಿಡಬಹುದು ಎಂಬ ಅಂದಾಜಿರಲಿಲ್ಲ. ಇದೇನು ಸಿಟ್ಟೋ ಅಥವಾ ಪಟ್ಟೋ, ಇನ್ನೂ ಸುದ್ದಿ ಖಚಿತ ಆಗಬೇಕಿದೆ. ಗಂಭೀರ ರಾಜಕಾರಣಿ ಅಲ್ಲ ಅಂಬರೀಶ್ ಎಂಬುದು ಅವರ ಮೇಲಿನ ಆರೋಪವಾಗಿತ್ತು. ಇಂದಿನ ಅವರ ನಿರ್ಧಾರ ಹಿಂದೆ ಅನಾರೋಗ್ಯ, ಅವಮಾನ, ಆತ್ಮಾಭಿಮಾನ ಏನೆಲ್ಲ ಇದ್ದಿರಬಹುದು. ಅದಕ್ಕೆ ಕಾಲವೇ ಉತ್ತರಿಸಬೇಕು.

ಸಂಖ್ಯೆ 2 ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧೆ

ಸಂಖ್ಯೆ 2 ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿಮಾನಿಯಿಂದ ಛಲವಾದಿ ಅನ್ನಬಹುದೇನೋ. ಆದರೆ ಅವರು ಹಠಮಾರಿ, ಹುಂಬ ಎಂಬ ಆರೋಪ ಸಹ ಕೇಳಿಬರುತ್ತದೆ. ಏಕೆ ಈ ಪ್ರಸ್ತಾವ ಅಂದರೆ, ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ ಅನ್ನುತ್ತಿದ್ದ ಸಿದ್ದರಾಮಯ್ಯ, ಆ ನಂತರ ಅದು ಹೈಕಮಾಂಡ್ ನಿರ್ಧಾರ ಅಂತ ಹೇಳಿದರು. ಆ ನಂತರ ಬಾದಾಮಿ ಕ್ಷೇತದಿಂದ ಬೇರೊಬ್ಬ ಅಭ್ಯರ್ಥಿಗೆ ಟಿಕೆಟ್ ಘೋಷಣೆ ಮಾಡಿದ ಮೇಲೆ, ಕೊನೆ ದಿನದಂದು ಬಾದಾಮಿಯಲ್ಲೂ ನಾಮಪತ್ರ ಸಲ್ಲಿಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮದವರ ಎದುರು, ಎಷ್ಟು ಸಲ ಹೇಳಬೇಕ್ರೀ, ನಾನು ಬಾದಾಮಿಯಿಂದ ಸ್ಪರ್ಧೆ ಮಾಡಲ್ಲ, ಮಾಡಲ್ಲ, ಮಾಡಲ್ಲ ಎಂದು ಮೂರು ಸಲ ಹೇಳಿದ್ದ ಸಿದ್ದರಾಮಯ್ಯ ಅವರು ಕೊನೆಗೂ ಆ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಈ ನಿರ್ಧಾರ ಅವರ ವೈಯಕ್ತಿಕವಾದದ್ದು. ಇನ್ನು ಅವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿ ಕಣಕ್ಕೆ ಇಳಿಸಿರುವುದು ಬಿ.ಶ್ರೀರಾಮುಲು ಅವರನ್ನು. ಶ್ರೀರಾಮುಲು ಕೂಡ ಮೊಳಕಾಲ್ಮೂರು ಹಾಗೂ ಬಾದಾಮಿ ಎರಡೂ ಕಡೆ ಸ್ಪರ್ಧಿಸುತ್ತಿದ್ದಾರೆ. ಆದರೆ ಇಂಥ ನಿರ್ಧಾರ ನೀಡುವ ಸಂದೇಶ ಎಂಥದ್ದು ಎಂಬುದನ್ನು ತಿಳಿಯುವುದಕ್ಕೆ ಇನ್ನೇನು ಕೆಲ ದಿನಗಳಷ್ಟೇ ಕಾಯಬೇಕು.

ಸಂಖ್ಯೆ 3 ವಿಜಯೇಂದ್ರ ಲಾಂಚ್ ಆದರೂ ಸಿನಿಮಾ ಫ್ಲಾಪ್

ಸಂಖ್ಯೆ 3 ವಿಜಯೇಂದ್ರ ಲಾಂಚ್ ಆದರೂ ಸಿನಿಮಾ ಫ್ಲಾಪ್

ಕೆಲವು ಸಿನಿಮಾಗಳನ್ನು ಹೀರೋ ಅಥವಾ ಹೀರೋಯಿನ್ ನ ಪರಿಚಯಿಸುವುದಕ್ಕೆ ಅಂತಲೇ ಮಾಡಲಾಗುತ್ತದೆ. ಆ ಪ್ರಯತ್ನದಲ್ಲಿ ಸಿನಿಮಾ ಸೋತು, ಹಣ ಕಳೆದುಕೊಳ್ಳಬಹುದು. ಮೈಸೂರಿನ ವರುಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಿಜೆಪಿ, ಯಡಿಯೂರಪ್ಪ ಹಾಗೂ ವರುಣಾ ವಿಧಾನಸಭಾ ಕ್ಷೇತ್ರ ಸ್ಥಿತಿಯೂ ಹಾಗೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗಳಿಸಿದ್ದು ಒಂದು ಸಾವಿರ ಚಿಲ್ಲರೆ ಮತ. ಆದರೆ ಈ ಸಲ ಆ ಕ್ಷೇತ್ರದಿಂದ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಸ್ಪರ್ಧಿಸುತ್ತಾರೆ ಅಂದಾಗ ಒಂದು ಬಗ್ಗೆ ಉತ್ಸಾಹ ಮೂಡಿತ್ತು. ಆ ಉತ್ಸಾಹಕ್ಕೆ ಸ್ವತಃ ಯಡಿಯೂರಪ್ಪ ಟಿಎಂಸಿಯಷ್ಟು ತಣ್ಣೀರು ಎರಚಿಬಿಟ್ಟರು. ಹತ್ತು-ಹನ್ನೆರಡು ದಿನಗಳಲ್ಲಿ ಹೀರೋ ಆಗಿ ಮಿಂಚಿದ್ದ ವಿಜಯೇಂದ್ರ ಸ್ಪರ್ಧೆ ಮಾಡುತ್ತಿಲ್ಲ ಎಂಬ ವಿಚಾರ ಸೋಮವಾರ ಮೈಸೂರಲ್ಲಿ ಬೆಂಕಿ ಹಚ್ಚಿತು. ಮಂಗಳವಾರ ಭರವಸೆಗಳನ್ನೆಲ್ಲ ಮಣ್ಣಿನಡಿ ಮುಚ್ಚಿ, ಪಕ್ಷದ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ವಿಜಯೇಂದ್ರಗೆ ಒಂದು ಸ್ಥಾನ ಸಿಕ್ಕಿತು.

ಸಂಖ್ಯೆ 4 ಎಚ್.ಸಿ.ಮಹದೇವಪ್ಪ ಮನೆ ಮೇಲೆ ಐಟಿ ದಾಳಿ

ಸಂಖ್ಯೆ 4 ಎಚ್.ಸಿ.ಮಹದೇವಪ್ಪ ಮನೆ ಮೇಲೆ ಐಟಿ ದಾಳಿ

ನನ್ನ ಮೇಲೆ ಆದಾಯ ದಾಳಿ ತೆರಿಗೆ ಆಗುತ್ತದೆ ಎಂಬ ಹೇಳಿಕೆಯನ್ನೇ ಕಾಂಗ್ರೆಸ್ ನ ಹಲವು ಸಚಿವರು ನೀಡುತ್ತಲೇ ಇದ್ದರು. ಅದೇನು ಮುಂಚೆಯೇ ಮಾಹಿತಿಯಿತ್ತೋ ಅಥವಾ ಹಾಗೆ ಐಟಿ ದಾಳಿ ಆದರೆ ಒಂದಿಷ್ಟು ಮೈಲೇಜ್ ಸಿಗಬಹುದೆಂಬ ಲೆಕ್ಕಾಚಾರವೇನೋ ಗೊತ್ತಿಲ್ಲ. ಒಟ್ಟಿನಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಸಿದ್ದರಾಮಯ್ಯ ಅವರ ಆಪ್ತ, ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರ ಮೈಸೂರಿನ ವಿಜಯನಗರದಲ್ಲಿನ ಮನೆ ಮೇಲೆ ಆದಾಯ ತೆರಿಗೆ ದಾಳಿ ಆಗಿದೆ. ಇದನ್ನು ರಾಜಕೀಯ ಪ್ರೇರಿತ ದಾಳಿ ಎಂದು ಕಾಂಗ್ರೆಸ್ಸಿನಿಂದ ಅದೇ ಹಳೇ ಟೇಪ್ ರೆಕಾರ್ಡರ್ ಹಾಕಲಾಗಿದೆ. ಈ ವಿಚಾರದಲ್ಲಿ ಬಿಜೆಪಿ ಹೇಳಿಕೆ ಕೂಡ ಹಾಗೇ ಹಳೆಯದೇ ರಿಪೀಟ್ ಆಗಿರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಅಂದಹಾಗೆ ಮಹದೇವಪ್ಪನವರು ತಿ.ನರಸೀಪುರದ ಕಾಂಗ್ರೆಸ್ ಅಭ್ಯರ್ಥಿ.

ಸಂಖ್ಯೆ 5 ಸಂತೋಷ್ ಲಾಡ್ ಉಚ್ಚಾಟನೆಗೆ 'ಆಮ್ ಆದ್ಮಿ' ಆಗ್ರಹ

ಸಂಖ್ಯೆ 5 ಸಂತೋಷ್ ಲಾಡ್ ಉಚ್ಚಾಟನೆಗೆ 'ಆಮ್ ಆದ್ಮಿ' ಆಗ್ರಹ

ಸಚಿವ ಸಂತೋಷ್ ಲಾಡ್ ಕಲಘಟಗಿಯಲ್ಲಿ ನೀಡಿದ್ದ ಹೇಳಿಕೆಯೊಂದು ಭಾರೀ ಸುದ್ದಿಯಾಗಿದ್ದು, ಈ ಕೂಡಲೇ ಕಾಂಗ್ರೆಸ್ ನಿಂದ ಸಂತೋಷ್ ಲಾಡ್ ಉಚ್ಚಾಟನೆ ಮಾಡಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ. ಅಷ್ಟಕ್ಕೂ ಸಂತೋಷ್ ಲಾಡ್ ಕ್ಷೇತ್ರಕ್ಕೆ ಭೇಟಿ ನೀಡುವುದಿಲ್ಲ ಎಂಬುದು ಹಳೇ ಆರೋಪ. ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರೊಬ್ಬರು ಹೀಗೆಲ್ಲ ಮಾಡಿದರೆ ಆಗಲ್ಲ ಎಂದಿದ್ದಾರೆ. ನಾನು ಇನ್ನೂ ಐದು ವರ್ಷ ಕ್ಷೇತ್ರಕ್ಕೆ ಬರಲ್ಲ. ಏನು ಸಮಸ್ಯೆ ಆಗಿದೆ ಪಟ್ಟಿ ತೆಗೆದುಕೊಂಡು ಬಾ ಎಂದು ಆತನನ್ನೇ ಎಗಾದಿಗಾ ರೇಗಿದ್ದಾರೆ ಸಂತೋಷ್ ಲಾಡ್. ಈ ಪ್ರತಿಕ್ರಿಯೆಯ ವಿಡಿಯೋ ವೈರಲ್ ಆಗಿ, ಲಾಡ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

English summary
Karnataka Assembly Elections 2018: Here is the top 5 developments of Karnataka elections on April 24th, last day for nomination filing. Ambareesh announced political retirement, Siddaramaiah filed nomination from Badami constituency and other development of the day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X