ನಾನು ಇಮ್ಮಡಿ ಪುಲಕೇಶಿ ಅಲ್ಲ, ಆದರೆ ಕನ್ನಡ ನಾಡಿನ ಹೆಮ್ಮೆಯ ಪುತ್ರ: ಸಿದ್ದು
"ಯಡಿಯೂರಪ್ಪ ಜೈಲಿಗೆ ಹೋಗಿಬಂದವರು, ಅವರನ್ನು ಜನ ಸ್ವೀಕರಿಸುವುದಿಲ್ಲ ಅಂತ ಗೊತ್ತಿದೆ. ಆದ್ದರಿಂದ ಅವರು ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಮೇಲೆ ಅವಲಂಬಿತರಾಗಿದ್ದಾರೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಯಡಿಯೂರಪ್ಪ ಅವರನ್ನು ಲೇವಡಿ ಮಾಡಿದ್ದಾರೆ.
ನಾನು ಇಮ್ಮಡಿ ಪುಲಕೇಶಿ ಅಲ್ಲ. ಬಾದಾಮಿಯು ಚಾಲುಕ್ಯರ ರಾಜಧಾನಿ. ಅಲ್ಲಿ ಇಮ್ಮಡಿ ಪುಲಕೇಶಿ ಎರಡನೆಯವರು ಬಹಳ ಪ್ರಸಿದ್ಧ ದೊರೆಯಾಗಿದ್ದರು. ಅವರು ಬಾದಾಮಿಯಲ್ಲಿ ಒಳ್ಳೆ ಕೆಲಸ ಮಾಡಿದ್ದರು. ಅಲ್ಲಿ ಬಿಜೆಪಿಗೆ ನಾಯಕರಿಲ್ಲ. ಯಡಿಯೂರಪ್ಪ ಜೈಲಿಗೆ ಹೋಗಿ ಬಂದಿರುವುದರಿಂದ ಜನರಿಗೆ ಅವರ ಬಗ್ಗೆ ನಂಬಿಕೆ ಇಲ್ಲ ಎಂದರು.
ಬಿಎಸ್ವೈ, ರೆಡ್ಡಿ ಬ್ರದರ್ಸ್, ಎಚ್ಡಿಕೆ ಎಲ್ಲರ ವಿರುದ್ಧ ನಾನೊಬ್ಬನೆ: ಸಿಎಂ
ನರೇಂದ್ರ ಮೋದಿ, ಅಮಿತ್ ಶಾ ಉತ್ತರ ಭಾರತದವರು. ಅವರನ್ನು ಒಪ್ಪಿಕೊಳ್ಳಲು ಜನರು ಸಿದ್ಧರಿಲ್ಲ. ನಾನು ಕನ್ನಡ ನಾಡಿನ ಹೆಮ್ಮೆಯ ಪುತ್ರ. ಹಾಗಾಗಿ ಕನ್ನಡ ನಾಡಿನ ಜನ ನನಗೆ ಆಶೀರ್ವಾದ ಮಾಡಬೇಕು ಎಂದು ಎಲ್ಲರನ್ನೂ ಮನವಿ ಮಾಡುತ್ತೇನೆ. ಕರ್ನಾಟಕದಲ್ಲಿ ಕಾಂಗ್ರೆಸ್ ಬಗ್ಗೆ ಒಳ್ಳೆ ಪರಿಣಾಮ ಬೀರಿದೆ. ಜನರ ಅಭಿಪ್ರಾಯ ನಮ್ಮ ಪರ ಇದೆ ಎಂದರು.
ಕರ್ನಾಟಕದಲ್ಲಿ ಆಡಳಿತ ವಿರೋಧಿ ಇಲ್ಲ. ಆದ್ದರಿಂದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ. ಬಿಜೆಪಿಯವರ ಬಳಿ ಮಾತನಾಡುವುದಕ್ಕೆ ಬಂಡವಾಳ ಇಲ್ಲ. ಆದ್ದರಿಂದ ಸುಳ್ಳು ಆರೋಪ ಮಾಡುತ್ತಾರೆ. ಅವರು ಟಿವಿ ಮುಂದೆ ಶೂರರು. ಅವರ ಬಳಿ ಆರೋಪ ಮಾಡುವುದಕ್ಕೆ ವಿಚಾರವೇ ಇಲ್ಲ. ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.