ಮುನಿರತ್ನ ಮುನ್ನಡೆಗೆ HDK ಖುಷಿ: JDS ಕಾರ್ಯಕರ್ತರಲ್ಲಿ ಕಸಿವಿಸಿ?!
ಬೆಂಗಳೂರು, ಮೇ 31: ರಾಜರಾಜೇಶ್ವರಿ ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಜಿ ಎಚ್ ರಾಮಚಂದ್ರ ಅವರು ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ತುಕೊಳ್ಳುವಂತಾಗಿದ್ದರೂ, ಮುನಿರತ್ನ ಅವರ ಗೆಲುವನ್ನು ಜೆಡಿಎಸ್ ನಾಯಕರು ಸಂಭ್ರಮಿಸುತ್ತಿರುವುದು ಜೆಡಿಎಸ್ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿರುವುದು ಸುಳ್ಳಲ್ಲ.
ಸ್ವತಃ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರೇ ಮುನಿರತ್ನ ಅವರ ಗೆಲುವಿಗೆ ಸಂಭ್ರಮಿಸುತ್ತಿರುವುದು ಕಾರ್ಯಕರ್ತರಿಗೆ ಇರಿಸುಮುರಿಸುಂಟುಮಾಡಿದೆ.
ರಾಜರಾಜೇಶ್ವರಿ ನಗರ ಫಲಿತಾಂಶ LIVE: ಗೆಲುವಿನ ಸನಿಹದಲ್ಲಿ ಮುನಿರತ್ನ
ಇಂದು ಬಿಡುಗಡೆಯಾಗುತ್ತಿರುವ ರಾಜರಾಜೇಶ್ವರಿನಗರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಮುನಿರತ್ನ ಭಾರೀ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಗೆಲುವು ಬಹುತೇಕ ಖಚಿತ ಎನ್ನಿಸಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವ ನಿರೀಕ್ಷೆಯತ್ತಾದರೂ ವಿಧಾನಸಭಾ ಚುನಾವಣೆಗೂ ಮುನ್ನ ನಡೆದ ಕೆಲವು ಅಚ್ಚರಿಯ ಬೆಳವಣಿಗೆಗಳು ಈ ಕ್ಷೇತ್ರದ ಕಡೆಗೆ ರಾಜ್ಯದ ಗಮನ ಸೆಳೆದಿದ್ದವು.
ಆರ್.ಆರ್.ನಗರ ಚುನಾವಣೆ : ಹುಚ್ಚ ವೆಂಕಟ್ ಪಡೆದ ಮತಗಳೆಷ್ಟು?
ಹಲವು ಊಹಾಪೋಹಗಳ ನಡುವಲ್ಲೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಮುನಿರತ್ನ ತಮ್ಮ ಪಾರಮ್ಯ ಮೆರೆಯುತ್ತಿದ್ದಾರೆ. ನಕಲಿ ವೋಟರ್ ಐಡಿ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದಿದ್ದರೂ, ಜಾಮೀನು ಪಡೆದಿದ್ದ ಅವರು ಇಲ್ಲಿನ ಮತದಾರರನ್ನು ಸೆಳೆಯುವಲ್ಲಿ ವಿಫಲರಾಗಲಿಲ್ಲ. ಆದರೆ ಜೆಡಿಎಸ್ ನಾಯಕರ ನಡೆ ಮಾತ್ರ ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದ್ದು ಸುಳ್ಳಲ್ಲ.
ಕುಮಾರಸ್ವಾಮಿ ಮಾತಿನ ಅರ್ಥವೇನು?
ಮುನಿರತ್ನ ಅವರು ಬಹುತೇಕ ಗೆಲುವು ಸಾಧಿಸುವು ಖಚಿತವಾಗುತ್ತಿದ್ದಂತೆಯೇ ಇದು ಮೈತ್ರಿ ಸರ್ಕಾರದ ಗೆಲುವು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ಅದೇ ಕ್ಷೇತ್ರದಲ್ಲಿ ತಮ್ಮದೇ ಪಕ್ಷದ ಅಭ್ಯರ್ಥಿ ಸೋತಿದ್ದರೆ ಬಗ್ಗೆ ಅವರು ಚಕಾರವೆತ್ತಿಲ್ಲ. ಅಂದರೆ ಆರ್ ಆರ್ ನಗರದಲ್ಲಿ ನಾಯಕರ ಮಟ್ಟದಲ್ಲಿ ಕಾಂಗ್ರೆಸ್ಸಿಗೆ ಪರೋಕ್ಷ ಬೆಂಬಲ ನೀಡಿದ್ದು ಸತ್ಯ ಎಂಬುದನ್ನು ಅವರೇ ಒಪ್ಪಿಕೊಂಡಿದ್ದಾರೆ.
ರಾಮಚಂದ್ರ ದುರದೃಷ್ಟ
ಜೆಡಿಎಸ್ ಅಭ್ಯರ್ಥಿ ಜಿ ಎಚ್ ರಾಮಚಂದ್ರ ಅವರಿಗೆ ಈ ಹಿನ್ನಡೆ ತೀವ್ರ ಮುಖಭಂಗವೇ. ಬಿಜೆಪಿಯಿಂದ ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಜಿ ಎಚ್ ರಾಮಚಂದ್ರ ಅವರು ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಜೆಡಿಎಸ್ ಸೇರಿದ್ದರು. ಆದರೆ ಅವರ ದುರದೃಷ್ಟವೋ ಏನೋ ಈ ಕ್ಷೇತ್ರದ ಫ್ಲ್ಯಾಟ ವೊಂದರಲ್ಲಿ ಸಿಕ್ಕ ವೋಟರ್ ಐಡಿ ರಾಷ್ಟ್ರ ಮಟ್ಟದಲ್ಲಿ ತಲ್ಲಣ ಎಬ್ಬಿಸಿದ ಪರಿಣಾಮ ಚುನಾವಣಾ ಆಯೋಗ ಚುನಾವಣೆಯನ್ನೇ ಮುಂದೂಡಿತು. ಮೇ 12 ರಂದು ಕರ್ನಾಟಕದ ಉಳಿದ 222(224) ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಅಂತಂತ್ರ ಲೋಕಸಭೆ ತಲೆದೂರಿದ್ದರಿಂದ ಕಾಂಗ್ರೆಸ್ ಪಕ್ಷ ಜೆಡಿಎಸ್ ಗೆ ಸರಕಾರ ರಚನೆಗೆ ಬೆಂಬಲ ಸೂಚಿಸಿಬಿಟ್ಟಿತು. ಇದರಿಂದಾಗಿ ಇನ್ನೂ ಚುನಾವಣೆ ನಡೆಯದ ರಾಜರಾಜೇಶ್ವರಿ ಕ್ಷೇತ್ರದಲ್ಲೂ ಯಾವುದೇ ಅಭ್ಯರ್ಥಿ ಸ್ಪರ್ಧಿಸಿದರೂ ಅವರಿಗೆ ಮತ್ತೊಬ್ಬ ಅಭ್ಯರ್ಥಿ ಬೆಂಬಲ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು!
ಪಟ್ಟು ಬಿಡದ ರಾಮಚಂದ್ರ
ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಮೊದಲು ಕಜೆಡಿಎಸ್ ಅಭ್ಯರ್ಥಿಗೇ ಕಾಂಗ್ರೆಸ್ಸಿನ ಮುನಿರತ್ನ ಬಹಿರಂಗ ಬೆಂಬಲ ಘೋಷಿಸುವಂತೆ ಮಾತುಕತೆಯಾಗಿತ್ತಾದರೂ, ಅದಕ್ಕೆ ಮುನಿರತ್ನ ಒಪ್ಪದ ಕಾರಣ ರಾಮಚಂದ್ರ ಅವರನ್ನು ಮನವೊಲಿಸುವ ಪ್ರಯತ್ನ ನಡೆಯಿತು. ಆದರೆ ಟಿಕೆಟ್ ಸಿಕ್ಕದ ಬೇಸರದಿಂದಲೇ ಜೆಡಿಎಸ್ ಗೆ ಬಂದಿದ್ದ ರಾಮಚಂದ್ರ ಪಟ್ಟು ಬಿಡದಕಾರಣ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಕಾಂಗ್ರೆಸ್ಸಿಗೆ ಬೆಂಬಲ ನೀಡಲು ಜೆಡಿಎಸ್ ಕಾರ್ಯಕರ್ರೂ ಒಪ್ಪಿರಲಿಲ್ಲ.
ನಾಯಕರ ಮಟ್ಟದಲ್ಲಿ ಒಳ ಒಪ್ಪಂದ?
ಕಾರ್ಯಕರ್ತರ ಮಟ್ಟದಲ್ಲಿ ಜೆಡಿಎಸ್-ಕಾಂಗ್ರೆಸ್ ಪ್ರತಿಸ್ಪರ್ಧಿಗಳಾಗಿದ್ದರೂ, ನಾಯಕರ ಮಟ್ಟದಲ್ಲಿ ಕಾಂಗ್ರೆಸಿನ ಮುನಿರತ್ನ ಅವರನ್ನೇ ಗೆಲ್ಲಿಸಲು ಒಳ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂಬ ಮಾತೂ ಕೇಳಿ ಬರುತ್ತಿದೆ. ಇದೀಗ ಕುಮಾರಸ್ವಾಮಿಯವರು ನೀಡಿದ ಹೇಳಿಕೆ ಈ ಮಾತಿಗೆ ಮತ್ತಷ್ಟು ಪುಷ್ಟಿ ನೀಡಿದ್ದು, ಕಾಂಗ್ರೆಸ್ ನಾಯಕರಿಗಾಗಿ ಜೆಡಿಎಸ್ ಕಾರ್ಯಕರ್ತರನ್ನು ಕಡೆಗಣಿಸುತ್ತಿರುವ ಜೆಡಿಎಸ್ ನಾಯಕರ ಕುರಿತು ಕಾರ್ಯಕರ್ತರಲ್ಲಿ ಎದ್ದಿರುವ ಅಸಮಾಧಾನ ಶಮನಕ್ಕೆ ಕುಮಾರಣ್ಣ ಯಾವ ಹಾದಿ ಉಪಯೋಗಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.