ಕಾಂಗ್ರೆಸ್ ಮುಲಾಜಿಗೆ ಬಿದ್ದ ಕುಮಾರಸ್ವಾಮಿ, 'ಕೈ'ಗೆ ಹಣಕಾಸು ಇಲಾಖೆ?!
Recommended Video
"ಸಾಲಮನ್ನಾ ಮಾಡೊದು ಸುಲಭವಿಲ್ಲ. ಕಾಂಗ್ರೆಸ್ ಈಗ ಹಣಕಾಸು ಇಲಾಖೆಯ ಬೇಡಿಕೆಯನ್ನೂ ಮುಂದಿಟ್ಟಿದೆ" ಎಂದು ಎಚ್ ಡಿ ದೇವೇಗೌಡರು ಹೇಳಿದ್ದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಅನುವುಮಾಡಿಕೊಟ್ಟಿದೆ.
ಹೇಳಿದ್ದು ಬೇಷರತ್ ಬೆಂಬಲ. ಇದೀಗ ಕಾಂಗ್ರೆಸ್ ಇಡುತ್ತಿರುವ ಬೇಡಿಕೆಗಳ ಪಟ್ಟಿಯನ್ನು ನೋಡಿದರೆ 'ಬೇಷರತ್' ಎಂಬ ಪದದ ಅರ್ಥವನ್ನು ಪದಕೋಶದಲ್ಲಿ ತಡಕಾಡಬೇಕು!
ಎಚ್ಡಿಕೆ ಸಿಎಂ ಆಗಿದ್ದು 6.5 ಕೋಟಿ ಕನ್ನಡಿಗರ ಬೆಂಬಲದಿಂದಲ್ಲ: ದೇವೇಗೌಡ
ಮೇ 15 ರಂದು ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೇ 78 ಸ್ಥಾನ ಗೆದ್ದಿದ್ದ ಕಾಂಗ್ರೆಸ್ 38 ಸ್ಥಾನ ಗೆದ್ದಿದ್ದ ಜೆಡಿಎಸ್ ಗೆ ತನ್ನ ಬೇಷರತ್ ಬೆಂಬಲ ಸೂಚಿಸಿ, ಸರ್ಕಾರ ರಚಿಸಲು ಸಲಹೆ ನೀಡಿತ್ತು. ಅದರಂತೆಯೇ ಜೆಡಿಎಸ್ ನ ಎಚ್ ಡಿ ಕುಮಾರಸ್ವಾಮಿ 'ಸಾಂದರ್ಭಿಕ ಶಿಶು' ಎಂದುಕೊಂಡೇ ಮುಖ್ಯಮಂತ್ರಿಯಾದರು.
'ರಾಜ್ಯದ ಜನರ ಮುಲಾಜಿನಲ್ಲಿಲ್ಲ, ಕಾಂಗ್ರೆಸ್ನವರ ಮುಲಾಜಿನಲ್ಲಿದ್ದೇನೆ'
ರಾಜರಾಜೇಶ್ವರಿ ನಗರ, ಜಯನಗರಗಳಲ್ಲಿ ನಡೆಯಬೇಕಿದ್ದ ಚುನಾವಣೆಗಳಲ್ಲೂ ಅಭ್ಯರ್ಥಿ ಆಯ್ಕೆಯ ಸಂದರ್ಭದಲ್ಲಿ ಕಾಂಗ್ರೆಸ್ಸಿಗರು ಜೆಡಿಎಸ್ ಅನ್ನು ಡಾಮಿನೇಟ್ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇದೀಗ ಸ್ವತಃ ದೇವೇಗೌಡರು, ಕಾಂಗ್ರೆಸ್ ಹಣಕಾಸು ಇಲಾಖೆಯ ಬೇಡಿಕೆಯನ್ನೂ ಇಟ್ಟಿದೆ ಎನ್ನುವ ಮೂಲಕ ಹೊಸ ಬಾಂಬ್ ಎಸೆದಿದ್ದಾರೆ.
ಮುಲಾಜಿಗೆ ಬಿದ್ದ ಕುಮಾರಸ್ವಾಮಿ?
ಮುಖ್ಯಮಂತ್ರಿ ಸ್ಥಾನ ನೀಡಿದೆ ಎಂಬ 'ಮುಲಾಜಿಗೆ' ಬಿದ್ದು ಕಾಂಗ್ರೆಸ್ಸಿನ ಬೇಡಿಕೆಗಳಿಗೆಲ್ಲ ಮೌನವಾಗಿಯೇ ತಲೆಯಲ್ಲಾಡಿಸುತ್ತಿದ್ದಾರೆ ಎಚ್ ಡಿ ಕುಮಾರಸ್ವಾಮಿ ಎಂಬ ಅನುಮಾನ ಅವರ ಕೆಲವು ಹೇಳಿಕೆಗಳಿಂದ ದೃಢವಾಗುತ್ತಿದೆ. 'ನಾನು ಆರೂವರೆ ಕೋಟಿ ಕನ್ನಡಿಗರ ಮುಲಾಜಿನಲ್ಲಿಲ್ಲ, ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ' ಎಂದು ಈಗಾಗಲೇ ಸ್ವತಃ ಕುಮಾರಸ್ವಾಮಿಯವರೇ ಹೇಳಿ ಆ ಅನುಮಾನವನ್ನು ಸತ್ಯವಾಗಿಸಿದ್ದಾರೆ. ಹಣಕಾಸು ಇಲಾಖೆಯಲ್ಲಿ 'ಕೈ' ಪಾರುಪತ್ಯ ಮೆರೆಯಲು ಹವಣಿಸುತ್ತಿರುವಾಗ ಜೆಡಿಎಸ್ ಗೊತ್ತಿದ್ದೂ ಸುಮ್ಮನಿರುವುದೇಕೆ? ಕಾಂಗ್ರೆಸ್ ಋಣದಲ್ಲಿ ಬಿದ್ದು ಒದ್ದಾಡುತ್ತಿದ್ದಾರಾ ಕುಮಾರಸ್ವಾಮಿ?!
ಎಚ್ಡಿಕೆ ಸಿಎಂ ಆಗಿದ್ದು ಕಾಂಗ್ರೆಸ್ ಬೆಂಬಲದಿಂದ
ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದು ಕಾಂಗ್ರೆಸ್ ಬೆಂಬಲದಿಂದಲೇ ಹೊರತು ಆರೂವರೆ ಕೋಟಿ ಜನರ ಬೆಂಬಲದಿಂದಲ್ಲ ಎಂದು ಈಗಾಗಲೇ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ. ಸಾಲಮನ್ನಾ ಮಾಡುವ ಕುರಿತೂ ನಾವು ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಕಾಂಗ್ರೆಸ್ ಹಣಕಾಸು ಇಲಾಖೆಯನ್ನು ಕೇಳುತ್ತಿದೆ ಎಂದು ದೇವೇಗೌಡರು ಹೇಳಿದ ಮಾತಿನ ಅರ್ಥವೇನು? ಬೇಷರತ್ ಬೆಂಬಲ ಎಂಬ ಮಾತಿಗೆ ಏನರ್ಥವಿದೆ? 'ನೀವು ನೀಡಿದ್ದು ಬೇಷರತ್ ಬೆಂಬಲ, ಈಗೇಕೆ ಒಂದೊಂದೇ ಬೇಡಿಕೆ ಇಡುತ್ತಿದ್ದೀರಿ' ಎಂದು ಪ್ರಶ್ನಿಸುವುದಕ್ಕೆ ದೇವೇಗೌಡರಿಗೆ 'ಮುಲಾಜು' ಅಡ್ಡಬರುತ್ತಿದೆಯೇ?
ಹಣಕಾಸು ಇಲಾಖೆ ಕಾಂಗ್ರೆಸ್ಸಿಗೆ?
ಸಚಿವ ಸಂಪುಟ ರಚನೆ ಸಮಯದಲ್ಲಿ ಹಣಕಾಸು ಇಲಾಖೆಯನ್ನು ಎಚ್ ಡಿ ಕುಮಾರಸ್ವಾಮಿಯವರು ತಮ್ಮ ಬಳಿಯೇ ಇಟ್ಟುಕೊಳ್ಳುತ್ತಾರೆ ಎಂದು ಇಷ್ಟು ದಿನ ಭಾವಿಸಲಾಗಿತ್ತು. ಆದರೆ ಗೌಡರೇ ಹೇಳುವ ಪ್ರಕಾರ ಕಾಂಗ್ರೆಸ್ ಕಣ್ಣು ಇದೀಗ ಹಣಕಾಸು ಇಲಾಖೆ ಮೇಲಿದೆ. ಹಾಗಾದರೆ ಹಣಕಾಸು ಇಲಾಖೆ ಹೊಣೆ ಯಾರ ಹೆಗಲೇರಲಿದೆ. ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ಅವರನ್ನು ಬಿಟ್ಟರೆ ಈ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಯಾರಿಗಿದೆ? ಸಿದ್ದರಾಮಯ್ಯ ಮತ್ತೆ ಸಚಿವ ಸಂಪುಟ ಸಚಿವರಾಗುವುದು ಅನುಮಾನ. ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಅವರು ಈ ಸ್ಥಾನಕ್ಕೆ ಸೂಕ್ತರೇ? ಕಾಂಗ್ರೆಸ್ಸಿನ ಈ ಶರತ್ತಿಗೆ ಜೆಡಿಎಸ್ ತಲೆಯಲ್ಲಾಡಿಸುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.
ಅನುಮಾನ ಹುಟ್ಟಿಸಿದ್ದ ಪರಮೇಶ್ವರ್ ಹೇಳಿಕೆ
ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಕ್ಷಣಗಳಲ್ಲಿ ಡಾ.ಜಿ.ಪರಮೇಶ್ವರ್ ನೀಡಿದ್ದ ಹೇಳಿಕೆಯೂ ಅನುಮಾನ ಹುಟ್ಟಿಸಿತ್ತು. ಫಲಿತಾಂಶದ ನಂತರ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಅವಸರದಲ್ಲಿದ್ದ ಕಾಂಗ್ರೆಸ್, 'ಬೇಷರತ್ ಬೆಂಬಲ' ಎಂದಿದ್ದು ಸತ್ಯ. 5 ವರ್ಷಗಳ ಕಾಲವೂ ಕುಮಾರಸ್ವಾಮಿ ಅವರೇ ಸಿಎಂ ಆಗಿರುತ್ತಾರೆ ಎಂದಿದ್ದೂ ಸತ್ಯ. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಪರಮೇಶ್ವರ್, 'ಐದು ವರ್ಷಗಳ ಕಾಲವೂ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಬೇಕೆ ಎಂಬ ಕುರಿತು ಇನ್ನೂ ನಿರ್ಧರಿಸಿಲ್ಲ' ಎಂದಿದ್ದರು. ಅಂದರೆ ಕಾಂಗ್ರೆಸ್ ಸಹ ಮುಖ್ಯಮಂತ್ರಿ ಸ್ಥಾನದ ಬೇಡಿಕೆ ಇಡುವ ಸೂಚನೆಗಳನ್ನು ಅವರು ಈಗಾಗಲೇ ನೀಡಿದ್ದಾರೆ.
ಕಾರ್ಯಕರ್ತರ ಮಟ್ಟದಲ್ಲಿ ಮುನಿಸು
ಶಾಸಕರೆಲ್ಲರ ಗೆಲುವಿಗಾಗಿ ಅವಿರತ ದುಡಿದ ಕಾರ್ಯಕರ್ತರು ಇರಿಸುಮುರಿಸು ಅನುಭವಿಸುವಂಥ ಪರಿಸ್ಥಿತಿ ಈಗ ಎದುರಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಮುನಿರತ್ನ ಅವರಿಗೆ ಬೆಂಬಲ ನೀಡುವಂತೆ ಜೆಡಿಎಸ್ ನ ರಾಮಚಂದ್ರ ಅವರನ್ನು ಕೇಳಲಾಗಿತ್ತು. ಆದರೆ ಇದು ಕಾರ್ಯಕರ್ತರಲ್ಲಿ ಆಕ್ರೋಶವನ್ನುಂಟುಮಾಡಿತ್ತು. ಬಿಜೆಪಿಯಲ್ಲಿ ಟಿಕೆಟ್ ವಂಚಿತರಾಗಿ ಜೆಡಿಎಸ್ ಸೇರಿದ್ದ ರಾಮಚಂದ್ರ ಅವರಿಗೂ ಇದು ತೀವ್ರ ಅಸಮಾಧಾನವನ್ನುಂಟುಮಾಡಿತ್ತು. ಆದರೆ ಕೊನೆಗೆ ವರಿಷ್ಠರ ಮಾತು, ಸಂಧಾನ ಯಾವುದೂ ಫಲಕೊಡದೆ ಈ ಕ್ಷೇತ್ರದಲ್ಲಿ ಸಮ್ಮಿಶ್ರ ಸರ್ಕಾರದ ಎರಡೂ ಪಕ್ಷಗಳೂ ಮುಖಾಮುಖಿಯಾಗಿವೆ! ಇವೆಲ್ಲವೂ ಸಮ್ಮಿಶಸ್ರ ಸರ್ಕಾರಕ್ಕೆ ಆರಂಭಿಕ ವಿಘ್ನಗಳು ಎಂಬುದಂತೂ ಸ್ಪಷ್ಟವಾಗಿದೆ.