ಬ್ರಾಹ್ಮಣರ ಈ ಬೇಡಿಕೆ ಈಡೇರಿಸುವವರಿಗೆ ಚುನಾವಣೆಯಲ್ಲಿ ಮತ
ವಿಧಾನಸಭೆ ಚುನಾವಣೆಗಳು ಹತ್ತಿರ ಬಂದಿವೆ. ನಮ್ಮ ಅಂದರೆ ಬ್ರಾಹ್ಮಣ ಸಮುದಾಯದ ಬೇಡಿಕೆಗಳನ್ನು ಈಡೇರಿಸುವುದಾಗಿ ಯಾವ ಪಕ್ಷ ತಮ್ಮ ಪ್ರಣಾಳಿಕೆಯಲ್ಲಿ ಮಾತು ಕೊಟ್ಟು, ಅವುಗಳನ್ನು ಈಡೇರಿಸುವುದೋ ಅವರಿಗೇ ನಮ್ಮ ಮತ ಎಂದು ಆಗ್ರಹಪಡಿಸಿದರೆ ಹೇಗೆ? ನಾನೊಬ್ಬ ಬ್ರಾಹ್ಮಣ. ನನಗೆ ತೋಚಿದ ಕೆಲವು ಬೇಡಿಕೆಗಳನ್ನು ಇಲ್ಲಿ ಪಟ್ಟಿ ಮಾಡುತ್ತಿದ್ದೇನೆ.
ಬ್ರಾಹ್ಮಣರ ಮತ ಯಾರಿಗೆ ಎಂಬ ಚರ್ಚೆಗೆ ಭರ್ಜರಿ ಪ್ರತಿಕ್ರಿಯೆ
ಇದನ್ನು ಓದುತ್ತಿರುವ ನಿಮಗೆ ಏನಾದರೂ ತೋಚಿದರೆ ಕಾಮೆಂಟ್ ಬಾಕ್ಸ್ ನಲ್ಲಿ ಹಾಕಿ. ಇನ್ನಾದರೂ ನಾವು ಒಗ್ಗಟ್ಟಾಗ್ಗೋಣ. ತ್ರಿಮತಸ್ಥರ ಮಧ್ಯೆ ಕಚ್ಚಾಟ ಬೇಡ. ಶೈವ- ವೈಷ್ಣವರೆಂಬ ಭೇದ ಬೇಡ. ಮಾಧ್ವರಲ್ಲೇ ಉತ್ತರಾದಿ ಮಠ- ರಾಯರ ಮಠ ಎಂಬ ಮೇಲರಿಮೆ- ಕೀಳರಿಮೆ ಬೇಡ. ಒಟ್ಟಿನಲ್ಲಿ ಪಾನಕ- ಕೋಸಂಬರಿಗೆ ಮಾತ್ರ ಹಣ ನೀಡುವ, ಚುನಾವಣೆಗಳ ಹಿಂದೆ-ಮುಂದೆ ಮನೆಯ ಜಗುಲಿಗೆ ಬರುವವರ ಕೈಗೆ ನಮ್ಮ ಜುಟ್ಟು-ಜನಿವಾರಗಳನ್ನು ಕೊಡುವುದು ಬೇಡ.
ಬ್ರಾಹ್ಮಣರನ್ನು ಹಿಗ್ಗಾಮಗ್ಗಾ ಬೈಯುವ ಮಂದಿಗೆ ಕೆಲ ಪ್ರಶ್ನೆ!
ಇಲ್ಲಿ ಐದು ಅಂಶಗಳದೊಂದು ಪ್ರಣಾಳಿಕೆಯನ್ನು ಮಾಡಲಾಗುತ್ತಿದೆ. ಇದರ ಬಗ್ಗೆ ಅಸಮಾಧಾನ, ಅಭಿಪ್ರಾಯ ಭೇದ ಇದ್ದವರು ದಯವಿಟ್ಟು ತಿಳಿಸಿ. ಜತೆಗೆ ಅದನ್ನು ಎಲ್ಲ ಕಡೆ ಹರಡುವಂತೆ ನೋಡಿಕೊಳ್ಳಿ. ಯಥಾಪ್ರಕಾರ ಓದಿ, ಬೈದುಕೊಂಡು ಸುಮ್ಮನಾಗುವ ಬದಲು, ಓದಿದ ನಂತರ ನಾಲ್ಕು ಜನರನ್ನು ತಲುಪುವಂತೆ ಮಾಡಿ.
ಹತ್ತು ಲಕ್ಷ ಎಫ್ ಡಿ ಮಾಡಲಾಗುವುದು ಎಂದು ಘೋಷಿಸಿ
ಬ್ರಾಹ್ಮಣರ ಅತಿ ದೊಡ್ಡ ಸಾಮಾಜಿಕ ಸಮಸ್ಯೆ ಗಂಡು ಮಕ್ಕಳಿಗೆ ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂಬುದು. ನಮ್ಮ ಮಾನ್ಯ ಮುಖ್ಯಮಂತ್ರಿಗಳು ಪರಿಶಿಷ್ಟ ಜಾತಿಯ ಹೆಣ್ಣು ಅಥವಾ ಗಂಡು ಮಕ್ಕಳು ಇತರ ಜಾತಿಯವರನ್ನು ಮದುವೆ ಆದರೆ ಪ್ರೋತ್ಸಾಹಧನ ನೀಡುತ್ತಾರೆ. ದೇವದಾಸಿಯರ ಮಕ್ಕಳ ಮದುವೆಗೆ ಹಣ ನೀಡುತ್ತಾರೆ. ಸ್ವಾಮಿ ಬ್ರಾಹ್ಮಣ ಗಂಡು ಮಕ್ಕಳನ್ನು ವಿವಾಹ ಆಗುವ ಬ್ರಾಹ್ಮಣ ಹೆಣ್ಣುಮಕ್ಕಳ ಹೆಸರಿಗೆ ಹತ್ತು ಲಕ್ಷ ಎಫ್ ಡಿ ಮಾಡಲಾಗುವುದು ಎಂದು ಘೋಷಿಸಿ. ಗಂಡು ಮಕ್ಕಳ ತಂದೆ-ತಾಯಿ ಅದಕ್ಕಾಗಿ ಐದು ಲಕ್ಷ ಕೊಡಬೇಕು ಎಂಬ ನಿಯಮ ಮಾಡಿದರೂ ಅಡ್ಡಿ ಇಲ್ಲ.
ಮುಜರಾಯಿ ದೇವಸ್ಥಾನಗಳೆಂಬ ಕಠಿಣ ಕಾರಾಗೃಹ ಶಿಕ್ಷೆ ತಪ್ಪಿಸಿ
ಬ್ರಾಹ್ಮಣರ ಪೈಕಿ ಹಿಂದಿನ ಒಂದೆರಡು ತಲೆಮಾರಿನವರು ಮುಜರಾಯಿ ದೇವಸ್ಥಾನಗಳು ಎಂಬ ಕಠಿಣ ಕಾರಾಗೃಹ ಶಿಕ್ಷೆ ಅನುಭವಿಸುತ್ತಿದ್ದಾರೆ. ಸರಕಾರ ನೀಡುವ ದೇವಸ್ಥಾನದ ಅನುದಾನದಲ್ಲಿ ಕೊಬ್ಬರಿ, ಹೂವು ಕೂಡ ಖರೀದಿಸಲಾಗದೆ, ದೇವಾಲಯವು ಯಾವ ಮಳೆಗೋ-ಗಾಳಿಗೋ ಬಿದ್ದು ಹೋಗಬಹುದು ಎಂಬ ಭಯದಲ್ಲಿ ಭಕ್ತರು ಬಾರದೆ, ಯಾವ ಗೋಡೆಯಿಂದ ಯಾವ ಕ್ಷಣದಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್ ಆಗುತ್ತದೋ ಎಂದು ಜೀವ ಭಯದಲ್ಲಿ ಬದುಕುತ್ತಿದ್ದಾರಲ್ಲಾ, ಅಂಥವರಿಗೆ ಜೀವಭಯವಿಲ್ಲದೆ, ಮಾನವಂತರಾಗಿ ಬದುಕಲು ಬೇಕಾದಂಥ ಆರ್ಥಿಕ ಅನುಕೂಲ ಹಾಗೂ ವಾತಾವರಣ ನಿರ್ಮಿಸಿ ಕೊಡಬೇಕು.
ಮೂರು ವರ್ಷ ಬಡ್ಡಿ ಹಾಗೂ ಇಎಂಐ ಇಲ್ಲದಂತೆ ಸಾಲ ಒದಗಿಸಿ
ಮಾಂಸದ ಅಂಗಡಿಗಳಿಗೆ ನಿಮ್ಮ ಕಳೆದ ಬಜೆಟ್ ನಲ್ಲಿ ಅದೆಂಥದೋ ಸಹಾಯಧನವೋ ಪ್ರೋತ್ಸಾಹಧನವೋ ಘೋಷಣೆ ಮಾಡಿದ್ದ ನೆನಪು. ಈ ಬ್ರಾಹ್ಮಣರು ಏನು ಮಾಡ್ತಾರೆ ಸ್ವಾಮಿ, ಅದೇ ಉಪ್ಪಿನಕಾಯಿ, ರಾಗಿ ಹುರಿಹಿಟ್ಟು, ಹಪ್ಪಳ- ಸಂಡಿಗೆ, ಕೋಡುಬಳೆ- ನಿಪ್ಪಟ್ಟು, ತೇಂಗೊಳಲು, ಪುಳಿಯೋಗರೆ ಗೊಜ್ಜು, ಚಿತ್ರಾನ್ನ, ಮೊಸರನ್ನ, ಇಡ್ಲಿ, ವಡೆ, ದೋಸೆ ಮಾರಾಟ ಮಾಡುವ ಹೋಟೆಲ್, ಮೆಸ್, ಕಾಂಡಿಮೆಂಟ್ಸ್ ಸ್ಟೋರ್ ಇಂಥವೇ. ಇಂಥದ್ದನ್ನು ಮಾಡಲು ಮುಂದೆ ಬರುವ ಬ್ರಾಹ್ಮಣ ಯುವಕ- ಯುವತಿಯರಿಗೆ ಸಾಲ ಒದಗಿಸಿ. ಮೂರು ವರ್ಷ ಅದಕ್ಕೆ ಬಡ್ಡಿ ಮತ್ತು ಇಎಂಐ ಇಲ್ಲದ ಹಾಗೆ ನೋಡಿಕೊಳ್ಳಿ. ಸಹಾಯಧನ, ಪ್ರೋತ್ಸಾಹ ಧನ ಕೂಡ ಬೇಡ.
ಬ್ರಾಹ್ಮಣರಿಗೆ ಮಾನಸಿಕ ಹಿಂಸೆ ತಪ್ಪಿಸಬೇಕು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರನ್ನು ನಿಂದನೆ ಮಾಡಿದರೆ ಕಠಿಣವಾದ ಕಾನೂನು ಇದೆ. ಅದರಲ್ಲಿ ಬದಲಾವಣೆಗೆ ಸುಪ್ರೀಂ ಕೋರ್ಟ್ ಸೂಚಿಸಿದ್ದಕ್ಕೆ ಮೊನ್ನೆ ಮೊನ್ನೆ ಭಾರತ ಬಂದ್ ಮಾಡಿ, ಭಾರೀ ಆಕ್ರೋಶ ವ್ಯಕ್ತಪಡಿಸಿದರು. ಅಂಥದ್ದೇ ಕಾನೂನು ಬ್ರಾಹ್ಮಣರನ್ನು ನಿಂದನೆ ಮಾಡುವವರ ವಿರುದ್ಧ, ಅದರಲ್ಲೂ ಸುಖಾ ಸುಮ್ಮನೆ ನಿಂದನೆ ಮಾಡುವವರ ವಿರುದ್ಧ ಜಾರಿಗೆ ತರಬೇಕು. ಯಾರೋ ಬ್ರಾಹ್ಮಣ ಸಂಸದ ವೈಯಕ್ತಿಕವಾಗಿ ಏನೋ ಹೇಳಿದರೂ ನಮಗೇ ಬೈಗುಳ. ಇನ್ಯಾರೋ ತಮ್ಮ ನಾಲಗೆ ತುರಿಸಿ ಮತ್ತೇನೋ ಹೇಳಿದರೂ ನಾವೇ ಬೈಸಿಕೊಳ್ಳಬೇಕು. ಆದ್ದರಿಂದ ಎಲ್ಲ ಬೈಗುಳ, ಹೀಯಾಳಿಕೆಗಳಿಂದ ಬ್ರಾಹ್ಮಣರಿಗೆ ಮಾನಸಿಕ ಹಿಂಸೆ ಆಗುವುದನ್ನು ತಪ್ಪಿಸುವುದಕ್ಕೆ ಕಾನೂನು ಬೇಕು.
ಮಕ್ಕಳ ಮನಸಲ್ಲಿ ಜಾತಿ ಬೀಜ ಬಿತ್ತಬೇಡಿ
ಸರಕಾರಿ ಶಾಲೆಗಳು, ಕಾಲೇಜುಗಳಲ್ಲಿ ಪರಿಶಿಷ್ಟ ಜಾತಿ- ಪಂಗಡದವರಿಗೆ ಮಾತ್ರ ಪ್ರವಾಸ, ಶುಲ್ಕದಲ್ಲಿ ವಿನಾಯಿತಿ, ಪರೀಕ್ಷಾ ಶುಲ್ಕದಲ್ಲಿ ವಿನಾಯಿತಿ, ಅವರಿಗೆ ಮಾತ್ರ ಲ್ಯಾಪ್ ಟಾಪ್ ಇಂಥದ್ದನ್ನು ಕಲಿಕೆ ಮಟ್ಟದಲ್ಲಿ ಜಾರಿ ಮಾಡಿಬಿಡ್ತೀರಿ. ಇವೆಲ್ಲ ನನ್ನ ಸ್ನೇಹಿತ ಅಥವಾ ಸ್ನೇಹಿತೆಗೆ ಮಾತ್ರ ಕೊಡ್ತಾರೆ. ನಮಗೇಕೆ ಇಲ್ಲ ಅಂತ ಬ್ರಾಹ್ಮಣರ ಮಕ್ಕಳು ಮನೆಗೆ ಬಂದು ಕೇಳಿದರೆ ಅವರಿಗೆ ಉತ್ತರ ಹೇಳುವುದಿಕ್ಕೆ ಆಗುತ್ತಿಲ್ಲ. ಸರಕಾರಿ ಸವಲತ್ತು ಎಲ್ಲರಿಗೂ ಕೊಡಿ ಅಥವಾ ಯಾರಿಗೂ ಬೇಡ. ದಯವಿಟ್ಟ ಜಾತೀಯತೆ ಮಾಡಲ್ಲ ಎಂದು ಪ್ರಣಾಳಿಕೆಯಲ್ಲಿ ಕಡ್ಡಾಯವಾಗಿ ಹಾಕುವವರಿಗೆ ನಮ್ಮ ಮತ ಹಾಕ್ತೀವಿ.