ಸಿ ಫೋರ್ ಸಮೀಕ್ಷೆ: ಮುಂಬೈ ಕರ್ನಾಟಕದಲ್ಲಿ ಈಗಲೂ 'ಕೈ' ಅಲೆ
ಬೆಂಗಳೂರು, ಏಪ್ರಿಲ್ 30: ಮುಂಬೈ-ಕರ್ನಾಟಕ ಭಾಗದಲ್ಲಿ ಮತದಾರರು ಈ ಬಾರಿಯೂ ಕಾಂಗ್ರೆಸ್ನತ್ತ ಹೆಚ್ಚು ಒಲವು ತೋರಿಸಲಿದ್ದಾರೆ ಎಂದು ಸಿ-ಫೋರ್ ನಡೆಸಿರುವ ಚುನಾವಣಾಪೂರ್ವ ಸಮೀಕ್ಷೆ ತಿಳಿಸಿದೆ.
ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹಾವೇರಿ, ಧಾರವಾಡ ಮತ್ತು ಗದಗ ಜಿಲ್ಲೆಗಳನ್ನು ಒಳಗೊಂಡಿರುವ ಈ ಭಾಗದಲ್ಲಿ 50 ವಿಧಾನಸಭಾ ಕ್ಷೇತ್ರಗಳಿವೆ. ಚಳವಳಿ, ಹೋರಾಟ ಮತ್ತು ಪ್ರತಿಭಟನೆಗಳಿಂದ ಹೆಚ್ಚು ಸುದ್ದಿಯಾಗುತ್ತಿರುವ ಇಲ್ಲಿನ ಜನರು ಮತ್ತೆ ಕಾಂಗ್ರೆಸ್ ಅನ್ನು ಬೆಂಬಲಿಸಲಿದ್ದಾರೆ ಎಂದು ಸಿ-ಫೋರ್ ಸಮೀಕ್ಷೆ ಹೇಳಿದೆ.
ಸಿ-ಫೋರ್ 3ನೇ ಸಮೀಕ್ಷೆ: ಕಾಂಗ್ರೆಸ್ ಗೆ ಭರ್ಜರಿ ಜಯ, ಬಿಜೆಪಿಗೆ ಭಾರೀ ನಿರಾಸೆ
ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಬಹುದೇನೋ ಎಂಬ ನಿರೀಕ್ಷೆಯಿಂದ, ನೆಲ-ಜಲದ ಹೋರಾಟದಲ್ಲಿ ಹೈರಾಣಾಗಿರುವ ಜನರು ರಾಷ್ಟ್ರೀಯ ಪಕ್ಷಗಳತ್ತಲೇ ಒಲವು ತೋರಲು ಮುಂದಾಗಿದ್ದಾರೆ. ಈ ಭಾಗದಲ್ಲಿ ಅತಿ ಹೆಚ್ಚಿನ ಸೀಟುಗಳನ್ನು ಪಡೆಯುವ ಬಿಜೆಪಿ ಕನಸು ಈಡೇರುವುದಿಲ್ಲ. ಹಾಗೆಂದು ಮತದಾರು ಸಂಪೂರ್ಣವಾಗಿ ಕಾಂಗ್ರೆಸ್ನತ್ತ ವಾಲಿಕೊಂಡಿಲ್ಲ ಎಂದು ಅಂಕಿ ಅಂಶ ವಿವರಿಸುತ್ತದೆ.
ಆದರೆ, ಬಿಜೆಪಿಯ ಸ್ಥಿತಿ 2013ರ ಚುನಾವಣೆಗೆ ಹೋಲಿಸಿದರೆ ಸುಧಾರಣೆಯಾಗಲಿದೆ. ಹೆಚ್ಚುವರಿ 13 ಸೀಟುಗಳನ್ನು ಅದು ಗೆದ್ದುಕೊಳ್ಳಲಿದೆ ಎಂದು ಸಮೀಕ್ಷೆ ತಿಳಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವಣ ನೇರ ಪೈಪೋಟಿಗೆ ಮುಂಬೈ-ಕರ್ನಾಟಕ ಸಾಕ್ಷಿಯಾಗಲಿದೆ.
ಸಿ ಫೋರ್ ಸಮೀಕ್ಷೆ: ಹೈದರಾಬಾದ್ ಕರ್ನಾಟಕದಲ್ಲಿ 'ಕೈ' ಮೇಲು
ಮುಂಬೈ ಕರ್ನಾಟಕ ಭಾಗದಲ್ಲಿ 2008ರ ಚುನಾವಣೆಯಲ್ಲಿ ಶೇ 30.55 ಮತಗಳನ್ನು ಪಡೆದಿದ್ದ ಬಿಜೆಪಿ, 2013ರಲ್ಲಿ ಕೇವಲ ಶೇ 15.75 ರಷ್ಟು ಮತಗಳನ್ನು ಪಡೆದುಕೊಂಡಿತ್ತು. ಒಟ್ಟಾರೆ ಮತಗಳಿಗೆ ಪ್ರಮಾಣವನ್ನು ಬಿಜೆಪಿ ಹೆಚ್ಚಿಸಿಕೊಳ್ಳಲಿದೆ. ಕಾಂಗ್ರೆಸ್ನ ಮತಗಳಿಗೆ ಪ್ರಮಾಣ ಕೂಡ ಹೆಚ್ಚಾಗಲಿದೆ. ಕಳೆದ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಿದ್ದ ಜೆಡಿಎಸ್, ಕೆಜೆಪಿ, ಬಿಎಸ್ಆರ್ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳ ಮತಗಳು ಈ ಎರಡು ಪ್ರಮುಖ ಪಕ್ಷಗಳ ಪಾಲಾಗಲಿವೆ.