ಶಿವಮೊಗ್ಗ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ಪರಿಚಯ
ಶಿವಮೊಗ್ಗ, ಫೆಬ್ರವರಿ 23 : ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಜೆಡಿಎಸ್ ಪಕ್ಷ 126 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಶಿವಮೊಗ್ಗ ಜಿಲ್ಲೆಯ 7 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪಕ್ಷ ಘೋಷಣೆ ಮಾಡಿದೆ.
ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ತೀರ್ಥಹಳ್ಳಿ, ಸೊರಬ, ಶಿಕಾರಿಪುರ, ಸಾಗರ ವಿಧಾನಸಭಾ ಕ್ಷೇತ್ರಗಳನ್ನು ಶಿವಮೊಗ್ಗ ಜಿಲ್ಲೆ ಒಳಗೊಂಡಿದೆ. ಸಾಗರ ಹೊರತುಪಡಿಸಿ ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ : ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ
2013ರ ಚುನಾವಣೆಯಲ್ಲಿ ಜೆಡಿಎಸ್ ಸೊರಬ, ಭದ್ರಾವತಿ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ ಇನ್ನೂ ಹೆಚ್ಚಿನ ಕ್ಷೇತ್ರಗಳಲ್ಲಿ ಜಯಗಳಿಸುವ ವಿಶ್ವಾಸವನ್ನು ಪಕ್ಷ ಹೊಂದಿದೆ.
ಶಿವಮೊಗ್ಗ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ
ಸಾಗರ ಕ್ಷೇತ್ರದಿಂದ 2013ರ ಚುನಾವಣೆಗೆ ಬೇಳೂರು ಗೋಪಾಲಕೃಷ್ಣ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ, ಈ ಬಾರಿ ಅವರು ಬಿಜೆಪಿಯಿಂದ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಆದ್ದರಿಂದ ಪಕ್ಷ ಸಾಗರ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ.
ಆದ್ದರಿಂದ, ಚುನಾವಣೆ ದಿನಾಂಕ ಘೋಷಣೆಯಾಗುವ ಮೊದಲೇ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ಸಂಕ್ಷಿಪ್ತ ಪರಿಚಯವನ್ನು ಇಲ್ಲಿ ನೀಡಲಾಗಿದೆ.
ಮಧು ಬಂಗಾರಪ್ಪ
ಸೊರಬ ಕ್ಷೇತ್ರದ ಹಾಲಿ ಶಾಸಕರು ಮಧು ಬಂಗಾರಪ್ಪ. 2013ರ ಚುನಾವಣೆಯಲ್ಲಿ 58,541 ಮತಗಳನ್ನು ಪಡೆದು ಜಯಗಳಿಸಿದ್ದರು. ಈ ಬಾರಿ ಚುನಾವಣೆಗೂ ಅವರನ್ನುಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ. ರಾಜ್ಯ ಜೆಡಿಎಸ್ ಯುವ ಘಟಕ ಅಧ್ಯಕ್ಷರಾದ ಮಧು ಬಂಗಾರಪ್ಪ, ದಿ.ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪುತ್ರ.
ಎಂ.ಜೆ.ಅಪ್ಪಾಜಿ ಗೌಡ
ಭದ್ರಾವತಿ ಕ್ಷೇತ್ರದ ಹಾಲಿ ಶಾಸಕರು ಎಂ.ಜೆ.ಅಪ್ಪಾಜಿ ಗೌಡ. 2013ರ ಚುನಾವಣೆಯಲ್ಲಿ 78,370 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಈ ಬಾರಿ ಚುನಾವಣೆಗೂ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. 2008, 2004ರ ಚುನಾವಣೆಯಲ್ಲಿ ಸೋಲು ಕಂಡಿದ್ದ ಅಪ್ಪಾಜಿ ಗೌಡರು ಕಳೆದ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ.
ಶಾರದಾ ಪೂರ್ಯನಾಯ್ಕ್
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಹಾಲಿ ಶಾಸಕಿ ಶಾರದಾ ಪೂರ್ಯನಾಯ್ಕ್. 2013ರ ಚುನಾವನೆಯಲ್ಲಿ 48,639 ಮತಗಳನ್ನು ಪಡೆದು ಜಯಗಳಿಸಿದ್ದಾರೆ. 2008ರಲ್ಲಿ ರಚನೆಯಾದ ಕ್ಷೇತ್ರ ಶಿವಮೊಗ್ಗ ಗ್ರಾಮಾಂತರ ಮೊದಲ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದರು. 2013ರಲ್ಲಿ ನಡೆದ 2ನೇ ಚುನಾವಣೆಯಲ್ಲಿ ಜೆಡಿಎಸ್ ಕ್ಷೇತ್ರದಲ್ಲಿ ಜಯಗಳಿಸಿದೆ.
ಆರ್.ಎಂ.ಮಂಜುನಾಥ ಗೌಡ
ಈ ಬಾರಿಯ ಚುನಾವಣೆಗೆ ತೀರ್ಥಹಳ್ಳಿ ಕ್ಷೇತ್ರಕ್ಕೆ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಜೆಡಿಎಸ್ ಅಭ್ಯರ್ಥಿ. 2013ರ ಚುನಾವಣೆಯಲ್ಲಿ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಂಜುನಾಥ ಗೌಡರು ಕೆಲವು ಮತಗಳ ಅಂತರದಲ್ಲಿ ಸೋತಿದ್ದರು, ಬಳಿಕ ಕಾಂಗ್ರೆಸ್ ಸೇರಿದ್ದರು. 2018ರ ಜನವರಿ 23ರಂದು ಜೆಡಿಎಸ್ ಸೇರಿದ್ದು, ಈ ಬಾರಿಯ ಚುನಾವಣೆಗೆ ಪಕ್ಷ ಅಭ್ಯರ್ಥಿಯಾಗಿದ್ದಾರೆ.
ಎಚ್.ಎನ್.ನಿರಂಜನ್
ಶಿವಮೊಗ್ಗ ಕ್ಷೇತ್ರಕ್ಕೆ ಎಚ್.ಎನ್.ನಿರಂಜನ್ ಅಭ್ಯರ್ಥಿ ಎಂದು ಜೆಡಿಎಸ್ ಪಕ್ಷ ಘೋಷಣೆ ಮಾಡಿದೆ. ನಿರಂಜನ್ ಶಿವಮೊಗ್ಗ ಜಿಲ್ಲಾ ಜೆಡಿಎಸ್ ಪಕ್ಷದ ಅಧ್ಯಕ್ಷರು. ಈಗಾಗಲೇ ಕ್ಷೇತ್ರದಲ್ಲಿ ಒಂದು ಸುತ್ತಿನ ಪ್ರಚಾರವನ್ನು ಮುಕ್ತಾಯಗೊಳಿಸಿದ್ದಾರೆ. 2013ರ ಚುನಾವಣೆಯಲ್ಲಿ ಎಂ.ಶ್ರೀಕಾಂತ್ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ, ಈ ಬಾರಿ ಅಭ್ಯರ್ಥಿಯನ್ನು ಬದಲಾವಣೆ ಮಾಡಲಾಗಿದೆ.
ಎಚ್.ಟಿ.ಬಳಿಗಾರ್
ಎಚ್.ಟಿ.ಬಳಿಗಾರ್ ಶಿಕಾರಿಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ. 2013ರ ಚುನಾವಣೆಯಲ್ಲಿಯೂ ಅವರು ಸ್ಪರ್ಧಿಸಿ 15,007 ಮತಗಳನ್ನು ಪಡೆದಿದ್ದರು. ಎಚ್.ಟಿ.ಬಳಿಗಾರ್ ನಿವೃತ್ತ ಕೆಎಎಸ್ ಅಧಿಕಾರಿಯಾಗಿದ್ದಾರೆ.