ಲಿಂಗಾಯತ ಧರ್ಮ ಒಡೆದ ಆಳುವ ನೀತಿಯೇ ಉರುಳಾಯಿತು ಕಾಂಗ್ರೆಸ್ಸಿಗೆ!
ಬೆಂಗಳೂರು, ಮೇ 16: ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಿ ಲಿಂಗಾಯತರ ಉದ್ಧಾರ ಮಾಡುತ್ತೇವೆ ಎಂದು ಹೊರಟ ಕಾಂಗ್ರೆಸ್ಸಿನ ಒಡೆದು ಆಳುವ ನೀತಿಗೆ ಲಿಂಗಾಯತರು ತಕ್ಕ ಪಾಠ ಕಲಿಸಿದ್ದಾರಾ? ಒಡೆದು ಆಳುವ ನೀತಿಯೇ ಸ್ವತಃ ಕಾಂಗ್ರೆಸ್ಸಿಗೆ ತಿರುಗುಬಾಣವಾಯಿತಾ?
ನಂ 1 ಸರ್ಕಾರ, ಜನಪ್ರಿಯ ಆಡಳಿತ, ನುಡಿದಂತೆ ನಡೆದಿದ್ದೇವೆ ಎಂದೆಲ್ಲ ಪ್ರಚಾರದ ಸಂದರ್ಭದಲ್ಲಿ ಹೇಳಿಕೊಂಡಿದ್ದ ಕಾಂಗ್ರೆಸ್ಸು ಈ ಪರಿ ಮುಖಭಂಗ ಅನುಭವಿಸುತ್ತದೆಂದು ಬಹುಶಃ ಯಾರೂ ನಿರೀಕ್ಷಿಸಿರಲಿಲ್ಲ. ಆದರೆ ಕಾಂಗ್ರೆಸ್ಸಿಗರೂ ನಿರೀಕ್ಷಿಸದಂಥ ಫಲಿತಾಂಶ ಇದೀಗ ಹೊರಬಿದ್ದಿದೆ.
ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆ ಸುಮಾರು, ಕಾರಣಗಳು ಆರು
ಅತಂತ್ರ ವಿಧಾನಸಭೆ, ಜೆಡಿಎಸ್-ಕಾಂಗ್ರೆಸ್ ಮೈತ್ರಿ, ಬಿಜೆಪಿಯ ಆಪರೇಷನ್ ಫ್ಲವರ್... ಈ ಎಲ್ಲವೂ ಒತ್ತಟ್ಟಿಗಿರಲಿ. ಆದರೆ ಕಳೆದ ಬಾರಿ 122 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಕೇವಲ 78 ಸ್ಥಾನ ಗೆದ್ದು, ಈ ರೀತಿಯ ಕುಸಿತ ಕಂಡಿದ್ದು ಹೇಗೆ ಎಂಬುದು ಈಗಿರುವ ಪ್ರಶ್ನೆ.
ಲಿಂಗಾಯತ ಪ್ರತ್ಯೇಕ ಧರ್ಮದ ದಾಳ ಉಲ್ಟಾ ಹೊಡೆದಿದ್ದು ಹೇಗೆ?
ಲಿಂಗಾಯತ ವೀರಶೈವ ಮತಗಳನ್ನು ಒಡೆದು ಆಳುವ ನೀತಯೇ ಕಾಂಗ್ರೆಸ್ಸಿಗೆ ಮುಳುವಾಯಿತಾ? ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವುದನ್ನು ಚುನಾವಣೆಗೂ ಮುನ್ನ ತನ್ನ ಕೊಟ್ಟ ಕೊನೆಯ ಅಸ್ತ್ರವಾಗಿ ಛೂಬಿಟ್ಟಿದ್ದ ಕಾಂಗ್ರೆಸ್ ಆ ಅಸ್ತ್ರವೇ ತನಗೆ ತಿರುಬಾಣವಾಗುತ್ತದೆ ಎಂದು ಕನಸಿನಲ್ಲಿಯೂ ಎಣಿಸಿರಲಿಲ್ಲ. ಆದರೆ ಈಗ ಹಾಗೆಯೇ ಆಗಿದೆ! ಅದಕ್ಕೆ ಸಾಕ್ಷಿಯೆಂದರೆ ಲಿಂಗಾಯತ ಸಮುದಾಯದ ಜನರೇ ಹೆಚ್ಚಿರುವ ಬಾಂಬೆ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ಸು ಕುಸಿತ ಕಂಡಿದ್ದು ಮತ್ತು ಬಿಜೆಪಿ ದಾಖಲೆಯ ಜಯಗಳಿಸಿದ್ದು.
50 ಕ್ಷೇತ್ರಗಳಲ್ಲಿ 30 ಸ್ಥಾನ ಗೆದ್ದ ಬಿಜೆಪಿ
2013 ರಲ್ಲಿ ಮುಂಬಯಿ ಕರ್ನಾಟಕ ಭಾಗದ 50 ಕ್ಷೇತ್ರಗಳಲ್ಲಿ ಕೇವಲ 13 ಸ್ಥಾನವನ್ನಷ್ಟೇ ಗಳಿಸಿದ್ದ ಬಿಜೆಪಿ ಈ ಬಾರಿ ಎರಡು ಪಟ್ಟಿಗೂ ಅಧಿಕ ಸ್ಥಾನ ಗಳಿಸಿದೆ. 2013 ರಲ್ಲಿ ಬಿಜೆಪಿ ಇಬ್ಭಾಗವಾಗಿ ಕೆಜೆಪಿ ಉದ್ಭವಿಸಿದ್ದು ಇದಕ್ಕೆ ಕಾರಣವಾಗಿತ್ತು. ಆದರೆ ಈ ಬಾರಿ ಈ ಭಾಗದಲ್ಲಿ ಬಿಜೆಪಿ ಮೇಲುಗೈ ಸಾಧಿಸುವುದನ್ನು ನಿಯಂತ್ರಿಸುವ ಸಲುವಾಗಿಯೇ ಕಾಂಗ್ರೆಸ್ ಲಿಂಗಾಯತ ದಾಳವನ್ನು ಬಳಸಿಕೊಳ್ಳಲು ಹೊರಟಿತ್ತು. ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿರುವುದು ಮತ್ತು ಬಿ ಎಸ್ ಯಡಿಯೂರಪ್ಪ ಲಿಂಗಾಯತ ನಾಯಕರಾಗಿರುವುದು ತನಗೆ ಹೊಡೆತವಾದೀತು ಎಂಬುದು ಕಾಂಗ್ರೆಸ್ ಎಣಿಕೆಯಾಗಿತ್ತು. ಅದಕ್ಕೆಂದೇ ಲಿಂಗಾಯತ ಪ್ರತ್ಯೇಕ ಧರ್ಮದ ತಂತ್ರ ಹೆಣೆದಿತ್ತು. ಆದರೆ ಕಾಂಗ್ರೆಸ್ಸಿನ ಈ ಒಡೆದು ಆಡುವ ನೀತಿಗೆ ಮಣೆ ಹಾಕದ ಮತದಾರರ ಬಿಜೆಪಿಯತ್ತಲೇ ಒಲವು ತೋರಿದ್ದಾನೆ. ಈ ಬಾರಿ ಈ ಭಾಗದಲ್ಲಿಕರ್ನಾಟಕ ಭಾಗದಲ್ಲಿ ಬಿಜೆಪಿ 50 ರಲ್ಲಿ 30 ಸ್ಥಾನ ಗಳಿಸಿ ದಾಖಲೆ ಬರೆದಿದೆ.
ಕೇವಲ 17 ಸ್ಥಾನ ಗೆದ್ದ ಕಾಂಗ್ರೆಸ್
2013 ರ ಚುನಾವಣೆಯಲ್ಲಿ 31 ಸ್ಥಾನ ಗಳಿಸಿ ದಾಖಲೆ ಬರೆದಿದ್ದ ಕಾಂಗ್ರೆಸ್ ಈ ಬಾರಿ ಕೇವಲ 17 ಸ್ಥಾನಕ್ಕಷ್ಟೇ ತೃಪ್ತಿಪಟ್ಟುಕೊಳ್ಳಬೇಕಾಯ್ತು. ಇದು ಲಿಂಗಾಯತ ಪ್ರತ್ಯೇಕ ಧರ್ಮದ ದಾಳ ಕಾಂಗ್ರೆಸ್ಸಿಗೆ ಹೇಗೆ ತಿರುಗುಬಾಣವಾಯಿತು ಎಂಬುದಕ್ಕೆ ಸಾಕ್ಷಿ.
ಮುಂಬೈ ಕರ್ನಾಟಕ ಭಾಗದ ಜಿಲ್ಲೆಗಳು: ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ ಮತ್ತು ಧಾರವಾಡ
ಬಿಜೆಪಿ ಮೇಲೆ ಪ್ರಭಾವ ಬೀರದ ಮಹದಾಯಿ ವಿವಾದ
ಮುಂಬಯಿ ಕರ್ನಾಟಕ ಭಾಗದಲ್ಲಿ ಮಹಾದಾಯಿ ವಿವಾದ ಮುಖ್ಯ ಪಾತ್ರ ವಹಿಸಬಹುದು, ಇದು ಬಿಜೆಪಿಗೆ ಮುಳುವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಹಾಗಾಗಲಿಲ್ಲ. ಗೋವಾ ರಾಜ್ಯದ ಬಿಜೆಪಿ ಸರ್ಕಾರದ ಮನವೊಲಿಸಲು ಬಿಜೆಪಿ ವಿಫಲವಾದರೂ ಜನರು ಬಿಜೆಪಿ ಕುರಿತು ಮುನಿಸಿಕೊಂಡಿಲ್ಲ. ಆದ್ದರಿಂದ ಮಹಾದಾಯಿ ವಿವಾದ ಯಾವುದೇ ಪ್ರಭಾವ ಬೀರಿದಂತಿಲ್ಲ.