ಅಶ್ವತ್ಥ ನಾರಾಯಣ ಅವರ ಅಭಿವೃದ್ಧಿಗೆ ಜೈ ಎಂದ ಮಲ್ಲೇಶ್ವರ ಮತದಾರ
ಬೆಂಗಳೂರು, ಮೇ 15 : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಮೊದಲ ಗೆಲುವು ಸಾಧಿಸಿದ್ದು, ಮಲ್ಲೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಸಿಎನ್ ಅಶ್ವತ್ಥ ನಾರಾಯಣ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.
LIVE: ಕರ್ನಾಟಕ ಚುನಾವಣೆ 2018, ಮತಎಣಿಕೆ ಅಪ್ಡೇಟ್ಸ್
ಹಾಗೆ ನೋಡಿದರೆ, ಕಳೆದ ಎರಡು ಚುನಾವಣೆಯಲ್ಲಿಯೂ ಜಯ ಸಾಧಿಸಿದ್ದ ಮತ್ತು ಆ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿರುವ ಅಶ್ವತ್ಥ ನಾರಾಯಣ ಅವರು ಗೆಲ್ಲುವ ನೆಚ್ಚಿನ ಅಭ್ಯರ್ಥಿಯೇ ಆಗಿದ್ದರು.
ಅವರು ತಮ್ಮ ಪ್ರತಿಸ್ಪರ್ಧಿ, ಕಾಂಗ್ರೆಸ್ ಅಭ್ಯರ್ಥಿ ಕೆಂಗಲ್ ಶ್ರೀಪಾದರೇಣು ವಿರುದ್ಧ ಜಯ ದಾಖಲಿಸಿದ್ದಾರೆ. ಜೆಡಿಎಸ್ ನ ಮಧುಸೂಧನ ಎನ್ ಅವರು ಮೂರನೇ ಸ್ಥಾನ ಪಡೆದಿದ್ದಾರೆ.
ಅಶ್ವತ್ಥ ನಾರಾಯಣ ಅವರು 64,270 ಮತಗಳನ್ನು ಗಳಿಸಿ ಜಯಭೇರಿ ಬಾರಿಸಿದ್ದರೆ, ಎರಡನೇ ಸ್ಥಾನದಲ್ಲಿದ್ದ ಕಾಂಗ್ರೆಸ್ ಪಕ್ಷದ ಕೆಂಗಲ್ ಶ್ರೀಪಾದರೇಣು ಅವರು ಕೇವಲ 23,332 ಮತಗಳನ್ನು ಗಳಿಸಿ ಸೋಲನ್ನು ಒಪ್ಪಿಕೊಂಡಿದ್ದಾರೆ. ಜೆಡಿಎಸ್ ಪಕ್ಷದ ಮಧುಸೂಧನ ಅವರು 5,907 ಮತ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಅಂತಿಮವಾಗಿ, ಮಲ್ಲೇಶ್ವರ ಕ್ಷೇತ್ರದಲ್ಲಿ ಅಶ್ವತ್ಥ ನಾರಾಯಣ ಅವರು ಮಾಡಿರುವ ಅಭಿವೃದ್ಧಿ ಕಾರ್ಯಕ್ಕೆ ಮತದಾರರು ಜೈ ಎಂದಿದ್ದಾರೆ.