ಚಾಮರಾಜನಗರ: ಪುಟ್ಟರಂಗಶೆಟ್ಟಿ, ನರೇಂದ್ರಗೆ ಹ್ಯಾಟ್ರಿಕ್ ವಿಜಯ
ಚಾಮರಾಜನಗರ, ಮೇ 15: ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ಮತ್ತು ಹನೂರು ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.
ಕ್ಷೇತ್ರದ ನಾಲ್ಕೂ ಕ್ಷೇತ್ರಗಳು ಕಾಂಗ್ರೆಸ್ ಹಿಡಿತದಲ್ಲಿತ್ತು. ಆದರೆ, ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಎಸ್ಪಿಯ ಎನ್. ಮಹೇಶ್ ಮತ್ತು ಗುಂಡ್ಲುಪೇಟೆಯಲ್ಲಿ ಬಿಜೆಪಿಯ ನಿರಂಜನಕುಮಾರ್ ಈ ಭದ್ರಕೋಟೆಯನ್ನು ಭೇದಿಸಿದ್ದಾರೆ.
LIVE: ಕರ್ನಾಟಕ ಚುನಾವಣೆ 2018, ಮತಎಣಿಕೆ ಅಪ್ಡೇಟ್ಸ್
ಆದರೆ, ತಮ್ಮ ಕ್ಷೇತ್ರಗಳಲ್ಲಿ ಪ್ರಾಬಲ್ಯ ಹೊಂದಿರುವ ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ. ಪುಟ್ಟರಂಗಶೆಟ್ಟಿ ಮತ್ತು ಹನೂರು ಕಾಂಗ್ರೆಸ್ ಅಭ್ಯರ್ಥಿ ನರೇಂದ್ರ ಸತತ ಮೂರನೇ ಗೆಲುವು ಪಡೆಯುವ ಮೂಲಕ ಹ್ಯಾಟ್ರಿಕ್ ಸಾಧಿಸಿದ್ದಾರೆ.
ಉಪ್ಪಾರ ಸಮುದಾಯದ ಮತಗಳ ಬೆಂಬಲ ಹೊಂದಿರುವ ಪುಟ್ಟರಂಗಶೆಟ್ಟಿ ಅವರಿಗೆ ಗೆಲುವು ಸುಲಭವಾಗಿರಲಿಲ್ಲ. ಆದರೆ, ಬಿಜೆಪಿಯಲ್ಲಿನ ಗೊಂದಲ ಅವರಿಗೆ ಲಾಭ ನೀಡಿತು. ಇದೇ ರೀತಿಯ ವಾತಾವರಣವೇ ಹನೂರಿನಲ್ಲಿ ನರೇಂದ್ರ ಅವರ ಗೆಲುವಿಗೆ ಸಹಕಾರಿಯಾಯಿತು.
ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ
ಅಂತರ ಕಡಿಮೆ ಮಾಡಿಕೊಂಡ ಕೆಆರ್ಎಂ
ಚಾಮರಾಜನಗರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ಪಕ್ಷ ಸಾಕಷ್ಟು ಹೆಣಗಾಡಬೇಕಾಯಿತು. ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಕೆ. ಆರ್. ಮಲ್ಲಿಕಾರ್ಜುನಪ್ಪ ಅವರ ಹೆಸರು ಮುಂಚೂಣಿಯಲ್ಲಿದ್ದರೂ, ಆಕಾಂಕ್ಷಿಗಳ ದಂಡು ದೊಡ್ಡದಾಗಿತ್ತು. ಅಲ್ಲದೆ, ಚುನಾವಣೆ ಸಮೀಪಿಸುತ್ತಿದ್ದಾಗ ಕಾಂಗ್ರೆಸ್ ತೊರೆದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಮಚಂದ್ರ ಅವರು ಬಿಜೆಪಿ ಸೇರ್ಪಡೆಯಾಗಿದ್ದರು.
ನಾಯಕ ಸಮುದಾಯದ ಮುಖಂಡರಾದ ರಾಮಚಂದ್ರ ಅವರಿಗೆ ಟಿಕೆಟ್ ನೀಡಿದರೆ ಹಿಂದುಳಿದ ವರ್ಗದ ಮತಗಳನ್ನು ಸೆಳೆದುಕೊಳ್ಳಬಹುದು ಎಂಬ ಲೆಕ್ಕಾಚಾರ ನಡೆದಿತ್ತು. ಆದರೆ, ಸ್ಥಳೀಯ ಲಿಂಗಾಯತ ಮುಖಂಡರು ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರಿ ಮಲ್ಲಿಕಾರ್ಜುನಪ್ಪ ಅವರಿಗೇ ಟಿಕೆಟ್ ನೀಡುವಲ್ಲಿ ಯಶಸ್ವಿಯಾಗಿದ್ದರು.
ಗೆದ್ದು ಬೀಗಿದ ಪುಟ್ಟರಂಗಶೆಟ್ಟಿ
ಮತ ಎಣಿಕೆಯ ಆರಂಭದಲ್ಲಿ ಮಲ್ಲಿಕಾರ್ಜುನಪ್ಪ ಮುನ್ನಡೆ ಸಾಧಿಸಿದ್ದರೂ, ಬಳಿಕ ಪುಟ್ಟರಂಗಶೆಟ್ಟಿ ಅವರು ಮುನ್ನೆಲೆಗೆ ಬಂದರು. ಪ್ರಾರಂಭದಲ್ಲಿ ಉಂಟಾದ ಹಿನ್ನಡೆ ಪುಟ್ಟರಂಗಶೆಟ್ಟಿ ಅವರಲ್ಲಿ ಆತಂಕ ಉಂಟು ಮಾಡಿತ್ತು. ಸಮೀಪದ ಹೋರಾಟದ ನಡುವೆಯೇ ಪುಟ್ಟರಂಗಶೆಟ್ಟಿ ಗೆಲುವು ಸಾಧಿಸಿದರು.
ಕಳೆದ ಚುನಾವಣೆಯಲ್ಲಿ 11,196 ಮತಗಳ ಅಂತರಗಳಿಂದ ಪುಟ್ಟರಂಗಶೆಟ್ಟಿ ಅವರು ಗೆಲುವು ಸಾಧಿಸಿದ್ದರು. ಆಗ ಮಲ್ಲಿಕಾರ್ಜುನಪ್ಪ ಅವರು ಕೆಜೆಪಿಯಿಂದ ಸ್ಪರ್ಧಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ನೆಚ್ಚಿನ ಜಿಲ್ಲೆಯಾಗಿದ್ದ ಚಾಮರಾಜನಗರಕ್ಕೆ ಇಪ್ಪತ್ತಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದರು. ಅನೇಕ ಯೋಜನೆಗಳನ್ನು ಪ್ರಕಟಿಸಿದ್ದರು. ಇವುಗಳ ನಡುವೆಯೂ ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಪಡೆದುಕೊಂಡ ಮತಗಳ ಪ್ರಮಾಣ ತಗ್ಗಿದೆ.
ಆಕಾಂಕ್ಷಿಯಾಗಿದ್ದ ಸೋಮಣ್ಣ
ಹನೂರು ವಿಧಾನಸಭಾ ಕ್ಷೇತ್ರ ಈ ಬಾರಿ ತೀವ್ರ ಕುತೂಹಲ ಕೆರಳಿಸಿತ್ತು. ಬಿಜೆಪಿಯಿಂದ ಸ್ಪರ್ಧೆಗೆ ಇಳಿಯಲು ವಿ. ಸೋಮಣ್ಣ ಅತೀವ ಆಸಕ್ತಿ ಹೊಂದಿದ್ದರು. ಹನೂರು ಭಾಗದಲ್ಲಿ ಪಕ್ಷ ಸಂಘಟನೆಯಲ್ಲಿ ಸೋಮಣ್ಣ ತೊಡಗಿಸಿಕೊಂಡಿದ್ದರಿಂದ ಅವರಿಗೆ ಕ್ಷೇತ್ರದ ಪರಿಚಯ ಕುರಿತ ತಿಳಿವಳಿಕೆ ಚೆನ್ನಾಗಿತ್ತು. ಹೀಗಾಗಿ ಇಲ್ಲಿಂದ ಸ್ಪರ್ಧೆಗೆ ಇಳಿದರೆ ಗೆಲ್ಲುವ ಭರವಸೆ ಹೊಂದಿದ್ದರು. ಇದಕ್ಕೆ ಅನೇಕ ಸ್ಥಳೀಯ ಮುಖಂಡರ ಬೆಂಬಲವೂ ವ್ಯಕ್ತವಾಗಿತ್ತು. ಆದರೆ ಇಲ್ಲಿ ಟಿಕೆಟ್ ಸಿಗದ ಕಾರಣ ಅನಿವಾರ್ಯವಾಗಿ ಗೋವಿಂದರಾಜನಗರ ಕ್ಷೇತ್ರಕ್ಕೆ ಮರಳಿದ್ದ ಸೋಮಣ್ಣ ಅವರು ಅಲ್ಲಿ ಗೆಲುವು ಕಂಡಿದ್ದಾರೆ.
ಮಗನಿಗೆ ಟಿಕೆಟ್ ಕೊಡಿಸಿದ್ದ ಪರಿಮಳಾ
ಸೋಮಣ್ಣ ಅವರಿಗೆ ಟಿಕೆಟ್ ನೀಡುವುದಕ್ಕೆ ಒಪ್ಪದ ಸ್ಥಳೀಯ ಮುಖಂಡರಾದ, ಮಾಜಿ ಶಾಸಕಿ ಪರಿಮಳಾ ನಾಗಪ್ಪ ಅವರು ತಮ್ಮ ಮಗ ಪ್ರೀತನ್ ನಾಗಪ್ಪ ಅವರಿಗೇ ಟಿಕೆಟ್ ನೀಡಬೇಕು ಎಂದು ಪಟ್ಟುಹಿಡಿದಿದ್ದರು. ಅವರ ಮನವೊಲಿಸುವ ಕಾರ್ಯಗಳು ಸಫಲವಾಗಿರಲಿಲ್ಲ. ಹನೂರು ಕ್ಷೇತ್ರ ಮಾಜಿ ಸಚಿವ ದಿವಂಗತ ಎಚ್. ನಾಗಪ್ಪ ಅವರ ಕುಟುಂಬ ಮತ್ತು ನರೇಂದ್ರ ಅವರ ಕುಟುಂಬದ ನಡುವಣ ರಾಜಕೀಯ ಪೈಪೋಟಿಗೆ ಹೆಸರುವಾಸಿ. ಕೊನೆಗೆ ಪರಿಮಳಾ ಅವರು ಮಗನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು.
ಕಳೆದ ಬಾರಿ ಪರಿಮಳಾ ಅವರು ನರೇಂದ್ರ ವಿರುದ್ಧ 11 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಕಂಡಿದ್ದರು. ಈ ಬಾರಿ ಪ್ರೀತನ್ ನಾಗಪ್ಪ ಅವರು ಸುಮಾರು 2,000 ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ.
ಜೆಡಿಎಸ್ ಕೂಡ ಪೈಪೋಟಿ
ವಿ. ಸೋಮಣ್ಣ ಅವರ ಬೆಂಬಲಿಗರಾಗಿದ್ದ ಬಿಜೆಪಿಯ ಎಂ.ಆರ್. ಮಂಜುನಾಥ್ ಅವರು ಕೊನೆಯ ಕ್ಷಣದಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದರು. ಒಂದು ಹಂತದಲ್ಲಿ ನರೇಂದ್ರ ಮತ್ತು ಪ್ರೀತನ್ ಅವರಿಗಿಂತ ಮುನ್ನಡೆ ಸಾಧಿಸುವ ಮೂಲಕ ಅಚ್ಚರಿಯ ಫಲಿತಾಂಶ ನೀಡುವ ನಿರೀಕ್ಷೆ ಮೂಡಿಸಿದ್ದರು. ಆದರೆ, ಕೊನೆಗೆ ಗೆಲುವು ನರೇಂದ್ರ ಅವರಿಗೆ ಒಲಿಯಿತು.
ನರೇಂದ್ರ 'ಕೈ' ಬಿಡದ ಜನರು
ತಂದೆ ರಾಜೂಗೌಡ ಅವರ ನಿಧನದ ಬಳಿಕ ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದ ಆರ್. ನರೇಂದ್ರ ಅವರು ಮೂರನೇ ಬಾರಿಗೆ ಗೆಲುವು ಕಂಡಿದ್ದಾರೆ. ವಿಧಾನಸಭಾ ಕ್ಷೇತ್ರವಾಗಿದ್ದರೂ ಕೊಳ್ಳೇಗಾಲ ತಾಲ್ಲೂಕಿನ ಭಾಗವೇ ಆಗಿದ್ದ ಹನೂರು, ಈ ಜನವರಿಯಿಂದ ಪ್ರತ್ಯೇಕ ಜಿಲ್ಲೆಯ ಅಸ್ತಿತ್ವ ಪಡೆದುಕೊಂಡಿತ್ತು. ಹೀಗಾಗಿ ಹನೂರು ತಾಲ್ಲೂಕು ರಚನೆಯ ಹಿಂದಿನ ಮತ್ತು ನಂತರದ ಎರಡೂ ಸಂದರ್ಭದಲ್ಲಿ ಶಾಸಕರಾಗುವ ಅವಕಾಶವನ್ನು ನರೇಂದ್ರ ಪಡೆದುಕೊಂಡಂತಾಗಿದೆ.