'ಕೈ'ಕೋಟೆ ಗುಂಡ್ಲುಪೇಟೆಯಲ್ಲಿ ಅರಳಿದ 'ಕಮಲ'
ಚಾಮರಾಜನಗರ, ಮೇ 15: ಕಾಂಗ್ರೆಸ್ನ ಭದ್ರಕೋಟೆ ಎನಿಸಿಕೊಂಡಿದ್ದ ಗುಂಡ್ಲುಪೇಟೆ ಕ್ಷೇತ್ರಕ್ಕೆ ಬಿಜೆಪಿ ಲಗ್ಗೆ ಇಟ್ಟಿದೆ. ಇದರಿಂದ ಕಾಂಗ್ರೆಸ್ಗೆ ತೀವ್ರ ಮುಖಭಂಗವಾಗಿದೆ.
ಉಪ ಚುನಾವಣೆಯಲ್ಲಿ ಗೆಲುವು ಕಂಡಿದ್ದ ಸಚಿವೆ ಗೀತಾ ಮಹದೇವಪ್ರಸಾದ್ (ಮೋಹನಕುಮಾರಿ) ಅವರಿಗೆ ಸೋಲುಣಿಸುವ ಮೂಲಕ ಬಿಜೆಪಿಯ ಸಿ.ಎಸ್. ನಿರಂಜನಕುಮಾರ್ ಇತಿಹಾಸ ನಿರ್ಮಿಸಿದ್ದಾರೆ.
LIVE: ಕರ್ನಾಟಕ ಚುನಾವಣೆ 2018, ಮತಎಣಿಕೆ ಅಪ್ಡೇಟ್ಸ್
ಗುಂಡ್ಲುಪೇಟೆಯ ಇತಿಹಾಸದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೊರತುಪಡಿಸಿ ಬೇರೆ ಪಕ್ಷಕ್ಕೆ ಜನರು ಗೆಲುವು ನೀಡಿದ್ದ ಉದಾಹರಣೆ ಇರಲಿಲ್ಲ. ಆದರೆ, ಈ ಬಾರಿ ಜನರು ತಮ್ಮ ನಿಲುವು ಬದಲಿಸಿದ್ದಾರೆ.
ಜೆಡಿಎಸ್ನಲ್ಲಿದ್ದ ಎಚ್.ಎಸ್. ಮಹದೇವಪ್ರಸಾದ್ ಅವರು ಕಾಂಗ್ರೆಸ್ ಸೇರ್ಪಡೆಗೊಂಡ ಬಳಿಕವೂ ಕ್ಷೇತ್ರದಲ್ಲಿ ಅವರ ಪ್ರಾಬಲ್ಯ ಮುಂದುವರಿದಿತ್ತು. ಅವರ ಆಕಸ್ಮಿಕ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಅವರ ಪತ್ನಿ ಗೀತಾ ಮಹದೇವಪ್ರಸಾದ್ ಸ್ಪರ್ಧಿಸಿದ್ದರು.
ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ ಇಡೀ ಸಂಪುಟದೊಂದಿಗೆ ಅಲ್ಲಿಗೆ ತೆರಳಿ ಪ್ರಚಾರ ನಡೆಸಿದ್ದರು. ಬಿಜೆಪಿ ಕೂಡ ಸಿ.ಎಸ್. ನಿರಂಜನಕುಮಾರ್ ಅವರ ಪರವಾಗಿ ತೀವ್ರ ಪ್ರಚಾರ ನಡೆಸಿತ್ತು. ಕಾಂಗ್ರೆಸ್ ಸುಮಾರು 7,000 ಮತಗಳ ಅಂತರದಲ್ಲಿ ಗೆಲುವು ಕಂಡಿತ್ತು.
ಈ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಸಿದ್ದರಾಮಯ್ಯ ಅವರು ಅನನುಭವಿ ಗೀತಾ ಅವರಿಗೆ ಸಚಿವೆ ಸ್ಥಾನ ನೀಡಿದ್ದರು. ಜಿಲ್ಲಾ ಉಸ್ತುವಾರಿಯ ಹೊಣೆಯನ್ನು ಸಹ ಅವರಿಗೆ ವರ್ಗಾಯಿಸಿದ್ದರು. ಈ ಯಾವ ಪ್ರಯತ್ನಗಳೂ ಕೈ ಹಿಡಿದಿಲ್ಲ. ಮತದಾರರು ಬಿಜೆಪಿ ಬಗ್ಗೆ ಪ್ರೀತಿ ತೋರಿಸಿದ್ದಾರೆ.
ನಿರಂಜನಕುಮಾರ್ ಅವರು 2013ರ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಎಚ್.ಎಸ್. ಮಹದೇವಪ್ರಸಾದ್ ಎದುರು ಸೋಲು ಅನುಭವಿಸಿದ್ದರು. 2008ರಲ್ಲಿ ಅವರು ಬಿಜೆಪಿಯಿಂದಲೇ ಕಣಕ್ಕಿಳಿದಿದ್ದರು. ಆಗಲೂ ಅವರಿಗೆ ಮಹದೇವಪ್ರಸಾದ್ ಅವರ ಎದುರು ಪೈಪೋಟಿ ನಡೆಸಲು ಸಾಧ್ಯವಾಗಿರಲಿಲ್ಲ.
ಇದಕ್ಕೂ ಮುನ್ನ ನಿರಂಜನ ಕುಮಾರ್ ಅವರ ತಂದೆ ಸಿ.ಎಂ. ಶಿವಮಲ್ಲಪ್ಪ ಅವರು ಕೂಡ ಮಹದೇವಪ್ರಸಾದ್ ಎದುರು ಎರಡು ಬಾರಿ ಸೋತಿದ್ದರು ಎನ್ನುವುದು ಗಮನಾರ್ಹ. ಅಪ್ಪ-ಮಕ್ಕಳಿಬ್ಬರು, ಪತಿ-ಪತ್ನಿ ಎದುರು ಸತತ ಐದು ಬಾರಿ ಸೋಲು ಅನುಭವಿರುವುದು ರಾಜ್ಯ ಚುನಾವಣಾ ಇತಿಹಾಸದ ವಿಶೇಷತೆಗಳಲ್ಲಿ ಒಂದು.
ಈ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಮೂಲಕ ನಿರಂಜನಕುಮಾರ್ ಸೋಲಿನ ಕಹಿಯನ್ನು ಮರೆತಿದ್ದಾರೆ. ವಿಧಾನಸಭೆ ಚುನಾವಣೆಯ ಇತಿಹಾಸದಲ್ಲಿ ಚಾಮರಾಜನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಕಾಣುತ್ತಿರುವುದು ಇದು ಕೇವಲ ಮೂರನೇ ಬಾರಿ.
ಚಾಮರಾಜನಗರ ಮತ್ತು ಕೊಳ್ಳೇಗಾಲ ಕ್ಷೇತ್ರಗಳಲ್ಲಿ ತಲಾ ಒಂದು ಬಾರಿ ಬಿಜೆಪಿ ಈ ಹಿಂದೆ ಗೆಲುವು ಕಂಡಿತ್ತು.