ಚಿತ್ರದುರ್ಗ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ಪರಿಚಯ
ಚಿತ್ರದುರ್ಗ, ಮಾರ್ಚ್ 05 : ಕರ್ನಾಟಕ ಜೆಡಿಎಸ್ 2018ರ ವಿಧಾನಸಭೆ ಚುನಾವಣೆಗೆ 126 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 5 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.
2013ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ಕ್ಷೇತ್ರದಲ್ಲಿ ಜೆಡಿಎಸ್ ಜಯಗಳಿಸಿಲ್ಲ. ಆದರೆ, ಈ ಬಾರಿ ಗೆಲ್ಲುವ ನಿರೀಕ್ಷೆಯೊಂದಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಜಿಲ್ಲೆಯ 6 ಕ್ಷೇತ್ರಗಳ ಪೈಕಿ 5 ಕ್ಷೇತ್ರಕ್ಕೆ ಅಭ್ಯರ್ಥಿ ಅಂತಿಮಗೊಂಡಿದ್ದಾರೆ.
ಮೈಸೂರು ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ಪರಿಚಯ
ಚಿತ್ರದುರ್ಗ ಜಿಲ್ಲೆಯಲ್ಲಿ ಚಿತ್ರದುರ್ಗ, ಹಿರಿಯೂರು, ಹೊಳಲ್ಕೆರೆ, ಮೊಳಕಾಲ್ಮೂರು, ಹೊಸದುರ್ಗ, ಚಳ್ಳಕೆರೆ ವಿಧಾನಸಭಾ ಕ್ಷೇತ್ರಗಳಿವೆ. ಹೊಸದುರ್ಗ ಕ್ಷೇತ್ರವನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ : ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ
ಜಿಲ್ಲೆಯ ರಾಜಕಾರಣ ಭಾರೀ ಕುತೂಹಲ ಹುಟ್ಟಿಸಿದೆ. ಮೊಳಕಾಲ್ಮೂರು ಕ್ಷೇತ್ರದಿಂದ ನಟ ಶಶಿಕುಮಾರ್ ಸ್ಪರ್ಧಿಸಲಿದ್ದಾರೆ. ನಟಿ ಭಾವನಾ ಸಹ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಹಿರಿಯ ನಟ ದೊಡ್ಡಣ್ಣ ಅಳಿಯ ಕೆ.ಸಿ.ವಿರೇಂದ್ರ ಅವರು ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ.
ಕೆ.ಸಿ.ವಿರೇಂದ್ರ
ಚಿತ್ರದುರ್ಗ ನಗರ ಕ್ಷೇತ್ರಕ್ಕೆ ಕೆ.ಸಿ.ವಿರೇಂದ್ರ ಅವರು ಅಭ್ಯರ್ಥಿ. ಉದ್ಯಮಿಯಾಗಿರುವ ಕೆ.ಸಿ.ವೀರೇಂದ್ರ ಅವರು ಮೂಲತಃ ಚಳ್ಳಕೆರೆಯವರು. ಆದರೆ, ಚಿತ್ರದುರ್ಗ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಕೆ.ಸಿ.ವೀರೇಂದ್ರ ಅವರು ಹಿರಿಯ ನಟ ದೊಡ್ಡಣ್ಣ ಅವರ ಅಳಿಯ. 2016ರ ಡಿಸೆಂಬರ್ನಲ್ಲಿ ಕೆ.ಸಿ.ವೀರೇಂದ್ರ ಅವರ ನಿವಾಸದ ಮೇಲೆ ಸಿಬಿಐ ದಾಳಿ ನಡೆದಿತ್ತು. 500 ಮತ್ತು 1000 ರೂ. ನೋಟುಗಳು ನಿಷೇಧಗೊಂಡ ಬಳಿಕ ನಡೆದ ದಾಳಿಯ ವೇಳೆ ಅವರ ನಿವಾಸದಲ್ಲಿ ಲಕ್ಷಾಂತರ ರೂ. ಹೊಸ ನೋಟುಗಳು ಪತ್ತೆಯಾಗಿತ್ತು.
ರವೀಶ್
ಚಳ್ಳಕೆರೆ ಕ್ಷೇತ್ರಕ್ಕೆ ರವೀಶ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ. ಕಳೆದ ಚುನಾವಣೆಯಲ್ಲಿ ಪಿ.ತಿಪ್ಪೇಸ್ವಾಮಿ ಅವರು ಅವರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು ಮತ್ತು 27,373 ಮತಗಳನ್ನು ಪಡೆದಿದ್ದರು. ಈ ಬಾರಿ ಅಭ್ಯರ್ಥಿಯನ್ನು ಬದಲಾವಣೆ ಮಾಡಲಾಗಿದೆ.
ಯಶೋಧರ್
ಹಿರಿಯೂರು ಕ್ಷೇತ್ರಕ್ಕೆ ಯಶೋಧರ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ. ಯಶೋಧರ್ ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷರು. 2013ರ ಚುನಾವಣೆಯಲ್ಲಿ ಕ್ಷೇತ್ರದಿಂದ ಎ.ಕೃಷ್ಣಪ್ಪ ಅವರು ಅಭ್ಯರ್ಥಿಯಾಗಿದ್ದರು. ಚುನಾವಣೆಯಲ್ಲಿ 70,456 ಮತಗಳನ್ನು ಪಡೆದು 2ನೇ ಸ್ಥಾನಗಳಿಸಿದ್ದರು.
ಶ್ರೀನಿವಾಸ ಗದ್ದಿಗೆ
ಹೊಳಲ್ಕೆರೆ ಕ್ಷೇತ್ರದಿಂದ ಶ್ರೀನಿವಾಸ ಗದ್ದಿಗೆ ಅವರು ಅಭ್ಯರ್ಥಿಯಾಗಿದ್ದಾರೆ. ಶ್ರೀನಿವಾಸ ಗದ್ದಿಗೆ ಹೊಳಲ್ಕೆರೆ ಕ್ಷೇತ್ರದವರೇ ಆಗಿದ್ದಾರೆ. ಇಂದಿನ ರಾಜಕೀಯಕ್ಕೆ ಯುವ ಮುಖಂಡರ ಅವಶಕ್ಯಕತೆ ಇದೆ ಎನ್ನುವುದು ಶ್ರೀನಿವಾಸ ಗದ್ದಿಗೆ ಅವರ ಮಾತು. ಶಾಲೆಗಳಿಗೆ ಕಂಪ್ಯೂಟರ್ ವಿತರಣೆ, ಕ್ಷೇತ್ರದಲ್ಲಿ ಆರೋಗ್ಯ ಶಿಬಿರ ಆಯೋಜನೆ ಮುಂತಾದ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜನರಿಗೆ ಚಿರಪರಿಚಿತರು. ಶ್ರೀನಿವಾಸ ಗದ್ದಿಗೆ ಅವರ ತಂದೆ ಕಾಂಗ್ರೆಸ್ ಪಕ್ಷದಲ್ಲಿದ್ದರು.
ಎತ್ತಿನಹಟ್ಟಿ ಗೌಡರು
ಮೊಳಕಾಲ್ಮೂರು ಕ್ಷೇತ್ರದಿಂದ ಎತ್ತಿನಹಟ್ಟಿ ಗೌಡರು ಅಭ್ಯರ್ಥಿಯಾಗಿದ್ದಾರೆ. ಸುಮಾರು 30 ವರ್ಷಗಳಿಂದ ಎತ್ತಿನಹಟ್ಟಿ ಗೌಡರು ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟನೆ ಮಾಡುತ್ತಿದ್ದಾರೆ. 2013ರ ಚುನಾವಣೆಯಲ್ಲಿ ಕ್ಷೇತ್ರದಿಂದ ಡಾ.ಓಬಣ್ಣ ಪೂಜಾರಿ ಸ್ಪರ್ಧಿಸಿದ್ದರು. 4,234 ಮತಗಳನ್ನು ಪಡೆದಿದ್ದರು.