ಬೆಂಗಳೂರು ನಗರದ ಜೆಡಿಎಸ್ ಅಭ್ಯರ್ಥಿಗಳ ಪರಿಚಯ
ಬೆಂಗಳೂರು, ಫೆಬ್ರವರಿ 28 : ಜೆಡಿಎಸ್ ಪಕ್ಷ ಎರಡು ರಾಷ್ಟ್ರೀಯ ಪಕ್ಷಗಳಿಗಿಂತ ಮೊದಲು ಚುನಾವಣೆಯ ಸಿದ್ಧತೆಯನ್ನು ಆರಂಭಿಸಿದೆ. 126 ಅಭ್ಯರ್ಥಿಗಳ ಪಟ್ಟಿಯನ್ನು ಈಗಾಲೇ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ.
ಬೆಂಗಳೂರು ನಗರದ 28 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳಿಗೆ ಪಕ್ಷ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. 2013ರ ಚುನಾವಣೆಯಲ್ಲಿ ಬೆಂಗಳೂರು ನಗರದಲ್ಲಿ ಜೆಡಿಎಸ್ 3 ಸ್ಥಾನಗಳಲ್ಲಿ ಜಯಗಳಿಸಿತ್ತು. ಆದರೆ, ಇಬ್ಬರು ಶಾಸಕರು ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ ಪಕ್ಷದಿಂದ ಅಮಾನತುಗೊಂಡಿದ್ದಾರೆ.
ರಾಯಚೂರು ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ಪರಿಚಯ
126 ಅಭ್ಯರ್ಥಿಗಳ ಪೈಕಿ ಮಹಾಲಕ್ಷ್ಮೀ ಲೇಔಟ್ ಕೇತ್ರದಲ್ಲಿ ಹಾಲಿ ಶಾಸಕ ಕೆ.ಗೋಪಾಲಯ್ಯ ಅವರಿಗೆ ಟಿಕೆಟ್ ನೀಡಲಾಗಿದೆ. ಪುಲಿಕೇಶಿ ನಗರ ಮತ್ತು ಚಾಮರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಬಂಡಾಯ ಶಾಸಕರಿದ್ದಾರೆ. ಈ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಇನ್ನೂ ಘೋಷಣೆ ಮಾಡಿಲ್ಲ.
ಕರ್ನಾಟಕ ವಿಧಾನಸಭೆ ಚುನಾವಣೆ : ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ
ಕೆಲವು ಕ್ಷೇತ್ರಗಳಲ್ಲಿ 2013ರಲ್ಲಿ ಸೋತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಇನ್ನೂ ಕೆಲವು ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳನ್ನು ಹುಡುಕಲಾಗಿದೆ. ಜೆಡಿಎಸ್ ಅಭ್ಯರ್ಥಿಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ ನೋಡಿ...
ಕೆ.ಗೋಪಾಲಯ್ಯ
ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ಕೆ.ಗೋಪಾಲಯ್ಯ ಅವರು ಅಭ್ಯರ್ಥಿ. ಕ್ಷೇತ್ರದ ಹಾಲಿ ಶಾಸಕರು ಹೌದು. 2013ರ ಚುನಾವಣೆಯಲ್ಲಿ 66,127 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕ್ಷೇತ್ರದ ವ್ಯಾಪಿಯಲ್ಲಿ ಉತ್ತಮ ಹಿಡಿತ ಹೊಂದಿದ್ದಾರೆ. ಗೋಪಾಲಯ್ಯ ಅವರ ಪತ್ನಿ ಹೇಮಲತಾ ಗೋಪಾಲಯ್ಯ ಅವರು ಬಿಬಿಎಂಪಿ ಸದಸ್ಯರು. ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪ ಮೇಯರ್.
ದೇವದಾಸ್
ಬಿ.ಟಿ.ಎಂ.ಲೇಔಟ್ ಕ್ಷೇತ್ರಕ್ಕೆ ಕೆ.ದೇವದಾಸ್ ಅವರು ಅಭ್ಯರ್ಥಿಯಾಗಿದ್ದಾರೆ. ದೇವದಾಸ್ ಅವರು ಬಿ.ಟಿ.ಎಂ ಲೇಔಟ್ ವಾರ್ಡ್ ಸದಸ್ಯರು. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಪಕ್ಷ ಅವಕಾಶ ನೀಡಿದೆ. 2013ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಜೆ.ರಮೇಶ್ ರೆಡ್ಡಿ ಅವರು ಅಭ್ಯರ್ಥಿಯಾಗಿದ್ದರು.
ಟಿ.ಎನ್.ಜವರಾಯಿ ಗೌಡ
ಯಶವಂತಪುರ ಕ್ಷೇತ್ರಕ್ಕೆ ಟಿ.ಎನ್.ಜವರಾಯಿ ಗೌಡ ಅವರು ಅಭ್ಯರ್ಥಿಯಾಗಿದ್ದಾರೆ. 2008, 2013ರ ಚುನಾವಣೆಯಲ್ಲಿಯೂ ಜವರಾಯಿ ಗೌಡ ಅವರು ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಅನುಕಂಪದ ಅಲೆ ಮೇಲೆ ಈ ಬಾರಿ ಜಯ ಸಿಗುವುದೇ? ಕಾದು ನೋಡಬೇಕು.
ಬಾಗೇಗೌಡ
ಬಸವನಗುಡಿ ಕ್ಷೇತ್ರಕ್ಕೆ ಬಾಗೇಗೌಡ ಅವರು ಅಭ್ಯರ್ಥಿ ಎಂದು ಜೆಡಿಎಸ್ ಪಕ್ಷ ಘೋಷಣೆ ಮಾಡಿದೆ. 2013ರ ಚುನಾವಣೆಯಲ್ಲಿಯೂ ಬಾಗೇಗೌಡ ಅವರು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. 24,163 ಮತಗಳನ್ನು ಪಡೆದಿದ್ದರು.
ವಿ.ಕೆ.ಗೋಪಾಲ್
ಪದ್ಮನಾಭನಗರ ಕ್ಷೇತ್ರಕ್ಕೆ ವಿ.ಕೆ.ಗೋಪಾಲ್ ಅವರನ್ನು ಅಭ್ಯರ್ಥಿಯಾಗ ಘೋಷಣೆ ಮಾಡಲಾಗಿದೆ. 2013ರ ಚುನಾವಣೆಯಲ್ಲಿ ಕ್ಷೇತ್ರದಿಂದ ಡಾ.ಎಂ.ಆರ್.ವಿ.ಪ್ರಸಾದ್ ಸ್ಪರ್ಧಿಸಿದ್ದರು ಮತ್ತು 26,272 ಮತಗಳನ್ನು ಪಡೆದಿದ್ದರು. ಈ ಬಾರಿ ಅಭ್ಯರ್ಥಿಯನ್ನು ಬದಲಾವಣೆ ಮಾಡಲಾಗಿದೆ.
ಡಿ.ಎ.ಗೋಪಾಲ್
ಕೆ.ಆರ್.ಪುರಂ ಕ್ಷೇತ್ರದಲ್ಲಿಯೂ ಅಭ್ಯರ್ಥಿಯನ್ನು ಜೆಡಿಎಸ್ ಬದಲಾವಣೆ ಮಾಡಿದೆ. ಈ ಬಾರಿ ಡಿ.ಎ.ಗೋಪಾಲ್ ಅವರಿಗೆ ಟಿಕೆಟ್ ನೀಡಲಾಗಿದೆ. ಕಳೆದ ಬಾರಿ ಜೆ.ರವಿಪ್ರಕಾಶ್ ಅವರು ಅಭ್ಯರ್ಥಿಯಾಗಿದ್ದರು, ಚುನಾವಣೆಯಲ್ಲಿ 3,955 ಮತಗಳನ್ನು ಪಡೆದಿದ್ದರು.
ಚಂದ್ರಣ್ಣ
ಬ್ಯಾಟರಾಯನಪುರ ಕ್ಷೇತ್ರದಲ್ಲಿಯೂ ಅಭ್ಯರ್ಥಿಯನ್ನು ಬದಲಾವಣೆ ಮಾಡಲಾಗಿದೆ. ಈ ಬಾರಿಯ ಚುನಾವಣೆಗೆ ಚಂದ್ರಣ್ಣ ಅಭ್ಯರ್ಥಿಯಾಗಿದ್ದಾರೆ. 2013ರ ಚುನಾವಣೆಯಲ್ಲಿ ಹನುಮಂತೇಗೌಡ ಅವರು ಅಭ್ಯರ್ಥಿಯಾಗಿದ್ದರು ಮತ್ತು 41,360ಮತಗಳನ್ನು ಪಡೆದಿದ್ದರು.
ಮಂಜುನಾಥ
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿಯೂ ಅಭ್ಯರ್ಥಿಯನ್ನು ಬದಲಾವಣೆ ಮಾಡಲಾಗಿದೆ. ಈ ಬಾರಿ ಮಂಜುನಾಥ ಅವರಿಗೆ ಟಿಕೆಟ್ ನೀಡಲಾಗಿದೆ. ಕಳೆದ ಚುನಾವಣೆಯಲ್ಲಿ ಬಿ.ಆಂದಾನಪ್ಪ ಅವರು ಕ್ಷೇತ್ರದಿಂದ ಸ್ಪರ್ಧಿಸಿ 43,049 ಮತಗಳನ್ನು ಪಡೆದಿದ್ದರು.
ಹನುಮಂತೇಗೌಡ
ಹೆಬ್ಬಾಳ ಕ್ಷೇತ್ರದಲ್ಲಿಯೂ ಅಭ್ಯರ್ಥಿಯನ್ನು ಬದಲಾವಣೆ ಮಾಡಲಾಗಿದೆ. ಹನುಮಂತೇ ಗೌಡ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ. ಕಳೆದ ಬಾರಿ ಅಬ್ದುಲ್ ಅಜೀಮ್ ಅಭ್ಯರ್ಥಿಯಾಗಿದ್ದರು. 25,073 ಮತಗಳನ್ನು ಪಡೆದಿದ್ದರು.
ಅನ್ವರ್ ಶರೀಫ್
ಸರ್ವಜ್ಞ ನಗರ ಕ್ಷೇತ್ರಕ್ಕೆ ಅನ್ವರ್ ಶರೀಫ್ ಅಭ್ಯರ್ಥಿಯಾಗಿದ್ದಾರೆ. 2013ರ ಚುನಾವಣೆಯಲ್ಲಿ 7,711 ಮತಗಳನ್ನು ಪಡೆದಿದ್ದರು. ಈ ಬಾರಿಯ ಚುನಾವಣೆಯಲ್ಲಿಯೂ ಅವರಿಗೆ ಟಿಕೆಟ್ ನೀಡಲಾಗಿದೆ.
ನಾರಾಯಣ ಸ್ವಾಮಿ
ಗಾಂಧಿನಗರ ಕ್ಷೇತ್ರಕ್ಕೆ ನಾರಾಯಣಸ್ವಾಮಿ ಅವರು ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಕಳೆದ ಚುನಾವಣೆಯಲ್ಲಿ ಸುಭಾಷ್ ಭರಣಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ಬಾರಿ ಅಭ್ಯರ್ಥಿಯನ್ನು ಬದಲಾವಣೆ ಮಾಡಲಾಗಿದೆ. 2013ಚುನಾವಣೆಯಲ್ಲಿ ಸುಭಾಷ್ ಭರಣಿ 7,418 ಮತಗಳನ್ನು ಪಡೆದಿದ್ದರು.