ಹೊಳಲ್ಕೆರೆ ಕ್ಷೇತ್ರ: ಪರಿಶಿಷ್ಟ ಜಾತಿ ಮತಗಳೇ ಮುಖ್ಯ
ಪರಿಶಿಷ್ಟ ಜಾತಿ ಸಮುದಾಯಕ್ಕೆ ಮೀಸಲಾದ ಏಕೈಕ ಕ್ಷೇತ್ರವಿದು. ಹೇಳಿಕೇಳಿ ಹಾಲಿ ಸಚಿವ ಎಚ್. ಆಂಜನೇಯ ಅವರ ಕ್ಷೇತ್ರ.
ಸಚಿವ ಆಂಜನೇಯ ಅವರ ಈ ಕ್ಷೇತ್ರದಲ್ಲಿ ಸದ್ಯದ ರಾಜಕೀಯ ಪರಿಸ್ಥಿತಿ ಅವರಿಗೆ ಈ ಹಿಂದಿನಂತೆ ಅನುಕೂಲಕರವಾಗಿಲ್ಲ ಎನ್ನಲಾಗುತ್ತಿದೆ. ಲಾಗಾಯ್ತಿನಿಂದ ಅವರ ಬೆಂಬಲಕ್ಕೆ ನಿಂತಿದ್ದ ಅವರದೇ ಜನಾಂಗವಾದ ಮಾದಿಗರು ಈ ಬಾರಿ ಅವರ ಕೈ ಹಿಡಿಯಲು ಹಿಂದೇಟು ಹಾಕುತ್ತಿದ್ದಾರೆಂದು ಹೇಳಲಾಗಿದೆ.
2013 ಫಲಿತಾಂಶ: ಗೆದ್ದವರು, ಸೋತವರ ವಿವರ
ಜಿಲ್ಲಾ ಉಸ್ತುವಾರಿ ಸಚಿವರಾದರೂ ಆಂಜನೇಯ ಸ್ವಕ್ಷೇತ್ರಕ್ಕೆ, ಸ್ವ ಜನತೆಗೆ ಯಾವುದೇ ಸಹಾಯ ಮಾಡಿಲ್ಲ ಎಂಬ ಆರೋಪ ಅವರ ವಿರುದ್ಧ ಪ್ರಮುಖವಾಗಿ ಕೇಳಿಬರುತ್ತಿದೆ.
ಇದರ ಫಲವಾಗಿಯೇ, ಇದೇ ಕ್ಷೇತ್ರದ ಮತ್ತೊಬ್ಬ ನಾಯಕ ಜೆಜೆ ಹಟ್ಟಿ ತಿಪ್ಪೇಸ್ವಾಮಿ ಅವರ ಕಡೆಗೆ ಮಾದಿಗ ಸಮುದಾಯದ ಪ್ರೀತಿ ಹೆಚ್ಚಾಗುತ್ತಿದ್ದು, ಇದು ಆಂಜನೇಯ ಅವರಿಗೆ ಪರ್ಯಾಯ ನಾಯಕರಾಗಿ ತಿಪ್ಪೇಸ್ವಾಮಿ ಅವರನ್ನು ಬೆಳೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಇನ್ನು, ಇದೇ ಕ್ಷೇತ್ರದಲ್ಲಿ ಹಿಂದಿನಿಂದಲೂ ಆಂಜನೇಯ ಅವರ ಪ್ರಬಲ ಎದುರಾಳಿಗಳಾಗಿರುವ ಎ.ವಿ. ಉಮಾಪತಿ, ಎಂ. ಚಂದ್ರಪ್ಪ (ಬಿಜೆಪಿ ನಾಯಕ) ಸೇರಿದಂತೆ, ತಿಪ್ಪೇಸ್ವಾಮಿ ಅವರಿಂದಲೂ ಆಂಜನೇಯ ಅವರಿಗೆ ಪ್ರಬಲ ಸ್ಪರ್ಧೆ ಎದುರಾಗಲಿದ್ದು, ಚುನಾವಣೆಯಲ್ಲಿ ಆಂಜನೇಯ ಅವರಿಗೆ ಇದು ದೊಡ್ಡ ಸವಾಲಾಗಿ ಪರಿಣಮಿಸಲಿದೆ.
ಇಷ್ಟಕ್ಕೇ ಮುಗಿದಿಲ್ಲ. ಕಳೆದ ಬಾರಿ ಜೆಡಿಎಸ್ ವತಿಯಿಂದ ಸ್ಪರ್ಧಿಸಿ ಸೋಲುಕಂಡಿದ್ದ ಕೆಇಬಿ ಮಹದೇವಪ್ಪ ಮತ್ತೆ ಟಿಕೆಟ್ ಗೆ ಪ್ರಯತ್ನ ನಡೆಸಲು ಯತ್ನಿಸಿದ್ದಾರೆ. ಇವರ ಜತೆಗೆ, ಕ್ಷೇತ್ರದ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ದುಗ್ಗಪ್ಪ ಅವರ ಪುತ್ರ ಜಯಪ್ರಕಾಶ್ ದುಗ್ಗಪ್ಪ ಅವರೂ ಜೆಡಿಎಸ್ ನಿಂದ ಸ್ಪರ್ಧೆಗಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಅಲ್ಲಿಗೆ, ಆಂಜನೇಯರಿಗೆ ಈ ಬಾರಿ ಸ್ಪರ್ಧೆ ತುಸು ಜೋರಾಗಿಯೇ ಎಂದರ್ಥವಲ್ಲವೇ?
2013ರ ಚುನಾವಣೆ ಫಲಿತಾಂಶ : 2013ರಲ್ಲಿ ಶೇ 79. 78ರಷ್ಟು ಮತದಾನವಾಗಿತ್ತು. ಕಾಂಗ್ರೆಸ್ ಪಕ್ಷದ ಎಚ್ ಆಂಜನೇಯ ಅವರು 76,856 ಮತಗಳನ್ನು ಪಡೆದು ಜಯ ಗಳಿಸಿದ್ದರು . ಕೆಜೆಪಿ ಯಿಂದ ಸ್ಪರ್ಧಿಸಿದ್ದ ಎಂ ಚಂದ್ರಪ್ಪ ಅವರು 63,992 ಮತ ಗಳಿಸಿ ಸೋಲು ಕಂಡಿದ್ದರು. 12, 864 ಮತಗಳು (ಶೇ 7.89ರಷ್ಟು) ಗೆಲುವಿನ ಅಂತರದಿಂದ ಆಂಜನೇಯ ಗೆದ್ದು ಸಚಿವರಾದರು.