ರಾಜ್ಯ ರೈತ ಸಂಘದಿಂದ 50ರ ಬದಲು 12 ಕ್ಷೇತ್ರದಲ್ಲಿ ಸ್ಪರ್ಧೆ
ಬೆಂಗಳೂರು, ಏಪ್ರಿಲ್ 27: ಕರ್ನಾಟಕ ರಾಜ್ಯ ರೈತ ಸಂಘ(ಕೆಆರ್ ಆರ್ ಎಸ್) ವಿಧಾನಸಭೆ ಚುನಾವಣೆ 2018ರಲ್ಲಿ ಕನಿಷ್ಟ 50 ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿಯಲು ನಿರ್ಧರಿಸಿತ್ತು. ಆದರೆ, ಈಗ 12 ಕ್ಷೇತ್ರಗಳಲ್ಲಿ ಮಾತ್ರ ರೈತ ಸಂಘದ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ 12 ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರವು ರೈತರ ಸಾಲಮನ್ನಾ ಮಾಡುವಲ್ಲಿ ವಿಫಲವಾಗಿದೆ. ರೈತರ ಸಮಸ್ಯೆಯ ಪರಿಹಾರಕ್ಕಾಗಿ ಚುನಾವಣೆ ಎದುರಿಸಿ ಶಾಸಕರಾಗಬೇಕಾಗಿದೆ. ರೈತ ಪರ ಹೋರಾಟಕ್ಕೆ ಬೆಲೆ ಸಿಗುತ್ತಿಲ್ಲ. ರೈತರೇ ವಿಧಾನಸಭೆ ಪ್ರವೇಶಿಸುವುದು ಅನಿವಾರ್ಯವಾಗಿದೆ ಎಂದು ಚಂದ್ರಶೇಖರ್ ಹೇಳಿದರು.
ರೈತ ಸಂಘದ ಅಭ್ಯರ್ಥಿಗಳು:
- ಬೆಳಗಾವಿ ಗ್ರಾಮಾಂತರ: ಜಯಶ್ರೀ ಗುಳಣ್ಣನವರ್
- ಕುಣಿಗಲ್: ಆನಂದ
- ಜಗಳೂರು : ಬಸವರಾಜು ಗೋಶಾಲೆ
- ಚನ್ನಗಿರಿ: ರುದ್ರೇಶ್
- ಚಿಕ್ಕನಾಯಕನಹಳ್ಳಿ: ಸತೀಶ್ ಕೆಂಕೆರೆ
- ಯಾದಗಿರಿ: ಸುಭಾಷ್ ಹೈಕೂರ್
- ಕಡೂರು: ಪ್ರದೀಪ್
- ಅರಬಾವಿ : ಚೂಣಪ್ಪ ಪೂಜೇರಿ
- ಕಿತ್ತೂರು: ರಾಘವೇಂದ್ರ ವಿಲಾಸ್ ನಾಯಕ
- ರಾಯಭಾಗ : ತ್ಯಾಗರಾಜ
- ಮುಧೋಳ : ಬಸಂತ ಕಾಂಬಳೆ
- ತೇರದಾಳ : ಗಂಗಾಧರ್ ಮೇಟಿ
ರೈತರ ಸಮಸ್ಯೆಗಳ ಪರಿಹಾರ ನೀಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿದೆ. ಚುನಾವಣೆಯನ್ನು ರೈತ ಸಂಘ ಚಳವಳಿಯನ್ನಾಗಿ ಸ್ವೀಕರಿಸಿದ್ದು, ಸಂಘಟನೆಯಿಂದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಆಸಕ್ತ ರೈತರು ಸಂಘದಲ್ಲಿ ಅರ್ಜಿ ಪಡೆದು, ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ತಿಳಿಸಿದರು.