ದೇಗುಲಗಳ ನಾಡು ಉಡುಪಿ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳು
ಉಡುಪಿ, ಮಾರ್ಚ್ 8: ದ್ವೈತ ಸಿದ್ಧಾಂತದ ಪ್ರವರ್ತಕ ಆಚಾರ್ಯ ಮಧ್ವರು ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪನೆಗೈದ ಸ್ಥಳ ಉಡುಪಿ. ಈ ಪುಣ್ಯಕ್ಷೇತ್ರ ಧಾರ್ಮಿಕವಾಗಿ ವಿಶ್ವಮಾನ್ಯವಾಗಿದ್ದು ಮಾತ್ರವಲ್ಲ, ಇಲ್ಲಿನ ಮಣಿಪಾಲ ವೈದ್ಯಕೀಯ ಶಿಕ್ಷಣ ರಂಗದಲ್ಲಿಯೂ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ.
ತುಳು ಮಾತನಾಡುವ ಜನ ಉಡುಪಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜತೆಗೆ ಕುಂದಗನ್ನಡ ಭಾಷೆಯನ್ನು ಕುಂದಾಪುರ ಭಾಗದಲ್ಲಿ ಮಾತನಾಡುತ್ತಾರೆ. ಒಂದೆಡೆ ಕಡಲು ಇನ್ನೊಂದೆಡೆ ಪಶ್ಚಿಮ ಘಟ್ಟದ ಸಾಲು ಇವುಗಳ ನಡುವೆ ಪ್ರಕೃತಿ ಮೈಸಿರಿಯನ್ನು ತುಂಬಿಕೊಂಡಿರುವ ಉಡುಪಿ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳು
ಉಡುಪಿ ಜಿಲ್ಲೆ 7 (ಹೊಸ ನಾಲ್ಕು ತಾಲೂಕುಗಳು ಸೇರಿ) ತಾಲೂಕು ಹಾಗು 5 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಈ ಜಿಲ್ಲೆಯಲ್ಲಿ ಬ್ರಾಹ್ಮಣ, ಬಂಟ (ಶೆಟ್ಟಿ), ಬಿಲ್ಲವ, ಮತ್ತು ಕೊಂಕಣಿ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಬಹು ಸಂಸ್ಕೃತಿಯ ತೊಟ್ಟಿಲು
ಇನ್ನು ಯಕ್ಷಗಾನ, ಭೂತಕೋಲವಿಲ್ಲದ ಉಡುಪಿಯನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷೆಯೇ ಆಗಲಿ, ಪಿಯುಸಿ ಪರೀಕ್ಷೆಯೇ ಆಗಲಿ ಪ್ರತಿವರ್ಷ ಉಳಿದೆಲ್ಲ ಜಿಲ್ಲೆಗಳನ್ನು ಹಿಂದೂಡುತ್ತದೆ ಈ ಜಾಣರ ಜಿಲ್ಲೆ ಉಡುಪಿ.
ದೇವಾಲಯಗಳ ನಗರಿ ಉಡುಪಿಯ ರಾಜಕೀಯಕ್ಕೆ ತನ್ನದೇ ಆದ ಇತಿಹಾಸವಿದೆ. ವಿ.ಎಸ್. ಆಚಾರ್ಯ, ಯು.ಆರ್. ಸಭಾಪತಿ , ಮನೋರಮಾ ಮಧ್ವರಾಜ್ ರಂಥಹ ಘಟಾನುಘಟಿ ರಾಜಕಾರಣಿಗಳು ಈ ಜಿಲ್ಲೆಯಿಂದ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
2013ರ ಫಲಿತಾಂಶ
ಕಳೆದ ಚುನಾವಣೆಯಲ್ಲಿ ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರಗಳ ಪೈಕಿ 3 ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೆ, 1 ರಲ್ಲಿ ಬಿಜೆಪಿ ಹಾಗೂ ಕುಂದಾಪುರದಲ್ಲಿ ಪಕ್ಷೇತರ ಅಭ್ಯಾರ್ಥಿಯಾಗಿ ಕಣಕ್ಕಿಳಿದಿದ್ದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಗೆಲುವು ಸಾಧಿಸಿದ್ದರು.
ಈ ಬಾರಿ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಕಳೆದ ಬಾರಿಯ ಕ್ಷೇತ್ರಗಳನ್ನು ಉಳಿಸಿಕೊಳ್ಳುತ್ತಾ ಅಥವಾ ಬಿಜೆಪಿ ರಣತಂತ್ರ ರೂಪಿಸಿ ಮತ್ತಷ್ಟು ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುತ್ತಾ ನೋಡಬೇಕು. ಇನ್ನು ಜಿಲ್ಲೆಯಲ್ಲಿ ಜೆಡಿಎಸ್ ನದು ಆಟಕ್ಕುಂಟು ಆದರೆ ಲೆಕ್ಕಕ್ಕಿಲ್ಲದ ಪರಿಸ್ಥಿತಿ.
ಶಿವಮೊಗ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳು
ಜಿಲ್ಲೆಯ ಮಾಹಿತಿ
ಜಿಲ್ಲೆಯ ಒಟ್ಟು ವಿಸ್ತೀರ್ಣ: 3880 ಚದರ ಕಿ.ಮೀ.
ಜನಸಂಖ್ಯೆ : 11.78 ಲಕ್ಷ (2011ರ ಜನಗಣತಿಯಂತೆ)
ತಾಲೂಕುಗಳು : ಉಡುಪಿ, ಕಾರ್ಕಳ , ಕುಂದಾಪುರ, ಕಾಪು, ಬೈಂದೂರು, ಬ್ರಹ್ಮಾವರ, ಹೆಬ್ರಿ
ಪ್ರಮುಖ ಭಾಷೆಗಳು: ಕನ್ನಡ, ತುಳು, ಕೊಂಕಣಿ, ಕುಂದಗನ್ನಡ
ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು : 5 (ಉಡುಪಿ, ಕುಂದಾಪುರ, ಕಾರ್ಕಳ, ಬೈಂದೂರು, ಕಾಪು)
ಹಾಲಿ ಶಾಸಕರು
ಉಡುಪಿ: ಪ್ರಮೋದ್ ಮಧ್ವರಾಜ್ (ಕಾಂಗ್ರೆಸ್)
ಬೈಂದೂರು: ಗೋಪಾಲ್ ಪೂಜಾರಿ (ಕಾಂಗ್ರೆಸ್)
ಕುಂದಾಪುರ: ಹಾಲಾಡಿ ಶ್ರೀನಿವಾಸ ಶೆಟ್ಟಿ (ಪಕ್ಷೇತರ - ಸದ್ಯ ಬಿಜೆಪಿ)
ಕಾಪು: ವಿನಯ್ ಕುಮಾರ್ ಸೊರಕೆ (ಕಾಂಗ್ರೆಸ್)
ಕಾರ್ಕಳ: ಸುನೀಲ್ ಕುಮಾರ್ (ಬಿಜೆಪಿ)
ಕ್ಷೇತ್ರ ಪರಿಚಯ: ಉಡುಪಿಯಲ್ಲಿ ಮಧ್ವರಾಜ್ ಗೆ ಮತ್ತೆ ಗೆಲ್ಲುವ ತವಕ
ಪ್ರಮುಖ ಸಮಸ್ಯೆಗಳು
ಜಿಲ್ಲೆಯ ಅನೇಕ ಭಾಗ ಅಭಿವೃದ್ದಿ ಹೊಂದಿದ್ದರೂ, ಅಭಿವೃದ್ದಿಯ ಕನಸು ಕಾಣುತ್ತಿರುವ ಪ್ರದೇಶಗಳಿಗೇನೂ ಉಡುಪಿಯಲ್ಲಿ ಬರವಿಲ್ಲ. ಒಂದೆಡೆ ಮೀನುಗಾರರ ಸಮಸ್ಯೆಯಾದರೆ ಇನ್ನೊಂದೆಡೆ ಹೈವೇ ಕಾಮಗಾರಿಯ ಸಮಸ್ಯೆ. ಅದರ ಜೊತೆ ಎಸ್.ಇ.ಝಡ್, ಮರಳಿನ ಸಮಸ್ಯೆ ಜನರನ್ನು ಕಾಡುತ್ತಿದೆ.
ಮೀನುಗಾರರಿಗೆ ಸವಲತ್ತು, ಬೋಟುಗಳ ನಿಲ್ದಾಣ ಸೇರಿದಂತೆ ಕಡಲ ಮಕ್ಕಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಳೆದ 5ವರ್ಷಗಳಿಂದ ಕಾಮಗಾರಿ ಕುಂಟುತಾ ಸಾಗುತ್ತಿರುವ ಹೈವೇಯಲ್ಲಿ ನಿತ್ಯ ಅಪಘಾತಗಳು ಕೂಡಾ ನಡೆಯುತ್ತಿವೆ.
ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರ
ಕಾಪು ಪರಿಸರಕ್ಕೆ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರ ಬಂದ ನಂತರ ಇಲ್ಲಿನ ಜನರ ಸಮಸ್ಯೆ ಆರಂಭವಾಗಿದೆ. ಇದೀಗ ಅದಾನಿ ಕಂಪೆನಿ ಖರೀದಿಸಿರುವ ಈ ವಿದ್ಯುತ್ ಸ್ಥಾವರದಿಂದ ಜನರು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಜನರು ತಮ್ಮ ಭೂಮಿ, ಮನೆಗಳನ್ನು ಕಳೆದುಕೊಂಡಿದ್ದಾರೆ. ವಾತಾವರಣ ಕಲುಷಿತಗೊಂಡು ಆರೋಗ್ಯದ ಸಮಸ್ಯೆ ಉಂಟಾಗಿದೆ. ಇಷ್ಟಾದರೂ ಈ ಭಾಗದಲ್ಲಿ ಇನ್ನಷ್ಟು ಕೈಗಾರಿಕೆಗಳು ಸ್ಥಾಪನೆ ಆಗುತ್ತಿರುವುದು ಜನರ ನಿದ್ದೆಗೆಡಿಸಿದೆ.
ಕ್ಷೇತ್ರ ಪರಿಚಯ: ಕಾಪುವಿನಲ್ಲಿ ಬಿಜೆಪಿ-ಕಾಂಗ್ರೆಸ್ ಇಬ್ಬರಿಗೂ ಸಮಾನ ಅವಕಾಶ
ನಕ್ಸಲ್ ಚಟುವಟಿಕೆ
ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆಗಳು ಆಗಾಗ ಸದ್ದು ಮಾಡುತ್ತಲೇ ಇರುತ್ತವೆ. ಕಳೆದ 2 ವರ್ಷಗಳಲ್ಲಿ ನಕ್ಸಲ್ ಚಟುವಟಿಕೆ ಇಲ್ಲವಾದರೂ ಸಹ ಪೊಲೀಸರ ನಿರಂತರ ಕೂಬಿಂಗ್ ಕಾರ್ಯಾಚರಣೆ ನಡೆಯುತ್ತಾ ಇರುತ್ತದೆ. ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ದಿ ದೊಡ್ದ ಸವಾಲಾಗಿದೆ. ಇದಕ್ಕೆ ಕಾರಣ ಕೇಂದ್ರ ಸರಕಾರದ ಅಧೀನಕ್ಕೆ ಬರುವ ಅರಣ್ಯ ಪ್ರದೇಶವಾಗಿರುವುದು.
ಪೂರ್ಣಗೊಳ್ಳದ ವಾರಾಹಿ ಯೋಜನೆ
ಉಡುಪಿ ಜಿಲ್ಲೆಯ ವಾರಾಹಿ ನೀರಿನ ಯೋಜನೆ ಮಾತ್ರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. 30ವರ್ಷಗಳಿಂದ ಬರೇ ಕಾಮಗಾರಿಯೇ ನಡೆಯುತ್ತಿತ್ತು. ಆದರೆ ಈ ಬಾರಿ ವಾರಾಹಿಯಿಂದ ನೀರು ಹರಿಯಲು ಆರಂಭವಾಗಿದೆ. ಹೀಗಿದ್ದರೂ ವಾರಾಹಿ ನೀರಾವರಿ ಯೋಜನೆ ಸಂಪೂರ್ಣವಾಗಿಲ್ಲ. ಅರ್ಧಂಬರ್ದ ಯೋಜನೆ ಪೂರ್ಣಗೊಳಿಸಲಾಗಿದೆ, ಎಡದಂಡೆ, ಬಲದಂಡೆಯ ಯೋಜನೆಗಳು ಪೂರ್ತಿಯಾಗಿಲ್ಲ.