ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಣ್ಣು ಕೋರೈಸುವ ಬೆಳಕು, ಕೆಲವೆಡೆ ಕತ್ತಲು
ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿ ಹೇಗಿದೆಯೆಂದರೆ ನಗರ ಕ್ಷೇತ್ರವನ್ನು ತಬ್ಬಿ ಹಿಡಿದಂತೆ ಹಂಚಿಹೋಗಿದೆ. ಸತತ ಎರಡು ಬಾರಿ ಬಿಜೆಪಿಯ ಸುರೇಶ್ ಗೌಡ ಇಲ್ಲಿ ಶಾಸಕರಾಗಿದ್ದಾರೆ. ಕಳೆದ ಬಾರಿಯಂತೂ ಜೆಡಿಎಸ್ ನಿಂದ ಡಿ.ಸಿ.ಗೌರಿಶಂಕರ್ (ಮಾಜಿ ಸಚಿವ ಸಿ.ಚನ್ನಿಗಪ್ಪ ಅವರ ಮಗ) ಗೆದ್ದೇ ಬಿಟ್ಟರೇನೋ ಎಂಬಂತೆ ಸ್ಪರ್ಧೆ ನೀಡಿದರು.
ಸುರೇಶ್ ಗೌಡರು ಈ ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳ ಬಗ್ಗೆ ಎರಡು ರೀತಿಯ ಅಭಿಪ್ರಾಯ ಇದೆ. ಹೆಬ್ಬೂರು, ನಾಗವಲ್ಲಿ ಕಡೆ ಅಜೀರ್ಣ ಆಗುವಷ್ಟು ಕೆಲಸ ಆಗಿದ್ದರೆ, ಕೊರಟಗೆರೆ ಕಡೆಯ ಭಾಗದಲ್ಲಿ ಬರುವ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಬಗ್ಗೆ ಮಲತಾಯಿ ಧೋರಣೆ ಮಾಡುತ್ತಾರೆ ಎಂಬ ಆರೋಪ ಇದೆ.
ತುಮಕೂರು ಕ್ಷೇತ್ರ: ಅಂಗೈ ಅಗಲದ ನಗರಕ್ಕೆ ಮೂಲಸೌಕರ್ಯ ಮೈನಸ್
ಈ ಕ್ಷೇತ್ರದಲ್ಲಿ ವ್ಯವಸಾಯ ಮುಖ್ಯ ಕಸುಬು. ಒಕ್ಕಲಿಗರು, ಲಿಂಗಾಯತರ ಮತಗಳು ಮುಖ್ಯವಾದವು. ಬಿಜೆಪಿ ಹಾಗೂ ಜೆಡಿಎಸ್ ಮಧ್ಯೆಯೇ ಪೈಪೋಟಿ- ಜಿದ್ದಾಜಿದ್ದಿ ಎಲ್ಲ. ಕಾಂಗ್ರೆಸ್ ಗೆ ಈ ವರೆಗೆ ಅಂಥ ನೆಲೆಯಿಲ್ಲ. ಆದರೆ ಈ ಬಾರಿ ಆ ಮಾತಿನಿಂದ ಕಳಚಿಕೊಂಡು ಆಚೆ ಬರುವ ಸಾಧ್ಯತೆ ಇದೆ ಎಂಬುದು ಆ ಪಕ್ಷದ ನಾಯಕರ ಮಾತು.
ಈ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯಾಗಬೇಕು. ಕೆರೆಗಳಿಗೆ ನೀರು ತುಂಬಿಸುವುದು, ಸಾರಿಗೆ ಸಂಪರ್ಕ, ಉತ್ತಮ ರಸ್ತೆ ಇಲ್ಲಿನ ಜನರ ಅಗತ್ಯವಾಗಿತ್ತು. ಈ ವಿಚಾರದಲ್ಲಿ ಸುರೇಶ್ ಗೌಡರ ಕಾರ್ಯ ವೈಖರಿ ಬಗ್ಗೆ ಬೆರಳು ಮಡಚುವಂತಿಲ್ಲ. ಆದರೆ ಅವರ ಮೇಲೆ ಪಕ್ಷಪಾತ ಮಾಡಿದ್ದಾರೆ ಎಂಬ ಮಾತಿದೆ. ಜತೆಗೆ ಸುರೇಶ್ ಗೌಡರ ಮಾತು ಒರಟು, ಮೊದಲ ಅವಧಿಯಲ್ಲಿ ಇದ್ದ ಆಸಕ್ತಿ ಈ ಬಾರಿ ಇಲ್ಲ ಎಂಬುದು ಕೂಡ ಸ್ಥಳೀಯರ ಆರೋಪ.
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ನಿಂದ ಡಿ.ಸಿ.ಗೌರಿಶಂಕರ್, ಕಾಂಗ್ರೆಸ್ ನಿಂದ ರವಿ ಹಾಗೂ ಬಿಜೆಪಿಯಿಂದ ಸುರೇಶ್ ಗೌಡ ಕಣದಲ್ಲಿದ್ದಾರೆ. ಈ ಭಾಗದ ಪ್ರಮುಖ ಮುಖಂಡ ಎಚ್.ನಿಂಗಪ್ಪ ಅವರನ್ನು ಜೆಡಿಎಸ್ ಗೆ ಸೆಳೆಯುವಲ್ಲಿ ಕುಮಾರಸ್ವಾಮಿ ಅವರು ಯಶಸ್ವಿ ಆಗಿದ್ದಾರೆ. ಇದು ಗೌರಿಶಂಕರ್ ಗೆ ಬಲ ತರುವುದರಲ್ಲಿ ಅನುಮಾನವಿಲ್ಲ.
ತುಮಕೂರು ಗ್ರಾಮಾಂತರ ಕ್ಷೇತ್ರ ಅಂದರೆ ನೀರು ನೀರು ನೀರು. ಇಲ್ಲಿನ ಮತದಾರರ ಆದ್ಯತೆಯೇ ನೀರು. ಇದೇ ವಿಚಾರವಾಗಿ ಮತ ಕೇಳಲು ಬಂದಾಗ ಮುಖಂಡರು ಮುಜುಗರದ ಪರಿಸ್ಥಿತಿ ಎದುರಿಸಿದ್ದೂ ಇದೆ. ಇನ್ನು ತುಮಕೂರು ನಗರ ಕ್ಷೇತ್ರದಿಂದ ಸೊಗಡು ಶಿವಣ್ಣ ಅವರಿಗೆ ಬಿಜೆಪಿಯ ಟಿಕೆಟ್ ತಪ್ಪಿರುವುದು ಸ್ವಲ್ಪ ಮಟ್ಟಿಗೆ ಸುರೇಶ್ ಗೌಡ ಅವರಿಗೂ ಬಿಸಿ ತಾಗುತ್ತದೆ ಎಂಬ ಮಾತಿದೆ.