ಕೊರಟಗೆರೆ ಕ್ಷೇತ್ರದಲ್ಲಿ ಲಕ್ಷ್ಮಿದೇವಿ ದೇವಾಲಯ ಫೇಮಸ್, ಸೌಕರ್ಯ ಮೈನಸ್
ತುಮಕೂರು ಜಿಲ್ಲೆ ವ್ಯಾಪ್ತಿಯಲ್ಲಿನ ಕೊರಟಗೆರೆ ವಿಧಾನಸಭೆ ಕ್ಷೇತ್ರ ತುಂಬ ಚಿಕ್ಕ ಕ್ಷೇತ್ರ. ಇಲ್ಲಿನ ಶಾಸಕರು ಜೆಡಿಎಸ್ ನ ಸುಧಾಕರ್ ಲಾಲ್. ಕಳೆದ ವಿಧಾನಸಭೆ ಚುನಾವಣೆ ನಂತರ ಇಡೀ ಕರ್ನಾಟಕದಲ್ಲಿ ಖ್ಯಾತಿ ಪಡೆದವರು ಈ ಸುಧಾಕರ್ ಲಾಲ್. ಅದಕ್ಕೆ ಕಾರಣ ಏನೆಂದರೆ, ಕೆಪಿಸಿಸಿ ಅಧ್ಯಕ್ಷ- ಮುಖ್ಯಮಂತ್ರಿ ಸ್ಥಾನದ ರೇಸಿನಲ್ಲಿದ್ದ ಡಾ.ಜಿ.ಪರಮೇಶ್ವರ ಅವರನ್ನೇ ಸೋಲಿಸಿಬಿಟ್ಟರು.
ಆದರೆ, ಸುಧಾಕರ್ ಲಾಲ್ ಜನರ ಕೈಗೆ ಸಿಗುತ್ತಾರೆ ಎಂಬ ಮಾತಿದ್ದರೂ ಕ್ಷೇತ್ರದಲ್ಲಿ ಅಂಥ ಅಭಿವೃದ್ಧಿ ಕೆಲಸ ಆಗಿಲ್ಲ ಎಂಬ ಅಸಮಾಧಾನ ಇದೆ. ಇನ್ನು ಈ ಬಾರಿಯೂ ಜೆಡಿಎಸ್ ನಿಂದ ಸುಧಾಕರ್ ಲಾಲ್ ಹಾಗೂ ಕಾಂಗ್ರೆಸ್ ನಿಂದ ಪರಮೇಶ್ವರ್ ಅಭ್ಯರ್ಥಿ. ಬಿಜೆಪಿಯಿಂದ ವೈ.ಎಚ್.ಹುಚ್ಚಯ್ಯ ಕಣದಲ್ಲಿದ್ದಾರೆ.
ಕೊರಟಗೆರೆಯಲ್ಲಿ ಗೆಲುವು ಯಾರಿಗೆ? ಇದು ಟಾರೋ ಕಾರ್ಡ್ ಭವಿಷ್ಯ
ಇನ್ನು ಜೆಡಿಎಸ್ ನೊಳಗೆ ಸುಧಾಕರ್ ಬಗ್ಗೆ ಅಸಮಾಧಾನ ಇದೆ ಎಂಬ ಮಾತುಗಳಿವೆ. ಜೆಡಿಎಸ್ ಜಿಲ್ಲಾಧ್ಯಕ್ಷ ಚೆನ್ನಿಗಪ್ಪ ಅವರಿಗೆ ಈ ಕ್ಷೇತ್ರದ ಮೇಲೆ ಹೆಚ್ಚಿನ ಹಿಡಿತವಿದೆ. ಕೊರಟಗೆರೆ ಜಿಲ್ಲಾ ಕೇಂದ್ರಕ್ಕೆ ಹತ್ತಿರವಿದ್ದರೂ ತಾಲೂಕಿನ ಹಲವು ಗ್ರಾಮಗಳಲ್ಲಿ ಇಂದಿಗೂ ಸಂಚಾರ ಸಮಸ್ಯೆಯಿದೆ.
ವಿದ್ಯಾರ್ಥಿಗಳು, ಕೃಷಿಕರು ತುಮಕೂರು ನಗರಕ್ಕೆ ಬರಬೇಕು ಅಂದರೆ ನಿತ್ಯವೂ ಪರದಾಡುವಂಥ ಸ್ಥಿತಿ ಇದೆ. ಈ ಕ್ಷೇತ್ರದಲ್ಲಿ ಬಿಜೆಪಿಗೆ ಅಂಥ ಪ್ರಾಬಲ್ಯವಿಲ್ಲ. ಆದರೆ ಈ ಬಾರಿ ಕುತೂಹಲ ಇರುವುದು ಜೆಡಿಎಸ್ ವರ್ಸಸ್ ಕಾಂಗ್ರೆಸ್ ಅಂತಲೇ. ಗೊರವನಹಳ್ಳಿ ಲಕ್ಷ್ಮಿ ದೇವಸ್ಥಾನ ಬರುವುದು ಇದೇ ತಾಲೂಕು ವ್ಯಾಪ್ತಿಯಲ್ಲಿ.
ಡಾ.ಜಿ.ಪರಮೇಶ್ವರ್ ಈ ಸಲ ಗ್ರಾಮ ವಾಸ್ತವ್ಯ ಕೂಡ ಮಾಡಿದ್ದಾರೆ. ಆದರೆ ಅವರ ಬಗ್ಗೆ ಕ್ಷೇತ್ರದ ಜನತೆಗೆ ಪೂರ್ಣ ಪ್ರಮಾಣದಲ್ಲಿ ನಂಬಿಕೆ ಬಂದಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಮುನಿಸಿಕೊಂಡ ಪರಮೇಶ್ವರ್ ಬಹಳ ಕಾಲ ಇತ್ತ ತಿರುಗಿ ಕೂಡ ನೋಡಿರಲಿಲ್ಲ. ಆ ಕಾರಣಕ್ಕೆ ಜನರಿಗೆ ಅವರ ಬಗ್ಗೆ ಇನ್ನೂ ಗುಮಾನಿ ಇದೆ.
ತುಮಕೂರು ಕ್ಷೇತ್ರ: ಅಂಗೈ ಅಗಲದ ನಗರಕ್ಕೆ ಮೂಲಸೌಕರ್ಯ ಮೈನಸ್
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಧಾಕರ್ ಲಾಲ್ ವಿರುದ್ಧ ಗೆಲುವು ಸಾಧಿಸಿದ್ದು ಹದಿನೆಂಟು ಸಾವಿರ ಮತಗಳ ಅಂತರದಲ್ಲಿ. ಈ ಬಾರಿ ಆ ಪ್ರಮಾಣದ ಮತಗಳನ್ನು ತಮ್ಮ ಕಡೆಗೆ ಸೆಳೆಯುವಲ್ಲಿ ಪರಮೇಶ್ವರ್ ಸಫಲರಾಗುತ್ತಾರಾ ಎಂಬ ಪ್ರಶ್ನೆ ಕೂಡ ಇದೆ.
ರಾಜಕಾರಣದ ವಿಚಾರ ಏನೇ ಇರಬಹುದು. ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಗೆಹರಿಸಬೇಕಾದ ಸಮಸ್ಯೆಗಳು ಸಾಕಷ್ಟಿವೆ. ಮಾನವ -ಪ್ರಾಣಿ ಸಂಘರ್ಷದ ಸಮಸ್ಯೆಯಿದೆ. ಕ್ಷೇತ್ರದ ಕೆಲವು ಕಡೆ ಕರಡಿ ದಾಳಿ ಪ್ರಕರಣಗಳು ವರದಿಯಾಗಿವೆ.