ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದು ಗೆಲ್ಲುವುದು ಸುಲಭವಲ್ಲ!
Recommended Video
ಬೆಂಗಳೂರು, ಜನವರಿ 19: ಕರ್ನಾಟಕ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಗೆ ಪ್ರತಿಷ್ಠೆಯ ಪ್ರಶ್ನೆ. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಂತೂ ಪಕ್ಷವನ್ನು ಗೆಲ್ಲಿಸುವುದು ಮತ್ತು ತಾವು ನಿಂತ ಕ್ಷೇತ್ರದಲ್ಲಿ ಗೆಲ್ಲುವುದು ಎರಡೂ ಅತ್ಯಂತ ಮಹತ್ವದ್ದು. ಕೇವಲ ಬಿಜೆಪಿ, ಜೆಡಿಎಸ್ ಮಾತ್ರವಲ್ಲದೆ ಕಾಂಗ್ರೆಸ್ ನೊಳಗಿನ ಕೆಲವರೇ ಸಿದ್ದರಾಮಯ್ಯನವರನ್ನು ಸೋಲಿಸುವುದಕ್ಕೆ ಹೊಂಚು ಹಾಕುತ್ತಿದ್ದಾರೆ ಎಂಬೆಲ್ಲ ವದಂತಿಗಳ ನಡುವಲ್ಲಿ ಸಿದ್ದರಾಮಯ್ಯನವರ ಮೇಲೆ ಸಾಕಷ್ಟು ಒತ್ತಡ ಹೆಚ್ಚಿದೆ.
ಆದ್ದರಿಂದಲೇ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎಂಬುದು ಕುತೂಹಲ ಹುಟ್ಟಿಸಿದೆ. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ತಮ್ಮ ಸ್ಪರ್ಧೆ ಎಂದು ಹಲವು ಬಾರಿ ಸಿದ್ದರಾಮಯ್ಯ ಸಾರ್ವಜನಿಕವಾಗಿಯೇ ಹೇಳಿದ್ದರೂ, ಕೊನೆಯ ಕ್ಷಣದಲ್ಲಿ ಬದಲಾವಣೆಗಳಾದರೂ ಅಚ್ಚರಿಯಿಲ್ಲ.
ಹೈದರಾಬಾದ್-ಕರ್ನಾಟಕ ಭಾಗದಿಂದ ರಾಹುಲ್ ರಾಜ್ಯ ಪ್ರವಾಸ
2013 ರ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಸಿದ್ದರಾಮಯ್ಯ, ಈ ಬಾರಿ ಆ ಕ್ಷೇತ್ರವನ್ನು ತಮ್ಮ ಮಗ ಯತೀಂದ್ರ ಅವರಿಗೆ ಬಿಟ್ಟು ಕೊಡುತ್ತಾರೆ ಎಂಬ ಸುದ್ದಿಯೂ ಕೇಳಿಬರುತ್ತಿದೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲುವುದು ಸುಲಭವಲ್ಲ
ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸಿದರೆ, ಗೆಲ್ಲುವುದು ಕಷ್ಟವಲ್ಲವಾದರೂ, ತೀರಾ ಸುಲಭವೂ ಅಲ್ಲ. ಇಲ್ಲಿ ಜೆಡಿಎಸ್ ನಿಂದ ಪ್ರಬಲ ಪ್ರತಿಸ್ಪರ್ಧಿಯಾಗಿ ಜಿ.ಟಿ.ದೇವೇಗೌಡ ಸ್ಪರ್ಧಿಸುತ್ತಿರುವುದು ಬಹುತೇಕ ಖಚಿತವಾಗಿರುವುದು ಸಿದ್ದರಾಮಯ್ಯ ಅವರಿಗೆ ಒಂದರ್ಥದಲ್ಲಿ ತಲೆನೋವೇ.
ಸಿದ್ದರಾಮಯ್ಯ ಬಗ್ಗೆ ಎಚ್ಡಿಕೆ ಹೇಳಿದ 'ಆಲಿಬಾಬ ಔರ್ ಚಾಲೀಸ್ ಕಳ್ಳರ' ಕಥೆ
ಬಿಜೆಪಿಯಿಂದ ಶ್ರೀನಿವಾಸ್ ಪ್ರಸಾದ್?!
2017 ರ ಉಪಚುನಾವಣೆಯಲ್ಲಿ ನಂಜನಗೂಡಿನಿಂದ ಸ್ಪರ್ಧಿಸಿ ಸೋತಿದ್ದ ಬಿಜೆಪಿಯ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯನ್ನಾಗಿ ನಿಲ್ಲಿಸಲಾಗುತ್ತದೆ ಎಂಬ ಸುದ್ದಿಯೂ ಅಲ್ಲಲ್ಲಿ ಕೇಳಿಬರುತ್ತಿದೆ. ಆದರೆ ಅನಾರೋಗ್ಯದ ಸಮಸ್ಯೆಯಿಂದಾಗಿ ಅವರು ರಾಜಕೀಯದಿಂದ ಇತ್ತೀಚೆಗೆ ದೂರವೇ ಉಳಿದಿದ್ದು, ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹಲವು ಬಾರಿ ಹೇಳಿದ್ದಾರೆ. ಅಲ್ಲದೆ, ಬಿಜೆಪಿ ಇಲ್ಲಿ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಕಣಕ್ಕಿಳಿಸಲಿದೆ ಎಂಬ ವದಂತಿಯೂ ಹರಡುತ್ತಿರುವುದರಿಂದ ಈ ಕ್ಷೇತ್ರದಲ್ಲಿ ಗೆಲ್ಲುವುದು ಸುಲಭದ ತುತ್ತಾಗಲಾರದು.
ಸಿದ್ದರಾಮಯ್ಯ ಸೋಲಿಸಲು ವಿಶ್ವನಾಥ್ ಪಟ್ಟು
ಕಾಂಗ್ರೆಸ್ ನಿಂದ ಬಂಡಾಯವೆದ್ದು ಜೆಡಿಎಸ್ ಸೇರಿದ ಎಚ್.ವಿಶ್ವನಾಥ್ ಒಂದು ಕಾಲದಲ್ಲಿ ಸಿದ್ದರಾಮಯ್ಯನವರಿಗೆ ಆಪ್ತರಾಗಿದ್ದವರು. ಆದರೆ ಪಕ್ಷದಲ್ಲಿ ತಮ್ಮನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ದೂರಿ, ಕಳೆದ ವರ್ಷ ಜೆಡಿಎಸ್ ಸೇರಿದ್ದರು. ಸಿದ್ದರಾಮಯ್ಯನವರನ್ನು ಸೋಲಿಸುವುದೇ ನನ್ನ ಮೊದಲ ಗುರಿ ಎಂದು ಸಾರ್ವಜನಿಕವಾಗಿಯೇ ಹೇಳುತ್ತಿರುವ ಎಚ್.ವಿಶ್ವನಾಥ್, ಸಿದ್ದರಾಮಯ್ಯ ಅವರಿಗೆ ಮತ್ತೊಂದು ತಲೆನೋವೆನ್ನಿಸಿದ್ದಾರೆ!
ಉತ್ತರ ಕರ್ನಾಟಕದಿಂದಲೂ ಸ್ಪರ್ಧೆ?
ಕೇವಲ ಚಾಮುಂಡೇಶ್ವರಿ ಮಾತ್ರವಲ್ಲದೆ, ಸಿದ್ದರಾಮಯ್ಯ ಉತ್ತರ ಕರ್ನಾಟಕ ಭಾಗದ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ವದಂತಿಯೂ ಹಬ್ಬಿದೆ. ಕೊಪ್ಪಳ, ಬದಾಮಿ, ಬಾಗಲಕೋಟೆ ಗಳಲ್ಲಿ ಯಾವುದಾದರೊಂದು ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸಿದರೆ ಅಚ್ಚರಿಯೇನಿಲ್ಲ.
ಹೆಗಡೆ, ಕೃಷ್ಣ ಹಾದಿ ತುಳಿದ ಸಿದ್ದು?!
ಚುನಾವಣೆಯ ಸಂದರ್ಭದಲ್ಲಿ ಹೀಗೆ ಕ್ಷೇತ್ರ ಬದಲಿಸುವುದು ಮತದಾರರಿಗೆ ತಪ್ಪು ಸಂದೇಶ ನೀಡುವುದು ಸುಳ್ಳಲ್ಲ. ಅದರಲ್ಲೂ ಸ್ವತಃ ಮುಖ್ಯಮಂತ್ರಿ ಹೀಗೆ ಮಾಡುವುದು ಆತ್ಮವಿಶ್ವಾಸದ ಕೊರತೆಯನ್ನೇ ಎತ್ತಿ ತೋರಿಸುತ್ತದೆ. ಕರ್ನಾಟಕದ ರಾಜಕೀಯ ಇತಿಹಾಸ ಕೆಣಕಿದರೆ, ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ(ಉತ್ತರ ಕನ್ನಡದಿಂದ ಬಸವನಗುಡಿಗೆ) ಮತ್ತು ಎಸ್.ಎಂ.ಕೃಷ್ಣ(ಮದ್ದೂರಿನಿಂದ ಚಾಮರಾಜಪೇಟೆಗೆ) ತಮ್ಮ ಕ್ಷೇತ್ರ ಬದಲಿಸಿದ್ದರು.