ಹೊನ್ನಾಳಿ : ರೇಣುಕಾಚಾರ್ಯಗೆ ಭಾರೀ ಸೋಲು
ಕೆಜೆಪಿ ಸೇರುತ್ತೇನೆ, ಸೇರುವುದಿಲ್ಲ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ರೇಣುಕಾಚಾರ್ಯ ಚುನಾವಣೆ ಘೋಷಣೆಯಾಗಲು ಕೆಲವು ದಿನಗಳು ಬಾಕಿ ಉಳಿದಿರುವಾಗ ಕೆಜೆಪಿ ಸೇರಿದ್ದರು. ಪಕ್ಷ ಬದಲಾವಣೆ ಮಾಡಿದ ನಂತರ ಕ್ಷೇತ್ರ ಬಿಟ್ಟು ಕದಲದೆ, ಗೆಲುವಿಗಾಗಿ ಶ್ರಮಿಸುತ್ತಿದ್ದರು.
ಆದರೆ, ರಾಜ್ಯದಲ್ಲಿ ಬೀಸಿದ ಕಾಂಗ್ರೆಸ್ ಪರವಾದ ಅಲೆ ಹೊನ್ನಾಳಿ ಮೇಲೂ ಪರಿಣಾಮ ಬೀರಿದ್ದು, ರೇಣುಕಾಚಾರ್ಯ ಕೇವಲ 60,051 ಮತಗಳನ್ನು ಪಡೆದಿದ್ದಾರೆ. ರೇಣುಕಾಚಾರ್ಯ ಅವರನ್ನು ಸೋಲಿಸಿದ ಕಾಂಗ್ರೆಸ್ ಅಭ್ಯರ್ಥಿ ಡಿ.ಜಿ.ಶಾಂತನಗೌಡ 78789 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
2008ರ ಚುನಾವಣೆಯಲ್ಲಿ ಜಯಗಳಿಸಿದ್ದ ರೇಣುಕಾಚಾರ್ಯ ರೆಸಾರ್ಟ್ ರಾಜಕಾರಣದಿಂದ ಹೆಸರುವಾಸಿಯಾಗಿದ್ದರು. ಬ್ಲಾಕ್ ಮೇಲ್ ತಂತ್ರ ಅನುಸರಿಸಿ ಅಬಕಾರಿ ಸಚಿವರಾಗಿದ್ದರು. ಯಡಿಯೂರಪ್ಪ ನಮ್ಮ ನಾಯಕರು ಎಂದು ಕೊನೆಯ ವರೆಗೂ ಹೇಳಿಕೊಂಡು ತಿರುಗಾಡಿ, ಕೊನೆಗೆ ಕೆಜೆಪಿ ಸೇರಿದ್ದರು.
ಜಯಲಕ್ಷ್ಮೀಯೊಂದಿಗಿನ ಚುಂಬನ ಪ್ರಕರಣ, ಅಬಕಾರಿ ಇಲಾಖೆಯಲ್ಲಿ ಕೇಳಿಬಂದ ಭ್ರಷ್ಟಾಚಾರ ಮುಂತಾದ ಬೆಳವಣಿಗೆಗಳಿಂದ ಬೇಸತ್ತ ಜನರು ರೇಣುಕಾಚಾರ್ಯ ಅವರ ಕೈ ಹಿಡಿದಿಲ್ಲ.
ಕಳೆದ ಚುನಾವಣೆಯಲ್ಲಿ ಜಯಗಳಿಸಿದ ನಂತರ ರೇಣುಕಾಚಾರ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಎಂಬುದು ಅವರ ಸೋಲಿಗೆ ಕಾರಣವಾಗಿದೆ. ಡ್ಯಾನ್ಸ್ ಮೂಲಕ ಪ್ರಸಿದ್ದಿ ಪಡೆದಿದ್ದ ಅವರ ನೃತ್ಯ ಇನ್ನುಮುಂದೆ ಟಿವಿಯಲ್ಲಿ ಕಾಣಸಿಗುವುದಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ.