ದೆಹಲಿಯಲ್ಲಿ ಕಾಂಗ್ರೆಸ್ ಪಟಾಕಿ, ಸಿದ್ದು ಕಣ್ಣಲ್ಲಿ ಹೊಳಪು
ಎಲ್ಲಕ್ಕಿಂತ ಹೆಚ್ಚಾಗಿ ಬೀಗುತ್ತಿರುವುದು ವರುಣಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ಸಿನ ಮುಖ್ಯಮಂತ್ರಿ ಪಟ್ಟದ ಪ್ರಬಲ ಆಕಾಂಕ್ಷಿ ಸಿದ್ದರಾಮಯ್ಯನವರು ಮತ್ತು ಅವರ ಬೆಂಬಲಿಗರು. ಇದಕ್ಕೆ ಎರಡು ಕಾರಣಗಳಿವೆ. ಮೊದಲನೇಯದು ಅವರು ವರುಣಾ ಕ್ಷೇತ್ರದಲ್ಲಿ ಭಾರೀ ಮುನ್ನಡೆ ಸಾಧಿಸಿದ್ದಾರೆ. ಎರಡನೇಯದಾಗಿ, ಅವರಿಗೆ ಅಡ್ಡಗಾಲಾಗಿರುವ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ಕೊರಟಗೆರೆಯಲ್ಲಿ ಹಿನ್ನಡೆ ಕಂಡಿರುವುದು.
ಕಾಂಗ್ರೆಸ್ ಏಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಸಿದ್ದರಾಮಯ್ಯ ಅವರು ವರುಣಾದಲ್ಲಿ ಜಯಭೇರಿ ಬಾರಿಸಿ, ಪರಮೇಶ್ವರ್ ಅವರು ಮಣ್ಣುಮುಕ್ಕಿದರೆ, ಸಿದ್ದರಾಮಯ್ಯನವರ ಮುಖ್ಯಮಂತ್ರಿಯಾಗುವ ಕನಸು ನನಸಾದಂತೆಯೆ. ಸದ್ಯಕ್ಕಂತೂ ಬಿಜೆಪಿ ಮತಗಳನ್ನು ಕೆಜೆಪಿ ಒಡೆದುಹಾಕಿರುವುದು ಕಾಂಗ್ರೆಸ್ಸಿನ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತಾಗಿದೆ. ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಪಟ್ಟದ ಆಕಾಂಕ್ಷಿಗಳು ಹೊಸಬಟ್ಟೆಗಳನ್ನು ಈಗಾಗಲೆ ರೆಡಿ ಮಾಡಿಟ್ಟುಕೊಂಡಿದ್ದಾರೆ.
ಕಾಂಗ್ರೆಸ್ ಭಾರೀ ಮುನ್ನಡೆ ಸಾಧಿಸಿದ್ದರೂ, ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಕಾಂಗ್ರೆಸ್ಸಿಗೆ ಹತ್ತತ್ತಿರ ಸಾಗುತ್ತಿವೆ. ಅನಂತ್ ಕುಮಾರ್ ಅವರನ್ನು ಹಿಂಬಾಗಿಲ ಮಾತುಕತೆ ನಡೆಸಲು ಬಿಜೆಪಿ ನಿಯೋಜಿಸಿದೆ. ಕಾಂಗ್ರೆಸ್ಸಿಗೆ ಬಹುಮತ ದೊರೆಯುವುದಾ? ಬಹುಮತ ದೊರೆಯದಿದ್ದರೆ ಕೆಜೆಪಿ ಕೈಜೋಡಿಸುವುದಾ? ಅಥವಾ ಕಾಂಗ್ರೆಸ್ಸನ್ನು ಹಣಿದುಹಾಕಲು ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಬೆಳೆಸುವುದಾ?