ಹೀನಾಯ ಸೋಲು ಕಂಡ ಮೂಲ ಬಿಜೆಪಿಯ ಸಚಿವರು
ಬೆಂಗಳೂರು, ಮೇ 8: ಬಿಜೆಪಿಯ ಆಡಳಿತ ವಿರೋಧಿ ಅಲೆ ಎಷ್ಟರ ಮಟ್ಟಿಗೆ ಪಕ್ಷಕ್ಕೆ ಮುಳುವಾಗಿದೆ ಎಂದರೆ ಬರೋಬ್ಬರಿ ಒಟ್ಟಾರೆ 20 ಬಿಜೆಪಿಯ ಮತ್ತು ಮೂಲ ಬಿಜೆಪಿಯಲ್ಲಿದ್ದ ಸಚಿವರುಗಳು ಹೀನಾಯ ಸೋಲು ಅನುಭವಿಸಿದ್ದಾರೆ. ತನ್ನ ಭದ್ರಕೋಟೆಯಲ್ಲಿ ಪಕ್ಷ ನೆಲಕಚ್ಚಿದೆ.
ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದು ಆಪರೇಷನ್ ಕಮಲ, ಆಂತರಿಕ ಕಚ್ಚಾಟ, ಲೆಕ್ಕಕ್ಕಿಲ್ಲದಷ್ಟು ಭ್ರಷ್ಟಾಚಾರದ ಆರೋಪ ಮುಂತಾದ ತಾನೇ ಮಾಡಿದ ತಪ್ಪಿನಿಂದಾಗಿ ಬಿಜೆಪಿಯನ್ನು ಕರ್ನಾಟಕ ಜನತೆ ತಿರಸ್ಕರಿಸಿದ್ದು, ಮಗುದೊಮ್ಮೆ ಕಾಂಗ್ರೆಸ್ಸಿಗೆ ಅಧಿಕಾರ ನೀಡಿದ್ದಾರೆ.
ತಾನು ಅಧಿಕಾರಕ್ಕೆ ಬರದಿದ್ದರೂ ಪರವಾಗಿಲ್ಲ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇನೆ ಎಂದು ಘರ್ಜಿಸಿದ್ದ ಯಡಿಯೂರಪ್ಪ ಬಿಜೆಪಿಯ ಕನಸನ್ನು ನುಚ್ಚು ನೂರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಉಪ ಮುಖ್ಯಮಂತ್ರಿ ಮತ್ತು ಚುನಾವಣೆಗೆ ಸ್ವಲ್ಪ ಮುನ್ನ ವರೆಗೂ ರಾಜ್ಯಾಧ್ಯಕ್ಷರಾಗಿದ್ದ ಕೆ ಎಸ್ ಈಶ್ವರಪ್ಪ ಶಿವಮೊಗ್ಗ ಕ್ಷೇತ್ರದಲ್ಲಿ ಎರಡನೇ ಸ್ಥಾನ ಬರುವಲ್ಲೂ ವಿಫಲವಾಗಿದ್ದು ಜನತೆಗೆ ಬಿಜೆಪಿ ಮೇಲೆ ಇರುವ ಸಿಟ್ಟಿಗೊಂದು ಕೊಡಬಹುದಾದ ಒಂದು ಸಣ್ಣ ಸ್ಯಾಂಪಲ್.
ಹೀನಾಯ ಸೋಲು ಕಂಡ ಬಿಜೆಪಿಯ 20 ಸಚಿವರ ಸ್ಲೈಡಿನಲ್ಲಿ
ಕೆ ಎಸ್ ಈಶ್ವರಪ್ಪ
ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಶಿವಮೊಗ್ಗ ಕ್ಷೇತ್ರದಲ್ಲಿ ಹೀನಾಯ ಸೋಲು ಅನುಭವಿಸಿದ್ದಾರೆ. ಅಲ್ಲಿ ಕಾಂಗ್ರೆಸ್ಸಿನ ಕೆ ಬಿ ಪ್ರಸನ್ನ ಕುಮಾರ್ ಕೂದಲೆಳೆ ಅಂತರದಲ್ಲಿ ಕೆಜೆಪಿಯ ಎಸ್ ರುದ್ರೇ ಗೌಡ ಅವರನ್ನು ಸೋಲಿಸಿದ್ದಾರೆ. ಈಶ್ವರಪ್ಪ ಮೂರನೇ ಸ್ಥಾನದಲ್ಲಿದ್ದಾರೆ.
ಶೋಭಾ ಕರಂದ್ಲಾಜೆ
ಬಿಜೆಪಿ ಅಧಿಕಾರದ ಅವಧಿಯಲ್ಲಿ ಇಂಧನ ಸಚಿವೆಯಾಗಿ, ಬಿಜೆಪಿ ತೊರೆದು ಯಡಿಯೂರಪ್ಪಗೆ ನಿಷ್ಠೆ ತೋರಿದ್ದ ಶೋಭಾ ಬೆಂಗಳೂರು ರಾಜಾಜಿನಗರ ಕ್ಷೇತ್ರದಲ್ಲಿ ಸೋಲುಂಡಿದ್ದಾರೆ. ಇಲ್ಲೂ ಶೋಭಾ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿದೆ. ಬಿಜೆಪಿಯ ಸುರೇಶ್ ಕುಮಾರ್ ಅವರನ್ನು ಈ ಕ್ಷೇತ್ರದಲ್ಲಿ ಮತ್ತೆ ಜನತೆ ಹರಸಿದ್ದಾರೆ. ಕಾಂಗ್ರೆಸ್ಸಿನ ಮಂಜುಳಾ ನಾಯ್ಡು ಎರಡನೇ ಸ್ಥಾನದಲ್ಲಿದ್ದಾರೆ.
ಹರತಾಳು ಹಾಲಪ್ಪ
ಮಾಜಿ ಸಚಿವ ಹರತಾಳು ಹಾಲಪ್ಪ ಸೊರಬ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದಾರೆ. ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ (ಜೆಡಿಎಸ್) ಗೆದ್ದರೆ, ಹಾಲಪ್ಪ ಎರಡನೇ ಸ್ಥಾನದಲ್ಲಿದ್ದಾರೆ.
ಮುರುಗೇಶ್ ನಿರಾಣಿ
ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅಂತಿಮ ಕ್ಷಣದವರೆಗೂ ಬಿಜೆಪಿಯಲ್ಲಿ ಇರಬೇಕೋ, ಕೆಜೆಪಿಯಲ್ಲಿ ಇರಬೇಕೋ ಅನ್ನೋ ಗೊಂದಲದಲ್ಲಿದ್ದವರು. ಬೀಳಗಿ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಜೆ ಟಿ ಪಾಟೀಲ್ ವಿರುದ್ದ ನಿರಾಣಿ ಸೋಲುಂಡಿದ್ದಾರೆ.
ಸಿ ಎಂ ಉದಾಸಿ
ಲೋಕೋಪಯೋಗಿ ಸಚಿವರಾಗಿದ್ದ ಉದಾಸಿ ಬಿಜೆಪಿ ತೊರೆದು ಕೆಜೆಪಿಯಿಂದ ಹಾನಗಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕಾಂಗ್ರೆಸ್ಸಿನ ಮನೋಹರ್ ತಹಶಿಲ್ದಾರ್ ವಿರುದ್ದ ಉದಾಸಿ ಸೋಲು ಅನುಭವಿಸಿದ್ದಾರೆ.
ಎಸ್ ಎ ರಾಮದಾಸ್
ಸಚಿವ ರಾಮದಾಸ್ ಮೈಸೂರು ನಗರ ಕೃಷ್ಣರಾಜ ಕ್ಷೇತ್ರದಿಂದ ಸೋಲು ಅನುಭವಿಸಿದ್ದಾರೆ. ಅಲ್ಲಿ ಕಾಂಗ್ರೆಸ್ಸಿನ ಎಂ ಕೆ ಸೋಮಶೇಖರ್ ವಿರುದ್ದ ಸೋಲು ಅನುಭವಿಸಿದ್ದಾರೆ.
ವಿ ಸೋಮಣ್ಣ
ವಸತಿ ಸಚಿವ ವಿ ಸೋಮಣ್ಣ ಬೆಂಗಳೂರು ವಿಜಯನಗರ ಕ್ಷೇತ್ರದಿಂದ ಪರಾಭವಗೊಂಡಿದ್ದಾರೆ. ಕಾಂಗ್ರೆಸ್ಸಿನ ಎಂ ಕೃಷ್ಣಪ್ಪ ವಿರುದ್ದ ಸೋಮಣ್ಣ ಹೀನಾಯ ಸೋಲು ಅನುಭವಿಸಿದ್ದಾರೆ.
ಕೃಷ್ಣಯ್ಯ ಶೆಟ್ಟಿ
ಈ ಬಾರಿಯ ಅಚ್ಚರಿಯ ಫಲಿತಾಂಶದಲ್ಲೊಂದು. ಮಾಲೂರು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಸಿಗದೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ್ದಿದ ಮಾಜಿ ಮುಜರಾಯಿ ಸಚಿವ ಜೆಡಿಎಸ್ಸಿನ ಮಂಜುನಾಥ ಗೌಡ ವಿರುದ್ದ ಸೋಲು ಅನುಭವಿಸಿದ್ದಾರೆ.
ಗೂಳಿಹಟ್ಟಿ ಶೇಖರ್
ಮಾಜಿ ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್ ಪಕ್ಷೇತರ ಅಭ್ಯರ್ಥಿಯಾಗಿ ಹೊಸದುರ್ಗ ಕ್ಷೇತ್ರದಿಂದ ಸ್ಪರ್ಧಿಸಿ ಅಲ್ಲಿ ಕಾಂಗ್ರೆಸ್ಸಿನ ಬಿ ಜಿ ಗೋವಿಂದಪ್ಪ ವಿರುದ್ದ ಸೋಲು ಅನುಭವಿಸಿದ್ದಾರೆ.
ಸಿ ಸಿ ಪಾಟೀಲ್
ಮಾಜಿ ಸಚಿವ ಸಿ ಸಿ ಪಾಟೀಲ್ ಆಸ್ಪತ್ರೆಯಿಂದಲೇ ಸ್ಪರ್ಧಿಸಿದ್ದರು. ನರಗುಂದ ಕ್ಷೇತ್ರದಲ್ಲಿ ಪಾಟೀಲ್ ಕಾಂಗ್ರೆಸ್ಸಿನ ಬಿ ಆರ್ ಯಾವಗಲ್ ವಿರುದ್ದ ಸೋಲು ಅನುಭವಿಸಿದ್ದಾರೆ.
ಕೃಷ್ಣ ಪಾಲೇಮರ್
ವಿಧಾನಸೌಧದಲ್ಲಿ ಅಶ್ಲೀಲ ವಿಡಿಯೋ ಮೂಲಕ ಸಚಿವ ಸ್ಥಾನ ಕಳೆದುಕೊಂಡಿದ್ದ ಕೃಷ್ಣ ಪಾಲೇಮರ್ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಬಿ ಎ ಮೊಯುದ್ದೀನ್ ವಿರುದ್ದ ಸೋಲು ಅನುಭವಿಸಿದ್ದಾರೆ.
ರಾಜೂಗೌಡ
ಯಾವ ಪಕ್ಷದಲ್ಲಿ ಇರಬೇಕೆಂದು ಕೊನೇ ಕ್ಷಣದವರೆಗೂ ಚಂಚಲ ಮನಸಿನಲ್ಲಿದ್ದ ರಾಜೂಗೌಡ ಜೆಡಿಎಸ್ ಟಿಕೆಟಿನ ಮೂಲಕ ಶೋರಾಪುರ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದರು. ಅಲ್ಲಿ ಅಲ್ಲಿ ಕಾಂಗ್ರೆಸ್ಸಿನ ರಾಜ ವೆಂಕಟಪ್ಪ ನಾಯಕ್ ವಿರುದ್ದ ರಾಜೂಗೌಡ ಸೋಲು ಅನುಭವಿಸಿದ್ದಾರೆ.
ಎಸ್ ಎ ರವೀಂದ್ರನಾಥ್
ತೋಟಗಾರಿಕಾ ಸಚಿವರಾಗಿದ್ದ ರವೀಂದ್ರನಾಥ್ ಕಳೆದ ಬಾರಿಯ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದ ವೀರರಾಗಿದ್ದರು. ಆದರೆ ಈ ಬಾರಿ ದಾವಣಗೆರೆ ಉತ್ತರದಲ್ಲಿ ಕಾಂಗ್ರೆಸ್ಸಿನ ಎಸ್ ಎಸ್ ಮಲ್ಲಿಕಾರ್ಜುನ್ ವಿರುದ್ದ ಅಷ್ಟೇ ಹೀನಾಯವಾಗಿ ಸೋಲುಂಡಿದ್ದಾರೆ.
ಎ ನಾರಾಯಣಸ್ವಾಮಿ
ಮಾಜಿ ಬಂಧೀಖಾನೆ ಸಚಿವ ಎ ನಾರಾಯಣ ಸ್ವಾಮಿ ಆನೇಕಲ್ ಕ್ಷೇತ್ರದಿಂದ ಕಾಂಗ್ರೆಸ್ಸಿನ ಶಿವಣ್ಣ ಬಿ ಅವರೆದುರು ಸೋಲು ಅನುಭವಿಸಿದ್ದಾರೆ.
ಬಿ ಎನ್ ಬಚ್ಚೇಗೌಡ
ಈ ಚುನಾವಣೆಯ ಮತ್ತೊಂದು ಅಚ್ಚರಿಯ ಫಲಿತಾಂಶ. ಹೊಸಕೋಟೆ ಕ್ಷೇತ್ರದಲ್ಲಿ ಕಾರ್ಮಿಕ ಸಚಿವ ಬಿ ಎನ್ ಬಚ್ಚೇಗೌಡ ಕಾಂಗ್ರೆಸ್ಸಿನ ಎಂ ಟಿ ಬಿ ಬಚ್ಚೇಗೌಡ ವಿರುದ್ದ ಸೋಲು ಅನುಭವಿಸಿದ್ದಾರೆ.
ರೇವೂ ನಾಯಕ ಬೆಳಮಗಿ
ಪಶುಸಂಗೋಪನಾ ಸಚಿವ ರೇವೂ ನಾಯಕ ಬೆಳಮಗಿ ಏನು ಕುಸ್ತಿ ಮಾಡಿದರೂ ಗುಲ್ಬರ್ಗ ಗ್ರಾಮೀಣ ಕ್ಷೇತ್ರದಲ್ಲಿ ಗೆಲ್ಲಲಾಗಲಿಲ್ಲ. ಕಾಂಗ್ರೆಸ್ಸಿನ ಜಿ ರಾಮಕೃಷ್ಣ ವಿರುದ್ದ ಬೆಳಮಗಿ ಸೋಲು ಅನುಭವಿಸಿದ್ದಾರೆ.
ಶಿವನಗೌಡ ನಾಯಕ್
ಮಾಜಿ ಸಚಿವರಾಗಿದ್ದ ಶಿವನಗೌಡ ನಾಯಕ್ ಕೂಡಾ ಪರಾಭಗೊಂಡಿದ್ದಾರೆ. ದೇವದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಎ ವೆಂಕಟೇಶ ನಾಯಕ್ ವಿರುದ್ದ ಶಿವನಗೌಡ ನಾಯಕ್ ಸೋಲು ಅನುಭವಿಸಿದ್ದಾರೆ.
ಕರುಣಾಕರ ರೆಡ್ಡಿ
ಮಾಜಿ ಕಂದಾಯ ಸಚಿವರಾಗಿದ್ದ ಕರುಣಾಕರ ರೆಡ್ಡಿ ಹರಪನಹಳ್ಳಿ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದಾರೆ. ಕಾಂಗ್ರೆಸ್ಸಿನ ಎಂ ಪಿ ರವೀಂದ್ರ ವಿರುದ್ದ ರೆಡ್ಡಿ ಸೋಲು ಅನುಭವಿಸಿದ್ದಾರೆ.
ಆನಂದ್ ಅಸ್ನೋಟಿಕರ್
ಮೀನುಗಾರಿಕಾ ಸಚಿವರಾಗಿದ್ದ ಆನಂದ್ ಅಸ್ನೋಟಿಕರ್ ಕಾರವಾರ ಕ್ಷೇತ್ರದಲ್ಲಿ ಪಕ್ಷೇತರ (ಕಾಂಗ್ರೆಸ್ ಬಂಡಾಯ ಅಭ್ಯರ್ಥಿ) ಸತೀಶ್ ಸೈಲ್ ವಿರುದ್ದ ಸೋಲು ಅನುಭವಿಸಿದ್ದಾರೆ.