ಕಾಂಗ್ರೆಸ್ ಗೆದ್ದರೆ ಮಾತ್ರ ಕರ್ನಾಟಕಕ್ಕೆ ಮತ್ತೆ ಕಾಲಿಡುವೆ
ಕೋಲಾರ ಜಿಲ್ಲೆಯ ಚುನಾವಣಾ ಪ್ರಚಾರದಲ್ಲಿ ಸಿಕ್ಕ ಜನಬೆಂಬಲದಿಂದ ಸ್ಪೂರ್ತಿ ಪಡೆದ ಚಿರಂಜೀವಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮೇಲೆ ಹರಿಹಾಯ್ದರು. ಬಿಜೆಪಿ ಭ್ರಷ್ಟ ಸರಕಾರ, ಅನೈತಿಕ ಸರಕಾರ ಎಂದು ಜರಿದರು. ಜೆಡಿಎಸ್ ಪಕ್ಷವನ್ನು ಅಪ್ಪ ಮಕ್ಕಳ ಪಕ್ಷವೆಂದು ಚಿರಂಜೀವಿ ಒಬ್ಬರು ಹೇಳೊದೊಂದು ಬಾಕಿಯಿತ್ತು, ಅವರ ಬಾಯಿಯಿಂದಲೂ ಆ ಪದ ಬಳಕೆಯಾಯಿತು.
ಸೆಲೆಬ್ರಿಟಿಗಳನ್ನು ನೋಡಲು ಜನ ಮುಗಿಬೀಳುತ್ತಾರೆಯೇ ಹೊರತು ಅದು ಮತಗಳ ವಿಚಾರದಲ್ಲಿ ಲಾಭವಾಗುವುದಿಲ್ಲ ಎನ್ನುವುದು ಚಿರಂಜೀವಿಗೆ ಅನುಭವದ ಮಾತು. ತಾನೇ ಆಂಧ್ರದಲ್ಲಿ ಹುಟ್ಟು ಹಾಕಿದ ಪ್ರಜಾರಾಜ್ಯಂ ಪಕ್ಷಕ್ಕೆ ಆದ ಗತಿ ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಬರಬಾರದು ಎನ್ನುವುದು ಅವರ ಮುಂದಾಲೋಚನೆ ಇದ್ದರೂ ಇರಬಹುದು.
ಅದಕ್ಕೋ ಏನೋ ಮೈಕ್ ಹಿಡಿದುಕೊಂಡವರೇ " ಕಾಂಗ್ರೆಸ್ ಗೆಲಿಸ್ತೆ ಮಾತ್ರಂ ನೇನು ಕರ್ನಾಟಕ ಕು ತಿರುಗಿ ವಸ್ತಾನು' ಅಂದರೆ "ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದರೆ ಮಾತ್ರ ನಾನು ಮತ್ತೆ ಕರ್ನಾಟಕಕ್ಕೆ ಬರುತ್ತೇನೆ" ಎಂದು ಭಾಷಣ ಬಿಗಿದರು.
ನೆರೆದಿದ್ದ ಜನಸ್ತೋಮ ಕಾಂಗ್ರೆಸ್ಸಿಗೆ ಜಿಂದಾಬಾದ್, ಚಿರಂಜೀವಿಗೆ ಜಿಂದಾಬಾದ್ ಅಂದರು. ಸಂತೋಷದಿಂದ ಚಿರಂಜೀವಿ ಅಲ್ಲಿಂದ ಕೋಲಾರ ಜಿಲ್ಲೆಯ ಇನ್ನೊಂದು ಊರಿಗೆ ಪ್ರಯಾಣ ಬೆಳಿಸಿದರು.
ಚಿರಂಜೀವಿ ಭಾಷಣವನ್ನು ದೂರದಿಂದ ಆಲಿಸುತ್ತಿದ್ದ ಕಮಲದ ಪಕ್ಷದವರು ಈ ವಯ್ಯಾ ಕರ್ನಾಟಕಕ್ಕೆ ಬಂದರೆ ಎಷ್ಟು, ಬಿಟ್ಟರೆ ಎಷ್ಟು. ಅವರೂ ಬೇಡ, ಆ ವಯ್ಯನ ಚಿತ್ರ ಕೂಡಾ ಇಲ್ಲಿ ಬಿಡುಗಡೆ ಆಗೋದು ಬೇಡ. ಕನ್ನಡ ಚಿತ್ರಗಳಿಗೆ ಥಿಯೇಟರ್ ಸಮಸ್ಯೆ ಇರುವುದಿಲ್ಲ ಏಮಂಟಾರು ಅಂಥಾ ಅನಿ ಅಂದರೂ ಮಾಟ್ಲಾಡಿಕೊಂಟುನ್ನಾರಂಟ.