ಗಂಗಾವತಿ : ಇಕ್ಬಾಲ್ ಅನ್ಸಾರಿ ಮೇನಿಯಾ!
ಭತ್ತದ ಕಣಜ ಎಂದು ಹೆಸರಾಗಿರುವ ಕೊಪ್ಪಳ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಬಿಸಿಲು ಎಷ್ಟು ಸ್ಥಿರವಾಗಿರುತ್ತದೆಯೋ ವಿಧಾನಸಭೆ ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಾಚಾರಗಳು ಅಷ್ಟೇ ಅಸ್ಥಿರವಾಗಿರುತ್ತವೆ. ಇಲ್ಲಿ ಇಂಥೋರೇ ಗೆಲ್ತಾರೆ ಎಂದು ಖಚಿತವಾಗಿ ಹೇಳುವುದು ಅಸಾಧ್ಯ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ಗಳಿಗೆ ಇದ್ದಷ್ಟೇ ಸಮಪ್ರಮಾಣದ ಅವಕಾಶಗಳು ಹೊಸದಾಗಿ ಹುಟ್ಟಿರುವ ಕೆಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ಸಿಗೂ ಇವೆ. ಪಕ್ಷಕ್ಕೆ ದ್ರೋಹ ಬಗೆದು 'ಆಪರೇಷನ್'ಗೊಳಗಾದವರಿಗೆ, ಅಭ್ಯರ್ಥಿಯನ್ನೇ ಮರೆತ ಪಕ್ಷಕ್ಕೆ ಮತದಾರರು ಪಾಠ ಕಲಿಸುವರೆ? ಗಂಗಾವತಿಯಲ್ಲಿ ಯಾವ ಜಾತಿಯ ಬೆಂಬಲ ಯಾರಿಗಿದೆ ಎಂಬುದರ ನೋಟ ಇಲ್ಲಿದೆ.
ಪ್ರಸ್ತುತ ಗಂಗಾವತಿಯ ಬಿಜೆಪಿ ಶಾಸಕನಾಗಿರುವ ಪರಣ್ಣ ಮುನವಳ್ಳಿ ಬಗ್ಗೆ ಕ್ಷೇತ್ರದ ಜನರಲ್ಲಿ ಬ್ಯಾಡ್ ಓಪಿನಿಯನ್ ಇದೆ. ಅಭಿವೃದ್ಧಿ ನಿರೀಕ್ಷೆ ಇಟ್ಟುಕೊಂಡಿದ್ದ ಜನತೆಯ ಆ ನಿರೀಕ್ಷೆ ಹುಸಿಯಾಗಿದೆ. ಈಗ ಗಂಗಾವತಿಯಲ್ಲಿ ಏನಿದ್ರೂ ಇಕ್ಬಾಲ್ ಅನ್ಸಾರಿ ಮೇನಿಯಾ ಎಂಬ ಮಾತುಗಳು ಕೇಳಿ ಬರ್ತಿವೆ. ಪರಣ್ಣ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿದ್ರೂ ಅವರಿಗೆ ಗೆಲುವು ಗಗನಕುಸುಮವಾಗಲಿದೆ. ಹೀನಾಯ ಸೋಲನ್ನು ಅನುಭವಿಸುವ ಎಲ್ಲ ಸಾಧ್ಯತೆಯೂ ಇದೆ. ಇದಕ್ಕೆ ವೇದಿಕೆಯೂ ಸಿದ್ದವಾಗಿದೆ.
ಗಂಗಾವತಿಯಲ್ಲಿ ಈಗ ಏನಿದ್ರೂ ಜೆಡಿಎಸ್ನ ಇಕ್ಬಾಲ್ ಅನ್ಸಾರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳಲಾಗುವ ಎಚ್.ಆರ್. ಶ್ರೀನಾಥ್ ಅವರ ನಡುವೆ ನೇರ ಸ್ಪರ್ಧೆ ಏರ್ಪಡುವ ಎಲ್ಲ ಸಾಧ್ಯತೆ ಇದೆ. ಶ್ರೀನಾಥ್ ಈ ಹಿಂದೆ ಎಂಎಲ್ಸಿ ಆಗಿದ್ದವರು. ಅದರ ಜೊತೆಗೆ ಅಪ್ಪ ಎಚ್.ಜಿ. ರಾಮುಲು ಅವರ ವೈಯಕ್ತಿಕ ವರ್ಚಸ್ಸು. ರಾಮುಲು ಈ ಭಾಗದ ಕಾಂಗ್ರೆಸ್ನ ಪ್ರಭಾವಿ ಮುಖಂಡ ಬೇರೆ. ಅದರ ಜೊತೆಗೆ ಗಂಗಾವತಿ ಭಾಗದಲ್ಲಿ ರಾಮುಲು ಅವರ ಮಾತು ನಡೆಯುತ್ತೆ ಎಂಬ ಮಾತಿದೆ. ಇದೆಲ್ಲದರ ನಡುವೆ ಕಾಂಗ್ರೆಸ್ ಸಾಂಪ್ರದಾಯಿಕ ವೋಟ್ಗಳನ್ನು, ಅಪ್ಪನ ವೈಯಕ್ತಿಕ ವರ್ಚಸ್ಸನ್ನು ಹಾಗೂ ಲಿಂಗಾಯತ ನಾಯಕರ ವೋಟ್ಗಳ ಮೇಲೆ ಕಣ್ಣಿಟ್ಟಿದ್ದಾರೆ ಶ್ರೀನಾಥ್.
ಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯದ ಜಪದೊಂದಿಗೆ ತಮ್ಮದೇ ಕಮ್ಯುನಿಟಿಯ ಜನರು ಕೈ ಹಿಡಿತಾರೆ ಎಂಬ ಭರವಸೆ ಇಕ್ಬಾಲ್ ಅನ್ಸಾರಿಯದು. ಕೊಪ್ಪಳ ಎಂಎಲ್ಎ ಸಂಗಣ್ಣ ಕರಡಿಯೊಂದಿಗೆ ಜೆಡಿಎಸ್ನಲ್ಲಿದ್ದಾಗ ಮುನಿಸಿಕೊಂಡು ಪಕ್ಷಕ್ಕೆ ಗುಡ್ಬೈ ಹೇಳಿದ್ದ ಅನ್ಸಾರಿ, ಮತ್ತೆ ಮರಳಿ ಗೂಡಿಗೆ ಬಂದಿದ್ದಾರೆ. ತಮ್ಮದೆ ಕಾರ್ಯಕರ್ತರ ಪಡೆ ಹೊಂದಿರುವ ಅನ್ಸಾರಿ ತೀವ್ರ ಪೈಪೋಟಿ ನೀಡ್ತಾರೆ ಅನ್ನೋ ರಾಜಕೀಯ ಲೆಕ್ಕಾಚಾರ ಈಗಲೇ ಶುರುವಾಗಿವೆ. ಇನ್ನು ಇವೆಲ್ಲಕ್ಕಿಂತ ಮುಖ್ಯವಾಗಿ ಲಲಿತಾರಾಣಿ ಶ್ರೀರಂಗದೇವರಾಯಲು ಅವರು ಸ್ಪರ್ಧೆ ಮಾಡಿ ಗೆದ್ದರೂ ಆಶ್ಚರ್ಯಪಡಬೇಕಾಗಿಲ್ಲ. ಯಾಕಂದ್ರೆ, ಲಲಿತಾರಾಣಿ ಅವರ ಪತಿ ಶ್ರೀರಂಗದೇವರಾಯಲು ಅವರನ್ನು ಸತತ ಮೂರು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದ ಕೀರ್ತಿ ಗಂಗಾವತಿ ಕ್ಷೇತ್ರದ ಮತದಾರರದ್ದು.
ಅಲ್ಲದೆ, ಆ ಭಾಗದಲ್ಲಿ ಶ್ರೀರಂಗದೇವರಾಯಲು ಅವರಿಗೆ ಒಳ್ಳೆಯ ಹೆಸರಿದೆ. ಸಜ್ಜನ ರಾಜಕಾರಣಿ ಎಂಬ ಪ್ರೋತ್ಸಾಹದ ಮಾತಿದೆ. ಹೀಗಾಗಿ, ಲಲಿತಾರಾಣಿ ಅವರು ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡ್ತಾರೆ ಅನ್ನೋ ಮಾತಿದೆ. ಈ ನಡುವೆ 10 ವರ್ಷಗಳಿಂದ ಶ್ರೀರಂಗದೇವರಾಯಲು ಅವರು ರಾಜಕೀಯ ಗ್ಯಾಪ್ ಆಗಿರೋದ್ರಿಂದ ಅವರ ಕಾರ್ಯಕರ್ತರ ಪಡೆ ಚದುರಿ ಹೋಗಿದ್ದಾರೆ. ಆದ್ರೆ, ಲಲಿತಾರಾಣಿ ಅವರು ಸ್ಪರ್ಧೆ ಮಾಡೋದೆ ನಿಶ್ಚಿತವಾದ್ರೆ, ಹಳೆಯ ಕಾರ್ಯಕರ್ತರನ್ನು ಒಗ್ಗೂಡಿಸಿದ್ರೆ ಅವರ ಗೆಲುವು ಸುಲಭ.