ಕೊಪ್ಪಳದಲ್ಲಿ ಯಾರ್ಯಾರ ನಡುವೆ ಮಾರಾಮಾರಿ
ಕೊಪ್ಪಳ ಕ್ಷೇತ್ರ ಆಪರೇಷನ್ ಕಮಲದ ಕ್ಷೇತ್ರ. ಸಂಗಣ್ಣ ಕರಡಿ ಹಾಗೂ ಕೆ. ಬಸವರಾಜ್ ಹಿಟ್ನಾಳ್ ನಡುವೆ ನೇರ ಪೈಪೋಟಿ ಇದೆ. ಸಂಗಣ್ಣ ಕರಡಿ ಮಾಡಿರುವ ಒಂದಿಷ್ಟು ಅಭಿವೃದ್ಧಿ ಕಾರ್ಯಗಳು ಹಾಗೂ ವೈಯಕ್ತಿಕ ವರ್ಚಸ್ಸಿನಿಂದಾಗಿ ಲಿಂಗಾಯತ ಸಮುದಾಯದ ಬಹಳಷ್ಟು ಮತಗಳು ಅವರ ಪಾಲಾಗಲಿವೆ. ಇತ್ತ ಕಾಂಗ್ರೆಸ್ ಟಿಕೆಟ್ಗಾಗಿ ಮಾಜಿ ಶಾಸಕ ಕೆ. ಬಸವರಾಜ್ ಹಿಟ್ನಾಳ್ ಹಾಗೂ ಅವರ ಪುತ್ರ ಕೆ. ರಾಘವೇಂದ್ರ ಹಿಟ್ನಾಳ್ ಇಬ್ಬರೂ ಬೇಡಿಕೆ ಇಟ್ಟಿದ್ದಾರೆ. ಇಬ್ಬರ ಪೈಕಿ ಯಾರಿಗೇ ಸಿಕ್ಕಿದ್ರೂ ಕೂಡಾ, 15 ಸಾವಿರದಷ್ಟು ಮುಸ್ಲಿಂ ವೋಟ್ಗಳು ಹಾಗೂ ತಮ್ಮದೇ ಕುರುಬ ಸಮಾಜದ 25 ಸಾವಿರದಷ್ಟು ವೋಟ್ಗಳು ಅವರಿಗೆ ಲಭಿಸಲಿವೆ.
ಇನ್ನು ಬೈ ಎಲೆಕ್ಷನ್ನಲ್ಲಿ ಸೋತು ಸುಣ್ಣವಾಗಿರುವ ಜೆಡಿಎಸ್ನ ಪ್ರದೀಪಗೌಡ ಪಾಟೀಲ್ ಕೂಡಾ ಈ ಬಾರಿ ರಾಜಕೀಯ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ. ಟಿಕೆಟ್ ಪ್ರದೀಪ್ಗೌಡಗೆ ಎಂದು ಹೇಳಲಾಗುತ್ತಿದ್ದರೂ, ಇತ್ತೀಚೆಗೆ ಜೆಡಿಎಸ್ ಸೇರಿರುವ ಸುರೇಶ್ ಭೂಮರಡ್ಡಿ ನಡುವೆ ಹಗ್ಗಾಜಗ್ಗಾಟ ಶುರುವಾಗಿದೆ. ಇಲ್ಲಿ ಭಿನ್ನಮತ ಸ್ಪೋಟವಾದರೂ ಅಚ್ಚರಿಪಡಬೇಕಾಗಿಲ್ಲ. ಆಕಾಂಕ್ಷಿ ಸುರೇಶ್ ಭೂಮರಡ್ಡಿ ಹಾಗೂ ಪ್ರದೀಪಗೌಡ ವರಸೆಯಲ್ಲಿ ಅಳಿಯ-ಮಾವ. ಈ ಇಬ್ಬರು ಲಿಂಗಾಯತ ರೆಡ್ಡಿ ಸಮುದಾಯದವರಾಗಿದ್ದು, ಸಂಗಣ್ಣ ಕರಡಿಗೆ ಬರುವ ಲಿಂಗಾಯತ ಮತಗಳು ಹಂಚಿಹೋಗಲಿವೆ. ಸಂಗಣ್ಣ, ಪ್ರದೀಪಗೌಡ ಅಥವಾ ಸುರೇಶ್ ಭೂಮರಡ್ಡಿ ನಡುವೆ ಮತ್ತೊಬ್ಬ ಲಿಂಗಾಯತ ಅಭ್ಯರ್ಥಿ ಕಣಕ್ಕೆ ಇಳಿದ್ರೆ, ಹಿಟ್ನಾಳ್ ಗೆಲುವು ಸುಲಭವಾಗುತ್ತೆ.