ಬಿಟಿಎಂ ಲೇಔಟ್ : ರವಿರೆಡ್ಡಿ ಸಂದರ್ಶನ (ಭಾಗ 2)
ಉ : ಬೆಂಗಳೂರಿನಲ್ಲಿಯ ಅತಿಕೆಟ್ಟ ಟ್ರಾಫಿಕ್ ಬಿಟಿಎಂ ಲೇಔಟ್ ಕ್ಷೇತ್ರದಲ್ಲಿದೆ. ಹೀಗಿದ್ದರೂ, ಬೆಂಗಳೂರಿನಲ್ಲಿ ಮೆಟ್ರೊ ಸಂಚಾರ ಇಲ್ಲದ ಕೆಲವೇ ಕ್ಷೇತ್ರಗಳಲ್ಲಿ ಇದೂ ಒಂದು. ಸಿಲ್ಕ್ ಬೋರ್ಡ್, ಡೈರಿ ಸರ್ಕಲ್, ಫೋರಂ, ಬನ್ನೇರುಘಟ್ಟ ರಸ್ತೆ, ಜಯದೇವ ಆಸ್ಪತ್ರೆ, ಬಿಟಿಎಮ್ ಬಸ್ ನಿಲ್ದಾಣ, ಕೋರಮಂಗಲ, ಸರ್ಜಾಪುರ ರಸ್ತೆ; ಈ ಎಲ್ಲಾ ರಸ್ತೆಗಳು ಟ್ರಾಫಿಕ್ ಕಾರಣದಿಂದಾಗಿ ಕುಖ್ಯಾತಿ ಪಡೆದಿವೆ. ಇದು ಈ ಕ್ಷೇತ್ರದಲ್ಲಿ ವಾಸಿಸುವ ಜನರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಸ್ಥಳೀಯರಿಗೆ ಅಲರ್ಜಿಯಾಗುವುದು, ಕಣ್ಣುರಿ ಬರುವುದು, ಮಾಲಿನ್ಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ಈ ಭಾಗದಲ್ಲಿ ಮತ್ತು ಒಟ್ಟಾರೆ ನಗರದಲ್ಲಿ ಸಾರ್ವಜನಿಕೆ ಸಾರಿಗೆ ವ್ಯವಸ್ಥೆಯನ್ನು ಉತ್ತಮಪಡಿಸಬೇಕಿದೆ. ಸೂಕ್ತ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ ಐಟಿ ಪಾರ್ಕ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಕಡೆ ಹೋಗುವ ಜನರಿಗೆ ವಿಶೇಷ ಬಸ್ ಸೌಲಭ್ಯ ಕಲ್ಪಿಸುವ ಅಗತ್ಯ ಇದೆ. ಶೇ.10-20ರಷ್ಟು ಟ್ರಾಫಿಕ್ ಕಡಿಮೆಯಾದರೂ ಇಲ್ಲಿಯ ಜನಜೀವನ ಸುಧಾರಿಸಲಿದೆ.
ಈ ಕ್ಷೇತ್ರದಲ್ಲಿರುವ ಮಡಿವಾಳ ಕೆರೆ ಬೆಂಗಳೂರಿನ ದೊಡ್ಡ ಕೆರೆಗಳಲ್ಲಿ ಒಂದು. ಆದರೆ ಈ ಕೆರೆಯನ್ನು ಅತಿ ಕೆಟ್ಟ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ಹಲವಾರು ವರ್ಷಗಳಿಂದ ಕೋಟ್ಯಾಂತರ ರೂಪಾಯಿಗಳನ್ನು ಈ ಕೆರೆಗೆ ಸುರಿಯಲಾಗಿದ್ದರೂ ಅದು ಒಳ್ಳೆಯ ಫಲಿತಾಂಶ ನೀಡಿಲ್ಲ. ಈ ಕೆರೆಗೆ ಬರುವ ತ್ಯಾಜ್ಯ ಮತ್ತು ಮಾಲಿನ್ಯದ ನೀರನ್ನು ಸಂಪೂರ್ಣವಾಗಿ ನಿಲ್ಲಿಸಬೇಕಿದೆ. ಕೆರೆಯಲ್ಲಿ ಆಗಿರುವ ಒತ್ತುವರಿಯನ್ನು ತೆರವುಗೊಳಿಸಬೇಕಿದೆ ಮತ್ತು ಅನಗತ್ಯ ಕಟ್ಟಡ ಕಾಮಗಾರಿಗಳನ್ನು ನಿಲ್ಲಿಸಬೇಕಿದೆ. ಈ ಕೆರೆ ಮತ್ತು ಇದರ ಅಂಗಳವನ್ನು ಸರಿಯಾಗಿ, ಪರಿಸರ ಸ್ನೇಹಿಯಾಗಿ ರೂಪಿಸಿದರೆ ಇದನ್ನು ನಗರದ ದಕ್ಷಿಣ ಭಾಗದ ಮಿನಿ-ಲಾಲ್ಬಾಗ್ ಆಗಿ ರೂಪಿಸಬಹುದಾಗಿದೆ. ಇಡೀ ಕೆರೆಯ ಸುತ್ತ ಉತ್ತಮ ಕಾಲ್ದಾರಿಯನ್ನು ನಿರ್ಮಿಸುವ ಮೂಲಕ ಅಕ್ರಮ ಒತ್ತುವರಿಯನ್ನು ನಿಲ್ಲಿಸಬಹುದು ಮತ್ತು ವ್ಯಾಯಾಮಕ್ಕಾಗಿ ನಾಲ್ಕಾರು ಕಿಮೀಗಳ ನಡಿಗೆ ಪಥವನ್ನೂ ನಿರ್ಮಿಸಬಹುದಾಗಿದೆ.
ಬೆಂಗಳೂರು ನಗರದಲ್ಲಿ ಗ್ರಂಥಾಲಯಗಳ ಸಂಖ್ಯೆ ಬಹಳ ಕಮ್ಮಿ ಇದೆ ಮತ್ತು ಅವು ಜನರ ಓದಿನ ಅಗತ್ಯವನ್ನು ಪೂರೈಸುತ್ತಿಲ್ಲ. ಪ್ರತಿ ವಾರ್ಡಿನಲ್ಲೂ ಹತ್ತು ಸಾವಿರ ಮತದಾರರಿಗೆ ಒಂದರಂತೆ ಕನಿಷ್ಟ ಮೂರು ಸಾರ್ವಜನಿಕ ಗ್ರಂಥಾಲಯಗಳನ್ನು ನಿರ್ಮಿಸಬೇಕಿದೆ ಮತ್ತು ಒಂದು ಸಮುದಾಯ ಭವನದ ಅಗತ್ಯ ಇದೆ. ಹಾಗೆಯೇ, ಬೆಂಗಳೂರು ನಗರದಲ್ಲಿ ಉತ್ತಮ ಸಾರ್ವಜನಿಕ ಟಾಯ್ಲೆಟ್ ಸೌಲಭ್ಯಗಳಿಲ್ಲ. ಹೆಚ್ಚು ಜನ ಓಡಾಡುವ ಮತ್ತು ಅಂಗಡಿ-ಸಮುಚ್ಚಯಗಳಿರುವ ರಸ್ತೆಗಳಲ್ಲಿ ಉತ್ತಮ ಟಾಯ್ಲೆಟ್ಗಳನ್ನು ಆದಷ್ಟು ಶೀಘ್ರದಲ್ಲಿ ನಿರ್ಮಿಸಬೇಕಿದೆ. ಎಲ್ಲಾ ಪಾರ್ಕ್ಗಳಲ್ಲಿ, ಬಸ್ನಿಲ್ದಾಣಗಳಲಿ, ಹೆಚ್ಚು ಜನ ಸೇರುವ ಸಾರ್ವಜನಿಕ ಸ್ಥಳಗಳಲ್ಲಿ ಈ ಸೌಲಭ್ಯ ಕಲ್ಪಿಸಬೇಕಿದೆ.
ನಮ್ಮ ಸರ್ಕಾರಿ ಶಾಲಾ-ಕಾಲೇಜು ವ್ಯವಸ್ಥೆಯನ್ನು ಸುಧಾರಿಸಬೇಕಿದೆ, ಈ ಕ್ಷೇತ್ರದಲ್ಲಿ ಯಾವುದೇ ಸರ್ಕಾರಿ ಕಾಲೇಜು ಇಲ್ಲ. ಬಡವರಿಗೆ ಮತ್ತು ಕೆಳಮಧ್ಯಮ ವರ್ಗದವರಿಗೆ ಶಿಕ್ಷಣ ಕೈಗೆಟುಕುವ ರೀತಿಯಲ್ಲಿ ಸೌಲಭ್ಯಗಳನ್ನು ಕಲ್ಪಿಸಬೇಕಿದೆ. ಹಾಗೆಯೇ, ಬಿಟಿಎಮ್ ಕ್ಷೇತ್ರದಲ್ಲಿ ಹಲವಾರು ಸ್ಲಮ್ಗಳಿವೆ ಮತ್ತು ಇಲ್ಲಿಯ ಬಡತನ ಕಣ್ಣಿಗೆ ರಾಚುವಂತಿದೆ, ಇದನ್ನು ಉತ್ತಮ ಶಿಕ್ಷಣ ಮತ್ತು ಒಳ್ಳೆಯ ಉದ್ಯೋಗ ಕಲ್ಪಿಸುವ ಮೂಲಕ ನಿವಾರಿಸಬೇಕಿದೆ, ಇಲ್ಲಿಯ ಜನ ಅನಿಶ್ಚಿತವಾದ ಮತ್ತು ಕಡಿಮೆ ಆದಾಯದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಿಗೆಲ್ಲ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರಗಳನ್ನು ತೆರೆದು ಉತ್ತಮ ಉದ್ಯೋಗವಕಾಶಗಳನ್ನು ಕಲ್ಪಿಸಬೇಕಿದೆ. ಹಾಗೆಯೇ, ಈ ಕ್ಷೇತ್ರದಲ್ಲಿನ ಅತಿಬಡವರಿಗೆ ನಗರವಾಸಿ ಬಡವರಿಗೆಂದು ಇರುವ ವಸತಿ ಯೋಜನೆಗಳನ್ನು ಅನುಷ್ಟಾನಗೊಳಿಸಬೇಕಿದೆ.