ಕ್ಷೇತ್ರ- ಯಡಿಯೂರಪ್ಪ ನೆನೆದು ಕಣ್ಣೀರುಹಾಕಿದ ಸೋಮಣ್ಣ
ಬಿಜೆಪಿ ನನ್ನ ಮಾತೃಪಕ್ಷ. ಹಾಗಾಗಿ ನನ್ನ ನಿಷ್ಠೆ ಎಂದಿಗೂ ಬಿಜೆಪಿಗೆ. ಇದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದ ಸೋಮಣ್ಣ ಅವರು, ನನ್ನನ್ನು ಬಿಜೆಪಿಗೆ ಕರೆತಂದಿದ್ದು ಯಡಿಯೂರಪ್ಪನವರೇ. ಅವರ ಬಗ್ಗೆ ಅಪಾರವಾದ ಗೌರವವಿದೆ ಎಂದು ಹೇಳುತ್ತಲೇ ಕಣ್ಣೀರು ಹರಿಸಿದರು. ಆದರೆ ರಾಜಕೀಯವಾಗಿ ಅವರವರ ನಿಷ್ಠೆ/ನಡೆ ಅವರವರಿಗೆ ಎಂದ ಸೋಮಣ್ಣ ಯಡಿಯೂರಪ್ಪನವರಿಗಾಗಿ ನಾನು ಬಿಜೆಪಿ ಬಿಟ್ಟು ಕೆಜೆಪಿಗೆ ಹೋಗಲಾರೆ ಎಂದು ಸ್ಪಷ್ಟಪಡಿಸಿದರು.
'ಇದು ನನ್ನ ಕ್ಷೇತ್ರ. ಇಲ್ಲೇ ಬೌಂಡರಿ, ಸಿಕ್ಸರ್ ಹೊಡೆಯುವೆ. ಈ ಹಿಂದೆ ಹೇಳಿದಂತೆ ಗೋವಿಂದರಾಜನಗರ ಕ್ಷೇತ್ರದ ಜನತೆಗೇ ನನ್ನ ನಿಷ್ಠೆ' ಎಂದು ಭಾವುಕರಾಗಿ ಸೋಮಣ್ಣ ನುಡಿದರು.
ಇಂದು ಬೆಳಗ್ಗೆ 11 ಗಂಟೆಯಲ್ಲಿ ಗೋವಿಂದರಾಜನಗರದಲ್ಲಿ ನಡೆಸಿದ ಪುಟ್ಟ ಸಾರ್ವಜನಿಕ ಸಭೆಯಲ್ಲಿ ತಮ್ಮ ಅಭಿಮಾನಿಗಳನ್ನುದ್ದೇಶಿಸಿ ಸೋಮಣ್ಣ ಮಾತನಾಡಿದರು. ವೇದಿಕೆಯಲ್ಲಿ ಸೋಮಣ್ಣ ಎಡ-ಬಲಕ್ಕೆ ಅಶೋಕ್ ಮತ್ತು ಅನಂತ್ ಕುಮಾರ್ ಅವರು ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಅವರು ಸೋಮಣ್ಣ ಬಿಜೆಪಿಯಲ್ಲೇ ಉಳಿದುಕೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಸೋಮಣ್ಣ ಅವರು ಗೋವಿಂದರಾಜ ನಗರ ಕ್ಷೇತ್ರಕ್ಕೆ ಸೀಮಿತರಾದವರಲ್ಲ. ಅವರು ಇಡೀ ರಾಜ್ಯದಲ್ಲಿ ವಸತಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಕೆಲಸಗಳನ್ನು ಮಾಡಿದ್ದಾರೆ. ವಿಜಯನಗರದ ವೀರಪುತ್ರ ಸೋಮಣ್ಣ ನಿಜವಾದ ಅರ್ಥದಲ್ಲಿ 'ವಸತಿವೀರ ಸೋಮಣ್ಣ' ಸಹ ಆಗಿದ್ದಾರೆ ಎಂದು ಅನಂತ್ ಮೆಚ್ಚುಗೆ ಸೂಚಿಸಿದರು.
ಯಡಿಯೂರಪ್ಪ ಪ್ರತಿಕ್ರಿಯೆ: 'ಸೋಮಣ್ಣಗೆ ದೇವರು ಒಳ್ಳೆಯದು ಮಾಡಲಿ. ಬಂದವರಿಗೆ ಸ್ವಾಗತ. ನನ್ನ ಪಕ್ಷಕ್ಕೆ ಬಾರದೇ ಇರುವವರ ಬಗ್ಗೆ ಬೇಸರವೇನೂ ಇಲ್ಲ' ಎಂದಷ್ಟೇ ಯಡಿಯೂರಪ್ಪ ಅವರು ಸೋಮಣ್ಣ ಬಿಜೆಪಿಯಲ್ಲೇ ಉಳಿಯುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.