ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಯಾರಿಗೆ ಗೆಲುವು?
ಶಿವಮೊಗ್ಗ ನಗರ ಬೆಳೆದಂತೆ ರಚನೆಯಾದ ವಿಧಾನಸಭಾ ಕ್ಷೇತ್ರ ಶಿವಮೊಗ್ಗ ಗ್ರಾಮಾಂತರ. ಕ್ಷೇತ್ರದಲ್ಲಿನ ಪ್ರಮುಖ ಸಮಸ್ಯೆ ಕುಡಿಯುವ ನೀರು. ಕ್ಷೇತ್ರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಶಿವಮೊಗ್ಗ ನಗರಕ್ಕೆ ಪಾದಯಾತ್ರೆ ನಡೆಸಲಾಗಿತ್ತು.
ಕ್ಷೇತ್ರದ ಹೆಚ್ಚಿನ ಜನರು ಕೃಷಿಯನ್ನು ನಂಬಿದ್ದಾರೆ. ಒಂದು ಕಡೆ ರೈತರು ಟ್ರಾಕ್ಟರ್ ಹತ್ತಿ ಹೊಲಕ್ಕೆ ಹೋದರೆ, ಮತ್ತೊಂದು ಕಡೆ ಯುವ ಜನರು ಬ್ಯಾಗು ಹಿಡಿದು ಶಿವಮೊಗ್ಗ ನಗರಕ್ಕೆ ಕೆಲಸಕ್ಕೆ ಬರುತ್ತಾರೆ.
ಕ್ಷೇತ್ರ ಪರಿಚಯ : ಶಿವಮೊಗ್ಗ ನಗರದಲ್ಲಿ ಈ ಬಾರಿ ಕಮಲ ಅರಳುವುದೇ?
ರಾಜಕೀಯವಾಗಿ ಇದು ಮೊದಲು ಹೊಳೆಹೊನ್ನೂರು ಮೀಸಲು ಕ್ಷೇತ್ರವಾಗಿತ್ತು. 2008ರಲ್ಲಿ ಕ್ಷೇತ್ರ ಪುನರ್ವಿಂಗಡನೆಯಾದ ಬಳಿಕ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವಾಯಿತು. ಆದ್ದರಿಂದ, ಕ್ಷೇತ್ರ ಎರಡು ಚುನಾವಣೆಗಳನ್ನು ಮಾತ್ರ ಕಂಡಿದೆ.
ಜೆಡಿಎಸ್ನ ಶಾರಾದಾ ಪೂರಾ ನಾಯ್ಕ್ ಕ್ಷೇತ್ರದ ಶಾಸಕಿ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಜಿ.ಕುಮಾರಸ್ವಾಮಿ ನಾಲ್ಕನೇ ಸ್ಥಾನಕ್ಕೆ ಕುಸಿದು ಹೀನಾಯ ಸೋಲು ಕಂಡಿದ್ದಾರೆ.
2008ರ ಚುನಾವಣೆಯಲ್ಲಿ ಕುಮಾರಸ್ವಾಮಿ ಗೆಲುವು ಸಾಧಿಸಿದ್ದರು. ಆದರೆ, 2013ರ ಚುನಾವಣೆಯಲ್ಲಿ ಕೆಜೆಪಿ-ಬಿಜೆಪಿ ಮತ ವಿಭಜನೆ ಕಾರಣ ಬಿಜೆಪಿಗೆ ಸೋಲು ಉಂಟಾಯಿತು. ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿ.ಬಸವಣ್ಣಪ್ಪ 38,530 ಮತಗಳನ್ನು ಪಡೆದಿದ್ದರು.
ಈ ಬಾರಿ ಬಿಜೆಪಿಗೆ ಕ್ಷೇತ್ರ ಉಳಿಸಿಕೊಳ್ಳಲು ಹೊಸ ಅಭ್ಯರ್ಥಿಗಾಗಿ ಹುಡುಕಾಟ ನಡೆಸುವುದು ಅನಿವಾರ್ಯವಾಗಿದೆ. ಇದಕ್ಕೆ ಪೂರಕ ಎಂಬಂತೆ ಕ್ಷೇತ್ರದಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಪಡೆಯಲು ಐವರು ಆಕಾಂಕ್ಷಿಗಳಿದ್ದಾರೆ.
2013ರ ಚುನಾವಣೆಯಲ್ಲಿ ಶಾರಾದಾ ಪೂರಾ ನಾಯ್ಕ್ 48,639 ಮತಗಳನ್ನು ಪಡೆದು ಜಯಗಳಿಸಿದ್ದರು. ಕೆಜೆಪಿಯ ಜಿ.ಬಸವಣ್ಣಪ್ಪ 38,530 ಮತ ಪಡೆದು 2ನೇ ಸ್ಥಾನಗಳಿಸಿದ್ದರು. ಕಾಂಗ್ರೆಸ್ನ ಕರಿಯಣ್ಣ 35,640 ಮತ ಪಡೆದು 3ನೇ ಸ್ಥಾನ ಪಡೆದಿದ್ದರು. ಬಿಜೆಪಿಯ ಕೆ.ಜಿ.ಕುಮಾರಸ್ವಾಮಿ ಕೇವಲ 12,435 ಮತ ಪಡೆದು 4ನೇ ಸ್ಥಾನಗಳಿಸಿದ್ದರು.