ಕ್ಷೇತ್ರ ಪರಿಚಯ: ಕಾಂಗ್ರೆಸ್ ಪಾಲಿನ ಭದ್ರ ಕೋಟೆ ಸೇಡಂ
ಸೇಡಂ ಕಲಬುರಗಿಯ ಜಿಲ್ಲೆಯ ಪುರಸಭೆ ಹಾಗೂ ತಾಲೂಕು ಕೇಂದ್ರ. ಸೇಡಂ ಜಿಲ್ಲಾ ಕೇಂದ್ರ ಕಲಬುರಗಿಯಿಂದ 57 ಕಿಲೋಮೀಟರ್ ದೂರದಲ್ಲಿದೆ.
ರಾಷ್ಟ್ರಕೂಟರ ರಾಜಧಾನಿ ಮಳಖೇಡ, ಕೊತ್ತಲ್ ಬಸವೇಶ್ವರ ದೇವಸ್ಥಾನ, ಪಂಚಲಿಂಗೇಶ್ವರ ಮಂದಿರ ಹಾಗೂ ಬಾಣಂತಿ ಕಂಬ, ಮೋತಕಪಲ್ಲಿ ಬಲಭೀಮಸೇನ ದೇವಾಲಯ, ಮಳಖೇಡ್ನ ಟೀಕಾಚಾರ್ಯರ ಮಠ ಮತ್ತು ಕೋಟೆ ಸೇರಿದಂತೆ ಹಲವು ಪ್ರೇಕ್ಷಣೀಯ ಸ್ಥಳಗಳು ಇಲ್ಲಿವೆ.
ಕ್ಷೇತ್ರ ಪರಿಚಯ: ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಹಿರಿಯರ ಕದನ
ಶಹಬಾದ್ ಕಲ್ಲಿಗೆ ಸೇಡಂ ಜನಪ್ರಿಯವಾಗಿದೆ. ಮನೆ ನಿರ್ಮಾಣಕ್ಕೆ ಬಳಸಲಾಗುವ ಕಲ್ಲಿನ ಗಣಿಗಳು, ಕಲ್ಲು ಕತ್ತರಿಸುವ ಮತ್ತು ಹೊಳಪು ನೀಡುವ ಸಣ್ಣ ಪ್ರಮಾಣದ ಉದ್ದಿಮೆಗಳು ಸೇಡಂನಲ್ಲಿದ್ದು ಒಂದಷ್ಟು ಕೂಲಿ ಕಾರ್ಮಿಕರಿಗೆ ಉದ್ಯೋಗವೂ ಸಿಗುತ್ತಿದೆ. ಇಲ್ಲಿ ಬಿರ್ಲಾ ಶಕ್ತಿ, ಅಲ್ಟ್ರಾಟೆಕ್, ಸೌತ್ ಇಂಡಿಯಾ ಸಿಮೆಂಟ್ ನಂಥ ಕೆಲವು ಸಿಮೆಂಟ್ ಕೈಗಾರಿಕೆಗಳೂ ಇವೆ.
ಜೋಳ, ತೊಗರಿ, ನೆಲಗಡಲೆ, ಭತ್ತ, ಉದ್ದು, ಹೆಸರು ಕಾಳು ಇಲ್ಲಿನ ಪ್ರಮುಖ ಬೆಳೆಗಳಾಗಿವೆ. ಇಲ್ಲಿನ ಕೃಷಿ ಚಟುವಟಿಕೆಗಳಿಗೆ ಜೀವಜಲವಾಗಿ ಭೀಮಾ ನದಿ ಸೇಡಂನ ಮೂಲಕ ಹಾದು ಹೋಗುತ್ತದೆ.
1983ರಲ್ಲಿ ಇಲ್ಲಿ ಬಿಜೆಪಿಯ ನಾಗಾರೆಡ್ಡಿ ಪಾಟೀಲ್ ಸೇಡಂ ಜಯಗಳಿಸಿದ್ದು ಬಿಟ್ಟರೆ ಮತ್ಯಾವತ್ತೂ ಈ ಕ್ಷೇತ್ರ ಕೇಸರಿ ಪಕ್ಷಕ್ಕೆ ಒಲಿದಿಲ್ಲ. ಇನ್ನು ಜನತಾದಳ ಕೂಡಾ ಇಲ್ಲಿ 1994ರಲ್ಲಿ ಜಯಗಳಿಸಿದ್ದೇ ಕೊನೆ. ಅಲ್ಲಿಂದ ಈ ಕ್ಷೇತ್ರವನ್ನು ಕಾಂಗ್ರೆಸ್ ಬಿಟ್ಟುಕೊಟ್ಟಿಲ್ಲ.
ಕ್ಷೇತ್ರ ಪರಿಚಯ: ಕಲಬುರಗಿ ದಕ್ಷಿಣದಲ್ಲಿ ಬಿಜೆಪಿ ಗೆಲುವು ನಿಚ್ಛಳ
ಸದ್ಯಕ್ಕೆ ಕಾಂಗ್ರೆಸ್ ಪಾಲಿನ ಭದ್ರಕೋಟೆ ಸೇಡಂ. ಇಲ್ಲಿ 1999ರಲ್ಲಿ ಕಾಂಗ್ರೆಸ್ ನ ಬಸವಂತ್ ರೆಡ್ಡಿ ಮೊತಕ್ಪಲ್ಲಿ ಗೆಲುವು ಸಾಧಿಸಿದ್ದರು. ನಂತರ ಡಾ. ಶರಣ ಪ್ರಕಾಶ್ ಪಾಟೀಲ್ ಇಲ್ಲಿ ಅಖಾಡಕ್ಕಿಳಿದವರು 2004, 2008, 2013ರಲ್ಲಿ ಗೆದ್ದು ಹ್ಯಾಟ್ರಿಕ್ ಸಾಧನೆ ಮೆರೆದಿದ್ದಾರೆ.
ಸದ್ಯ ಕಾಂಗ್ರೆಸ್ ಸರಕಾರದಲ್ಲಿ ಶರಣ ಪ್ರಕಾಶ್ ಪಾಟೀಲ್ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದಾರೆ.
2004ರಲ್ಲಿ ರಾಜಕುಮಾರ್ ಪಾಟೀಲ್ ತೆಲ್ಕೂರ್ ರನ್ನು 4 ಸಾವಿರ ಮತಗಳ ಅಂತರದಿಂದ ಶರಣ ಪ್ರಕಾಶ್ ಪಾಟೀಲ್ ಸೋಲಿಸಿದ್ದರು. 2008ರ ಗೆಲುವಿನ ಅಂತರ 6 ಸಾವಿರ ಮತಗಳಿಗೆ ಏರಿಕೆಯಾಗಿತ್ತು. 2013ರಲ್ಲಿ ಇಲ್ಲಿ ಪುನಃ ಗೆದ್ದ ಶರಣ ಪ್ರಕಾಶ್ ಪಾಟೀಲ್ ಗೆಲುವಿನ ಅಂತರವನ್ನು 11 ಸಾವಿರಕ್ಕೂ ಹೆಚ್ಚು ಮತಗಳಿಗೆ ಹೆಚ್ಚಿಸಿಕೊಂಡಿದ್ದರು.
ಇಲ್ಲಿ ಈ ಬಾರಿಯೂ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ನಿಚ್ಚಳವಾಗಿದೆ. ಆದರೆ ಬಿಜೆಪಿ ಮನಸ್ಸು ಮಾಡಿದರೆ ಈ ಬಾರಿ ಗೆಲ್ಲಲೂಬಹುದು. ಕ್ಷೇತ್ರದಲ್ಲಿ ಜೆಡಿಎಸ್ ಗೂ ನೆಲೆ ಇದ್ದು ಪ್ರಬಲ ಪೈಪೋಟಿ ನೀಡಲೂಬಹುದು.