ಕ್ಷೇತ್ರ ಪರಿಚಯ: ರಾಮನಗರದಲ್ಲಿ ಕುಮಾರಸ್ವಾಮಿ ಸೋಲಿಸುವುದು ಸುಲಭವಲ್ಲ
ರಾಮನಗರ ಜಿಲ್ಲಾ ಕೇಂದ್ರವೂ ಹೌದು ತಾಲೂಕು ಕೇಂದ್ರವೂ ಹೌದು. ರಾಜಧಾನಿ ಬೆಂಗಳೂರಿನಿಂದ 47 ಕಿಲೋಮೀಟರ್ ದೂರದಲ್ಲಿರುವ ರಾಮನಗರ ರೇಷ್ಮೆ ನಗರವೆಂದು ಖ್ಯಾತಿಗಳಿಸಿದೆ. ವಿಶ್ವ ವಿಖ್ಯಾತ ಮೈಸೂರು ರೇಷ್ಮೆ ಸೀರೆಗಳನ್ನು ರಾಮನಗರದ ರೇಷ್ಮೆಯನ್ನು ಬಳಸಿಯೇ ನೇಯಲಾಗುತ್ತದೆ.
70ರ ದಶಕದಲ್ಲಿ ಇಲ್ಲಿ 'ಶೋಲೆ' ಚಲನಚಿತ್ರದ ಚಿತ್ರೀಕರಣ ನಡೆದ ನಂತರ ರಾಮನಗರ ಪಟ್ಟಣ ಏಕಾಏಕಿ ಪ್ರಸಿದ್ದಿಗೆ ಬಂತು.
ರಾಮನಗರದಲ್ಲಿ ಅಪರೂಪದ ಬೆಟ್ಟಗುಡ್ಡಗಳು, ಬೃಹತ್ ಶಿಲೆಗಳಿವೆ. ಈ ಬೆಟ್ಟಗಳಲ್ಲಿ ಅಳಿವಿನಂಚಿನಲ್ಲಿರುವ ಹಳದಿ ಕುತ್ತಿಗೆಯ ಬುಲ್ ಬುಲ್ ಹಾಗು ಉದ್ದ ಕೊಕ್ಕಿನ ರಣಹದ್ದುಗಳು ಮನೆ ಮಾಡಿಕೊಂಡಿವೆ. ಇದನ್ನು ನೋಡಲೆಂದೇ ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲೇ ಜಾನಪದ ಲೋಕವಿದ್ದು ಕರ್ನಾಟಕದ ಜಾನಪದ ಕಲೆ ಹಾಗು ಸಂಸ್ಕೃತಿಗೆ ಸಂಬಂಧಪಟ್ಟ ಸಣ್ಣ ವಸ್ತು ಸಂಗ್ರಹಾಲಯವನ್ನೂ ಕಾಣಬಹುದು.
ರಾಜಕೀಯಕ್ಕೆ ಬಂದರೆ ರಾಮನಗರ ಕಾಂಗ್ರೆಸ್ ಹುರಿಯಾಳು ಸಿ.ಎಂ. ಲಿಂಗಪ್ಪ ಮತ್ತು ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡರ ಕುಟುಂಬಗಳ ನಡುವಿನ ಕಲಹಕ್ಕೆ ಪ್ರಸಿದ್ಧಿ ಪಡೆದಿದೆ.
1985ರಲ್ಲಿ ನಡೆದ ಚುನಾವಣೆಯಲ್ಲಿ ಸಿ.ಎಂ. ಲಿಂಗಪ್ಪ ಸ್ಪರ್ಧಿಸಿ 2 ಸಾವಿರ ಮತಗಳಿಂದ ಸೋಲು ಕಂಡಿದ್ದರು. ಈ ಚುನಾವಣೆಯಲ್ಲಿ ಜನತಾ ಪಕ್ಷದ ಪುಟ್ಟಸ್ವಾಮಿ ಗೌಡ ಗೆಲುವು ಸಾಧಿಸಿದ್ದರು. 1989ರಲ್ಲಿ ಸಿ.ಎಂ. ಲಿಂಗಪ್ಪ 38 ಸಾವಿರ ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದರು.
ಕ್ಷೇತ್ರ ಪರಿಚಯ: ಕನಕಪುರದಲ್ಲಿ ಡಿಕೆಶಿ ಅಶ್ವಮೇಧಕ್ಕೆ ಲಗಾಮು ಸಾಧ್ಯವೇ?
1994ರಲ್ಲಿ ಇಲ್ಲಿ ಕಣಕ್ಕಿಳಿದ ದೇವೇಗೌಡರು ಲಿಂಗಪ್ಪ ಕೋಟೆಗೆ ಲಗ್ಗೆ ಹಾಕಿ 9 ಸಾವಿರ ಮತಗಳಿಂದ ಜಯಗಳಿಸಿದ್ದರು. ನಂತರ ದೇವೇಗೌಡರು ಮುಖ್ಯಮಂತ್ರಿಯಾದರು. 1996ರಲ್ಲಿ ದೇವೇಗೌಡರು ಪ್ರಧಾನಿಯಾಗಿದ್ದರಿಂದ ಈ ಕ್ಷೇತ್ರವನ್ನು ತೊರೆದು ಕೇಂದ್ರದತ್ತ ತೆರಳಿದರು.
ಅದೇ ವರ್ಷ ನಡೆದ ಉಪ ಚುನಾವಣೆಯಲ್ಲಿ ಲಿಂಗಪ್ಪ ಮತೆ ಜಯ ಸಾಧಿಸಿದರು. 9 ಸಾವಿರ ಮತಗಳಿಂದ ಅವತ್ತಿನ ಜನತಾದಳದ ಎಂ.ಎಚ್. ಅಂಬರೀಶ್ (ಸಿನಿಮಾ ನಟ) ವಿರುದ್ಧ ಗೆಲುವು ಸಾಧಿಸಿದ್ದರು.
1999ರಲ್ಲಿ ಮತ್ತೆ ಸಿ.ಎಂ. ಲಿಂಗಪ್ಪ ಗೆಲುವು ಸಾಧಿಸಿದರು. ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನು 20 ಸಾವಿರ ಮತಗಳಿಂದ ಸೋಲಿಸಿದ್ದರು.
2004ರಲ್ಲಿ ಇಲ್ಲಿಗೆ ದೇವೇಗೌಡರ ಪುತ್ರ ಎಚ್.ಡಿ. ಕುಮಾರಸ್ವಾಮಿ ಆಗಮನವಾಯಿತು. ಸಿ.ಎಂ. ಲಿಂಗಪ್ಪರನ್ನು ಕುಮಾರಸ್ವಾಮಿ ಬರೋಬ್ಬರಿ 25 ಸಾವಿರ ಮತಗಳಿಂದ ಸೋಲಿಸಿ ವಿಧಾನಸೌಧದ ಮೆಟ್ಟಿಲು ಹತ್ತಿದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಇದೇ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.
2008 ರಲ್ಲಿ ಇಲ್ಲಿ ಪುನಃ ಗೆದ್ದ ಕುಮಾರಸ್ವಾಮಿ 47 ಸಾವಿರ ಭರ್ಜರಿ ಮತಗಳ ಅಂತರದಿಂದ ವಿಜಯ ಸಾಧಿಸಿದರು. ಈ ಬಾರಿ ಎರಡನೇ ಸ್ಥಾನ ಬಿಜೆಪಿ ಅಭ್ಯರ್ಥಿ ಪಾಲಾಗಿತ್ತು.
2009ರಲ್ಲಿ ಕುಮಾರಸ್ವಾಮಿ ಲೋಕಸಭೆಗೆ ಪ್ರವೇಶ ಪಡೆದಿದ್ದರಿಂದ ಇಲ್ಲಿ ಉಪ ಚುನಾವಣೆ ನಡೆಯಿತು. ಈ ಉಪ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಕೆ. ರಾಜು ಕಾಂಗ್ರೆಸ್ ನ ಸಿ.ಎಂ. ಲಿಂಗಪ್ಪರನ್ನು 22 ಸಾವಿರ ಮತಗಳಿಂದ ಸೋಲಿಸಿದರು.
2013ರಲ್ಲಿ ಇಲ್ಲಿಗೆ ಪುನಃ ಮರಳಿದ ಕುಮಾರಸ್ವಾಮಿ 25 ಸಾವಿರ ಮತಗಳಿಂದ ಗೆಲುವು ಸಾಧಿಸಿದರು. ಈ ಬಾರಿ ಲಿಂಗಪ್ಪ ಸ್ಪರ್ಧಿಸಿರಲಿಲ್ಲ. ಅವರ ಜಾಗದಲ್ಲಿ ಕಣಕ್ಕಿಳಿದಿದ್ದ ಮರಿದೇವರು ಕೇವಲ 58 ಸಾವಿರ ಮತಗಳಿಸಲಷ್ಟೇ ಶಕ್ತರಾಗಿದ್ದರು.
ಹೀಗೆ ಕಳೆದ 4 ಚುನಾವಣೆಗಳಲ್ಲಿ ಜೆಡಿಎಸ್ ಇಲ್ಲಿ ಗೆಲುವು ಸಾಧಿಸುವುದರೊಂದಿಗೆ ಕ್ಷೇತ್ರದ ಮೇಲೆ ಭಾರೀ ಹಿಡಿತ ಹೊಂದಿದೆ. ಮುಖ್ಯಮಂತ್ರಿಯಾಗುತ್ತೇನೆ ಎಂಬ ಹುಮ್ಮಸ್ಸಿನಲ್ಲಿ ಕುಮಾರಸ್ವಾಮಿ ಓಡಾಡುತ್ತಿರುವುದರಿಂದ ಇಲ್ಲಿ ಈ ಬಾರಿಯೂ ಅವರು ಗೆಲುವಿಗೆ ಕಷ್ಟಪಡಬೇಕಿಲ್ಲ. ಆದರೆ ಕಾಂಗ್ರೆಸ್ ಗೆ ಪೈಪೋಟಿ ನೀಡುವ ಕ್ಷೀಣ ಅವಕಾಶಗಳಿವೆ. ಒಂದು ಕಾಲದಲ್ಲಿ ಕ್ಷೇತ್ರದಲ್ಲಿ ಎರಡನೇ ಸ್ಥಾನ ಪಡೆಯುತ್ತಿದ್ದ ಬಿಜೆಪಿ ಮಾತ್ರ ಸದ್ಯ ಹೇಳ ಹೆಸರಿಲ್ಲದಂತಾಗಿದೆ.