ಕ್ಷೇತ್ರ ಪರಿಚಯ : ಬೆಂಗಳೂರಿನ ಹೆಬ್ಬಾಗಿಲಿನಲ್ಲಿ ಯಾರಿಗೆ ಜಯ?
ಎರಡು ರಾಷ್ಟ್ರೀಯ ಹೆದ್ದಾರಿಗಳನ್ನು ತನ್ನ ಒಡಲಲ್ಲಿ ಹೊಂದಿರುವ ಕ್ಷೇತ್ರ ನೆಲಮಂಗಲ. ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೆಬ್ಬಾಗಿಲು ಎಂದು ನೆಲಮಂಗಲವನ್ನು ಕರೆಯಲಾಗುತ್ತದೆ.
ಬೆಂಗಳೂರು-ಮಂಗಳೂರು, ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯನ್ನು ಒಡಲಿಲ್ಲಿ ಹೊಂದಿದೆ ನೆಲಮಂಗಲ. ರಾಷ್ಟ್ರೀಯ ಹೆದ್ದಾರಿ ಇರುವ ಕಾರಣಕ್ಕೆ ರಸ್ತೆ ಅಕ್ಕ-ಪಕ್ಕದ ಭೂಮಿಗೆ ಬಂಗಾರದ ಬೆಲೆ ಇದೆ. ಹಲವಾರು ಕೆರೆಗಳನ್ನು ಕ್ಷೇತ್ರ ಹೊಂದಿದೆ. ಕೆರೆಗೆ ನೀರನ್ನು ಆರಸಿ ಬರುವ ಆನೆಗಳು ರೈತರ ಬೆಳೆಗೆ ಸಂಕಷ್ಟ ತರುತ್ತವೆ.
ಕಿರ್ಲೋಸ್ಕರ್, ಜಿಂದಾಲ್ ಸೇರಿದಂತೆ ವಿವಿಧ ಕಂಪನಿ, 30ಕ್ಕೂ ಹೆಚ್ಚು ಬ್ಯಾಂಕುಗಳು, ಎರಡು ಕೈಗಾರಿಕಾ ಪ್ರದೇಶಗಳು, ನೀರು ಕಲುಷಿತಗೊಂಡಿರುವ ಬೃಹತ್ ಕೆರೆ ಕ್ಷೇತ್ರದ ವ್ಯಾಪ್ತಿಯಲ್ಲಿದೆ.
ವಿಶ್ವಶಾಂತಿ ಆಶ್ರಮ, ಮಹಾಲಿಂಗೇಶ್ವರ ದೇವಾಲಯ, ಶಿವಗಂಗೆ ಬೆಟ್ಟ ಸೇರಿದಂತೆ ವಿವಿಧ ಪ್ರವಾಸಿ ತಾಣಗಳನ್ನು ಕ್ಷೇತ್ರ ಒಳಗೊಂಡಿದೆ. ಬೆಂಗಳೂರು ನಗರಕ್ಕೆ ಹತ್ತಿರದಲ್ಲಿರುವುದರಿಂದ ವಾರಾಂತ್ಯದಲ್ಲಿ ಪ್ರವಾಸಿ ತಾಣಗಳಲ್ಲಿ ಜನರು ಹೆಚ್ಚಿರುತ್ತಾರೆ.
ರಾಜಕೀಯವಾಗಿ ಕ್ಷೇತ್ರ ಜೆಡಿಎಸ್ ವಶದಲ್ಲಿದೆ. ಶಾಸಕ ಡಾ.ಶ್ರೀನಿವಾಸಮೂರ್ತಿ ಕ್ಷೇತ್ರದ ಶಾಸಕರು. ಈ ಕ್ಷೇತ್ರದಲ್ಲಿ ಒಂದು ಬಾರಿ ಮಾತ್ರ ಬಿಜೆಪಿ ಗೆದ್ದಿರುವುದು ಅಚ್ಚರಿಯ ಸಂಗತಿ. ಬಿಜೆಪಿ ಕ್ಷೇತ್ರದಲ್ಲಿ ಯಶಸ್ವಿಯಾಗಲು ಪ್ರಯತ್ನ ಪಡುತ್ತಲೇ ಇದೆ.
ಬಿಜೆಪಿಯ ಎಂ.ವಿ.ನಾಗರಾಜು ಒಮ್ಮೆ ಕ್ಷೇತ್ರದಲ್ಲಿ ಗೆದಿದ್ದರು. ಉಳಿದಂತೆ ಕಾಂಗ್ರೆಸ್-ಜೆಡಿಎಸ್ ಗೆಲುವು ಸಾಧಿಸುತ್ತಿವೆ. ಡಾ.ಶ್ರೀನಿವಾಸ ಮೂರ್ತಿ ಅವರಿಗೆ ಈ ಬಾರಿಯೂ ಜೆಡಿಎಸ್ ಟಿಕೆಟ್ ಖಚಿತ. ಕಾಂಗ್ರೆಸ್ನ ಅಂಜನಮೂರ್ತಿ ಕಳೆದ ಚುನಾವಣೆಯಲ್ಲಿ 15 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದರು.
ಡಾ.ಶ್ರೀನಿವಾಸಮೂರ್ತಿ ಜನರ ಕೈಗೆ ಸುಲಭವಾಗಿ ಸಿಗುತ್ತಾರೆ. ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಕಾಂಗ್ರೆಸ್ ಮತ್ತೆ ಅಂಜನಮೂರ್ತಿ ಅವರಿಗೆ ಟಿಕೆಟ್ ಕೊಡಲಿದೆ. ಈ ಬಾರಿ ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಇನ್ನೂ ಖಚಿತವಾಗಿಲ್ಲ.
2013ರ ಚುನಾವಣೆಯಲ್ಲಿ ಡಾ.ಕೆ.ಶ್ರೀನಿವಾಸಮೂರ್ತಿ ಅವರು 60,492 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ನ ಅಂಜನಮೂರ್ತಿ ಅವರು 45,389 ಮತ, ಎಂ.ವಿ.ನಾಗರಾಜು ಅವರು 19,368 ಮತಗಳನ್ನು ಪಡೆದಿದ್ದರು.