ಮಾಯಕೊಂಡ ಮೀಸಲು ಕ್ಷೇತ್ರದಲ್ಲಿ ಗೆಲುವು ಯಾರಿಗೆ ಮೀಸಲು?
ಪರಿಶಿಷ್ಟ ಜಾತಿಗೆ ಮೀಸಲಾದ ವಿಧಾನಸಭಾ ಕ್ಷೇತ್ರ ಮಾಯಕೊಂಡ. ಆದರೆ, ಇಲ್ಲಿನ ದಲಿತರ ಕಾಲೋನಿಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಕುಡಿಯುವ ನೀರು ಶೌಚಾಲಯ, ಸಮುದಾಯ ಭವನ ಮುಂತಾದ ಸೌಕರ್ಯಗಳ ಅಗತ್ಯವಿದೆ.
ಯುವಕರಿಗೆ ಸರಿಯಾದ ಉದ್ಯೋಗ ಸಿಕ್ಕಿಲ್ಲ. ಅಡಿಕೆ ಸುಲಿಯುವುದು, ಜೋಳದ ತೆನೆ ಮುರಿಯುವುದು ಹೀಗೆ ಹಲವು ಕೃಷಿ ಸಂಬಂಧಿಸಿದ ಚಟುವಟಿಕೆಗಳ ಮೇಲೆ ಕ್ಷೇತ್ರದ ಹಲವು ಜನರು ಅವಲಂಬಿತರಾಗಿದ್ದಾರೆ.
ಕ್ಷೇತ್ರ ಪರಿಚಯ : ದಾವಣಗೆರೆ ಉತ್ತರದಲ್ಲಿ ಯಾರಿಗೆ ಗೆಲುವು?
2013ರ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿ ಲಿಂಗಣ್ಣ ಕೇವಲ 694 ಮತಗಳಿಂದ ಕ್ಷೇತ್ರದಲ್ಲಿ ಸೋಲು ಕಂಡಿದ್ದರು. ಕ್ಷೇತ್ರದ ಹಾಲಿ ಶಾಸಕರು ಕಾಂಗ್ರೆಸ್ನ ಕೆ.ಶಿವಮೂರ್ತಿ.
ಕಳೆದ ಚುನಾವಣೆಯಲ್ಲಿ ಪಕ್ಷೇತರ ಸದಸ್ಯರಾಗಿ ಸ್ಪರ್ಧಿಸಿದ್ದ ಆನಂದಪ್ಪ, ಡಾ.ವೈ.ರಾಮಪ್ಪ ಹೆಚ್ಚು ಮತಗಳನ್ನು ಪಡೆದು ಗಮನ ಸೆಳೆದಿದ್ದರು. ಈ ಬಾರಿ ಬಿ.ಎಸ್.ಯಡಿಯೂರಪ್ಪ ಅವರು ಆನಂದಪ್ಪ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂಬ ಸುದ್ದಿ ಹಬ್ಬಿದೆ.
ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಮಾಜಿ ಶಾಸಕ ಎಂ.ಬಸವನಾಯ್ಕ, ಎಚ್.ಆನಂದಪ್ಪ, ಪ್ರೊ.ಲಿಂಗಣ್ಣ, ಎಸ್.ಕೆ.ಬಸವರಾಜ್ ಸೇರಿದಂತೆ ಹಲವರು ಬಿಜೆಪಿ ಟಿಕೆಟ್ಗಾಗಿ ಪ್ರಯತ್ನ ಮಾಡುತ್ತಿದ್ದಾರೆ.
ಕಳೆದ ಬಾರಿ ಜೆಡಿಸ್ನಿಂದ ಸ್ಪರ್ಧಿಸಿದ್ದ ಕೆ.ಜಿ.ಆರ್.ನಾಯ್ಕ 11,596 ಮತಗಳನ್ನು ಪಡೆದಿದ್ದರು. ಈ ಬಾರಿ ಯಾರು ಅಭ್ಯರ್ಥಿ? ಎಂಬುದು ಇನ್ನೂ ಅಂತಿಮವಾಗಿಲ್ಲ. ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ಪ್ರಯತ್ನ ನಡೆಸಲಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿಯೂ ಬಿಜೆಪಿ ಮತ್ತು ಕಾಂಗ್ರೆಸ್ ಪೈಪೋಟಿ ನಿಶ್ಚಿತವಾಗಿದೆ. ಎಂ.ಬಸವನಾಯ್ಕ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಈ ಬಾರಿ ಆಕಾಂಕ್ಷಿಗಳು ಹೆಚ್ಚಿದ್ದು, ಅಭ್ಯರ್ಥಿ ಯಾರು? ಎಂದು ಅಂತಿಮವಾಗಿಲ್ಲ.
2013ರ ಚುನಾವಣೆಯಲ್ಲಿ ಕೆ.ಶಿವಮೂರ್ತಿ ಅವರು 32,435 ಮತಗಳನ್ನು ಪಡೆದಿದ್ದರು. ಕೆಜೆಪಿಯ ಎನ್.ಲಿಂಗಣ್ಣ 31,741 ಮತ, ಬಿಜೆಪಿಯ ಎಂ.ಬಸವರಾಜ ನಾಯ್ಕ 17,658 ಮತ, ಜೆಡಿಸ್ನ ಕೆ.ಜಿ.ಆರ್.ನಾಯಕ 11,596 ಮತಗಳನ್ನು ಪಡೆದಿದ್ದರು.