ಕುಷ್ಟಗಿ ಕ್ಷೇತ್ರ ಪರಿಚಯ: ಬಿಜೆಪಿ-ಕಾಂಗ್ರೆಸ್ ನಡುವೆ ಜಿದ್ಧಾಜಿದ್ದಿಯ ಹೋರಾಟ
ಕೊಪ್ಪಳ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಒಂದು ತಾಲೂಕು ಕುಷ್ಟಗಿ. ದಾಳಿಂಬೆ ಮತ್ತು ಪಪ್ಪಾಯಿ ಬೆಳೆಯನ್ನು ಇಲ್ಲಿ ಹೆಚ್ಚಾಗಿ ಕಾಣಬಹುದು.
ಇಲ್ಲಿನ ದೋಟಿಹಾಳದಲ್ಲಿರುವ ಶ್ರೀಅವದೂತ ಶುಕಮುನಿ ತಾತನ ದೇವಾಲಯ, ಕಪಿಲತೀರ್ಥ ಜಲಪಾತ, ಹನುಮಸಾಗರ ಜನಪ್ರಿಯವಾಗಿವೆ. ಪವನ ಶಕ್ತಿ ಉತ್ಪಾದನೆಗೂ ಹನುಮಸಾಗರ ಹೆಸರು ಪಡೆದಿದೆ.
ಬಿಜೆಪಿಯ ದೊಡ್ಡನಗೌಡ ಹನಮಗೌಡ ಪಾಟೀಲ್ ಕುಷ್ಟಗಿಯ ಹಾಲಿ ಶಾಸಕರಾಗಿದ್ದಾರೆ. 2004ರಲ್ಲೂ ಶಾಸಕರಾಗಿದ್ದ ದೊಡ್ಡಗೌಡ ಪಾಟೀಲ್ 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಮರೆಗೌಡ ಲಿಂಗನಗೌಡ ಬಯ್ಯಪುರ್ ಅವರನ್ನು 3,023 ಮತಗಳಿಂದ ಸೋಲಿಸಿದ್ದರು. ಈ ಚುನಾವಣೆಯಲ್ಲಿ ದೊಡ್ಡನಗೌಡ ಪಾಟೀಲ್ 44,007 ಮತಗಳನ್ನು ಪಡೆದಿದ್ದರೆ, ಪರಾಭವವೊಂಡ ಲಿಂಗನಗೌಡ 40,970 ಮತಗಳನ್ನು ಪಡೆದಿದ್ದರು.
ಜೆಡಿಎಸ್ ಅಭ್ಯರ್ಥಿ ಕೆ ಶರಣಪ್ಪ ವಕೀಲರು ಈ ಚುನಾವಣೆಯಲ್ಲಿ 26,691 ಮತಗಳನ್ನು ಪಡೆದಿದ್ದರು.
ಈ ಬಾರಿ ಬಿಜೆಪಿ ಹಾಲಿ ಶಾಸಕ ದೊಡ್ಡನಗೌಡ ಹನಮಗೌಡ ಪಾಟೀಲ್ ಅವರಿಗೆ ಮತ್ತೆ ಟಿಕೆಟ್ ನೀಡಿದೆ. ಕಾಂಗ್ರೆಸ್ 2008ರಲ್ಲಿ ಗೆದ್ದಿದ್ದ ಅಮರೇಗೌಡ ಪಾಟೀಲ್ ಬಯ್ಯಾಪುರ್ ಅವರಿಗೆ ಮತ್ತೆ ಟಿಕೆಟ್ ನೀಡಿ ಕಣಕ್ಕಿಳಿಸಿದೆ. ಜೆಡಿಎಸ್ ಕಳೆದ ಬಾರಿಯ ಅಭ್ಯರ್ಥಿಯನ್ನು ಬದಲಿಸಿ ಈ ಬಾರಿ ಶಿವಪ್ಪ ನೀರಾವರಿ ಅವರಿಗೆ ಮಣೆ ಹಾಕಿದೆ.
2013ರ ಚುನಾವಣೆಯಲ್ಲಿ ಕೇವಲ 3,023 ಮತಗಳಿಂದ ಸೋತಿದ್ದ ಕಾಂಗ್ರೆಸ್ ನ ಅಮರೇಗೌಡ ಪಾಟೀಲ್ ಬಯ್ಯಾಪುರ್ ಈ ಬಾರಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಆದರೆ ಬಿಜೆಪಿಯ ಹಾಲಿ ಶಾಕರು ಸೋಲುತ್ತಾರಾ ಕಾದು ನೋಡಬೇಕಿದೆ.