ಹುಣಸೂರು ಕ್ಷೇತ್ರ ಪರಿಚಯ : ಕಾಂಗ್ರೆಸ್ ತಿಕ್ಕಾಟ, ಜೆಡಿಎಸ್ಸಿಗೆ ಲಾಭ
ಈ ಕ್ಷೇತ್ರದಲ್ಲಿ ಪ್ರಮುಖವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿಯಿದ್ದು, ಬಿಜೆಪಿ ಮೂರನೇ ಸ್ಥಾನದಲ್ಲಿದೆ. ಇಲ್ಲಿ ಬಿಜೆಪಿ ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬುವುದರಲ್ಲಿ ಎರಡು ಮಾತಿಲ್ಲ.
ಹಾಲಿ ಶಾಸಕರ ಬಗ್ಗೆ ಇಲ್ಲಿ ಉತ್ತಮ ಅಭಿಪ್ರಾಯವಿದೆ. ಒಕ್ಕಲಿಗ, ದಲಿತರ ಮತಗಳು ಹೆಚ್ಚಿರುವ ಈ ಕ್ಷೇತ್ರದಲ್ಲಿ ತಮ್ಮ ಪುತ್ರನನ್ನು ಕಣಕ್ಕಿಳಿಸಲು ಜಿ.ಟಿ. ದೇವೇಗೌಡ ಪ್ರಯತ್ನ ನಡೆಸಿದ್ದಾರೆ.
ಆದರೆ, ಬಿಜೆಪಿಯು ವಿಜಯ ಶಂಕರ್ ಅವರಿಗೆ ಪಿರಿಯಾ ಪಟ್ಟಣದ ಬದಲಿಗೆ ಇಲ್ಲಿ ಅವಕಾಶ ನೀಡಬಹುದೇ ಎಂಬ ಲೆಕ್ಕಾಚಾರವಿದೆ. ಜತೆಗೆ ಒಂದು ಕಾಲದಲ್ಲಿ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡು ಈಗ ಜೆಡಿಎಸ್ ನಲ್ಲಿರುವ ಕುರುಬ ಸಮುದಾಯದ ಪ್ರಭಾವಿ ನಾಯಕ ಎಚ್ ವಿಶ್ವನಾಥ್ ಅವರು ಕೂಡಾ ಟಿಕೆಟ್ ಆಕಾಂಕ್ಷಿ.
ಅತ್ತ, ಎಚ್.ಡಿ. ಕೋಟೆಯ ಶಾಸಕ ದಿವಂಗತ ಚಿಕ್ಕಮಾದುಗೂ ತಮ್ಮ ಪುತ್ರನನ್ನು ಇದೇ ಕ್ಷೇತ್ರದಲ್ಲೇ ಕಣಕ್ಕಿಳಿಸಬೇಕು ಎಂದು ಆಶಿಸಿದ್ದರು. ಇದೇ ಕಾರಣಕ್ಕಾಗಿಯೇ ಜಿ.ಟಿ. ದೇವೇಗೌಡ ಹಾಗೂ ಚಿಕ್ಕಮಾದು ಅವರಿಗೂ ಕೊಂಚ ಇರುಸು ಮುರುಸು ಉಂಟಾಗಿತ್ತು ಎಂದು ಹೇಳಲಾಗಿದೆ. ಈಗ ಚಿಕ್ಕಮಾದು ಅವರ ಕುಟುಂಬದಿಂದ ವಿರೋಧ ವ್ಯಕ್ತವಾಗದ ಹಿನ್ನೆಲಯಲ್ಲಿ ಇಲ್ಲಿ ಜೆಡಿಎಸ್ ಜಯಭೇರಿ ಗ್ಯಾರಂಟಿ. ಇದಕ್ಕೆ ಸ.ರಾ. ಮಹೇಶ್ (ಪಕ್ಕದ ಕೆ.ಆರ್. ನಗರ ಕ್ಷೇತ್ರದ ಶಾಸಕ) ಸಾಥ್ ಕೊಟ್ಟರೆ ಅದಿನ್ನೂ ಸುಲಭ ಎನ್ನಲಾಗುತ್ತಿದೆ.
ಹುಣಸೂರು ಶಾಸಕ ಮಂಜುನಾಥ್ ಖೆಡ್ಡಾಕ್ಕೆ ಬಿದ್ರಾ? ವಿಶ್ವನಾಥ್ ಪ್ಲಸ್ಸಾ!
2013ರ ಫಲಿತಾಂಶ: 2013ರಲ್ಲಿ ಶೇ 79.35ರಷ್ಟು ಮತದಾನವಾಗಿತ್ತು. ಇಲ್ಲಿ ಇರುವ ಒಟ್ಟು ಮತದಾರರ ಸಂಖ್ಯೆ 2,07,362. ಪುರುಷ ಮತದಾರರ ಸಂಖ್ಯೆ 1,05,511. ಇನ್ನು, ಮಹಿಳಾ ಮತದಾರರ ಸಂಖ್ಯೆ 1,01,846. ಈ ಕ್ಷೇತ್ರದಲ್ಲಿ 2013ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಎಚ್ .ಪಿ. ಮಂಜುನಾಥ್, 83,930 ಮತಗಳನ್ನು ಗಳಿಸಿದ್ದರು. ಅವರ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್ ನ ಕುಮಾರಸ್ವಾಮಿ 43,723 ಮತಗಳನ್ನು ಪಡೆದು ಸೋಲು ಕಂಡಿದ್ದರು. ಸುಮಾರು 40, 207(ಶೇ 24.90) ಅಂತರದಿಂದ ಮಂಜುನಾಥ್ ಗೆಲುವು ಸಾಧಿಸಿದ್ದರು.