ಕ್ಷೇತ್ರ ಪರಿಚಯ : ಹುನಗುಂದದಲ್ಲಿ ಗೆಲುವು ಯಾರಿಗೆ?
ಬಾಗಲಕೋಟೆ ಜಿಲ್ಲೆಯ ಒಂದು ತಾಲೂಕು ಕೇಂದ್ರ ಹುನಗುಂದ. ಈ ತಾಲೂಕಿನಲ್ಲಿರುವ ಐಹೊಳೆಯನ್ನು ಭಾರತದ ವಾಸ್ತುಶಿಲ್ಪದ ತೊಟ್ಟಿಲು ಎಂದು ಕರೆಯುತ್ತಾರೆ. 12ನೇ ಶತಮಾನದ ಸಮಾಜ ಸುಧಾರಕರಾದ ಬಸವಣ್ಣ ಅವರು ಐಕ್ಯರಾದ ಕೂಡಲ ಸಂಗಮ ಈ ಕ್ಷೇತ್ರದ ವ್ಯಾಪ್ತಿಯಲ್ಲಿದೆ.
ಇಲ್ಲಿ ತಯಾರಾಗುವ ರೇಷ್ಮೆ ಸೀರೆ ವಿಶ್ವಪ್ರಸಿದ್ಧಿ ಪಡೆದಿದೆ. ಗ್ರಾನೈಟ್ ವ್ಯವಹಾರದಲ್ಲಿಯೂ ಕ್ಷೇತ್ರದ ಹೆಸರು ಚಿರಪರಿಚಿತ. ಇಲ್ಲಿ ದೊರೆಯುವ ಗುಲಾಬಿ ಬಣ್ಣದ ಗ್ರಾನೈಟ್ ಅನೇಕ ದೇಶಗಳಿಗೆ ರಫ್ತಾಗುತ್ತದೆ. ಕೃಷ್ಣಾ ಮತ್ತು ಮಲಪ್ರಭ ಈ ತಾಲೂಕಿನ ಪ್ರಮುಖ ನದಿಗಳು.
ಬಾಗಲಕೋಟೆ ಜಿಲ್ಲೆಯ ಕ್ಷೇತ್ರಗಳ ಪರಿಚಯ ಓದಿ
ಹುನಗುಂದ ಕ್ಷೇತ್ರದ ಕಾಂಗ್ರೆಸ್ ಹಾಲಿ ಶಾಸಕರು ವಿಜಯಾನಂದ ಕಾಶಪ್ಪನವರ್. ಅವರ ಮೇಲೆ ಅಂತಹ ಯಾವುದೇ ಗಂಭೀರ ಆರೋಪಗಳಿಲ್ಲ. ಆದರೆ, ಬೆಂಗಳೂರಿನ ಸ್ಕೈ ಬಾರ್ನಲ್ಲಿ ನಡೆದ ಗಲಾಟೆ ಸೇರಿದಂತೆ, ಕ್ಷೇತ್ರದಲ್ಲಿ ಸ್ವಲ್ಪ ಒರಟು ಸ್ವಭಾವದ ಶಾಸಕ ಎನ್ನುವ ಮಾತುಗಳಿವೆ.
ಶಾಸಕರು ಅಭಿವೃದ್ಧಿ ಕಾರ್ಯಗಳತ್ತ ಹೆಚ್ಚು ಗಮನ ಹರಿಸಿದ್ದಾರೆ ಎನ್ನುತ್ತಾರೆ ಕಾರ್ಯಕರ್ತರು. ದೇಶದ ದೊಡ್ಡ ಯೋಜನೆ ಹನಿ ನೀರಾವರಿ ಯೋಜನೆ ಈ ಭಾಗದಲ್ಲಿ ಸಂಪೂರ್ಣಗೊಂಡಿದ್ದು ಈ ಬಾರಿ ಇವರಿಗೆ ದೊಡ್ಡ ಪ್ಲಸ್ ಪಾಯಿಂಟ್.
ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದ ಮುಖಂಡರು. ಕ್ಷೇತ್ರದಲ್ಲಿ ಲಿಂಗಾಯತ ಮಗಳೇ ನಿರ್ಣಾಯಕ. ಈಗ ಮತ್ತೆ ಬಿಜೆಪಿಯಲ್ಲಿ ಶುರುವಾಗಿರುವ ಗೊಂದಲಗಳು ಈ ಬಾರಿ ಮತ್ತೆ ಕಾಶಪ್ಪನವರ್ ಗೆಲುವಿಗೆ ಸಹಕಾರ ನೀಡಲಿವೆ ಎಂಬ ಮಾತುಗಳೂ ಇವೆ.
ಆಕಾಂಕ್ಷಿಗಳು ಹಾಗೂ ಗೆಲವು : ಕಾಂಗ್ರೆಸ್ ಪಕ್ಷದಲ್ಲಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಿಲ್ಲ. ಕಾಶಪ್ಪನವರ್ ಅವರೇ ಕಣಕ್ಕಿಳಿಯುವ ಅಭ್ಯರ್ಥಿ. ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಪ್ರಬಲ ನಾಯಕರಾಗಿದ್ದ ದಿವಂಗತ ಎಸ್.ಆರ್.ಕಾಶಪ್ಪನವರ್ ಪುತ್ರರು ವಿಜಯಾನಂದ ಕಾಶಪ್ಪನವರ್.
ಬಿಜೆಪಿಯಿಂದ 2013ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಕಂಡಿದ್ದ ದೊಡ್ಡನಗೌಡ ಪಾಟೀಲ್ ಈ ಬಾರಿ ಮತ್ತೆ ಕಿಣಕ್ಕಿಳಿಯಲಿದ್ದಾರೆ. ಆದರೆ, ಹುನಗುಂದ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಬಹಳ ದೊಡ್ಡದಿದೆ. ಎಂ.ಎಸ್.ಪಾಟೀಲರಿಂದ ಹಿಡಿದು ಸುಮಾರು 10 ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ.
ಕ್ಷೇತ್ರದಲ್ಲಿ ಇತ್ತೀಚಿಗಷ್ಟೇ ಈ ಭಾಗದ ಪ್ರಬಲ ಮುಖಂಡ ಎಂದು ಗುರುತಿಸಿಕೊಂಡಿರುವ ಎಸ್.ಆರ್.ನವಲಿಹಿರೇಮಠ ಅವರು ಬಿಜೆಪಿಯಿಂದ ಸ್ಪರ್ಧಿಸುತ್ತೇನೆ ಎಂದು ಹೇಳಿರುವುದು ಬಿಜೆಪಿಯಲ್ಲಿ ಗೊಂದಲ ಹುಟ್ಟು ಹಾಕಿದೆ. ಈ ಹಿಂದೆ ಬಿಜೆಪಿ ಗೆಲುವಿಗೆ ನಾನೇ ಕಾರಣ ಎಂದು ಖಾಸಗಿ ಖಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ. ಇದರಿಂದ ಬಿಜೆಪಿಯಲ್ಲಿ ದೊಡ್ಡಮಟ್ಟದ ಗೊಂದಲ ಉಂಟಾಗಿದೆ.
ಜೆಡಿಎಸ್ ಪಕ್ಷದಿಂದ ಈ ಭಾಗದ ಮುಖಂಡ, ಕನ್ನಡಪರ ಹೋರಾಟಗಾರ ರಮೇಶ ಬದ್ನೂರ ಸ್ಪರ್ಧಿಸುವುದಕ್ಕೆ ಉತ್ಸುಕರಾಗಿದ್ದಾರೆ. ಆದರೆ, ಜೆಡಿಎಸ್ ಇನ್ನೂ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯುವ ನಿರೀಕ್ಷೆ ಇದೆ.
2013ರ ಫಲಿತಾಂಶ
* ವಿಜಯಾನಂದ ಕಾಶಪ್ಪನವರ್ : 72,720
* ದೊಡ್ಡನಗೌಡ ಪಾಟೀಲ್ (ಬಿಜೆಪಿ) : 56,923
* ಗೆಲುವಿನ ಅಂತರ : 15797 ಮತಗಳು