ಕ್ಷೇತ್ರ ಪರಿಚಯ: ಹನೂರಲ್ಲಿ ಬಿಜೆಪಿಯ ಪರಿಮಳಾ ನಾಗಪ್ಪ ಗೆಲ್ಲುತ್ತಾರಾ?
ಚಾಮರಾಜನಗರ ಜಿಲ್ಲೆಯ 4 ತಾಲೂಕುಗಳಲ್ಲಿ ಒಂದು ಈ ಹನೂರು. ವಿಸ್ತಾರವಾಗಿದ್ದ ಕೊಳ್ಳೇಗಾಲ ತಾಲೂಕನ್ನು ವಿಭಜಿಸಿ ಈ ಹನೂರನ್ನು ಸೃಷ್ಟಿ ಮಾಡಗಿದೆ.
ಮಹದೇಶ್ವರಬೆಟ್ಟ ಹನೂರು ತಾಲೂಕಿನಲ್ಲಿಯೇ ಬರುತ್ತದೆ. ಹೊಗೇನಕಲ್ ಜಲಪಾತ, ಮುತ್ತತ್ತಿ, ಹಲವು ಅಣೆಕಟ್ಟುಗಳು ಹನೂರು ಸುತ್ತ ಮುತ್ತಲಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ನೈಸರ್ಗಿಕ ಸಂಪನ್ಮೂಲಗಳಿಂದಾಗಿ ಶ್ರೀಮಂತವಾಗಿರುವ ಹನೂರು ತಮಿಳುನಾಡಿನ ಗಡಿಯಲ್ಲಿದೆ. ಗ್ರಾನೈಟ್ ಕಲ್ಲುಗಳು ಇಲ್ಲಿವೆ. ಕಬ್ಬು, ತೆಂಗು, ಜೋಳ ಬೆಳೆಯನ್ನು ಇಲ್ಲಿನ ಜನರು ಪ್ರಮುಖವಾಗಿ ಬೆಳೆಯುತ್ತಾರೆ.
ಕಾಡುಗಳ್ಳ, ದಂತಚೋರ ವೀರಪ್ಪನ್ ನಿಂದ ಹತ್ಯೆಗೀಡಾದ ಸಚಿವ ನಾಗಪ್ಪನವರು ಇದೇ ಹನೂರಿನ ವಿಧಾನಸಭಾ ಕ್ಷೇತ್ರದಿಂದಲೇ ಆರಿಸಿ ಬಂದವರು. ಇಲ್ಲಿ ಬಿಜೆಪಿ ಒಮ್ಮೆಯೂ ಗೆದ್ದಿಲ್ಲ ಎಂಬುದು ವಿಶೇಷ. ಆದರೆ ಕಾಂಗ್ರೆಸ್, ಜನತಾ ಪಕ್ಷ ಮತ್ತು ಜೆಡಿಎಸ್ ಇಲ್ಲಿ ಗೆಲ್ಲುತ್ತಾ ಬಂದಿವೆ.
ಕ್ಷೇತ್ರ ಪರಿಚಯ: ಗುಂಡ್ಲುಪೇಟೆಯಲ್ಲಿ ಮಹದೇವ ಪ್ರಸಾದ್ ಕುಟುಂಬವೇ ಕಿಂಗ್
30 ವರ್ಷಗಳ ಹಿಂದಿನ ಇತಿಹಾಸ ಕೆದಕುವುದಾದರೆ 1985ರಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಜಿ. ರಾಜುಗೌಡ ಇಲ್ಲಿ ಜಯ ಸಾಧಿಸಿದ್ದರು. ಅವರು ಜನತಾ ಪಕ್ಷದಿಂದ ಕಣಕ್ಕಿಳಿದಿದ್ದ ಎಚ್. ನಾಗಪ್ಪನವರನ್ನು ಸೋಲಿಸಿದ್ದರು.
1989ರಲ್ಲಿ ಮತ್ತೆ ರಾಜೂಗೌಡ ಗೆದ್ದರು. ಈ ಬಾರಿ ಅವರು ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದರು; ಸೋತ ನಾಗಪ್ಪ ಜನತಾದಳದಲ್ಲಿದ್ದರು. 1994ರಲ್ಲಿ ಎಚ್. ನಾಗಪ್ಪ ರಾಜೂಗೌಡರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿದರು. ಈ ವೇಳೆ ಅವರು ಸಚಿವರೂ ಆಗಿದ್ದರು. 1999ರಲ್ಲಿ ಫಲಿತಾಂಶ ಅದಲು ಬದಲಾಯಿತು. ಮತ್ತೆ ರಾಜೂಗೌಡ ಗೆಲುವಿನ ಗದ್ದುಗೆ ಏರಿದರು.
ಮುಂದಿನ ಚುನಾವಣೆಗಾಗುವಾಗ ನಾಗಪ್ಪ ಇರಲೇ ಇಲ್ಲ. ಅವರನ್ನು ಮನೆಯಿಂದ ವೀರಪ್ಪನ್ ಮತ್ತವರ ತಂಡ ಅಪಹರಿಸಿ 106 ದಿನಗಳ ಕಾಲ ಒತ್ತೆಯಾಳಾಗಿಟ್ಟುಕೊಂಡು ಹತ್ಯೆ ನಡೆಸಿತ್ತು. ದೇಶವನ್ನೇ ಬೆಚ್ಚಿ ಬೀಳಿಸಿದ ಈ ಪ್ರಕರಣದ ನಂತರ 2004ರಲ್ಲಿ ಹನೂರಿನಲ್ಲಿ ಜಿಡಿಎಸ್ ನಿಂದ ಸ್ಪರ್ಧಿಸಿ ನಾಗಪ್ಪನವರ ಪತ್ನಿ ಪರಿಮಳ ನಾಗಪ್ಪ ಗೆಲುವು ಸಾಧಿಸಿದರು.
2008ರಲ್ಲಿ ಪರಿಮಳ ನಾಗಪ್ಪ ಸೋಲಬೇಕಾಯಿತು. ಈ ಬಾರಿ ಅವರು ಜೆಡಿಎಸ್ ಬದಲಾಗಿ ಬಿಎಸ್ಪಿಯಿಂದ ಸ್ಪರ್ಧಿಸಿದ್ದರು. ಅವರನ್ನು ಬರೋಬ್ಬರಿ 33 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ನ ಆರ್. ನಾಗೇಂದ್ರ ಸೋಲಿಸಿದ್ದರು.
2013ರಲ್ಲೂ ಇದೇ ಫಲಿತಾಂಶ ಪುನರಾವರ್ತನೆಯಾಯಿತು. ಆದರೆ ಗೆಲುವಿನ ಅಂತರ ಮಾತ್ರ 11 ಸಾವಿರಕ್ಕೆ ಕುಸಿದಿತ್ತು. ಈ ಚುನಾವಣೆಯಲ್ಲಿ ಪರಿಮಳ ನಾಗಪ್ಪ ಮತ್ತೆ ಜೆಡಿಎಸ್ ಗೆ ವಾಪಾಸಾಗಿದ್ದರು.
ಇಲ್ಲಿ ಈ ಬಾರಿ ಬಿಜೆಪಿಯ ಮಾಜಿ ಸಚಿವ, ಪ್ರಭಾವಿ ರಾಜಕಾರಣಿ ವಿ. ಸೋಮಣ್ಣ ನಿಲ್ಲುತ್ತಾರೆ ಎಂಬ ಮಾತುಗಳಿದ್ದವು. ಆದರೆ ಪರಿಮಳ ನಾಗಪ್ಪ ಬಿಜೆಪಿಗೆ ಬಂದಿದ್ದು ಅವರು ಕಣಕ್ಕಿಳಿಯುವ ಸಾಧ್ಯತೆಯೇ ಹೆಚ್ಚಿದೆ. ಕಾಂಗ್ರೆಸ್ ಈ ಬಾರಿಯೂ ಇಲ್ಲಿ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಪರಿಮಳಾ ನಾಗಪ್ಪ ನಿರ್ಗಮನದಿಂದ ಜೆಡಿಎಸ್ ಗೆ ಇಲ್ಲಿ ಅಭ್ಯರ್ಥಿಗಾಗಿ ಹುಡುಕಾಟಕ್ಕಿಳಿಯುವ ಪರಿಸ್ಥಿತಿ ಬಂದೊದಗಿದೆ.
ಕ್ಷೇತ್ರದಲ್ಲಿ ಜೆಡಿಎಸ್ ಗೆ ಉತ್ತಮ ನೆಲೆ ಇದೆ. ಜತೆಗೆ ಬಿಎಸ್ ಪಿಗೂ ಸ್ವಲ್ಪ ನೆಲೆ ಇದ್ದು ಇಬ್ಬರ ಮೈತ್ರಿ ಸ್ಪರ್ಧೆ ಬಗ್ಗೆಯೂ ಕುತೂಹಲವಿದೆ.