ಹಗರಿ ಬೊಮ್ಮನಹಳ್ಳಿ : ಲಿಂಗಾಯತ, ಲಂಬಾಣಿ ಮತಗಳು ನಿರ್ಣಾಯಕ
ಈ ಕ್ಷೇತ್ರದ ಹಾಲಿ ಶಾಸಕ ಭೀಮನಾಯ್ಕ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಅಂದಿನ ಶಾಸಕರಾಗಿದ್ದ ನೇಮಿರಾಜ್ ಅವರನ್ನು ಜೆಡಿಎಸ್ ನಿಂದ ಚುನಾವಣೆಗೆ ನಿಂತಿದ್ದ ಭೀಮನಾಯ್ಕ ಕೇವಲ 150 ಮತಗಳಿಂದ ಸೋಲಿಸಿ ಗೆಲುವು ಸಾಧಿಸಿದ್ದರು. ಆದರೆ, ಆನಂತರ ಅವರು, ಜೆಡಿಎಸ್ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದಾರೆ.
ಆದರೆ, ಈ ಬಾರಿ ಅವರಿಗೆ ಗೆಲುವು ಮತ್ತೆ ಒಲಿಯುವುದು ಕಷ್ಟ ಎನ್ನಲಾಗುತ್ತಿದೆ. ಲಿಂಗಾಯತ ಮತ್ತು ಲಂಬಾಣಿ ಮತಗಳು ಇಲ್ಲಿ ನಿರ್ಣಾಯಕವಾಗಿರುವುದರಿಂದ ಆ ಜನಾಂಗಗಳ ಒಲವು ಗಳಿಸಿರುವ ನೇಮಿರಾಜ್ ಅವರಿಗೆ ಈ ಬಾರಿ ಬಿಜೆಪಿ ಮತ್ತೆ ಟಿಕೆಟ್ ನೀಡಿದರೆ ಖಂಡಿತವಾಗಿಯೂ ಅವರು ಗೆಲ್ಲುವ ಸಾಧ್ಯತೆಗಳಿವೆ.
ಬಿಜೆಪಿ ಪಾಳಯದೊಳಗೆ ನೇಮಿರಾಜ್ ಅವರ ಬಗ್ಗೆ ಉತ್ತಮ ಅಭಿಪ್ರಾಯವಿದೆ. ಯಡಿಯೂರಪ್ಪನವರಿಗೆ ಆಪ್ತರಾಗಿದ್ದರೂ, ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗ, ನೇಮಿರಾಜ್ ಕೆಜೆಪಿ ಸೇರದೇ ಬಿಜೆಪಿಯಲ್ಲೇ ಉಳಿದಿದ್ದರು.
ಅಂದಿನ ಆ ರಾಜಕೀಯ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿಯನ್ನು ಏಕಾಂಗಿಯಾಗಿ ಮುನ್ನಡೆಸಿಕೊಂಡು ಬಂದ ನಾಯಕರು ಇವರು. ಹಾಗಾಗಿ, ಬಿಜೆಪಿಗೆ ಇವರ ಬಗ್ಗೆ ಒಳ್ಳೆ ಅಭಿಪ್ರಾಯವಿದೆ. ಇದೇ ಕಾರಣಕ್ಕಾಗಿಯೇ, ಅವರಿಗೆ ಮತ್ತೆ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆಗಳಿವೆ. ಹಾಗೆ ಟಿಕೆಟ್ ಸಿಕ್ಕರೆ ಅವರೇ ಗೆಲ್ಲುತ್ತಾರೆ ಎಂದು ಹೇಳಲಾಗುತ್ತಿದೆ.
ಆದರೆ, ಕಾಂಗ್ರೆಸ್ ಪರಿಸ್ಥಿತಿ ಹಾಗಿಲ್ಲ. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಭೀಮನಾಯ್ಕ ಅವರಿಗೆ ಟಿಕೆಟ್ ನೀಡಲು ಇಲ್ಲಿನ ಕಾಂಗ್ರೆಸ್ ನಲ್ಲೇ ಭಿನ್ನಾಭಿಪ್ರಾಯಗಳು ಇವೆ.
ಕಳೆದ ಚುನಾವಣೆಯಲ್ಲಿ, ಬಿಜೆಪಿಯಿಂದ ನೇಮಿರಾಜ್, ಜೆಡಿಎಸ್ ನಿಂದ ಭೀಮನಾಯ್ಕ ಅವರು ಸ್ಪರ್ಧಿಸಿದ್ದಾಗ, ಬಳ್ಳಾರಿ ಮೂಲದ ಎನ್. ಮಾರಣ್ಣ ಎಂಬುವರನ್ನು ಕರೆದುಕೊಂಡು ಬಂದು ಇಲ್ಲಿ ಚುನಾವಣೆಗೆ ನಿಲ್ಲಿಸಿದ್ದು ಕಾಂಗ್ರೆಸ್ ಗೆ ಮುಳುವಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಸೋಲು ಕಂಡಿದ್ದರು.
ಈಗ, ಜೆಡಿಎಸ್ ನಿಂದ ಬಂದ ಭೀಮನಾಯ್ಕ ಅವರಿಗೆ ಟಿಕೆಟ್ ನೀಡಿದರೆ ಈ ಕ್ಷೇತ್ರದಲ್ಲಿ ಮೊದಲಿನಿಂದಲೂ ಕಾಂಗ್ರೆಸ್ ಗೆ ಸೇವೆ ಮಾಡಿದವರನ್ನು ಕಡೆಗಣಿಸಿದ ಹಾಗಾಗುತ್ತದೆ ಎಂಬ ಕೂಗೂ ಕೇಳಿಬಂದಿರುವುದರಿಂದ ಕಾಂಗ್ರೆಸ್ ಸದ್ಯಕ್ಕಂತೂ ಗೊಂದಲದಲ್ಲಿದೆ.