ಕ್ಷೇತ್ರ ಪರಿಚಯ: ಪ್ರಿಯಾಂಕ್ ಖರ್ಗೆಗೆ ಮತ್ತೆ ಒಲಿಯುವುದೇ ಚಿತ್ತಾಪುರ?
ಕಲಬುರಗಿ ಪಾಲಿನ ಪ್ರಮುಖ ತಾಲೂಕು ಚಿತ್ತಾಪುರ. ಜಿಲ್ಲಾ ಕೇಂದ್ರದಿಂದ 46 ಕಿಲೋಮೀಟರ್ ದೂರದಲ್ಲಿದೆ.
ಚಿತ್ತಾಪುರದಲ್ಲಿ ಕೃಷ್ಣಾ ಮತ್ತು ಭೀಮಾ ನದಿಗಳು ಹರಿಯುತ್ತವೆ. ಈ ಜೀವಜಲದ ಜತೆ ಇಲ್ಲಿನ ಮಣ್ಣು ಕಪ್ಪು ಮಣ್ಣಾಗಿದ್ದು ಜೋಳ, ತೊಗರಿ, ನೆಲಗಡಲೆ, ಅಕ್ಕಿಯನ್ನು ಚಿತ್ತಾಪುರದಲ್ಲಿ ಬೆಳೆಯುತ್ತಾರೆ. ಕೃಷ್ಣಾ ಮೇಲ್ದಂಡೆ ಯೋಜನೆ ಇಲ್ಲಿನ ಕೃಷಿ ಚಟುವಟಿಕೆಗೆ ಸಂಬಂಧಿಸಿದ ಪ್ರಮುಖ ಯೋಜನೆಯಾಗಿದೆ.
ಚಿತ್ತಾಪುರದಲ್ಲಿಯೂ ಅಪರೂಪದ ಶಹಾಬಾದ್ ಕಲ್ಲುಗಳು ಕಾಣಸಿಗುತ್ತವೆ. ಇಲ್ಲಿನ ನಾಗಾವಿ ದೇವಸ್ಥಾನ, 12ನೇ ಶತಮಾನದ ಹಝರತ್ ಚಿತಾ ಶಾ ವಾಲಿ, ಹಜ್ರತ್ ಪೀರ್ ಕ್ವಾದ್ರಿ ದರ್ಗಾ ಪ್ರಸಿದ್ಧಿಯನ್ನು ಪಡೆದಿವೆ.
ದೇಶದ ಸಾಕ್ಷರತೆ ಶೇಕಡಾ 59.5ಕ್ಕೆ ಹೋಲಿಸಿದರೆ ಚಿತ್ತಾಪುರದ ಸಾಕ್ಷರತೆ ಕೇವಲ ಶೇಕಡಾ 46 ಮಾತ್ರ. ಇದು ಇಲ್ಲಿನ ದುರಂತಗಳಲ್ಲಿ ಒಂದು.
ಚಿತ್ತಾಪುರ ಕಾಂಗ್ರೆಸ್ ಪಾಲಿನ ಭದ್ರ ಕೋಟೆ. 1989ರಿಂದ ಇಲ್ಲಿ ಕಾಂಗ್ರೆಸ್ ಜಯಗಳಿಸುತ್ತಾ ಬಂದಿದೆ. ಮಧ್ಯೆ 2009ರ ಉಪಚುನಾವಣೆಯಲ್ಲಿ ಮಾತ್ರ ಇಲ್ಲಿ ಬಿಜೆಪಿ ಗೆದ್ದಿತ್ತು.
1989, 94ರಲ್ಲಿ ಇಲ್ಲಿ ಕಾಂಗ್ರೆಸ್ ನ ಬಾಬುರಾವ್ ಚಿಂಚನ್ಸೂರ್ ಗೆಲುವು ಸಾಧಿಸಿದ್ದರು. 1999 ಹಾಗೂ 2004ರಲ್ಲಿ ತಿಪ್ಪಾರೆಡ್ಡಿ ಜಿಎಸ್ ಜಯಗಳಿಸಿದ್ದರು.
2008ರಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ ಬಳಿಕ ಚಿತ್ತಾಪುರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಯಿತು. ನಂತರ ಇಲ್ಲಿಗೆ ಸೋಲರಿಯದ ಹುಲಿ ಗುರುಮಿಠಕಲ್ ಕ್ಷೇತ್ರದಲ್ಲಿ 7 ಬಾರಿ ಗೆದ್ದಿದ್ದ ಮಲ್ಲಿಕಾರ್ಜುನ ಖರ್ಗೆ ವಲಸೆ ಬಂದರು.
ಹಾಲಿ ಲೋಕಸಭೆ ವಿಪಕ್ಷ ನಾಯಕ, ಮಾಜಿ ರೈಲ್ವೇ ಸಚಿವ ಮಲ್ಲಿಕಾರ್ಜುನ ಖರ್ಗೆ 2008ರಲ್ಲಿ ಬಿಜೆಪಿಯ ವಾಲ್ಮೀಕಿ ನಾಯಕ್ ರನ್ನು 17 ಸಾವಿರ ಮತಗಳ ಅಂತರದಿಂದ ಇಲ್ಲಿ ಸೋಲಿಸಿದರು.
ಮುಂದೆ ಖರ್ಗೆ ಕಲಬುರಗಿ ಲೋಕಸಭಾ ಸ್ಥಾನಕ್ಕೆ ನಿಂತು 2009ರಲ್ಲಿ ಜಯಶಾಲಿಯಾದಾಗ ಇಲ್ಲಿ ಉಪಚುನಾವಣೆ ನಡೆಯಿತು. ಆಗ ಖರ್ಗೆ ತಮ್ಮ ಮಗ ಹಾಗೂ ಹಾಲಿ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆಯವರನ್ನು ಇಲ್ಲಿ ಕಣಕ್ಕಿಳಿಸಿದರು. ಆ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ವಾಲ್ಮೀಕಿ ನಾಯಕ್ ರನ್ನು ಗೆಲ್ಲಿಸಿಕೊಂಡು ಬಂತು.
ತಂದೆಯ ಪ್ರಭಾವದ ಮಧ್ಯೆಯೂ 2009ರಲ್ಲಿ ಮೊದಲ ಚುನಾವಣೆಯಲ್ಲೇ ಪ್ರಿಯಾಂಕ್ ಖರ್ಗೆ ಸೋಲಬೇಕಾಯಿತು. ಸುಮಾರು ಎರಡು ಸಾವಿರ ಮತಗಳ ಅಂತರದಿಂದ ಪ್ರಿಯಾಂಕ್ ಸೋಲೊಪ್ಪಿಕೊಂಡಿದ್ದರು.
ಆದರೇನಂತರ 2013ರಲ್ಲಿ ಇಲ್ಲಿ ಮತ್ತೆ ಕಾಂಗ್ರೆಸ್ ತನ್ನ ಬಾವುಟ ನೆಟ್ಟಿತು. 31 ಸಾವಿರ ಮತಗಳ ದೊಡ್ಡ ಅಂತರದಿಂದ ಪ್ರಿಯಾಂಕ್ ಖರ್ಗೆ ಇದೇ ವಾಲ್ಮೀಕಿ ನಾಯಕ್ ಗೆ ಸೋಲುಣಿಸಿದರು. ಸದ್ಯ ಸಚಿವರೂ ಆಗಿರುವ ಖರ್ಗೆ ಇಲ್ಲಿ ಮತ್ತೊಮ್ಮೆ ಗೆಲ್ಲುವುದು ಬಹುತೇಕ ನಿಶ್ಚಿತವಾಗಿದೆ. ಕ್ಷೇತ್ರದಲ್ಲಿ ಜೆಡಿಎಸ್ ಗೆ ಹೆಸರಿಗೂ ಇಲ್ಲ. ಹೀಗಾಗಿ ಏನಿದ್ದರೂ ಬಿಜೆಪಿಯೇ ಸ್ಪರ್ಧೆ ನೀಡಬೇಕಾಗಿದೆ.