ಚಿತ್ರದುರ್ಗ : ಬೆಳವಣಿಗೆ, ಅಭಿವೃದ್ಧಿ ಕಾಣದ ಕ್ಷೇತ್ರ
ಚಿತ್ರದುರ್ಗ ಕ್ಷೇತ್ರಕ್ಕೆ ಯಾರಾದರೂ ಬಂದು ಒಮ್ಮೆ ಭೇಟಿ ನೀಡಿದರೆ ಇಲ್ಲಿನ ಹದಗೆಟ್ಟ ರಸ್ತೆಗಳು, ಕೊಳಚೆಗಳೇ ಅವರನ್ನು ಸ್ವಾಗತಿಸುತ್ತವೆ. ಇಲ್ಲಿನ ಜನರಿಗೆ ಕುಡಿಯಲು ನೀರಿಲ್ಲ. ಓಡಾಡಲು ಸರಿಯಾದ ರಸ್ತೆಯಿಲ್ಲ.
ಇದಕ್ಕೆ ಪ್ರಮುಖ ಕಾರಣ - ಜಿಲ್ಲಾ ಉಸ್ತುವಾರಿ ಸಚಿವ ಕಾಂಗ್ರೆಸ್ ನವರು (ಆಂಜನೇಯ), ಶಾಸಕ ಬಿಜೆಪಿಯವರು (ಜೆ.ಎಚ್. ತಿಪ್ಪಾರೆಡ್ಡಿ) ಮತ್ತು ನಗರಸಭೆ ಜೆಡಿಎಸ್ ಹಿಡಿತದಲ್ಲಿರುವುದು. ಇದರ ಫಲವಾಗಿಯೇ, ಇಲ್ಲಿ ಯಾವುದೇ ಬೆಳವಣಿಗೆ, ಅಭಿವೃದ್ಧಿಯಾಗಿಲ್ಲ.
ಹೊಳಲ್ಕೆರೆ ಕ್ಷೇತ್ರ: ಪರಿಶಿಷ್ಟ ಜಾತಿ ಮತಗಳೇ ಮುಖ್ಯ
ಆದರೆ, ಕ್ಷೇತ್ರ ಅಭಿವೃದ್ಧಿಯಾಗದ್ದಕ್ಕೆ ಇಲ್ಲಿನ ಜನರು ನೇರವಾಗಿ ಬೆರಳು ತೋರಿಸುವುದು ಶಾಸಕ ತಿಪ್ಪಾರೆಡ್ಡಿ ಕಡೆಗೇ. ಹಾಗಾಗಿ, ಈ ಬಾರಿ ತಿಪ್ಪಾರೆಡ್ಡಿಯವರಿಗೆ ಈ ಬಾರಿಯ ಚುನಾವಣೆಯಲ್ಲಿನ ಗೆಲುವು ಭಾರೀ ಕಷ್ಟವಾಗಿ ಪರಿಣಮಿಸಲಿದೆ. ಹೀಗಾಗಿ, ಅವರು ಪಕ್ಷದ ಕ್ಷೇತ್ರವಾದ ಹಿರಿಯೂರಿನಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆನ್ನಲಾಗಿದೆ.
ಹಾಲಿ ಶಾಸಕರು ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ, ಅದು ಇತರ ಪಕ್ಷಗಳ ಅಭ್ಯರ್ಥಿಗಳಿಗೆ ಒಂದು ಆಶಾದಾಯಕ ಪರಿಸ್ಥಿತಿಯೇ ಸರಿ. ಹಾಗಾಗಿಯೇ, ಈ ಹಿಂದೆ ಇಲ್ಲಿ ಜಿಲ್ಲಾಧಿಕಾರಿಯಾಗಿ ಕೊಂಚ ಹೆಸರು ಮಾಡಿದ್ದ ಅಮರ ನಾರಾಯಣ್ ಅವರು ಕ್ಷೇತ್ರಕ್ಕೆ ಆಗಮಿಸಿ ಜನಸೇವೆಯತ್ತ ವಾಲುತ್ತಿದ್ದಾರೆ.
ಹೇಳಿ ಕೇಳಿ ಅಮರನಾರಾಯಣ್ ಅವರು ಒಕ್ಕಲಿಗರಾಗಿದ್ದು ಮಾಜಿ ಪ್ರಧಾನಿ ದೇವೇಗೌಡರಿಗೆ ಹತ್ತಿರದವರೂ ಆಗಿದ್ದಾರೆಂದರೆ ಅವರು ಯಾವ ಕಾರಣಕ್ಕಾಗಿ ಜನಸೇವೆ ಮಾಡುತ್ತಿದ್ದಾರೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೇ?
ಇತ್ತ, ಕಾಂಗ್ರೆಸ್ ನಿಂದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಹಾಗೂ ಮಾಜಿ ಶಾಸಕ ಬಸವರಾಜನ್ ಅವರ ಪತ್ನಿ ಸೌಭಾಗ್ಯ ಬಸವರಾಜನ್ ಅವರು ಸ್ಪರ್ಧಿಸುವ ನಿರೀಕ್ಷೆಯಿದೆ.
ಹಾಗಾದರೆ, ಬಿಜೆಪಿಯಿಂದ ಯಾರು ಎಂಬ ಪ್ರಶ್ನೆಗೆ ಬರುವ ಉತ್ತರ ಶಂಕರ್ ಬಿದರಿ. ಹೌದು... ನಿಮ್ಮ ಊಹೆ ಸರಿ. ಮಾಜಿ ಪೊಲೀಸ್ ಅಧಿಕಾರಿ ಶಂಕರ್ ಬಿದರಿಯವರೇ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿ. ಇವರಿಗೆ ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಶರಣ ಬೆಂಬಲವೂ ಇದೆ. ಮಾಜಿ ಸಿಎಂ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಮುರುಘಾ ಶರಣರು ಬಿದರಿ ಟಿಕೆಟ್ ಬಗ್ಗೆ ಮಾತಾಡಿದ್ದಾರೆಂದೂ ಹೇಳಲಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಇದೆಲ್ಲವನ್ನೂ ಹೊರತುಪಡಿಸಿದರೆ, ಇಲ್ಲಿ ಇನ್ನೊಬ್ಬ ಜನನಾಯಕನ ಹೆಸರಿದೆ. ಅದು, ನಗರ ಸಭೆಯ ಮಾಜಿ ಅಧ್ಯಕ್ಷ ಕಾಂತರಾಜ್. ಇವರೂ ಜೆಡಿಎಸ್ ನಾಯಕರೇ. ಇವರೂ ಈ ಬಾರಿ ಟಿಕೆಟ್ ಆಕಾಂಕ್ಷಿಯೇ. ಅಮರನಾಥ್ ಅಥವಾ ಕಾಂತರಾಜ್ ಇವರಲ್ಲಿ ಯಾರಿಗೆ ಜೆಡಿಎಸ್ ಟಿಕೆಟ್ ದಕ್ಕಿದರೂ ಸರಿ, ಈ ಬಾರಿಯ ಚಿತ್ರದುರ್ಗ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆ ಭರ್ಜರಿ ಸ್ಪರ್ಧೆಯಂತೂ ಇರಲಿದೆ.
2013ರ ಚುನಾವಣೆ ಫಲಿತಾಂಶ : 2013ರಲ್ಲಿ ಶೇ 72.62ರಷ್ಟು ಮತದಾನವಾಗಿತ್ತು. ಬಿಜೆಪಿಯ ಜಿ.ಎಚ್ ತಿಪ್ಪಾರೆಡ್ಡಿ 62, 228 ಮತಗಳನ್ನು ಗಳಿಸಿ ಜಯ ಗಳಿಸಿದರೆ, ಜೆಡಿಎಸ್ ಬಸವರಾಜನ್ 35,510 ಮತ ಗಳಿಸಿದ್ದರು. ತಿಪ್ಪಾರೆಡ್ಡಿ ಅವರು 26,718(ಶೇ 16.35) ಅಂತರದ ಮತಗಳನ್ನು ಗಳಿಸಿ ತಿಪ್ಪಾರೆಡ್ಡಿ ಶಾಸಕರಾಗಿದ್ದರು.