ಕ್ಷೇತ್ರ ಪರಿಚಯ: ಚಿಂಚೋಳಿಯಲ್ಲಿ ಬಿಜೆಪಿ-ಕಾಂಗ್ರೆಸ್ ಸಮಾನ ಹೋರಾಟ
ಚಿಂಚೋಳಿ ಕಲಬುರಗಿ ಜಿಲ್ಲೆಯ ಸಣ್ಣ ತಾಲೂಕು. ಚಿಂಚೋಳಿ ತಾಲೂಕು ಕೇಂದ್ರವೂ ಹೌದು. ಜಿಲ್ಲಾ ಕೇಂದ್ರ ಕಲಬುರಗಿಯಿಂದ ಬರೋಬ್ಬರಿ 85 ಕಿಲೋ ಮೀಟರ್ ದೂರವಿದೆ. ಮುಲ್ಲಾಮಾರಿ ಕೆಳದಂಡೆ ಜಲಾಶಯ, ಕುಂಚವರಂ ಅರಣ್ಯ ಪ್ರದೇಶ, ಚಂದ್ರಂಪಳ್ಳಿ ಜಲಾಶಯ, ಎತ್ತಿ ಪೋತಾ ಜಲಪಾತಗಳನ್ನು ಈ ತಾಲೂಕಿನಲ್ಲಿ ಕಾಣಬಹುದು.
ಚಿಂಚೋಳಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದೆ. 1968-71 ಹಾಗೂ 1989ರಿಂದ 90ರವರೆಗೆ ಕರ್ನಾಟಕ ಮುಖ್ಯಮಂತ್ರಿಗಳಾಗಿದ್ದ ವೀರೇಂದ್ರ ಪಾಟೀಲ್ ಇದೇ ಕ್ಷೇತ್ರವನ್ನು ಒಮ್ಮೆ ಪ್ರತಿನಿಧಿಸಿದ್ದರು. 1989ರಿಂದ 90ರವರೆಗೆ ಮುಖ್ಯಮಂತ್ರಿಯಾಗಿದ್ದಾಗ ಅವರು ಚಿಂಚೋಳಿಯಿಂದಲೇ ಗೆದ್ದು ಬಂದಿದ್ದರು.
ಅಷ್ಟೇ ಅಲ್ಲ ಹೈದ್ರಾಬಾದ್ ಕರ್ನಾಟಕ ಹೋರಾಟಗಾರ ವೈಜನಾಥ್ ಪಾಟೀಲ್ ಕೂಡಾ ಚಿಂಚೋಳಿಯ ಶಾಸಕರಾಗಿದ್ದರು. 1994ರಲ್ಲಿ ಇಲ್ಲಿ ಜನತಾದಳದಿಂದ ಕಣಕ್ಕಿಳಿದು ವೈಜನಾಥ್ ಪಾಟೀಲ್ ಗೆಲುವು ಸಾಧಿಸಿದ್ದರು.
1999ರಲ್ಲಿ ಜೆಡಿಎಸ್ ನಿಂದ ಕಣಕ್ಕಿಳಿದು ವೈಜನಾಥ್ ಪಾಟೀಲ್ ಹೀನಾಯ ಸೋಲು ಕಂಡರೆ ಕಾಂಗ್ರೆಸ್ ನ ಕೈಲಾಶ್ ನಾಥ್ ಪಾಟೀಲ್ ಗೆಲುವು ಸಾಧಿಸಿದರು. 2004ರಲ್ಲಿ ಫಲಿತಾಂಶ ಅದಲು ಬದಲಾಯಿತು. ವೈಜನಾಥ್ ಪಾಟೀಲ್ ಜೆಡಿಎಸ್ ನಿಂದ ಮತ್ತೆ ಗೆಲುವು ಸಾಧಿಸಿದರು. ಸೋಲುವ ಸರದಿ ಕಾಂಗ್ರೆಸ್ ನ ಕೈಲಾಶ್ ನಾಥ್ ಪಾಟೀಲ್ ಅವರದಾಗಿತ್ತು.
2008ರಲ್ಲಿ ಮೊದಲ ಬಾರಿಗೆ ಬಿಜೆಪಿ ಇಲ್ಲಿ ಖಾತೆ ತೆರೆಯಿತು. ಈ ಬಾರಿ ಅಖಾಡದಲ್ಲಿ ಎಲ್ಲಾ ಹೊಸ ಹುಲಿಗಳೇ ಇದ್ದರು. ಬಿಜೆಪಿಯ ಸುನಿಲ್ ವಲ್ಯಾಪುರೆ ಕಾಂಗ್ರೆಸ್ ನ ಬಾಬುರಾವ್ ಚೌಹಾಣ್ ರನ್ನು ಸೋಲಿಸಿದರು.
2013ರಲ್ಲಿ ಮಾತ್ರ ಕ್ಷೇತ್ರ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಬಂತು. ಡಾ. ಉಮೇಶ್ ಜಿ. ಜಾಧವ್ ಕೆಜಿಪಿಯಿಂದ ಸ್ಪರ್ಧಿಸಿದ್ದ ಸುನಿಲ್ ವಲ್ಯಾಪುರೆಗೆ 26 ಸಾವಿರ ಮತಗಳ ಭಾರೀ ಅಂತರದಿಂದ ಸೋಲುಣಿಸಿದರು.
ಇತ್ತೀಚಿನ ದಿನಗಳಲ್ಲಿ ಚಿಂಚೋಳಿ ಯಾರ ಭದ್ರ ಕೋಟೆಯಾಗಿಯೂ ಇಳಿದಿಲ್ಲ. ಇಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲಾ ಪಕ್ಷಗಳೂ ವಿಜಯ ಪತಾಕೆಗಳನ್ನು ಹಾರಿಸುತ್ತಾ ಬಂದಿವೆ. ಆದರೆ ಸದ್ಯ ಕ್ಷೇತ್ರದಲ್ಲಿ ಜೆಡಿಎಸ್ ಸೊರಗಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಕಳೆದ ಬಾರಿಯ ಫಲಿತಾಂಶ ನೋಡಿದರೆ ಈ ಬಾರಿಯೂ ಇಲ್ಲಿ ಕಾಂಗ್ರೆಸ್ ಗೆದ್ದರೆ ಅಚ್ಚರಿಯೇನಿಲ್ಲ.