ಭಟ್ಕಳ ಕ್ಷೇತ್ರ: ಮತೀಯ ಸೂಕ್ಷ ಕ್ಷೇತ್ರದ ಗದ್ದುಗೆ ಯಾರ ಹೆಗಲಿಗೆ?
ಸದಾ ಒಂದಿಲ್ಲೊಂದು ಕೋಮು ಗಲಭೆಯಿಂದಲೇ ಸುದ್ದಿಯಾಗುತ್ತಿದ್ದ ಭಟ್ಕಳ, ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಮಂಗಳೂರು ಮತ್ತು ಮುಂಬೈ ಮಧ್ಯದಲ್ಲಿ ಚಲಿಸುವ ಕೊಂಕಣ ರೈಲ್ವೆಯ ಪ್ರಮುಖ ನಿಲ್ದಾಣಗಳಲ್ಲಿ ಇದೂ ಒಂದು.
ಜೈನರ ನೆಲೆಬೀಡಾಗಿದ್ದ ಇದು ಐತಿಹಾಸಿಕ ತಾಣವಾಗಿ ಪ್ರಸಿದ್ಧಿ ಪಡೆದಿದೆ. ವಿಶ್ವದಲ್ಲೇ ಅತೀ ದೊಡ್ಡ ಶಿವನ ಮೂರ್ತಿಯನ್ನು ಹೊಂದಿರುವ ವಿಶ್ವವಿಖ್ಯಾತ ಮುರುಡೇಶ್ವರ ದೇವಸ್ಥಾನ ಭಟ್ಕಳದ ಪ್ರಸಿದ್ಧ ಪ್ರವಾಸೀ ತಾಣ. ಐತಿಹಾಸಿಕ ಸ್ಥಳವಾದ ಹಾಡುಹಳ್ಳಿ ಅಂದರೆ ಆಗಿನ ಸಂಗೀತಪುರ ಇರುವುದು ಇಲ್ಲಿಯೇ, ಇಲ್ಲಿ 24 ತೀರ್ಥಂಕರರ ವಿಗ್ರಹಗಳಿವೆ ಹಾಗೂ ಸುಂದರ ಪದ್ಮಾವತಿ ದೇವಿಯ ದೇವಾಲಯ, ಚಂದ್ರಗಿರಿ ಬೆಟ್ಟವಿದೆ. ಕನ್ನಡದ ಕರ್ನಾಟಕ ಶಬ್ದಾನುಶಾಸನ ಬರೆದ ಜೈನ ಮುನಿ ಭಟ್ಟಾಕಳಂಕ ಹಾಡುವಳ್ಳಿ ಗ್ರಾಮದವನು.
ಶಿರಸಿ-ಸಿದ್ದಾಪುರ ಕ್ಷೇತ್ರ: ಯಾರಿಗೊಲಿಯುವಳೋ ಶ್ರೀ ಮಾರಿಕಾಂಬೆ!
2011 ರ ಜನಗಣತಿಯ ಪ್ರಕಾರ ಭಟ್ಕಳ ತಾಲೂಕಿನಲ್ಲಿ 1,61,576 ಜನರಿದ್ದಾರೆ. ಸಾಕ್ಷರತೆಯ ಪ್ರಮಾಣ ಶೇ.74.04. ಇಲ್ಲಿನ ಸ್ಥಳೀಯ ಮಾರುಕಟ್ಟೆ ಮೀನುಗಾರಿಕೆ ಮತ್ತು ಪ್ರವಾಸೋದ್ಯಮದ ಮೇಲೆಯೇ ಅವಲಂಬಿತವಾಗಿದೆ. ಇಲ್ಲಿಂದ ಹಲವು ಸಾಂಬಾರ ಪದಾರ್ಥಗಳು ದುಬೈಗೂ ರಫ್ತಾಗುತ್ತವೆ.
ಇಲ್ಲಿನ ಮುಂಡಳ್ಳಿ, ಕರಿಕಲ್, ಮುರುಡೇಶ್ವರದ ಕಡಲ ಕಿನಾರೆಗಳು, ಕಡವಿನಕಟ್ಟೆ ಅಣೆಕಟ್ಟು ನೋಡುಗರ ಕಂಗಳಿಗೆ ಮುದವನ್ನೀಯುತ್ತವೆ. ಮುಂಡಳ್ಳಿ, ಕಡವಿನಕಟ್ಟೆ, ಅಳ್ವೇಕೋಡಿಯಲ್ಲಿ ಶಕ್ತಿ ದೇವತೆಯಾದ ದುರ್ಗಾಪರಮೇಶ್ವರಿ ನೆಲೆಸಿದ್ದು ಇಲ್ಲಿನ ಜನರ ಹಿತವ ಕಾಪಾಡುತಿದ್ದಾಳೆ ಎಂಬ ನಂಬಿಕೆ ಇಲ್ಲಿನ ಜನರದು. ಮುರುಡೇಶ್ವರ ಮಾರ್ಗವಾಗಿ ಕ್ರಮಿಸುವಾಗ ಹೆದ್ದಾರಿಯ ನಡುವೆ ಸಿಗುವ ಶಿರಾಲಿಯಲ್ಲಿ ಚಿತ್ರಾಪುರ ಮಠವೂ ಇಲ್ಲಿನ ಐತಿಹಾಸಿಕ ಸ್ಥಳಗಳಲ್ಲೊಂದು.
ಕುಮಟಾ-ಹೊನ್ನಾವರ ಕ್ಷೇತ್ರ: ಬೀಚುಗಳ ಸ್ವರ್ಗದಲ್ಲಿ ಗೆಲ್ಲುವವರ್ಯಾರು?
ಮತೀಯವಾಗಿ ಅತೀ ಸೂಕ್ಷ್ಮ ಕ್ಷೇತ್ರವಾಗಿರುವ ಭಟ್ಕಳದಲ್ಲಿ ಕೋಮು ಗಲಭೆ, ಅಪರಾಧ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತವೆ. ಈ ಕ್ಷೇತ್ರದಲ್ಲಿ ಬಿಜೆಪಿ ತುಂಬಾ ಶಕ್ತಿಶಾಲಿಯಾಗಿದೆ. ಹಿಂದಿನ ಬಾರಿ ಅನಿರೀಕ್ಷಿತವಾಗಿ ರಾಷ್ಟ್ರೀಯ ಪಕ್ಷಗಳು ಮಣ್ಣು ಮುಕ್ಕಿದ್ದು, ಪಕ್ಷೇತರ ಮಂಕಾಳು ವೈದ್ಯ ಗೆದ್ದಿದ್ದಾರೆ. ಅವರು ತಮ್ಮ ಆಕ್ರಮಣಕಾರಿ ಕಾರ್ಯ ವಿಧಾನದಿಂದ ಜನರನ್ನು ಒಲಿಸಿಕೊಳ್ಳುವುದರಲ್ಲಿ ಸ್ವಲ್ಪ ಯಶಸಸ್ವಿಯಾಗಿದ್ದಾರೆ. ಅವರೀಗ ಕಾಂಗ್ರೆಸ್ ಗೆ ಹತ್ತಿರವಾಗಿದ್ದು, ಟಿಕೇಟ್ ನಿರೀಕ್ಷೆಯಲ್ಲಿದ್ದಾರೆ. ಭಟ್ಕಳ ಪಟ್ಟಣದಲ್ಲಿ ಮುಸ್ಲಿಮ್ ಜನಸಂಖ್ಯೆ ಹೆಚ್ಚಿದ್ದು, ಹಳ್ಳಿಗಳ್ಲಲಿ ಹಿಂದುಗಳ ಸಂಖ್ಯೆ ಹೆಚ್ಚಿದೆ. ರಾಷ್ಟ್ರೀಯ ಪಕ್ಷಗಳಿಗೆ ಈ ಕ್ಷೇತ್ರವನ್ನು ಮತ್ತೆ ತಮ್ಮ ತೆಕ್ಕೆಗೆ ಪಡೆವ ತವಕ. ಜೆ.ಡಿ.ನಾಯಕ್ ಬಿಜೆಪಿ ಸೇರಿರುವುದರಿಂದ ಈ ಕ್ಷೇತ್ರದಲ್ಲಿ ಸ್ಪರ್ಧೆ ಹೆಚ್ಚಾಗುವ ಸಂಭವವಿದೆ.
2013 ರ ಚುನಾವಣೆಯಲ್ಲಿ ಗೆದ್ದ ಮಂಕಾಳ ಸುಬ್ಬಾ ವೈದ್ಯ (ಪಕ್ಷೇತರ) 37319 ಮತಗಳನ್ನು ಪಡೆದರೆ ಜೆಡಿಎಸ್ ನ ಇ. ಶಬಾಂದ್ರಿ 27435 ಮತ ಪಡೆದಿದ್ದರು.